ಆ್ಯಪ್ನಗರ

ಬೆಂಗಳೂರು: ಸೋಂಕಿತರ ಚಿಕಿತ್ಸೆಗೆ ಬಿಐಇಸಿಯಲ್ಲಿ 1536 ಹಾಸಿಗೆಗಳು ಸಿದ್ಧ

ನಗರದಲ್ಲಿ 9 ಕಡೆ ಕೋವಿಡ್‌ ಆರೈಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳೊಂದಿಗೆ ಇದೀಗ ಬಿಐಇಸಿ ಸೇರ್ಪಡೆಯಾಗಿದೆ. ಅರಮನೆ ಮೈದಾನ, ಅಂತಾರಾಷ್ಟ್ರೀಯ ಕನ್ವೆನ್ಷನ್‌ ಸೆಂಟರ್‌, ಪೊಲೀಸ್‌ ಕ್ವಾರ್ಟರ್ಸ್‌ಗಳಲ್ಲೂ ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆಯಲಾಗುವುದು.

Vijaya Karnataka Web 27 Jul 2020, 11:07 pm
ಬೆಂಗಳೂರು: ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಕೊರೊನಾ ಸೋಂಕಿತರ ಚಿಕಿತ್ಸೆಗೆ ನಿರ್ಮಿಸಿರುವ ಕೋವಿಡ್‌ ಆರೈಕೆ ಕೇಂದ್ರವನ್ನು ಉಪ ಮುಖ್ಯಮಂತ್ರಿ ಡಾ. ಸಿಎನ್‌ ಅಶ್ವತ್ಥ ನಾರಾಯಣ ಸೋಮವಾರ ಉದ್ಘಾಟಿಸಿದರು.
Vijaya Karnataka Web ಬಿಐಇಸಿ
ಬಿಐಇಸಿ


ಆ ನಂತರ ಮಾತನಾಡಿದ ಅವರು, ''ಸದ್ಯ 1536 ಹಾಸಿಗೆಗಳು ಲಭ್ಯವಿದ್ದು, ಮಂಗಳವಾರದಿಂದಲೇ ರೋಗ ಲಕ್ಷಣವಿಲ್ಲದ ಸೋಂಕಿತರನ್ನು ಚಿಕಿತ್ಸೆಗಾಗಿ ದಾಖಲಿಸಲಾಗುತ್ತದೆ. ಇಲ್ಲಿಒಟ್ಟು 10,100 ಹಾಸಿಗೆಗಳನ್ನು ಅಳವಡಿಸಲಾಗುತ್ತಿದೆ. ಇದು ದೇಶದ ಅತ್ಯಂತ ದೊಡ್ಡ ಆರೈಕೆ ಕೇಂದ್ರವಾಗಿದೆ'' ಎಂದರು.

''ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇದಿನೆ ಜಾಸ್ತಿಯಾಗುತ್ತಿದ್ದು, ಭವಿಷ್ಯದಲ್ಲಿ ಎದುರಾಗಬಹುದಾದ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರ ಸಜ್ಜಾಗಿದೆ. ಅತ್ಯಂತ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಬಿಐಇಸಿ ಕೇಂದ್ರದಲ್ಲಿ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ'' ಎಂದು ಹೇಳಿದರು.

ಮಂಚಗಳ ಗುಣಮಟ್ಟ ಪರಿಶೀಲನೆ

ಕೋವಿಡ್‌ ಪರಿಕರಗಳ ಗುಣಮಟ್ಟದ ಬಗ್ಗೆ ಪ್ರತಿಪಕ್ಷಗಳ ಆರೋಪದ ಹಿನ್ನೆಲೆಯಲ್ಲಿ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ್‌ ಅವರು ಮಂಚಗಳ ಗುಣಮಟ್ಟ ಪರಿಶೀಲಿಸಿದರು. 170 ಕೆ.ಜಿ. ತೂಕದ ವ್ಯಕ್ತಿಯೊಬ್ಬರನ್ನು ಹಾಸಿಗೆಯ ಮೇಲೆ ಮಲಗಿಸಿ ಮಂಚದ ಸಾಮರ್ಥ್ಯವನ್ನು ಪರೀಕ್ಷಿಸಿದರು.

ಮತ್ತಷ್ಟು ಕೋವಿಡ್‌ ಆರೈಕೆ ಕೇಂದ್ರಗಳ ಸ್ಥಾಪನೆ


''ನಗರದಲ್ಲಿ 9 ಕಡೆ ಕೋವಿಡ್‌ ಆರೈಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳೊಂದಿಗೆ ಇದೀಗ ಬಿಐಇಸಿ ಸೇರ್ಪಡೆಯಾಗಿದೆ. ಅರಮನೆ ಮೈದಾನ, ಅಂತಾರಾಷ್ಟ್ರೀಯ ಕನ್ವೆನ್ಷನ್‌ ಸೆಂಟರ್‌, ಪೊಲೀಸ್‌ ಕ್ವಾರ್ಟರ್ಸ್‌ಗಳಲ್ಲೂ ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆಯಲಾಗುವುದು. ಹಾಗೆಯೇ, ಕೆಲ ಖಾಸಗಿ ಅಪಾರ್ಟ್‌ಮೆಂಟ್‌ಗಳಲ್ಲೂ ಕೇಂದ್ರಗಳನ್ನು ಆರಂಭಿಸಲಾಗುವುದು. ಹೋಮ್‌ ಐಸೋಲೇಷನ್‌ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಲಾಗುವುದು'' ಎಂದರು.

ಪರೀಕ್ಷಾ ವರದಿ ವಿಳಂಬವಾಗಲ್ಲ...

''ಕೋವಿಡ್‌ ಪತ್ತೆ ಪರೀಕ್ಷೆ ಬಳಿಕ ವರದಿ ಬರುವುದು ವಿಳಂಬವಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಗಂಟಲು ದ್ರವ ನೀಡಿದ ಅರ್ಧ ತಾಸಿನಲ್ಲೇ ವರದಿ ಸಿಗುವಂತೆ ಮಾಡಲಾಗುತ್ತಿದೆ. ಇದಕ್ಕಾಗಿ ಅಗತ್ಯವಿರುವ ರ‍್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌ ಕಿಟ್‌ಗಳನ್ನು ಒದಗಿಸಲಾಗಿದೆ. ಈ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ'' ಎಂದು ಆಶ್ವಾಸನೆ ನೀಡಿದರು.

ಕಂದಾಯ ಸಚಿವ ಆರ್‌.ಅಶೋಕ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌.ವಿಶ್ವನಾಥ್‌, ಮೇಯರ್‌ ಎಂ. ಗೌತಮ್‌ಕುಮಾರ್‌, ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮತ್ತಿತರರು ಉಪಸ್ಥಿತರಿದ್ದರು.

ಕೋವಿಡ್‌ ಆರೈಕೆ ಕೇಂದ್ರದಲ್ಲಿ ಕಲ್ಪಿಸಿರುವ ಸೌಲಭ್ಯಗಳು


  • ಸಭಾಂಗಣ-5 ರಲ್ಲಿ 24 ವಾರ್ಡ್‌ ಸ್ಥಾಪನೆ
  • ಒಮ್ಮೆಗೆ 350 ಮಂದಿ ಊಟ ಮಾಡಬಹುದಾದ ಕೊಠಡಿ
  • ಮನರಂಜನಾ ಕೊಠಡಿಯಲ್ಲಿಟಿವಿ, ಆಸನ ವ್ಯವಸ್ಥೆ, ಫ್ಯಾನ್‌ಗಳ ಅಳವಡಿಕೆ
  • ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ
  • ಸ್ನಾನ, ಮೂತ್ರ ವಿಸರ್ಜನೆಗೆ ಮತ್ತು ಕೈಗಳ ಸ್ವಚ್ಛತೆಗೆ ಪ್ರತ್ಯೇಕ ವ್ಯವಸ್ಥೆ
  • ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ನಿಯಂತ್ರಣ ಕೊಠಡಿ ಸ್ಥಾಪನೆ
  • ಸೋಂಕಿತರ ನೋಂದಣಿ ಮತ್ತು ದಾಖಲು ಮಾಡಿಕೊಳ್ಳಲು ಪ್ರತ್ಯೇಕ ಕೊಠಡಿ
  • ಕೋವಿಡ್‌ ಆರೈಕೆ ಕೇಂದ್ರದ ನಿರ್ವಹಣೆಗೆ ಅಗತ್ಯ ಸಿಬ್ಬಂದಿಯ ನೇಮಕ
  • ಸುರಕ್ಷತಾ ಕ್ರಮವಾಗಿ ಮಾರ್ಷಲ್‌ಗಳು, ಕೆಎಸ್‌ಆರ್‌ಪಿ ತುಕಡಿ ನಿಯೋಜನೆ. ಅಗ್ನಿಶಾಮಕ ವಾಹನದ ವ್ಯವಸ್ಥೆ
  • ವಿದ್ಯುತ್‌ ಸಮಸ್ಯೆ ಉಂಟಾಗದಂತೆ ಕೆಪಿಟಿಸಿಎಲ್‌ನಿಂದ ಪ್ರತ್ಯೇಕ ಸಂಪರ್ಕ
  • ಸೋಂಕಿತರಿಗೆ ಸರಕಾರದ ಆದೇಶದಂತೆ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ