ಆ್ಯಪ್ನಗರ

ವಾಯುವಿಹಾರಕ್ಕೆ, ಓಟಕ್ಕೆ ಮಾಸ್ಕ್ ಕಡ್ಡಾಯವಲ್ಲ: ಕಾರು, ಬೈಕ್‌ ಸವಾರರಿಗೂ ನಿರಾಳ

ವಾಯುವಿಹಾರ ಮಾಡುವಾಗ ಮತ್ತು ಓಡುವಾಗ ಮಾಸ್ಕ್‌ ಹಾಕಿಕೊಳ್ಳಬೇಕೆಂಬ ಕಡ್ಡಾಯ ನಿಯಮವಿಲ್ಲ ಎಂದು ಬಿಬಿಎಂಪಿ ಬುಧವಾರ ಸ್ಪಷ್ಟಪಡಿಸಿದೆ. ಜತೆಗೆ ​​ಕಾರು, ದ್ವಿಚಕ್ರ ವಾಹನಗಳಲ್ಲಿಒಬ್ಬರೇ ಸಂಚರಿಸುತ್ತಿದ್ದರೆ ಮುಖಗವಸು ಧರಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ.

Vijaya Karnataka Web 26 Aug 2020, 9:53 pm
ಬೆಂಗಳೂರು: ವಾಯುವಿಹಾರ ಮಾಡುವಾಗ ಮತ್ತು ಓಡುವಾಗ ಮಾಸ್ಕ್‌ ಹಾಕಿಕೊಳ್ಳಬೇಕೆಂಬ ಕಡ್ಡಾಯ ನಿಯಮವಿಲ್ಲ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬುಧವಾರ ಸ್ಪಷ್ಟಪಡಿಸಿದೆ. ಜತೆಗೆ ಕಾರು, ದ್ವಿಚಕ್ರ ವಾಹನಗಳಲ್ಲಿಒಬ್ಬರೇ ಸಂಚರಿಸುತ್ತಿದ್ದರೆ ಮುಖಗವಸು ಧರಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ.
Vijaya Karnataka Web mask


ಕಾರಿನಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಮತ್ತು ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಪ್ರಯಾಣ ಮಾಡುತ್ತಿದ್ದರೆ ಕಡ್ಡಾಯವಾಗಿ ಎಲ್ಲರೂ ಮಾಸ್ಕ್‌ ಧರಿಸಬೇಕು. ವಾಹನಗಳಲ್ಲಿ ಕೇವಲ ಒಬ್ಬರು ಮಾತ್ರ ತೆರಳುತ್ತಿದ್ದರೆ ಮಾಸ್ಕ್‌ ಹಾಕಿಕೊಳ್ಳಬೇಕಿಲ್ಲ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಮುಖಗವಸು ಧರಿಸಿಲ್ಲವೆಂಬ ಕಾರಣಕ್ಕೆ ಕಾರು, ದ್ವಿಚಕ್ರ ವಾಹನಗಳ ಚಾಲಕರಿಗೆ ಮಾರ್ಷಲ್‌ಗಳು ದಂಡ ವಿಧಿಸುತ್ತಿರುವ ದೂರುಗಳು ಕೇಳಿಬಂದಿದ್ದವು. ಹೀಗಾಗಿ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಆಯುಕ್ತರು, ''ವಾಹನಗಳಲ್ಲಿ ಒಂಟಿಯಾಗಿ ಸಂಚರಿಸುತ್ತಿದ್ದರೆ ಮಾಸ್ಕ್‌ ಧರಿಸಬೇಕಿಲ್ಲ. ಆದರೆ, ವಾಹನದ ಗಾಜು ತೆರೆದಿರಬಾರದು. ದ್ವಿಚಕ್ರ ವಾಹನ ಸವಾರರು ಪೂರ್ಣ ಹೆಲ್ಮೆಟ್‌ ಧರಿಸಿರಬೇಕು'' ಎಂದು ಹೇಳಿದರು.

ರಾಜ್ಯದಲ್ಲಿ 3 ಲಕ್ಷ ಗಡಿ ದಾಟಿದ ಕೊರೊನಾ! 8,000ಕ್ಕೂ ಹೆಚ್ಚು ಹೊಸ ಕೇಸ್, ಬೆಂಗಳೂರಿನಲ್ಲಿ ಸೋಂಕು ತೀವ್ರ

ಅರ್ಧ ಹೆಲ್ಮೆಟ್‌ ಧರಿಸಿ ವಾಹನ ಚಲಾಯಿಸುವವರು ಕಡ್ಡಾಯವಾಗಿ ಮಾಸ್ಕ್‌ ಹಾಕಿಕೊಳ್ಳಬೇಕಿದೆ. ಹಾಗೆಯೇ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೆ ಓಡಾಡುತ್ತಿದ್ದ 83,673 ಮಂದಿ ಜನರಿಂದ 1.60 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. ನಿಯಮಗಳ ಕುರಿತು ಸ್ಪಷ್ಟತೆ ಇಲ್ಲದ ಕಾರಣ ಮಾರ್ಷಲ್‌ಗಳು ಮಾಸ್ಕ್‌ ಧರಿಸದ ಕಾರು, ದ್ವಿಚಕ್ರ ವಾಹನಗಳಲ್ಲಿ ಒಂಟಿಯಾಗಿ ಸಂಚರಿಸುತ್ತಿದ್ದವರಿಗೂ ದಂಡ ಹಾಕುತ್ತಿದ್ದರು.

''ನಾನು ವೈಟ್‌ಫೀಲ್ಡ್‌ನಲ್ಲಿ ಕೆಲಸ ಮಾಡುತ್ತಿದ್ದು, ಕಾರಿನಲ್ಲಿ ಕಚೇರಿಗೆ ತೆರಳುವಾಗ ಸರ್ಜಾಪುರ ಸಿಗ್ನಲ್‌ ಬಳಿ ಮಾಸ್ಕ್‌ ಧರಿಸಿಲ್ಲವೆಂಬ ಕಾರಣಕ್ಕೆ ದಂಡ ಹಾಕಿದರು. ಕಾರಿನಲ್ಲಿ ನಾನೊಬ್ಬನೇ ಇದ್ದೆ. ಮಾಸ್ಕ್‌ ಧರಿಸಿ ವಾಹನ ಚಲಾಯಿಸಲು ಕಿರಿಕಿರಿ ಎನಿಸಿದೆ,'' ಎಂದು ಬಿ.ಜೆ.ಗಿರೀಶ್‌ ತಿಳಿಸಿದರು.

ಪಂಜಾಬ್‌ನ 23 ಶಾಸಕರಿಗೆ ಕೊರೊನಾ ಸೋಂಕು ..! ವಿಧಾನಸಭಾ ಅಧಿವೇಶನದ ಮೇಲೆ ವೈರಸ್‌ ಕರಿನೆರಳು

''ಸಾರಕ್ಕಿಯಿಂದ ಜಯನಗರಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಮಾರ್ಷಲ್‌ಗಳು ಮಾಸ್ಕ್‌ ಹಾಕಿಲ್ಲವೆಂದು ದಂಡ ವಿಧಿಸಿದರು. ನಾನು ಸಂಪೂರ್ಣ ಕವಚದ ಹೆಲ್ಮೆಟ್‌ ಹಾಕಿಕೊಂಡಿದ್ದೆ. ಹೀಗಿರುವಾಗ ಮಾಸ್ಕ್‌ ಧರಿಸಿ ಉಸಿರಾಡುವುದಾದರೂ ಹೇಗೆ?'' ಎಂದು ಕಾಲೇಜು ವಿದ್ಯಾರ್ಥಿ ನಳಿನ್‌ ಗುಪ್ತಾ ಕೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ