ಆ್ಯಪ್ನಗರ

ಬೆಂಗಳೂರು: 3 ಕೋಟಿ ರೂ. ಮೌಲ್ಯದ 6 ಕೆ.ಜಿ ಚಿನ್ನಕ್ಕೆ ವಾರಸುದಾರರೇ ಇಲ್ಲ!

ಈಗಾಗಲೇ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ. ಮತ್ತೊಂದೆಡೆ ಚಿನ್ನ ಸಾಗಿಸುತ್ತಿದ್ದ ದಲ್ಪತ್‌ ಸಿಂಗ್‌ ಮತ್ತು ವಿಕಾಸ್‌ ಎಂಬುವವರಿಗೆ ಜಾಮೀನು ದೊರಕಿದೆ.

Vijaya Karnataka Web 24 Nov 2020, 9:44 pm
ಬೆಂಗಳೂರು: ಸಿಟಿ ಮಾರುಕಟ್ಟೆ ವ್ಯಾಪ್ತಿಯ ದೊಡ್ಡಪೇಟೆ ಸರ್ಕಲ್‌ನಲ್ಲಿಸಾಗಣೆ ವೇಳೆ ಜಪ್ತಿಯಾಗಿರುವ 3 ಕೋಟಿ ರೂ. ಮೌಲ್ಯದ 6 ಕೆ.ಜಿ. 55 ಗ್ರಾಂ ಚಿನ್ನದ ಒಡವೆಗಳನ್ನು ಕ್ಲೇಮ್‌ ಮಾಡಿಕೊಳ್ಳಲು ನಾಲ್ಕು ದಿನಗಳು ಕಳೆದರೂ ಯಾರೊಬ್ಬರೂ ಮುಂದೆ ಬಂದಿಲ್ಲ.
Vijaya Karnataka Web ಚಿನ್ನಾಭರಣ
ಚಿನ್ನಾಭರಣ


ಚಿನ್ನಾಭರಣ ಕ್ಲೇಮ್‌ ಮಾಡಿಕೊಂಡು ಬಂದರೆ ಅದಕ್ಕೆ ಸಂಬಂಧಿಸಿದ ತೆರಿಗೆ ಸಹಿತ ದಾಖಲೆಗಳನ್ನು ತೋರಿಸಬೇಕಾಗುತ್ತದೆ. ದಾಖಲೆಗಳನ್ನು ತೋರಿಸದೆ ಇದ್ದಲ್ಲಿ ಪೊಲೀಸರು, ತೆರಿಗೆ ಇಲಾಖೆ, ಜಿಎಸ್‌ಟಿ ವಿಭಾಗಗಳಿಗೆ ಸಿಕ್ಕಿ ಬೀಳುವ ಭೀತಿಯಿಂದ ಸಂಬಂಧಪಟ್ಟವರು ಚಿನ್ನ ಕ್ಲೇಮ್‌ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲಎಂದು ಹೇಳಲಾಗಿದೆ.

ಈಗಾಗಲೇ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ. ಮತ್ತೊಂದೆಡೆ ಚಿನ್ನ ಸಾಗಿಸುತ್ತಿದ್ದ ದಲ್ಪತ್‌ ಸಿಂಗ್‌ ಮತ್ತು ವಿಕಾಸ್‌ ಎಂಬುವವರಿಗೆ ಜಾಮೀನು ದೊರಕಿದೆ.

ಜಪ್ತಿ ಮಾಡಿರುವ ಆಭರಣಗಳ ಕುರಿತು ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ಯಾವುದೇ ಮಾಲೀಕರು ಕ್ಲೇಮ್‌ ಮಾಡಿಕೊಂಡು ಮುಂದೆ ಬಂದರೆ ಸಂಬಂಧಪಟ್ಟ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಆಭರಣಗಳನ್ನು ಕ್ಲೇಮ್‌ ಮಾಡಿಕೊಳ್ಳಬಹುದು. ಮಾಲೀಕ ಎನ್ನಲಾದ ಮುಂಬೈ ಮೂಲದ ಚಿನ್ನದ ವ್ಯಾಪಾರಿ ಕೂಡ ಈವರೆಗೆ ದಾಖಲೆಗಳನ್ನು ತೋರಿಸುವ ಪ್ರಯತ್ನ ಮಾಡಿಲ್ಲಎಂದು ಅಧಿಕಾರಿಗಳು ತಿಳಿಸಿದರು.

ಜಿಎಸ್‌ಟಿ ವಂಚನೆ ಉದ್ದೇಶ

ತೆರಿಗೆ ವಂಚನೆ ಉದ್ದೇಶದಿಂದಲೇ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ, ದಾಖಲೆಗಳನ್ನು ಕೂಡ ಇಟ್ಟುಕೊಳ್ಳದೇ ಸಾಗಣೆ ಮಾಡಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ವಿದೇಶದಿಂದ ತರಿಸಿಕೊಂಡಿರುವ ಚಿನ್ನಕ್ಕೆ ಅಮದು ಡ್ಯೂಟಿಯಾಗಿ ಶೇ.10ರಷ್ಟು ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಹೀಗಾಗಿ, ಆಭರಣಗಳಿಗೆ ಸಂಬಂಧಿಸಿದಂತೆ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಕಾನೂನುಬಾಹಿರವಾಗಿ ಆಭರಣ ವರ್ತಕರು ಸಾಗಣೆ ಮಾಡುತ್ತಿರುವ ಮಾಹಿತಿ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನ.21ರಂದು ರಾತ್ರಿ 11.30ರ ಸುಮಾರಿಗೆ ದೊಡ್ಡ ಪೇಟೆ ವೃತ್ತದಲ್ಲಿಕಾನ್ಸ್‌ಟೆಬಲ್‌ಗಳು ರಾತ್ರಿ ಕರ್ತವ್ಯದಲ್ಲಿದ್ದಾಗ ಇಬ್ಬರು ಆರೋಪಿಗಳು ಸ್ಕೂಟರ್‌ನಲ್ಲಿಟ್ಟುಕೊಂಡು ಮೂಟೆಯಲ್ಲಿಚಿನ್ನದ ಆಭರಣಗಳನ್ನು ತಂದಿದ್ದರು. ಚಿನ್ನಾಭರಣಗಳಿಗೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಕ್ರಿಮಿನಲ್‌ ಕೇಸ್‌ ದಾಖಲಿಸಿಕೊಂಡು ಚಿನ್ನ ಜಪ್ತಿ ಮಾಡಲಾಗಿದೆ.

ತೆರಿಗೆ ಇಲಾಖೆ ಕಣ್ಣಿಗೂ ಬೀಳದ ಅಕ್ರಮ

ತೆರಿಗೆ ವಂಚನೆ ಪತ್ತೆ ಹಚ್ಚುವುದು ವಾಣಿಜ್ಯ ತೆರಿಗೆ ಇಲಾಖೆಯ ಕೆಲಸವಾಗಿದೆ. ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಗಸ್ತು ತಿರುಗಲು ಜಾಗೃತಿ ಎಂಬ ವಾಹನಗಳನ್ನು ಕೂಡ ನೀಡಲಾಗಿದೆ. ಆದರೆ, ತೆರಿಗೆ ಇಲಾಖೆ ಅಧಿಕಾರಿಗಳು ಅಷ್ಟೊಂದು ಸಕ್ರಿಯವಾಗಿ ಈ ಕುರಿತು ಗಮನಹರಿಸದೆ ಇರುವ ಕಾರಣ ಚಿನ್ನ ಅಕ್ರಮ ಸಾಗಣೆ ನಡೆದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ