ಆ್ಯಪ್ನಗರ

ವಿಮೆ ಪರಿಹಾರ ಸಿಗಲು ಕನಿಷ್ಠ ಒಂದು ತಿಂಗಳು ಕಾಲಾವಕಾಶ ಬೇಕು

ಯಲಹಂಕ ವಾಯುನೆಲೆಯಲ್ಲಿ ಬೆಂಕಿಗೆ ಆಹುತಿಯಾದ ಕಾರುಗಳಿಗೆ ವಿಮೆ ಪರಿಹಾರವನ್ನು ಪಡೆಯುವುದು ಕಷ್ಟವಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಕೆಲ ವಿಮೆ ಕಂಪನಿಗಳ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Vijaya Karnataka 24 Feb 2019, 8:08 am
ಬೆಂಗಳೂರು: ಏರ್‌ ಶೋ ಸಂದರ್ಭದಲ್ಲಿ ಪಾರ್ಕಿಂಗ್‌ ಪ್ರದೇಶದಲ್ಲಿ ಉಂಟಾದ ಭೀಕರ ಅಗ್ನಿ ದುರಂತದಲ್ಲಿ 300ಕ್ಕೂ ಅಧಿಕ ಕಾರುಗಳು ಕ್ಷ ಣಾರ್ಧದಲ್ಲಿ ಸುಟ್ಟುಹೋಗಿದ್ದು, ದುರಂತಕ್ಕೀಡಾದ ಕಾರುಗಳಿಗೆ ವಿಮೆ ಇದ್ದರೆ, ಅದನ್ನು ಕ್ಲೇಮ್‌ ಮಾಡಬಹುದು ಮತ್ತು ಯಾವ ವಿಧದ ವಿಮೆ ಎನ್ನುವುದರ ಮೇಲೆ ಅದು ಅವಲಂಬಿತವಾಗಿರುತ್ತದೆ.
Vijaya Karnataka Web insura


ಯಲಹಂಕ ವಾಯುನೆಲೆಯಲ್ಲಿ ಬೆಂಕಿಗೆ ಆಹುತಿಯಾದ ಕಾರುಗಳಿಗೆ ವಿಮೆ ಪರಿಹಾರವನ್ನು ಪಡೆಯುವುದು ಕಷ್ಟವಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಕೆಲ ವಿಮೆ ಕಂಪನಿಗಳ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮಾಲೀಕರು ಕೆಲವು ನಿಯಮಗಳನ್ನು ಸರಿಯಾಗಿ ಪಾಲಿಸಿದರೆ ಪರಿಹಾರವನ್ನು ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಜ್ಞಾನೇಂದ್ರ ಮಾತನಾಡಿ, ''ಕಾರಿನ ದಾಖಲೆಗಳು ಕೂಡಾ ಸುಟ್ಟುಹೋಗಿರುವುದು ತಿಳಿದುಬಂದಿದೆ. ಕಾರು ಮಾಲೀಕರ ಸಹಿಯನ್ನು ಆಧಾರವಾಗಿರಿಸಿಕೊಂಡು ದಾಖಲೆಗಳ ಪ್ರತಿ ಒದಗಿಸಿಕೊಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಇದಕ್ಕೂ ಮುನ್ನ ಮಾಲೀಕರು ಸಂಬಂಧಿಸಿದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ ಎಫ್‌ಐಆರ್‌ ಪ್ರತಿಯನ್ನು ಇಟ್ಟುಕೊಳ್ಳಬೇಕು. ಈ ಎಲ್ಲ ದಾಖಲೆಗಳನ್ನು ಸಂಬಂಧಿಸಿದ ವಿಮೆ ಕಂಪನಿಗೆ ನೀಡಬೇಕು. ಆದರೆ ವಿಮೆಯ ದಿನಾಂಕ ಮುಗಿದುಹೋಗಿದ್ದರೆ ಪರಿಹಾರ ಸಿಗುವುದು ಅನುಮಾನ,'' ಎಂದು ತಿಳಿಸಿದ್ದಾರೆ.

ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಅಧಿಕಾರಿಗಳಿಂದ ತಪಾಸಣೆ

ಯಲಹಂಕ ವಾಯುನೆಲೆಗೆ ಶನಿವಾರ ಸಂಜೆ ಭೇಟಿ ನೀಡಿದ ಅಧಿಕಾರಿಗಳು ತಮ್ಮ ಕಂಪನಿಯಲ್ಲಿ ವಿಮೆ ಮಾಡಿಸಿದ ಗ್ರಾಹಕರ ಮಾಹಿತಿ ಸಂಗ್ರಹಿಸಿ, ಕಾರುಗಳ ತಪಾಸಣೆ ನಡೆಸಿದರು. ಈ ವೇಳೆ ಮಾತನಾಡಿದ ಕಂಪನಿಯ ಅಧಿಕಾರಿಯೊಬ್ಬರು, ''ದಾಖಲೆಗಳು ಸುಟ್ಟುಹೋಗಿದ್ದರೂ ಅವುಗಳ ಮಾಹಿತಿಯನ್ನು ಪಡೆದು ಮತ್ತೊಂದು ದಾಖಲೆ ಮಾಡಿಸಿಕೊಡಲಾಗುವುದು. ಗ್ರಾಹಕರು ಕೂಡಲೇ ಕಂಪನಿಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. 3-4 ವಾರದೊಳಗೆ ಎಲ್ಲ ಪ್ರಕ್ರಿಯೆ ಮುಗಿಸಲು ಸಾಧ್ಯವಿದೆ,'' ಎಂದು ತಿಳಿಸಿದರು.

ಹೆಲ್ಪ್‌ ಡೆಸ್ಕ್‌ ಸಹಾಯ ಪಡೆಯಿರಿ


ಕಾರು ಕಳೆದುಕೊಂಡ ಮಾಲೀಕರಿಗೆ ನೆರವಾಗಲು ಏರೋ ಇಂಡಿಯಾ ಶೋನಲ್ಲಿ ಹೆಲ್ಪ್‌ ಡೆಸ್ಕ್‌ ತೆರೆಯಲಾಗಿದೆ.

ವಿಮೆಗಾಗಿ ತಪಾಸಣೆ ನಡೆಸಲು ಈ ಹೆಲ್ಪ್‌ ಡೆಸ್ಕ್‌ ನೆರವಾಗಲಿದೆ. ಭಾನುವಾರವೂ ಇದು ಕೆಲಸ ಮಾಡಲಿದೆ. ಕಾರು ಕಳೆದುಕೊಂಡ ಮಾಲೀಕರು ಹೆಲ್ಪ್‌ ಡೆಸ್ಕ್‌ನ 9480801415 ಹಾಗೂ 080-22942536 ಗೆ ಕರೆ ಮಾಡಿ ನೆರವು ಪಡೆಯಬಹುದು.

*ಕಾರು ಕಳೆದುಕೊಂಡ ಮಾಲೀಕರು ಕೂಡಲೇ ಸಂಬಂಧಿಸಿದ ವಿಮೆ ಕಂಪನಿಗೆ ಮಾಹಿತಿ ನೀಡಿ ತಪಾಸಣೆ ನಡೆಸಲು ಮನವಿ ಮಾಡಿ.

*ತಪಾಸಣೆ ನಡೆಯುವವರೆಗೆ ವಾಹನದ ಅವಶೇಷವನ್ನು ಸ್ಥಳಾಂತರಿಸುವುದು ಬೇಡ.

*ಯಲಹಂಕ ಪೊಲೀಸರು ಶನಿವಾರ ಮಧ್ಯಾಹ್ನವೇ ಅನೇಕ ಮಾಲೀಕರನ್ನು ಸಂಪರ್ಕಿಸಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್‌ ದಾಖಲಿಸದವರು ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ಎಫ್‌ಐಆರ್‌ ಪ್ರತಿ ಪಡೆಯಿರಿ.

*ಕಾರಿನ ದಾಖಲೆಗಳು ಸುಟ್ಟುಹೋಗಿದ್ದರೆ ಸಂಬಂಧಪಟ್ಟ ಸಾರಿಗೆ ಇಲಾಖೆ ಕಚೇರಿಗೆ ತೆರಳಿ ಪ್ರತಿಯನ್ನು ಪಡೆಯಿರಿ.

ಸತ್ತ ಹಾವು, ದೂರ ಹೋದ ಪಕ್ಷಗಳು

ಕಾರು ಸುಟ್ಟಾಗ ಎದ್ದ ಬೆಂಕಿ, ದಟ್ಟ ಹೊಗೆಯಿಂದ ಅಪಾರ ಪ್ರಮಾಣದಲ್ಲಿ ವಾಯುಮಾಲಿನ್ಯ ಸೃಷ್ಟಿಯಾಯಿತು. ಬೆಂಕಿಯ ಬಿಸಿಗೆ ಸುತ್ತಲಿನ ಪ್ರದೇಶದ ತಾಪಮಾನ ಏರಿಕೆಯಾಯಿತು. ಜತೆಗೆ ಹೊಗೆಯಿಂದ ಸುತ್ತಮುತ್ತಲಿನ ಪ್ರದೇಶಗಳ ಮರಗಳಲ್ಲಿದ್ದ ಹಕ್ಕಿಗಳು, ಇಲಿಗಳು, ಉರಗ ಸಂತತಿ ಓಡಿ ಮರೆಯಾದವು. ಕೆಲ ಜೀವಿಗಳು ಬೆಂಕಿಗೆ ಸಿಲುಕಿ ಸತ್ತವು. ಯಲಹಂಕ ವಾಯುನೆಲೆಯಲ್ಲಿ ಹದ್ದುಗಳ ಹಾರಾಟ ಹೆಚ್ಚಿದೆ. ಆಕಾಶದಲ್ಲಿ ಕಸರತ್ತು ಮಾಡುವ ವಿಮಾನ ಹಾಗೂ ಡ್ರೋನ್‌ಗಳ ಬಳಿ ಕುತೂಹಲದಿಂದ ಹಾರುತ್ತಿದ್ದ ಇವುಗಳು ಹೊಗೆ ಕಂಡು ಭಯಗೊಂಡು ದೂರ ಹಾರಿದವು. ಕಾರುಗಳು ಸುಟ್ಟ ಜಾಗದಲ್ಲಿ ಹಾವು ಸುಟ್ಟು ಕರಕಲಾಗಿದ್ದು ಕಂಡುಬಂತು.

ಗುರುತು ಸಿಗದೆ ಕಾರುಗಳಿಗೆ ನಂಬರ್‌

ಸುಟ್ಟು ಕರಕಲಾಗಿರುವ ಕಾರುಗಳನ್ನು ಗುರುತಿಸಲು ಆಗುತ್ತಿಲ್ಲ. ನಂಬರ್‌ ಪ್ಲೇಟ್‌ ಕೂಡ ಕಾಣಿಸದಷ್ಟು ಕರಕಲಾಗಿದೆ. ಹೀಗಾಗಿ ಪೊಲೀಸರು ಅಂಥ ವಾಹನಗಳಿಗೆ 1, 2 ಮತ್ತು 3 ಎಂದು ಅಂಕಿಗಳನ್ನು ಬರೆಯುತ್ತಿದ್ದಾರೆ. ವಾಹನದ ಚಾಸಿ ನಂಬರ್‌ ನೋಡಿ ಹುಡುಕಲು ನಿರ್ಧರಿಸಲಾಗಿದೆ. ಕೆಲವರು ಸುಟ್ಟುಹೋದ ಕಾರುಗಳಲ್ಲಿ ಇಟ್ಟಿದ್ದ ಮನೆಯ ಕೀ ಹುಡುಕುವ ಪ್ರಯತ್ನ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ