ಆ್ಯಪ್ನಗರ

ಬಾಯಿ ದುರ್ವಾಸನೆ ಎಂದು ತಾಯಿಯನ್ನು ಮನೆಯಿಂದ ಹೊರಹಾಕಿದ

ತಾಯಿಯ ಬಾಯಿಂದ ದುರ್ವಾಸನೆ ಬರುತ್ತದೆ ಎಂಬ ಕಾರಣಕ್ಕೆ ಮಗರಾಯನೊಬ್ಬ ತಾಯಿಯನ್ನು ಮನೆಯಿಂದ ಹೊರಹಾಕಿದ್ದಾನೆ. ಮತ್ತೀಗ ಅಸಹಾಯಕ ತಾಯಿ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.

TIMESOFINDIA.COM 31 May 2019, 12:52 pm
ಬೆಂಗಳೂರು: ತಂದೆ- ತಾಯಿ ತಮ್ಮ ಕನಸು, ಆಸೆಗಳನ್ನೆಲ್ಲ ಬದಿಗೊತ್ತಿ ಮಕ್ಕಳೇ ಸರ್ವಸ್ವ, ಅವರೇ ನಮ್ಮ ಬದುಕು ಎಂದುಕೊಂಡು ಅವರಿಗಾಗಿ ಜೀವಮಾನವೆಲ್ಲ ತ್ಯಾಗ ಮಾಡುತ್ತಾರೆ. ಆದರೆ ರೆಕ್ಕ ಬಲಿತ ಮೇಲೆ ಹಕ್ಕಿ ಮರಿಯೂ ಗೂಡಿಂದ ಹಾರಿ ಹೋಗುತ್ತದೆ ಎನ್ನುವಂತೆ, ದೈಹಿಕ ಮತ್ತು ಆರ್ಥಿಕವಾಗಿ ಸದೃಢರಾದ ಬಳಿಕ ಅದೇ ಮಕ್ಕಳಿಗೆ ವಯೋವೃದ್ಧ ತಂದೆ- ತಾಯಿ ಭಾರವಾಗಿ ಬಿಡುತ್ತಾರೆ. ಇಂತಹದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Vijaya Karnataka Web Woman


ತಾಯಿಯ ಬಾಯಿಂದ ದುರ್ವಾಸನೆ ಬರುತ್ತದೆ ಎಂಬ ಕಾರಣಕ್ಕೆ ಮಗರಾಯನೊಬ್ಬ ತಾಯಿಯನ್ನು ಮನೆಯಿಂದ ಹೊರಹಾಕಿದ್ದಾನೆ. ಮತ್ತೀಗ ಅಸಹಾಯಕ ತಾಯಿ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ.

ಪತಿಯನ್ನು ಕಳೆದುಕೊಂಡಿರುವ ಶ್ಯಾಮಲಾ (47) ಖಾಸಗಿ ಸಂಸ್ಥೆ ಉದ್ಯೋಗಿ ಮಗ ವಿಕಾಸ್ ( ಹೆಸರು ಬದಲಾಯಿಸಲಾಗಿದೆ) ಮತ್ತು ಸೊಸೆಯೊಂದಿಗೆ ಭಾರತಿ ನಗರದಲ್ಲಿ ವಾಸವಾಗಿದ್ದರು.

ಹಲ್ಲುನೋವೆಂದು ಅವರು 2019, ಜನವರಿ ತಿಂಗಳಲ್ಲಿ ಸರ್ಜರಿ ಮಾಡಿಕೊಂಡಿದ್ದು, ಹಲ್ಲನ್ನು ತೆಗೆದು ಹಾಕಲಾಗಿತ್ತು. ಆ ಜಾಗದಲ್ಲಿ ಸೋಂಕಾಗಿ ದುರ್ವಾಸನೆ ಬರ ಹತ್ತಿತು. ತಾಯಿಯ ಈ ಸ್ಥಿತಿಗೆ ಅಸಹ್ಯ ಪಟ್ಟುಕೊಂಡ ಮಗ ಆಕೆಯ ಬಳಿ ಸುಳಿಯುವುದನ್ನು ಬಿಟ್ಟು ಬಿಟ್ಟ. ಮಾತನ್ನಾಡಿಸುವುದನ್ನು ಕೂಡ ಬಿಟ್ಟು ಬಿಟ್ಟ. ಕೆಲ ದಿನಗಳ ನಂತರ ಬಂದ ಅತಿಥಿಗಳ ಮುಂದೆ ನಮಗೆ ನಾಚಿಕೆಯಾಗುತ್ತದೆ. ಮನೆ ಬಿಟ್ಟು ಹೋಗು ಎಂದು ಮಗ- ಸೊಸೆ ಹೇಳಿದ್ದಾರೆ.

ನೊಂದ ಶ್ಯಾಮಲಾ ಬೆಂಗಳೂರು ನಗರ ಪೊಲೀಸ್ ಮಹಿಳಾ ಸಹಾಯವಾಣಿ ಮತ್ತು ಪರಿಹಾರ- ಆಪ್ತ ಸಮಾಲೋಚನಾ ಕೇಂದ್ರಕ್ಕೆ ಸಹಾಯ ಯಾಚಿಸಿದ್ದಾರೆ. ಪರಿಹಾರದ ಸಂಚಾಲಕರಾದ ರಾಣಿ ಶೆಟ್ಟಿ ವಿಕಾಸ್ ಕುಟುಂಬಕ್ಕೆ ಸಮನ್ಸ್ ನೀಡಿದ್ದಾರೆ. ಆದರವರು ಕ್ಯಾರೇ ಎಂದಿಲ್ಲ. ಶ್ಯಾಮಲಾ ಸಹ ಹಿಂತಿರುಗಿ ಮನೆಗೆ ಹೋಗಲು ನಿರಾಕರಿಸಿದ್ದು ತಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಿ ಎಂದು ವಿನಂತಿಸಿದ್ದಾರೆ.

ಆಶ್ರಯ ತಾಣದಲ್ಲಿ ಸಹ ಅವರ ಸಮಸ್ಯೆ ಬಿಗಡಾಯಿಸಿತು. ಅಲ್ಲಿ ವಾಸವಾಗಿದ್ದವರು ಸಹ ಆಕೆಯ ಗಂಭೀರ ಸಮಸ್ಯೆ ತಮಗೂ ಹರಡಹುದೆಂದು ಅಲ್ಲಿರಬಾರದೆಂದು ವಿರೋಧಿಸಿದರು. ಹೀಗಾಗಿ ಅವರು ಮತ್ತೆ ಮಹಿಳಾ ಸಹಾಯವಾಣಿ ಸಹಾಯ ಕೇಳಿದರು. ವಿಕಾಸ್ ಅವರನ್ನು ಪೊಲೀಸ್ ಠಾಣೆಗೆ ಕರೆಸಲಾಯಿತು. ಪೊಲೀಸರು ಎಚ್ಚರಿಕೆ ಕೊಟ್ಟ ಬಳಿಕ ವಿಕಾಸ್ ತಾಯಿಯನ್ನು ಮನೆಗೆ ಕರೆದೊಯ್ದು, ಸೂಕ್ತ ಚಿಕಿತ್ಸೆ ಕೊಡಿಸಲು ಒಪ್ಪಿದ. ಆದರೆ ಆಕೆಯ ಮಾಸಿಕ ಪಿಂಚಣಿಯನ್ನು ತನಗೆ ಕೊಡಬೇಕೆಂದು ಪಟ್ಟು ಹಿಡಿದ.

ಆದರೆ ಶ್ಯಾಮಲಾ ಮಗನ ಜತೆಗೆ ಹೋಗಲು ಒಪ್ಪಲಿಲ್ಲ. ಮತ್ತೀಗ ಆಕೆ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ