ಆ್ಯಪ್ನಗರ

ಜೂ.4ಕ್ಕೆ ಮೆಟ್ರೋ ಬಂದ್‌ ?

ವೇತನ ಹೆಚ್ಚಳ, ಗುತ್ತಿಗೆ ಪದ್ದತಿಯ ನೇಮಕಾತಿ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ನಮ್ಮ ಮೆಟ್ರೋ ಸಿಬ್ಬಂದಿ ಜೂ.4 ರಿಂದ ಅನಿರ್ಧಿಷ್ಟಾವಧಿಗಳ ಕಾಲ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

TIMESOFINDIA.COM 19 May 2018, 4:02 pm
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ನಮ್ಮ ಮೆಟ್ರೋ ಸಿಬ್ಬಂದಿ ಜೂ.4 ರಿಂದ ಅನಿರ್ಧಿಷ್ಟಾವಧಿಗಳ ಕಾಲ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂದು ಮೆಟ್ರೋ ಸೇವೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
Vijaya Karnataka Web metro


ಹೈಕೋರ್ಟ್‌ ಆದೇಶದ ಮೇರೆಗೆ ಸಿಬ್ಬಂದಿ ಜತೆಗೆ ಮಾತುಕತೆಗೆ ಮುಂದಾಗಿದ್ದ ಮೆಟ್ರೋ ಆಡಳಿತ ಮಂಡಳಿ, ಬೆಂಗಳೂರು ಮೆಟ್ರೋ ರೈಲು ನೌಕರರ ಸಂಘ(ಬಿಎಂಆರ್‌ಇಯು)ದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಅವರೊಂದಿಗೆ ಏ.20ರ ವರೆಗೆ ಹಲವು ಸುತ್ತಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ವೇತನ ಹೆಚ್ಚಳ, ಬಿಎಂಆರ್‌ಇಯು ಸಂಘವನ್ನು ಬಿಎಂಆರ್‌ಸಿಎಲ್‌ ಮಾನ್ಯತೆ ನೀಡುವುದು, ಗುತ್ತಿಗೆ ಪದ್ದತಿಯ ನೇಮಕಾತಿಯನ್ನು ಕೈಬಿಡುವುದು ಸೇರಿದಂತೆ ಇನ್ನಿತರ ನಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸಲು ನಿಗಮ ತಯಾರಿಲ್ಲ. ಅಲ್ಲದೆ ಈ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಮಾತುಕತೆಯೂ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸಂಘ ಮತ್ತೆ ಪ್ರತಿಭಟನೆಯ ಮೊರೆ ಹೋಗಲು ತೀರ್ಮಾನಿಸಿರುವುದಾಗಿ ಸೂರ್ಯನಾರಾಯಣ ಮೂರ್ತಿ ತಿಳಿಸಿದ್ದಾರೆ.

ಇದೇ ವೇಳೆ ಮೆಟ್ರೋ ಸೇವೆಯನ್ನು ಸಾರ್ವಜನಿಕ ಸೇವೆಗಳ ಅಡಿಯಲ್ಲಿ ತರುವಂತೆ ಬಿಎಂಆರ್‌ಸಿಎಲ್‌ ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ ಎನ್ನಲಾಗಿದೆ. ಅಧಿಸೂಚನೆ ಪ್ರಕಟಾವಾದಲ್ಲಿ ಸಿಬ್ಬಂದಿ ಪ್ರತಿಭಟನೆ ನಡೆಸದಂತೆ, ಎಸ್ಮಾ ಜಾರಿಗೊಳಿಸಲು ಅವಕಾಶ ಸಿಕ್ಕಲಿದೆ.

ಹೈಕೋರ್ಟ್‌ ಸಿಬ್ಬಂದಿಗೆ ಮಂಡಳಿಯ ಅನುಮತಿ ಇಲ್ಲದೆ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸುವಂತಿಲ್ಲಎಂದು ನಿರ್ದೇಶಿಸಿದೆ. ಮಾತುಕತೆಯಲ್ಲಿ ಚರ್ಚಿಸಲಾದ ವಿಚಾರಗಳ ಬಗ್ಗೆ, ಶೀಘ್ರದಲ್ಲೇ ಕೋರ್ಟ್‌ಗೆ ಪ್ರಮಾಣ ಪತ್ರಗಳನ್ನು ಸಲ್ಲಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ತಿಳಿಸಿದ್ದಾರೆ.

ಬಿಎಂಆರ್‌ಇಯುವನ್ನು ಮಾನ್ಯ ಮಾಡಬೇಕು, ವೇತನ ಹೆಚ್ಚಳ, ಗುತ್ತಿಗೆ ಆಧಾರದ ನೇಮಕಾತಿ ಪದ್ದತಿಯನ್ನು ಕೈಬಿಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸಂಘ ಆಡಳಿತ ಮಂಡಳಿ ಮುಂದಿಟ್ಟಿತ್ತು. ಮಾ.22ರಂದು ಈ ಸಂಬಂಧ ಮುಷ್ಕರಕ್ಕೆ ಕರೆ ಕೊಟ್ಟಿತ್ತು.
ಪ್ರತಿಭಟನೆಗಳಲ್ಲಿ ಭಾಗಿಯಾಗುವ ಸಿಬ್ಬಂದಿ ಮೇಲೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಅವಕಾಶಗಳಿವೆ. ಪ್ರತಿಭಟನೆ ಹೆಸರಲ್ಲಿ ಮೆಟ್ರೋ ಸೇವೆಗೆ ಅಡಚಣೆ ಉಂಟು ಮಾಡುವುದನ್ನು ನಿಗಮ ಸಹಿಸುವುದಿಲ್ಲ. ಪರ್ಯಾಯ ವ್ಯವಸ್ಥೆ ಮಾಡುವುದರ ಮೂಲಕ ಸೇವೆ ಸ್ಥಗಿತಗೊಳ್ಳದಂತೆ ನೋಡಿಕೊಳ್ಳುತ್ತೇವೆ.
- ಮಹೇಂದ್ರ ಜೈನ್‌, ಎಂಡಿ. ಬಿಎಂಆರ್‌ಸಿಎಲ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ