ಆ್ಯಪ್ನಗರ

ದಲಿತ ಚಳವಳಿ ನಾಶ ಮಾಡಲು ನಕ್ಸಲ್‌ ಹಣೆಪಟ್ಟಿ

ದಲಿತ ಚಳವಳಿ ನಾಯಕರಾದ ಡಾ.ಪ್ರಕಾಶ್‌ ಅಂಬೇಡ್ಕರ್‌ ಹಾಗೂ ಗುಜರಾತ್‌ ಶಾಸಕ ಜಿಗ್ನೇಶ್‌ ಮೆವಾನಿಗೆ 'ನಕ್ಸಲ್‌' ಎಂಬ ಹಣೆಪಟ್ಟಿ ಕಟ್ಟಲು ಮುಂದಾಗಿರುವುದು ಖಂಡನೀಯ. ಈ ಮೂಲಕ ದಲಿತ ಚಳವಳಿ ನಾಶ ಮಾಡಲು ಮುಂದಾಗಿದ್ದಾರೆ ಎಂದು ವಿಚಾರವಾದಿ ಎ.ಕೆ. ಸುಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka 10 Jun 2018, 5:00 am
ಬೆಂಗಳೂರು: ದಲಿತ ಚಳವಳಿ ನಾಯಕರಾದ ಡಾ.ಪ್ರಕಾಶ್‌ ಅಂಬೇಡ್ಕರ್‌ ಹಾಗೂ ಗುಜರಾತ್‌ ಶಾಸಕ ಜಿಗ್ನೇಶ್‌ ಮೆವಾನಿಗೆ 'ನಕ್ಸಲ್‌' ಎಂಬ ಹಣೆಪಟ್ಟಿ ಕಟ್ಟಲು ಮುಂದಾಗಿರುವುದು ಖಂಡನೀಯ. ಈ ಮೂಲಕ ದಲಿತ ಚಳವಳಿ ನಾಶ ಮಾಡಲು ಮುಂದಾಗಿದ್ದಾರೆ ಎಂದು ವಿಚಾರವಾದಿ ಎ.ಕೆ. ಸುಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web naxal


''ಭೀಮಾ ಕೋರೆಗಾಂವ್‌ ವಿಜಯೋತ್ಸವ ದಿನದ ಅಂಗವಾಗಿ ನಡೆದ ಕೋರೆಗಾಂವ್‌ ದಿವಸ್‌ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಕಾಶ್‌ ಅಂಬೇಡ್ಕರ್‌ ಹಾಗೂ ಜಿಗ್ನೇಶ್‌ ಮೇವಾನಿ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಅದನ್ನು ಬಳಸಿಕೊಂಡು ಬಿಜೆಪಿಯು, ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ ಎಂದು ಮಾವೋವಾದಿ ನಾಯಕರು ಬರೆದಿರುವ ಪತ್ರದಲ್ಲಿ ಈ ಇಬ್ಬರ ಹೆಸರೂ ಇದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ದಲಿತ ಚಳವಳಿಯನ್ನು ನಾಶ ಮಾಡಲು ಮುಂದಾಗಿದ್ದಾರೆ,'' ಎಂದು ಎ.ಕೆ. ಸುಬ್ಬಯ್ಯ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

''ದೇಶದಲ್ಲಿ ಜನರು ಆಯ್ಕೆ ಮಾಡಿದ ಜನಪ್ರತಿನಿಧಿಯ ಕೊಲೆಗೆ ಸಂಚು ರೂಪಿಸಲಾಗಿದೆ ಎನ್ನುವುದು ಅಕ್ಷಮ್ಯ ಅಪರಾಧ. ಅದನ್ನು ನಾವು ವಿರೋಧಿಸುತ್ತೇವೆ. ಆದರೆ, ಮಾವೋವಾದಿಗಳು ಪ್ರಧಾನಿ ಹತ್ಯೆಗೆ ಸಂಚು ರೂಪಿಸಿದ್ದಾರೆಯೇ ಎಂಬುದರ ಬಗ್ಗೆ ವಿಶ್ವಾಸವಿಲ್ಲ. ಕೇವಲ ಪ್ರಚಾರಕ್ಕಾಗಿ ಇದನ್ನು ಸೃಷ್ಟಿಸಲಾಗಿದೆ ಎಂಬ ಅನುಮಾನ ಕಾಡುತ್ತಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪು ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು,'' ಎಂದು ಆಗ್ರಹಿಸಿದರು.

''ಭೀಮಾ ಕೋರೆಗಾಂವ್‌ನ ಪ್ರಕರಣದಲ್ಲಿ ಅಲ್ಲಿನ ಬಲಾಢ್ಯ ಸಮುದಾಯದ ಮರಾಠ ಕ್ಷತ್ರಿಯ ಸಮುದಾಯದ ಮೇಲೆ ಎಫ್‌ಐಆರ್‌ ದಾಖಲಾಗಬೇಕಿದೆ. ಕೋರೆಗಾಂವ್‌ ದಿವಸ್‌ ಆಚರಣೆ ಸಂದರ್ಭದಲ್ಲಿ ಅಮಾಯಕ ಯುವಕರನ್ನು ದಲಿತ ಸಮುದಾಯದ ವಿರುದ್ಧ ಎತ್ತಿಕಟ್ಟಿ ಪ್ರಚೋದಿಸುವ ಕೆಲಸ ಮಾಡಿದ್ದರು. ಶಾಂತಿಯುತವಾಗಿ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಪ್ರಚೋದಿಸುವ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಸಾಕ್ಷ್ಯಾಧಾರಗಳಿವೆ. ಆದರೂ, ಅವರ ಮೇಲೆ ಕ್ರಮ ಕೈಗೊಳ್ಳದೆ ಪ್ರಕಾಶ್‌ ಅಂಬೇಡ್ಕರ್‌ ಮತ್ತು ಜಿಗ್ನೇಶ್‌ ಮೇವಾನಿ ಮೇಲೆ ಕೇಸ್‌ ದಾಖಲಿಸಿದ್ದರು,'' ಎಂದು ಬೇಸರ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಕೋಮುಸೌಹಾರ್ದ ವೇದಿಕೆಯ ತ್ರಿಮೂರ್ತಿ, ದಲಿತ ಮುಖಂಡರಾದ ಎನ್‌.ವೆಂಕಟೇಶ್‌, ಕೃಷ್ಣಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ