ಆ್ಯಪ್ನಗರ

ನಿಷ್ಕ್ರಿಯವಾಗದ ಓಲಾ ಆ್ಯಪ್‌: ಮಾ. 25ರವರೆಗೆ ಗಡುವು

ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸಲು ನೀಡಲಾಗಿದ್ದ ಅಗ್ರಿಗೇಟರ್ಸ್‌ ಪರವಾನಗಿಯನ್ನು ಸೋಮವಾರ ಸಂಜೆಯೊಳಗೆ ತಂದೊಪ್ಪಿಸಲು ಸಾರಿಗೆ ಇಲಾಖೆಯು ಓಲಾ ಕಂಪೆನಿಗೆ ಗಡುವು ನೀಡಿದೆ. ಒಂದೊಮ್ಮೆ ಕಂಪೆನಿಯು ಆ್ಯಪ್‌ ಅನ್ನು ನಿಷ್ಕ್ರಿಯಗೊಳಿಸಿ, ಪರವಾನಗಿ ಒಪ್ಪಿಸದಿದ್ದರೆ ಟ್ಯಾಕ್ಸಿಗಳನ್ನು ಜಪ್ತಿ ಮಾಡಿ ಕ್ರಮ ಜರುಗಿಸಲು ತೀರ್ಮಾನಿಸಿದೆ.

Vijaya Karnataka 24 Mar 2019, 5:00 am
ಬೆಂಗಳೂರು: ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸಲು ನೀಡಲಾಗಿದ್ದ ಅಗ್ರಿಗೇಟರ್ಸ್‌ ಪರವಾನಗಿಯನ್ನು ಸೋಮವಾರ ಸಂಜೆಯೊಳಗೆ ತಂದೊಪ್ಪಿಸಲು ಸಾರಿಗೆ ಇಲಾಖೆಯು ಓಲಾ ಕಂಪೆನಿಗೆ ಗಡುವು ನೀಡಿದೆ. ಒಂದೊಮ್ಮೆ ಕಂಪೆನಿಯು ಆ್ಯಪ್‌ ಅನ್ನು ನಿಷ್ಕ್ರಿಯಗೊಳಿಸಿ, ಪರವಾನಗಿ ಒಪ್ಪಿಸದಿದ್ದರೆ ಟ್ಯಾಕ್ಸಿಗಳನ್ನು ಜಪ್ತಿ ಮಾಡಿ ಕ್ರಮ ಜರುಗಿಸಲು ತೀರ್ಮಾನಿಸಿದೆ.
Vijaya Karnataka Web ola1


ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ನಿಯಮಗಳ ಉಲ್ಲಂಘನೆ ಕಾರಣಕ್ಕಾಗಿ ಓಲಾ ಕಂಪೆನಿಯ ಪರವಾನಗಿಯನ್ನು 6 ತಿಂಗಳ ಅವಧಿಗೆ ಅಮಾನತುಗೊಳಿಸಿ ಮಾ. 18ರಂದು ರಾಜ್ಯ ಸಾರಿಗೆ ಪ್ರಾಧಿಕಾರವು ಆದೇಶ ಹೊರಡಿಸಿತ್ತು. ಆದೇಶ ಸ್ವೀಕರಿಸಿದ ಮೂರು ದಿನಗಳೊಳಗೆ ಕಂಪೆನಿಯು ತನ್ನ ಪರವಾನಗಿಯನ್ನು ಪ್ರಾಧಿಕಾರಕ್ಕೆ ಒಪ್ಪಿಸಬೇಕು. ಕೂಡಲೇ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಬೇಕು ಎಂದು ಸೂಚಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಆರ್‌ಟಿಒ ಅಧಿಕಾರಿಗಳು ಕೆಲವೊಂದು ಓಲಾ ಟ್ಯಾಕ್ಸಿಗಳನ್ನು ಜಪ್ತಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಕೆಲ ಚಾಲಕರು ಗೊಂದಲಕ್ಕೆ ಸಿಲುಕಿದ್ದು, ಆ್ಯಪ್‌ಗಳನ್ನು ಸ್ಥಗಿತಗೊಳಿಸಿದ್ದಾರೆ. ಬಹುಪಾಲು ಚಾಲಕರು ಉಬರ್‌ ಮತ್ತು ಇನ್ನಿತರೆ ಕಂಪೆನಿಯಡಿ ಸೇವೆ ಒದಗಿಸುತ್ತಿದ್ದಾರೆ. ಈ ಟ್ಯಾಕ್ಸಿಗಳ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಆಗಿಲ್ಲ. ಓಲಾ ಟ್ಯಾಕ್ಸಿಗಳು ಸಹ ಎಂದಿನಂತೆ ಸೇವೆ ಒದಗಿಸುತ್ತಿವೆ. ಆ್ಯಪ್‌ ಕೂಡ ಸಕ್ರಿಯವಾಗಿದೆ.

''ಓಲಾ ಕಂಪೆನಿಗೆ ನೀಡಿದ್ದ ಪರವಾನಗಿ ಅನ್ವಯ ಟ್ಯಾಕ್ಸಿ ಸೇವೆ ಒದಗಿಸಲು ಮಾತ್ರ ಅವಕಾಶವಿದೆ. ಆದರೆ, ಕಂಪೆನಿಯು ಅಕ್ರಮವಾಗಿ ಬೈಕ್‌ ಟ್ಯಾಕ್ಸಿ ಸೇವೆ ಆರಂಭಿಸುವ ಮೂಲಕ ನಿಯಮ ಉಲ್ಲಂಘಿಸಿತ್ತು. ಈ ಸಂಬಂಧ ನೋಟಿಸ್‌ ನೀಡಿದ್ದರೂ, ಸಮರ್ಪಕ ಉತ್ತರ ನೀಡಿರಲಿಲ್ಲ. ಹೀಗಾಗಿ, ಪರವಾನಗಿಯನ್ನು ಅಮಾನತುಗೊಳಿಸಲಾಗಿತ್ತು. ಪರವಾನಗಿ ತಂದೊಪ್ಪಿಸಲು ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ,'' ಎಂದು ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ ತಿಳಿಸಿದರು.

''ಆದೇಶದ ಪ್ರತಿಯು ಶುಕ್ರವಾರ ಸಂಜೆ ಕಂಪೆನಿಯ ಕೈ ಸೇರಿದೆ. ಸೋಮವಾರ ಸಂಜೆಯೊಳಗೆ ಪರವಾನಗಿ ತಂದೊಪ್ಪಿಸಬೇಕು. ಇಲ್ಲವೇ ತಪ್ಪನ್ನು ಒಪ್ಪಿಕೊಂಡು ಟ್ಯಾಕ್ಸಿ ಸೇವೆ ಮುಂದುವರಿಸಲು ಅನುಮತಿ ಕೋರಿ ಮನವಿ ಮಾಡಿಕೊಂಡರೆ, ಪ್ರಾಧಿಕಾರವು ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಒಂದೊಮ್ಮೆ ಪರವಾನಗಿ ಒಪ್ಪಿಸದಿದ್ದರೆ, ಆನಂತರ ಟ್ಯಾಕ್ಸಿಗಳನ್ನು ಜಪ್ತಿ ಮಾಡಿ ಕಾನೂನುರೀತ್ಯ ಕ್ರಮ ಕೈಗೊಳ್ಳಲಾಗುವುದು,'' ಎಂದು ಹೇಳಿದರು.

ಸಂವಹನ ಕೊರತೆಯಿಂದ ಜಪ್ತಿ: ''ಸಂವಹನ ಕೊರತೆ ಮತ್ತು ಗೊಂದಲದಿಂದಾಗಿ ಒಂದೆರಡು ಓಲಾ ಟ್ಯಾಕ್ಸಿಗಳನ್ನು ಆರ್‌ಟಿಒ ಸಿಬ್ಬಂದಿ ಜಪ್ತಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ. ಹೀಗಾಗಿ, ಸೋಮವಾರ ಸಂಜೆಯವರೆಗೆ ಓಲಾ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ಎಲ್ಲ ಆರ್‌ಟಿಒಗಳಿಗೆ ಸೂಚನೆ ನೀಡಲಾಗಿದೆ,'' ಎಂದು ಆಯುಕ್ತರು 'ವಿಜಯ ಕರ್ನಾಟಕ'ಕ್ಕೆ ತಿಳಿಸಿದರು.

''ಆರ್‌ಟಿಒ ಅಧಿಕಾರಿಗಳು ಓಲಾ ಟ್ಯಾಕ್ಸಿಗಳ ಮೇಲೆ ಪ್ರಕರಣ ದಾಖಲಿಸಿ, ನ್ಯಾಯಾಲಯದಲ್ಲಿ ದಂಡ ಕಟ್ಟುವಂತೆ ಸೂಚಿಸುತ್ತಿದ್ದಾರೆ. ಓಲಾ ಕಂಪೆನಿಯ ಕಾನೂನುಬಾಹಿರ ಸೇವೆಗೆ ಬಡ ಚಾಲಕರು ತೊಂದರೆ ಅನುಭವಿಸುವಂತಾಗಿದೆ. ಆರು ತಿಂಗಳ ಕಾಲ ಪರವಾನಗಿ ಅಮಾನತುಗೊಳಿಸಿದರೆ, ಸಂಕಷ್ಟಕ್ಕೆ ಸಿಲುಕಿ ಹಾಕಿಕೊಳ್ಳಬೇಕಾಗುತ್ತದೆ,'' ಎಂದು ಚಾಲಕ ಚಂದ್ರುಕುಮಾರ್‌ ಅಳಲು ತೋಡಿಕೊಂಡರು.

''ಓಲಾ ಆ್ಯಪ್‌ ಸಕ್ರಿಯವಾಗಿದ್ದು, ಪ್ರಯಾಣಿಕರಿಗೆ ಸೇವೆ ಒದಗಿಸಲಾಗುತ್ತಿದೆ. ಕೆಲವೆಡೆ ಆರ್‌ಟಿಒ ಅಧಿಕಾರಿಗಳು ಟ್ಯಾಕ್ಸಿಗಳನ್ನು ತಡೆದು, ಪ್ರಕರಣ ದಾಖಲಿಸುತ್ತಿದ್ದಾರೆ. ಒಂದೊಮ್ಮೆ ಓಲಾ ಸೇವೆ ಸ್ಥಗಿತಗೊಂಡರೆ, ಸಾಲ ಮತ್ತು ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ. ಓಲಾ ಕಂಪೆನಿಯ ಕಾನೂನುಬಾಹಿರ ಕ್ರಮದಿಂದ ಚಾಲಕರು ತೊಂದರೆ ಅನುಭವಿಸುವಂತಾಗಿದೆ,'' ಎಂದು ಚಾಲಕ ಗಿರೀಶ್‌ ಕಿಡಿಕಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ