ಆ್ಯಪ್ನಗರ

ಸೋಮಸಂದ್ರಪಾಳ್ಯಕ್ಕೆ ಬರಲಿದೆ ಹೆಚ್ಚುವರಿ ನೀರು

ವಿಜಯ ಕರ್ನಾಟಕ ಜಲಮಂಡಳಿಯೊಂದಿಗೆ ನಡೆಸಿದ ನೇರ ಫೋನ್‌ ಇನ್‌ ಕಾರ್ಯಕ್ರಮಕ್ಕೆ ಬಂದ ನಾಲ್ಕು ದೂರುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ.

Vijaya Karnataka 20 Nov 2018, 5:00 am
ಬೆಂಗಳೂರು: ವಿಜಯ ಕರ್ನಾಟಕ ಜಲಮಂಡಳಿಯೊಂದಿಗೆ ನಡೆಸಿದ ನೇರ ಫೋನ್‌ ಇನ್‌ ಕಾರ್ಯಕ್ರಮಕ್ಕೆ ಬಂದ ನಾಲ್ಕು ದೂರುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ.
Vijaya Karnataka Web wateer


ಕಾರ್ಯಕ್ರಮದಲ್ಲಿ ನಿವಾಸಿಗಳ ದೂರುಗಳನ್ನು ಆಲಿಸಿದ್ದ ಮಂಡಳಿ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಚ್‌ಎಸ್‌ಆರ್‌ ಲೇಔಟ್‌ನ ಸೋಮಸಂದ್ರಪಾಳ್ಯದ ಗುರುಮೂರ್ತಿ ಸ್ವಾಮಿ ದೇವಸ್ಥಾನದ ಬಳಿಯ ಮೂರು ನಿವಾಸಿಗಳು ಕಡಿಮೆ ನೀರು ದೊರೆಯುತ್ತಿದೆ ಎಂದು ದೂರಿದ್ದರು. ಈ ನಿವಾಸಿಗಳ ಮನೆಗಳು ಆ ಪ್ರದೇಶದ ಕೊನೆಯಲ್ಲಿರುವುದರಿಂದ ಒತ್ತಡ ಕಡಿಮೆಯಾಗಿ ನೀರು ಕಡಿಮೆ ಸಿಗುತ್ತಿತ್ತು. ಇದುವರೆಗೆ ಈ ಭಾಗಕ್ಕೆ 4 ಗಂಟೆಗಳ ಕಾಲ ನೀರು ನೀಡಲಾಗುತ್ತಿತ್ತು. ಇನ್ನು ಮುಂದೆ 5 ಗಂಟೆಗಳ ಕಾಲ ನೀರು ಸರಬರಾಜು ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸೋಮಸಂದ್ರಪಾಳ್ಯ ನಿವಾಸಿ ಕವಿತಾ ಎಂಬುವರು ತಮ್ಮ ಮನೆಗೆ ಒಂದರಿಂದ ಎರಡು ಗಂಟೆ ಮಾತ್ರ ನೀರು ಬರುತ್ತಿದೆ, ಪಕ್ಕದ ಮನೆಗಳಿಗೆ ಹೆಚ್ಚು ಕಾಲ ನೀರು ಸಿಗುತ್ತಿದೆ ಎಂದು ದೂರು ನೀಡಿದ್ದರು. ಇವರ ಜತೆಗೆ ಬಾಲು, ಕಲ್ಪನಾ ಎಂಬುವರು ಕೂಡಾ ದೂರು ಹೇಳಿದ್ದರು.

''ಈ ಭಾಗಕ್ಕೆ 4 ಗಂಟೆ ನೀರು ಪೂರೈಸಿದರೂ ಕವಿತಾ ಅವರ ಮನೆಯ ನಲ್ಲಿನಲ್ಲಿ ನೀರು ಬರಲು ಒಂದರಿಂದ ಎರಡು ಗಂಟೆ ತಡವಾಗುತ್ತಿತ್ತು. ಇನ್ನು ಮುಂದೆ ಒಟ್ಟು 5 ಗಂಟೆ ನೀರು ಪೂರೈಸಲಾಗುವುದು. ಇದರಿಂದ ನೀರಿನ ಪ್ರಮಾಣ ಶೇ.30 ರಷ್ಟು ಹೆಚ್ಚಲಿದೆ,'' ಎಂದು ದಕ್ಷಿಣ-4 ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗೇಂದ್ರ ತಿಳಿಸಿದ್ದಾರೆ.

ಶಾಲೆ ಮತ್ತು ಮನೆಗೆ ನೀರು: ಮಾರಸ್ವಾಮಿ ಲೇಔಟ್‌ 2 ನೇ ಹಂತದ 13 ನೇ ಮುಖ್ಯರಸ್ತೆಯ ಕರ್ನಲ್‌ ಶ್ರೀಷ ಕಡಿಮೆ ನೀರು ದೊರೆಯುತ್ತಿದೆ ಎಂದು ಫೋನ್‌ ಇನ್‌ನಲ್ಲಿ ಹೇಳಿದ್ದರು. ''ಮನೆ ಹಾಗೂ ಪ್ಲೇಹೋಮ್‌ ಒಟ್ಟಿಗೆ ಇದ್ದು, ಪ್ರತಿ ತಿಂಗಳು 30,000 ಲೀಟರ್‌ ನೀರು ಬಳಕೆಯಾಗುತ್ತಿದೆ. ಆದರೆ ಪ್ಲೇಹೋಮ್‌ಗೆ ನೀರು ಸಾಲುತ್ತಿಲ್ಲ. ಹೀಗಾಗಿ ಮತ್ತೊಂದು ಪೈಪ್‌ ಅಳವಡಿಸಿ ಹೆಚ್ಚು ನೀರು ಸಿಗುವಂತೆ ಮಾಡಲಾಗುವುದು. ಹಾಗೆಯೇ ಎಲ್ಲಾದರೂ ನೀರಿಗೆ ತಡೆ ಇರುವುದೇ ಎಂದೂ ಪರೀಕ್ಷಿಸಲಾಗುವುದು,'' ಎಂದು ಪರಿಶೀಲನೆ ನಡೆಸಿದ ದಕ್ಷಿಣ-1 ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದಿವ್ಯ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ