ಆ್ಯಪ್ನಗರ

ಗುರು ಸಾರ್ವಭೌಮ ಸಹಕಾರ ಸಂಘದಲ್ಲಿ 233 ಕೋಟಿ ಅವ್ಯವಹಾರ

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಅವ್ಯವಹಾರದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಶ್ರೀ ಗುರು ಸಾರ್ವಭೌಮ ಸೌಹಾರ್ದ ಸಹಕಾರ ಬ್ಯಾಂಕ್ ನಲ್ಲೂ ಕೋಟಿಗಟ್ಟಲೆ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.

Vijaya Karnataka Web 14 Jul 2020, 11:53 am
ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಅವ್ಯವಹಾರದ ತನಿಖೆ ತೀವ್ರವಾಗಿ ನಡೆಯುತ್ತಿರುವ ಹೊತ್ತಲ್ಲೇ ಶ್ರೀ ಗುರು ಸಾರ್ವಭೌಮ ಸೌಹಾರ್ದ ಸಹಕಾರ ಸಂಘದಲ್ಲೂ ಅವ್ಯವಹಾರ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.
Vijaya Karnataka Web sri sarvabhowma credit souharda cooperative society


ಸಹಕಾರ ಸಂಘದಲ್ಲಿ 233 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂಬ ಬಗ್ಗೆ ಶಂಕರಪುರ ಠಾಣೆಗೆ ದೂರು ನೀಡಲಾಗಿದೆ. ಈ ದೂರಿನ ಆಧಾರದಲ್ಲಿ ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯರು ಸೇರಿ 14 ಮಂದಿ ವಿರುದ್ಧ ಶಂಕರಪುರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಲೆಕ್ಕ ಪತ್ರಗಳನ್ನು ಪರಿಶೀಲಿಸುವ ವೇಳೆ ಸಾರ್ವಭೌಮ ಸಹಕಾರ ಸಂಘದ ಗೋಲ್‌ಮಾಲ್‌ ಬಗ್ಗೆಯೂ ಕೆಲ ಸುಳಿವು ಆರ್‌ಬಿಐಗೆ ಸಿಕ್ಕಿತ್ತು. ಈ ಸಂಬಂಧ ಸಂಜಯ್‌ ಕೊರೇಟ್ಕರ್‌ ಅವರನ್ನು ವಿಶೇಷಾಧಿಕಾರಿಯಾಗಿ ನೇಮಿಸಿದ್ದ ಆರ್‌ಬಿಐ, ಸೂಕ್ತ ಕ್ರಮಕ್ಕೆ ಸೂಚಿಸಿತ್ತು.

''ಶ್ರೀ ಗುರು ಸಾರ್ವಭೌಮ ಸೌಹಾರ್ದ ಸಹಕಾರ ಬ್ಯಾಂಕ್‌ನಲ್ಲಿ 233.43 ಕೋಟಿ ರೂ.ಗಳ ದುರುಪಯೋಗವಾಗಿದೆ. ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದ್ದ ಠೇವಣಿದಾರರ ಹಣ ನಿರ್ವಹಣೆ ಮಾಡದೆ ಅಕ್ರಮ ಎಸಗಲಾಗಿದೆ. ಠೇವಣಿದಾರರ ಹಣ ಸಾಲ ಕೊಟ್ಟು ಸರಿಯಾಗಿ ನಿರ್ವಹಣೆ ಮಾಡದೆ ಅಕ್ರಮ ನಡೆದಿದೆ'' ಎಂದು ವಿಶೇಷಾಧಿಕಾರಿ ಶಂಕರಪುರಂ ಠಾಣೆಗೆ ದೂರು ನೀಡಿದ್ದಾರೆ.

ಇತ್ತೀಚೆಗೆ ತಮ್ಮ ಕಾರಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಶ್ರೀ ಗುರು ರಾಘವೇಂದ್ರ ಬ್ಯಾಂಕ್‌ನ ಮಾಜಿ ಸಿಇಓ ವಾಸುದೇವ ಮಯ್ಯ ಹೆಸರು ಸಹ ದೂರಿನಲ್ಲಿ ಉಲ್ಲೇಖವಾಗಿದೆ. ಉಳಿದಂತೆ ರಾಘವೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಕೆ. ರಾಮಕೃಷ್ಣ, ನಿರ್ದೇಶಕ ಸತ್ಯನಾರಾಯಣ, ನಾಗಭೂಷಣ್‌, ವೇಣುಗೋಪಾಲ್‌, ನಟರಾಜ್‌, ಜಗನ್ನಾಥ ಹೆಗ್ಡೆ , ಕೋಮಲ್‌, ಸುಭಾಷ್‌ ರಮೇಶ್‌, ಪರಶಿವಮೂರ್ತಿ, ಶ್ರೀಕಾಂತ್‌, ವೇಣುಗೋಪಾಲ, ವಾಮನ ಕೃಷ್ಣ ಸೇರಿದಂತೆ 14 ಮಂದಿ ವಿರುದ್ಧ ಆರೋಪ ಕೇಳಿ ಬಂದಿದ್ದು, ಇವರೆಲ್ಲರ ಹೆಸರನ್ನೂ ದೂರಿನಲ್ಲಿ ಹೆಸರಿಸಲಾಗಿದೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ