ಆ್ಯಪ್ನಗರ

ವಾಣಿವಿಲಾಸ ಆಸ್ಪತ್ರೆಯಲ್ಲಿ ‘ಎದೆ ಹಾಲಿನ ಬ್ಯಾಂಕ್‌’ಕಾರ್ಯಾರಂಭಕ್ಕೆ ಸಜ್ಜು

ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಸರಕಾರಿ ಆಸ್ಪತ್ರೆ ವಾಣಿವಿಲಾಸದಲ್ಲಿ ನವಜಾತ ಶಿಶುಗಳಿಗೆ ಎದೆ ಹಾಲು ಪೂರೈಸುವ 'ತಾಯಂದಿರ ಹಾಲಿನ ಬ್ಯಾಂಕ್‌' ಕಾರ್ಯಾರಂಭಕ್ಕೆ ಸಜ್ಜಾಗಿದೆ.

Vijaya Karnataka 25 Jul 2019, 5:00 am
ಬೆಂಗಳೂರು : ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಸರಕಾರಿ ಆಸ್ಪತ್ರೆ ವಾಣಿವಿಲಾಸದಲ್ಲಿ ನವಜಾತ ಶಿಶುಗಳಿಗೆ ಎದೆ ಹಾಲು ಪೂರೈಸುವ 'ತಾಯಂದಿರ ಹಾಲಿನ ಬ್ಯಾಂಕ್‌' ಕಾರ್ಯಾರಂಭಕ್ಕೆ ಸಜ್ಜಾಗಿದೆ.
Vijaya Karnataka Web mothers milk bank is ready to inagurate at vanivilasa hospital
ವಾಣಿವಿಲಾಸ ಆಸ್ಪತ್ರೆಯಲ್ಲಿ ‘ಎದೆ ಹಾಲಿನ ಬ್ಯಾಂಕ್‌’ಕಾರ್ಯಾರಂಭಕ್ಕೆ ಸಜ್ಜು


ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ)ದಿಂದ 36.40 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಜತೆಗೆ ಕರ್ನಾಟಕ ಆ್ಯಂಟಿಬಯೋಟಿಕ್ಸ್‌ ಆ್ಯಂಡ್‌ ಫಾರ್ಮಸ್ಯೂಟಿಕಲ್ಸ್‌ ಲಿಮಿಟೆಡ್‌ (ಕೆಎಪಿಎಲ್‌) ವತಿಯಿಂದ 42 ಲಕ್ಷ ರೂ. ವೆಚ್ಚದಲ್ಲಿ ಅಗತ್ಯ ಉಪಕರಣಗಳನ್ನು ಒದಗಿಸಲಾಗಿದೆ. ಈಗಾಗಲೇ 20 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನವೀಕರಣಗೊಳಿಸಿ, ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಶೀಘ್ರದಲ್ಲೇ ಬ್ಯಾಂಕ್‌ ಕಾರ್ಯಾರಂಭವಾಗಲಿದೆ ಎಂದು ಆಸ್ಪತ್ರೆ ವೈದ್ಯ ಅಧೀಕ್ಷಕಿ ಡಾ. ಗೀತಾ ಶಿವಮೂರ್ತಿ ತಿಳಿಸಿದರು.

''ಕೆಎಪಿಎಲ್‌ ವತಿಯಿಂದ ಬ್ಯಾಂಕ್‌ ಕಾರ್ಯನಿರ್ವಹಣೆಗೆ ಅಗತ್ಯವಾದ ಫ್ರೀಜರ್‌, ಬ್ರೆಸ್ಟ್‌ ಪಂಫ್ಸ್‌, ರೆಫ್ರಿಜರೇಟರ್‌ಗಳು, ಸ್ಕ್ರೀನಿಂಗ್‌ ಯಂತ್ರ, ಕಂಪ್ಯೂಟರ್‌ ಸೇರಿದಂತೆ 9 ಉಪಕರಣಗಳನ್ನು ನೀಡಲಾಗಿದೆ. ಹಾಲಿನ ಗುಣಮಟ್ಟ ಹಾಗೂ ಅದಲ್ಲಿನ ಪೌಷ್ಠಿಕಾಂಶಗಳನ್ನು ತಿಳಿಯಲು ಅಗತ್ಯವಾದ ಮಿಲ್ಕ್‌ ಅನಲೈಸರ್‌ ಬರುವುದು ಬಾಕಿ ಉಳಿದಿದ್ದು, ಶೀಘ್ರವೇ ಒದಗಿಸುವಂತೆ ಕೆಎಪಿಎಲ್‌ಗೆ ಮನವಿ ಮಾಡಲಾಗಿದೆ. ಅದು ಬಂದ ಕೂಡಲೇ ಬ್ಯಾಂಕ್‌ ಕಾರ್ಯಾರಂಭವಾಗಲಿದೆ'' ಎಂದು ಮಾಹಿತಿ ನೀಡಿದರು.

ಸಿಬ್ಬಂದಿ ಅಗತ್ಯತೆ : ''ಮಿಲ್ಕ್‌ ಬ್ಯಾಂಕ್‌ ಕಾರ್ಯನಿರ್ವಹಿಸಲು 13 ಸಿಬ್ಬಂದಿಯ ಅಗತ್ಯವಿದ್ದು, ಈ ಸಂಬಂಧ ರಾಷ್ಟ್ರೀಯ ಆರೋಗ್ಯ ಅಭಿಯಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಎಲ್ಲ ಸೌಲಭ್ಯ ಹಾಗೂ ಸೌಕರ್ಯಗಳನ್ನು ಹೊಂದಿರುವುದರಿಂದ ಸಿಬ್ಬಂದಿಯನ್ನು ಒದಗಿಸುವವರೆಗೂ ಆಸ್ಪತ್ರೆಯಲ್ಲಿರುವ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಯನ್ನೇ ಬಳಸಿಕೊಂಡು ಹಾಲಿನ ಬ್ಯಾಂಕ್‌ ಕಾರ್ಯನಿರ್ವಹಣೆ ಮಾಡಲಾಗುವುದು'' ಎಂದು ತಿಳಿಸಿದರು.

ಯಾರಿಗೆ ಅಗತ್ಯ? : ''ಅವಧಿಧಿಧಿ ಪೂರ್ವ ಜನಿಸುವ, ಕಡಿಮೆ ತೂಕದ ಶಿಶುಗಳಿಗೆ ಹಾಗೂ ಕಡಿಮೆ ಹಾಲುಣಿಸುವ ತಾಯಂದಿರ ಶಿಶುಗಳಿಗೆ ಹೆಚ್ಚುವರಿ ಹಾಲಿನ ಬೇಡಿಕೆ ಇರುವುದನ್ನು ಪರಿಗಣಿಸಿ ಈ ಬ್ಯಾಂಕ್‌ ಸ್ಥಾಪಿಸಲಾಗುತ್ತಿದೆ. ವಾಣಿವಿಲಾಸ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಲ್ಲಿ ಶೇ.35ರಿಂದ 40ರಷ್ಟು ಶಿಶುಗಳಿಗೆ ಹೆಚ್ಚುವರಿ ಹಾಲಿನ ಅಗತ್ಯವಿದ್ದು, ಈ ಬ್ಯಾಂಕ್‌ನಿಂದ ವಾಣಿವಿಲಾಸ, ಇಂದಿರಾಗಾಂಧಿಧಿ ಮಕ್ಕಳ ಆಸ್ಪತ್ರೆ, ಗೌಸಿಯಾ ಆಸ್ಪತ್ರೆ ಸೇರಿದಂತೆ ಸರಕಾರಿ ಆಸ್ಪತ್ರೆಯಲ್ಲಿ ಜನಿಸುವ ಶಿಶುಗಳಿಗೆ ವರದಾನವಾಗಲಿದೆ.''

ಹಾಲು ಸಂಗ್ರಹ ಹೇಗೆ? : ಆಸ್ಪತ್ರೆಯಲ್ಲಿ ಹೆರಿಗೆ ಆಗುವ ತಾಯಂದಿರಿಂದ ಹಾಲು ಸಂಗ್ರಹಿಸಲಿದ್ದು, ಆಸ್ಪತ್ರೆಯಲ್ಲಿ ಜನಿಸಿದ ಅಗತ್ಯತೆ ಇರುವ ಶಿಶುಗಳಿಗೆ ಹಾಲು ನೀಡಲಾಗುವುದು. ಅದಕ್ಕಾಗಿ ಮಾನದಂಡ ರೂಪಿಸಲಾಗುತ್ತಿದೆ. ಇನ್ನು ಹೊರಗಿನಿಂದ ಹಾಲು ನೀಡಲು ತಾಯಂದಿರು (ದಾನಿಗಳು)ಬಂದಲ್ಲಿ ಅವರಿಗೆ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ನಂತರ ಅವರಿಂದ ಹಾಲು ಸಂಗ್ರಹಿಸಿ ಅಗತ್ಯ ಇರುವ ಶಿಶುಗಳಿಗೆ ಪೂರೈಸಲಾಗುವುದು. ಆಸ್ಪತ್ರೆಯಲ್ಲಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ