ಆ್ಯಪ್ನಗರ

ಅನಿಲ ಕೊಳವೆ ಅಳವಡಿಕೆಗೆ ಅನುಮತಿ ನೀಡಲು ನಿರಾಕರಣೆ

ನಗರದ ಬಿಟಿಎಂ ಲೇಔಟ್‌ ಮತ್ತು ಪಟ್ಟಾಭಿರಾಮನಗರ ವಾರ್ಡ್‌ನ ನಿವಾಸಿಗಳು ಕೊಳವೆ ಮೂಲಕ ನೇರವಾಗಿ ನೈಸರ್ಗಿಲ ಅನಿಲ ಪಡೆಯಲು ಮತ್ತಷ್ಟು ಕಾಯಬೇಕಾಗಿದೆ. ಏಕೆಂದರೆ, ಬಿಬಿಎಂಪಿಯು ಕೊಳವೆ ಅಳವಡಿಕೆ ಕಾಮಗಾರಿಗೆ ಅನುಮತಿ ನೀಡಲು ನಿರಾಕರಿಸಿದೆ.

Vijaya Karnataka 14 Mar 2019, 5:00 am
ಬೆಂಗಳೂರು: ನಗರದ ಬಿಟಿಎಂ ಲೇಔಟ್‌ ಮತ್ತು ಪಟ್ಟಾಭಿರಾಮನಗರ ವಾರ್ಡ್‌ನ ನಿವಾಸಿಗಳು ಕೊಳವೆ ಮೂಲಕ ನೇರವಾಗಿ ನೈಸರ್ಗಿಲ ಅನಿಲ ಪಡೆಯಲು ಮತ್ತಷ್ಟು ಕಾಯಬೇಕಾಗಿದೆ. ಏಕೆಂದರೆ, ಬಿಬಿಎಂಪಿಯು ಕೊಳವೆ ಅಳವಡಿಕೆ ಕಾಮಗಾರಿಗೆ ಅನುಮತಿ ನೀಡಲು ನಿರಾಕರಿಸಿದೆ.
Vijaya Karnataka Web gail


ಬಿಬಿಎಂಪಿಯು ಈ ಎರಡೂ ವಾರ್ಡ್‌ಗಳಲ್ಲಿನ ರಸ್ತೆಗಳಿಗೆ ಇತ್ತೀಚೆಗಷ್ಟೇ ಡಾಂಬರು ಹಾಕಿದೆ. ಒಂದೊಮ್ಮೆ ಕೊಳವೆಗಳ ಅಳವಡಿಕೆಗೆ ರಸ್ತೆಯನ್ನು ಅಗೆಯಲು ಅನುಮತಿ ನೀಡಿದರೆ, ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ. ಆದ ಕಾರಣ, ಅನುಮತಿ ನೀಡುತ್ತಿಲ್ಲ. ಹೀಗಾಗಿ, ಭಾರತೀಯ ಅನಿಲ ಪ್ರಾಧಿಕಾರವು (ಗೇಲ್‌) ಈ ಪ್ರದೇಶಗಳಲ್ಲಿ ಕೊಳವೆ ನೈಸರ್ಗಿಕ ಅನಿಲ ಸೌಲಭ್ಯ ಕಲ್ಪಿಸಲು ಒಂದು ವರ್ಷದವರೆಗೆ ಕಾಯಬೇಕಿದೆ.

ಗೇಲ್‌ ಸಂಸ್ಥೆಯು ಬಿಟಿಎಂ ಲೇಔಟ್‌ ಮತ್ತು ಪಟ್ಟಾಭಿರಾಮನಗರ ವಾರ್ಡ್‌ನಲ್ಲಿನ ಪ್ರತಿಯೊಂದು ಮನೆಗೆ ಅಡುಗೆ ಅನಿಲ ಪೂರೈಸಲು ನಿರ್ಧರಿಸಿ ಎರಡು ವರ್ಷಗಳು ಕಳೆದಿವೆ. ಕಳೆದ ವರ್ಷ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅನುಮತಿ ನೀಡಲು ಪಾಲಿಕೆ ಅಧಿಕಾರಿಗಳು ವಿಳಂಬ ಮಾಡಿದ್ದರು. ಪಾಲಿಕೆಯ ದಕ್ಷಿಣ ವಲಯವು ರಸ್ತೆ ಅಗೆತಕ್ಕೆ ಅನುಮತಿ ನೀಡಲು ನಿರಾಕರಿಸಿದ್ದರಿಂದ ಗೇಲ್‌ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ಭಾಸ್ಕರ್‌ ಅವರ ಮೊರೆ ಹೋಗಿದ್ದರು.

''ಬಿಟಿಎಂ ಮತ್ತು ಪಟ್ಟಾಭಿರಾಮನಗರ ವಾರ್ಡ್‌ಗಳಲ್ಲಿ ಹೊಸದಾಗಿ ರಸ್ತೆಗಳನ್ನು ಅಭಿವೃದ್ಧಿಪಡಿಸಿ, ಡಾಂಬರು ಹಾಕಲಾಗಿದೆ. ಈ ರಸ್ತೆಗಳ ನಿರ್ವಹಣಾ ಅವಧಿಯು (ಡಿಎಲ್‌ಪಿ) ಮೂರು ವರ್ಷ ಇದೆ. ಅಲ್ಲಿವರೆಗೆ ರಸ್ತೆ ಅಗೆಯಲು ಅನುಮತಿ ನೀಡಲಾಗುವುದಿಲ್ಲ. ರಸ್ತೆ ಅಗೆತಕ್ಕೆ ಅನುಮತಿ ನೀಡಿದರೆ, ಗುತ್ತಿಗೆದಾರರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಅಲ್ಲದೇ ರಸ್ತೆಗಳ ನಿರ್ವಹಣೆ ಮಾಡಲು ನಿರಾಕರಿಸುತ್ತಾರೆ,'' ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

''ಬಿಬಿಎಂಪಿಯು ಹೊಸದಾಗಿ ನಿರ್ಮಿಸಿ, ಡಾಂಬರು ಹಾಕಿದ ರಸ್ತೆಗಳನ್ನು ಅಗೆಯುವುದನ್ನು ಒಂದು ವರ್ಷ ನಿಷೇಧಿಸಿದೆ. ಆದ ಕಾರಣ, ಗೇಲ್‌ಗೆ ಕೊಳವೆ ಅಳವಡಿಕೆಗೆ ಅನುಮತಿ ನೀಡುತ್ತಿಲ್ಲ. ಬಿಟಿಎಂ ಲೇಔಟ್‌ ಮತ್ತು ಪಟ್ಟಾಭಿರಾಮನಗರ ವಾರ್ಡ್‌ಗಳಲ್ಲಿ 127 ಕಿ.ಮೀ ಉದ್ದದ ಕೊಳವೆ ಅಳವಡಿಕೆಗೆ 18 ಕೋಟಿ ರೂ. ರಸ್ತೆ ಅಗೆತ ಶುಲ್ಕವನ್ನು ಪಾಲಿಕೆಗೆ ಪಾವತಿಸಲಾಗಿದೆ. ರಸ್ತೆ ಅಗೆತಕ್ಕೆ ಅನುಮತಿ ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಆ ಹಣವನ್ನು ಬೇರೆ ಪ್ರದೇಶಗಳಲ್ಲಿ ಕೊಳವೆ ಅಳವಡಿಕೆ ಕಾಮಗಾರಿ ಕೈಗೊಳ್ಳಲು ವರ್ಗಾಯಿಸುವಂತೆ ಮನವಿ ಮಾಡಿಕೊಂಡಿದ್ದೇವೆ. ಆದರೆ, ಅದಕ್ಕೆ ಒಪ್ಪಿಗೆ ಕೊಟ್ಟಿಲ್ಲ'' ಎಂದು ಗೇಲ್‌ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದರು.

ಈ ಮಧ್ಯೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರು, '18 ಕೋಟಿ ರೂ. ರಸ್ತೆ ಅಗೆತ ಶುಲ್ಕವನ್ನು ಬೇರೆಡೆ ಕೊಳವೆ ಅಳವಡಿಕೆ ಕಾಮಗಾರಿಗೆ ವರ್ಗಾಯಿಸಿ, ಅನುಮತಿ ನೀಡುವಂತೆ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ