ಆ್ಯಪ್ನಗರ

ಸಂಗೀತ ವಾದ್ಯ ಬಳಕೆ : ಹೋಟೆಲ್‌ಗೆ ಶೋಕಾಸ್‌ ನೋಟಿಸ್‌

ನಗರದ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ವಿವಾಹ ಸಮಾರಂಭದ ಸಂದರ್ಭ ಸಂಗೀತ ವಾದ್ಯದಿಂದಾಗುತ್ತಿರುವ ಶಬ್ದಮಾಲಿನ್ಯಕ್ಕೆ ಕಡಿವಾಣ ಹಾಕುವಂತೆ ಸೂಚಿಸಿದ ನೋಟಿಸ್‌ ಒಂದು ರಾಜ್ಯಾದ್ಯಂತ ಪ್ರತಿಭಟನೆಗಳಿಗೆ ಅವಕಾಶ ಮಾಡಿಕೊಟ್ಟಿದೆ.

Vijaya Karnataka 27 Dec 2018, 5:00 am
ಬೆಂಗಳೂರು : ನಗರದ ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ವಿವಾಹ ಸಮಾರಂಭದ ಸಂದರ್ಭ ಸಂಗೀತ ವಾದ್ಯದಿಂದಾಗುತ್ತಿರುವ ಶಬ್ದಮಾಲಿನ್ಯಕ್ಕೆ ಕಡಿವಾಣ ಹಾಕುವಂತೆ ಸೂಚಿಸಿದ ನೋಟಿಸ್‌ ಒಂದು ರಾಜ್ಯಾದ್ಯಂತ ಪ್ರತಿಭಟನೆಗಳಿಗೆ ಅವಕಾಶ ಮಾಡಿಕೊಟ್ಟಿದೆ.
Vijaya Karnataka Web music instrument use show cause notice to hotel
ಸಂಗೀತ ವಾದ್ಯ ಬಳಕೆ : ಹೋಟೆಲ್‌ಗೆ ಶೋಕಾಸ್‌ ನೋಟಿಸ್‌


ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ಮದುವೆ ಮೊದಲಾದ ಸಮಾರಂಭಗಳು ನಡೆಯುವಾಗ ಧ್ವನಿವರ್ಧಕ ಬಳಸುತ್ತಿರುವುದರಿಂದ ಮಿತಿ ಮೀರಿದ ಶಬ್ದ ಬರುತ್ತಿದೆ ಎಂದು ಸ್ಥಳೀಯರು ಮಂಡಳಿಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಮಂಡಳಿಯ ಅಧಿಕಾರಿಗಳು ತಪಾಸಣೆ ನಡೆಸಿದ್ದು, ನಿಗದಿಪಡಿಸಿದ ಮಟ್ಟಕ್ಕಿಂತ ಹೆಚ್ಚು ಶಬ್ದ ಉಂಟಾಗುತ್ತಿದೆ ಎಂದು ತಿಳಿದು ಬಂದಿದೆ. ನಂತರ ಹೋಟೆಲ್‌ಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ಬಳಿಕ ಶಬ್ದ ಮಿತಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ.

ವಸತಿ ಪ್ರದೇಶಕ್ಕೆ ಹಗಲಿನಲ್ಲಿ 55 ಡೆಸಿಬಲ್‌ ಹಾಗೂ ರಾತ್ರಿ 45 ಡೆಸಿಬಲ್‌ ಶಬ್ದ ಮಿತಿ ನಿಗದಿಪಡಿಸಲಾಗಿದೆ. ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ಸಮಾರಂಭಗಳು ನಡೆಯುವಾಗ ಧ್ವನಿವರ್ಧಕ ಬಳಸುತ್ತಿರುವುದರಿಂದ ಹಗಲಿನಲ್ಲಿ 70.5 ಡೆಸಿಬಲ್‌ ಶಬ್ದ ಉಂಟಾಗುತ್ತಿದೆ ಎಂದು ತಪಾಸಣೆ ವೇಳೆ ಗೊತ್ತಾಗಿದೆ. ಇದು ವಸತಿ ಪ್ರದೇಶದಲ್ಲಿರುವುದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಕಿರಿಕಿರಿಯಾಗುತ್ತಿದೆ.

ಹೋಟೆಲ್‌ನ ಹೊರ ಆವರಣದಲ್ಲಿ ಧ್ವನಿವರ್ಧಕ ಬಳಸುವುದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಹೋಟೆಲ್‌ ಒಳಗೆ ಧ್ವನಿವರ್ಧಕ ಬಳಸಬಾರದು ಎಂದು ಮಂಡಳಿಯ ಅಧಿಕಾರಿಗಳು ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ನ ಆಡಳಿತ ಮಂಡಳಿಗೆ ಸೂಚಿಸಿದ್ದಾರೆ. ಇದರ ಜತೆಗೆ ಹೋಟೆಲ್‌ನಲ್ಲಿ ಉತ್ಪತ್ತಿಯಾಗುವ ಕಸದ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಪ್ರತಿ ದಿನ ಹೋಟೆಲ್‌ನಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ, ವಿಲೇವಾರಿ ಮಾಡುವ ತ್ಯಾಜ್ಯ, ಆವರಣದಲ್ಲಿ ಉತ್ಪತ್ತಿಯಾಗುವ ಒಣ ಕಸದ ಬಗ್ಗೆ ಮಾಹಿತಿ ನೀಡುವಂತೆಯೂ ಮಂಡಳಿ ಸೂಚಿಸಿದೆ.

ಪ್ರತಿಭಟನೆ:

ಈ ನಡುವೆ, ಇದನ್ನೇ ತಪ್ಪಾಗಿ ಅರ್ಥೈಸಿರುವ ಚಿಕ್ಕಮಗಳೂರಿನ ಸವಿತಾ ಸಮಾಜ, ನಾದಸ್ವರ ಸೇರಿದಂತೆ ಸಂಗೀತ ಪರಿಕರಗಳನ್ನು ಬಳಸುವುದನ್ನು ಮಂಡಳಿ ನಿಷೇಧಿಸಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲು ಮುಂದಾಗಿದೆ.

ಶುಭ ಸಮಾರಂಭಗಳಲ್ಲಿ ನಾದಸ್ವರ ಬಾರಿಸುವ ಆಚರಣೆ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಶುಭ ಸಮಾರಂಭಗಳಿಗೆ ಇದು ಪೂರಕವಾಗಿದೆ. ನಾದಸ್ವರ ನಿಷೇಧಿಸುವ ಬದಲು ವಸತಿ ಪ್ರದೇಶದಲ್ಲಿರುವ ಛತ್ರಗಳನ್ನು ಮುಚ್ಚಬೇಕು ಎಂದು ಸವಿತಾ ಸಮಾಜ ಆಗ್ರಹಿಸಿದೆ.


ಜಯಮಹಲ್‌ ಪ್ಯಾಲೇಸ್‌ ಹೋಟೆಲ್‌ನಲ್ಲಿ ನಾದಸ್ವರ ಬಳಸುವುದನ್ನು ನಿಷೇಧಿಸುವ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಯಾವುದೇ ಕ್ರಮ ಜರುಗಿಸಿಲ್ಲ. ಈ ಬಗೆಯ ಯಾವುದೇ ಪ್ರಸ್ತಾವವೂ ಮಂಡಳಿಯ ಮುಂದಿಲ್ಲ.

-ಮನೋಜ್‌ ಕುಮಾರ್‌, ಸದಸ್ಯ ಕಾರ್ಯದರ್ಶಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ