ಆ್ಯಪ್ನಗರ

ಆಗಸ್ಟ್ 3, 4ರಂದು ಬೆಂಗಳೂರು ಮೆಟ್ರೊ ಸೇವೆಯಲ್ಲಿ ವ್ಯತ್ಯಯ

ಆಗಸ್ಟ್ 3 ಹಾಗೂ ಆಗಸ್ಟ್ 4 ರಂದು ಬೆಂಗಳೂರು ಮೆಟ್ರೊ ಸೇವೆ ವ್ಯತ್ಯಯಗೊಳ್ಳಲಿದೆ. ಆಗಸ್ಟ್ 3ರ ರಾತ್ರಿ 9.30ಕ್ಕೆ ಬೈಯ್ಯಪ್ಪನಹಳ್ಳಿಯಿಂದ ಕೊನೆಯ ರೈಲು ಹೊರಡಲಿದ್ದು, ಮೈಸೂರು ರಸ್ತೆ ನಿಲ್ದಾಣದಿಂದ ರಾತ್ರಿ 9 ಕ್ಕೆ ಕೊನೆಯ ರೈಲು ಹೊರಡಲಿದೆ.

TNN & Agencies 31 Jul 2019, 10:39 am
ಬೆಂಗಳೂರು: ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಎಂ.ಜಿ ರಸ್ತೆಯಿಂದ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ವರೆಗೆ ಆಗಸ್ಟ್ 3 ರಂದು ರಾತ್ರಿ 9.30ರಿಂದ ಆ.4ರ ಬೆಳಗ್ಗೆ 11 ಗಂಟೆವರೆಗೆ ಮೆಟ್ರೊ ರೈಲು ಸೇವೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.
Vijaya Karnataka Web Bangalore Metro


ಇದೇ ಅವಧಿಯಲ್ಲಿ ಎಂ.ಜಿ ರಸ್ತೆಯಿಂದ ನಾಯಂಡಹಳ್ಳಿ ಮೆಟ್ರೊ ನಿಲ್ದಾಣದವರೆಗೆ ಹಾಗೂ ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ಯಲಚೇನಹಳ್ಳಿ ಮೆಟ್ರೊ ನಿಲ್ದಾಣದವರೆಗೆ ರೈಲು ಸೇವೆ ಎಂದಿನಂತೆ ಇರಲಿದೆ. ಆಗಸ್ಟ್ 4 ರಂದು ಬೆಳಗ್ಗೆ 11 ಗಂಟೆ ನಂತರ ನೇರಳೆ ಮಾರ್ಗದಲ್ಲಿ ಪೂರ್ಣ ಸೇವೆ ಇರಲಿದೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ.

ವಿದ್ಯುತ್, ನಾಗರಿಕ ಮತ್ತು ಯಾಂತ್ರಿಕ ಕೆಲಸಗಳನ್ನು ಒಳಗೊಂಡಿರುವುದರಿಂದ ಈ ಕ್ರಮ ಅಗತ್ಯ ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ. “ಕೆಲವು ಕೆಲಸಗಳನ್ನು ರಾತ್ರಿಯಲ್ಲಿ ನಿಖರವಾಗಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ಪೂರ್ಣ ಹಗಲು ಹೊತ್ತಿನಲ್ಲೂ ಕೆಲಸ ಮಾಡಬೇಕಾಗಿದೆ. ಡಿಸೆಂಬರ್ 28, 2018ರಿಂದ ಜನವರಿ 1, 2019ರವರೆಗೆ ಮೆಟ್ರೊ ಸೇತುವೆ ಹಾನಿಯಿಂದ ಆಗಿದ್ದ ಸೇವೆ ವ್ಯತ್ಯಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ”ಎಂದು ಮೆಟ್ರೊ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಕಳೆದ ಮಾರ್ಚ್‌ನಲ್ಲೂ ರಾಷ್ಟ್ರೀಯ ಕಾಲೇಜು ಮತ್ತು ಯಶವಂತಪುರ ಮೆಟ್ರೊ ನಿಲ್ದಾಣಗಳ ನಡುವಿನ ರೈಲುಗಳನ್ನು ಸಾಮಾನ್ಯ ಮುಕ್ತಾಯ ಸಮಯಕ್ಕಿಂತ ಒಂದೂವರೆ ಗಂಟೆಗಳ ಮುಂಚಿತವಾಗಿ ನಿಲ್ಲಿಸಲಾಗಿತ್ತು.

ಪ್ರವೇಶ ದ್ವಾರ ಬಂದ್‌ : ಬೊಮ್ಮಸಂದ್ರ ಕಡೆಗೆ ರೈಲು ಮಾರ್ಗದ ನಿರ್ಮಾಣಕ್ಕಾಗಿ ಹಸಿರು ಮಾರ್ಗದ ಆರ್‌.ವಿ.ರಸ್ತೆ ನಿಲ್ದಾಣದ ನೈಋತ್ಯ ಭಾಗದ ಪ್ರವೇಶದ್ವಾರವನ್ನು ಆಗಸ್ಟ್ 1 ರಿಂದ ಮುಚ್ಚಲಾಗುವುದು. ಆದರೆ ಪ್ರಯಾಣಿಕರು ಇದೇ ನಿಲ್ದಾಣದ ವಾಯುವ್ಯ ಭಾಗದ ದ್ವಾರವನ್ನು ಬಳಸಿಕೊಳ್ಳಬಹುದು. ಹೊಸದಾಗಿ ಸ್ಕೈವಾಕ್‌ ನಿರ್ಮಿಸಿದ್ದು, ಅದನ್ನು ಬಳಕೆ ಮಾಡಬಹುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ