ಆ್ಯಪ್ನಗರ

ಹಸಿರು ಮಾರ್ಗದಲ್ಲಿ ಎರಡು ಟ್ರಿಪ್‌ ನಡೆಸಿದ ಆರು ಬೋಗಿಯ ರೈಲು

ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ 6 ಬೋಗಿಯ ಮೊದಲ ರೈಲು ಎರಡು ಪೂರ್ಣ ಟ್ರಿಪ್‌ಗಳ (ರೌಂಡ್‌ ಟ್ರಿಪ್‌) ಕಾರ್ಯಾಚರಣೆ ನಡೆಸಿತು. ನೇರಳೆ ಮಾರ್ಗದಲ್ಲಿ ಕಾರ್ಯಾಚರಿಸುವ 6 ಬೋಗಿ ರೈಲಿಗೆ ಹೋಲಿಸಿದರೆ, ಈ ಮಾರ್ಗದ ರೈಲಿನಲ್ಲಿ ಬಹಳ ಕಡಿಮೆ ಪ್ರಯಾಣಿಕರಿದ್ದರು.

Vijaya Karnataka 30 Jan 2019, 5:00 am
ಬೆಂಗಳೂರು: ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ 6 ಬೋಗಿಯ ಮೊದಲ ರೈಲು ಎರಡು ಪೂರ್ಣ ಟ್ರಿಪ್‌ಗಳ (ರೌಂಡ್‌ ಟ್ರಿಪ್‌) ಕಾರ್ಯಾಚರಣೆ ನಡೆಸಿತು. ನೇರಳೆ ಮಾರ್ಗದಲ್ಲಿ ಕಾರ್ಯಾಚರಿಸುವ 6 ಬೋಗಿ ರೈಲಿಗೆ ಹೋಲಿಸಿದರೆ, ಈ ಮಾರ್ಗದ ರೈಲಿನಲ್ಲಿ ಬಹಳ ಕಡಿಮೆ ಪ್ರಯಾಣಿಕರಿದ್ದರು.
Vijaya Karnataka Web IMG_20190129_104445


ಸೋಮವಾರ ಉದ್ಘಾಟನೆಯಾದ ಆರು ಬೋಗಿ ರೈಲನ್ನು ಒಂದು ಟ್ರಿಪ್‌ ಕಾರ್ಯಾಚರಿಸಿ ಪೀಣ್ಯ ಡಿಪೊದಲ್ಲಿರಿಸಲಾಗಿತ್ತು. ಮಂಗಳವಾರ ಬೆಳಗ್ಗೆ ರೈಲನ್ನು ಡಿಪೊದಿಂದ ನಾಗಸಂದ್ರ ನಿಲ್ದಾಣಕ್ಕೆ ತರಲಾಯಿತು. ಅಲ್ಲಿಂದ 9.11 ಗಂಟೆಗೆ ಹೊರಟ ರೈಲು 10.22 ಕ್ಕೆ ಯಲಚೇನಹಳ್ಳಿ ತಲುಪಿತು. ಅಲ್ಲಿಂದ ಮತ್ತೆ ಹೊರಟ ರೈಲು 10.50 ಕ್ಕೆ ಮರಳಿ ನಾಗಸಂದ್ರಕ್ಕೆ ಬಂತು. ಸಂಜೆ 5.16 ಕ್ಕೆ ನಾಗಸಂದ್ರದಿಂದ ಹೊರಟ ರೈಲು 6.44 ಕ್ಕೆ ಯಲಚೇನಹಳ್ಳಿ ತಲುಪಿತು. ಅಲ್ಲಿಂದ ಮತ್ತೆ ಹೊರಟು 7 ಗಂಟೆ ಸುಮಾರಿಗೆ ನಾಗಸಂದ್ರಕ್ಕೆ ಬಂತು. ಮತ್ತೆ ರೈಲನ್ನು ಪೀಣ್ಯ ಡಿಪೊಗೆ ತಂದು ನಿರ್ವಹಣಾ ಕಾರ್ಯ ನಡೆಸಲಾಯಿತು.

ನೇರಳೆ ಮಾರ್ಗದಲ್ಲಿ ನಿತ್ಯ ಸರಾಸರಿ 1.87 ಲಕ್ಷ, ಹಸಿರು ಮಾರ್ಗದಲ್ಲಿ 1.60 ಲಕ್ಷ ಮಂದಿ ಪ್ರಯಾಣಿಸುತ್ತಿದ್ದಾರೆ. ಪೀಕ್‌ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ 19,400 ಹಾಗೂ ಹಸಿರು ಮಾರ್ಗದಲ್ಲಿ 9,700 ಮಂದಿ ಪ್ರಯಾಣಿಸುತ್ತಿದ್ದಾರೆ. ಪೀಕ್‌ ಅವಧಿಯಲ್ಲಿ ಹಸಿರು ಮಾರ್ಗದಲ್ಲಿ ಕಡಿಮೆ ಪ್ರಯಾಣಿಕರಿರುವುದರಿಂದ 6 ಬೋಗಿಯ ರೈಲಿನಲ್ಲಿ ನೇರಳೆ ಮಾರ್ಗದಲ್ಲಾಗುವಂತೆ ದಟ್ಟಣೆ ಇರಲಿಲ್ಲ.

ನೇರಳೆ ಮಾರ್ಗದಲ್ಲಿ ಬೆಳಗ್ಗೆ 8.30 ರಿಂದ 12 ಗಂಟೆವರೆಗೆ ಆರು ಬೋಗಿಯ ಐದು ರೈಲುಗಳನ್ನು ಕಾರ್ಯಾಚರಿಸಲಾಗುತ್ತಿದೆ. ಇಷ್ಟಾದರೂ ಇಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುವುದು ಸವಾಲಾಗಿದೆ. ವೈಟ್‌ಫೀಲ್ಡ್‌ ಕೈಗಾರಿಕಾ ಪ್ರದೇಶಕ್ಕೆ ಹೋಗುವ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಈ ಮಾರ್ಗದ ರೈಲುಗಳಲ್ಲಿ ದಟ್ಟಣೆ ಅಧಿಕವಾಗಿದೆ. ಮೆಜೆಸ್ಟಿಕ್‌ನಲ್ಲಿ ಪ್ರತಿ ದಿನ ಆರು ಬೋಗಿಯ ರೈಲಿನ ಬಾಗಿಲ ಅತಿ ಸಮೀಪದಲ್ಲಿ ನಿಂತುಕೊಂಡು ಪ್ರಯಾಣಿಸುವಷ್ಟು ದಟ್ಟಣೆ ಇದೆ.

ಜನರಿಗೆ ಸಂತಸ: ಹಸಿರು ಮಾರ್ಗಕ್ಕೂ 6 ಬೋಗಿಯ ರೈಲಿನ ಆಗಮನವಾಗಿರುವುದು ಪ್ರಯಾಣಿಕರಿಗೆ ಖುಷಿ ತಂದಿದೆ. ಹಿಂದೆ ಪೀಕ್‌ ಅವಧಿಯಲ್ಲಿ ಮೂರು ಬೋಗಿಯ ರೈಲುಗಳಲ್ಲಿ ದಟ್ಟಣೆ ಇರುತ್ತಿತ್ತು. 6 ಬೋಗಿಯ ರೈಲಿನಿಂದ ಅನುಕೂಲಕರವಾದ ಪ್ರಯಾಣದ ಅನುಭವ ಪಡೆಯುತ್ತಿದ್ದೇವೆ ಎಂದು ಪ್ರಯಾಣಿಕರು ತಿಳಿಸಿದರು.

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೋಗುವ ಉದ್ಯೋಗಿಗಳಿಗೆ ಇದು ಹೆಚ್ಚು ಪ್ರಯೋಜನ ನೀಡಿದೆ. ಅಲ್ಲಿನ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರು, ಮಹಿಳಾ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೊ ಸೇವೆ ಪಡೆಯುತ್ತಿದ್ದಾರೆ. ಯಶವಂತಪುರ ರೈಲ್ವೆ ನಿಲ್ದಾಣದಿಂದ ಬರುವ ಪ್ರಯಾಣಿಕರು ನಗರದ ಬೇರೆ ಬೇರೆ ಭಾಗಗಳಿಗೆ ಹೋಗಲು ಕೂಡಾ ಈ ಹೊಸ ಸೇವೆ ಅನುಕೂಲ ಮಾಡಿಕೊಟ್ಟಿದೆ.

6 ಬೋಗಿಯ ಮೊದಲ ರೈಲಿನಲ್ಲಿ ಮುಂದಿನ ಮೊದಲ ಬೋಗಿಯನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಒಂದನೇ ಹಾಗೂ ಎರಡನೇ ಬೋಗಿಯ ನಡುವೆ ರಿಬ್ಬನ್‌ ಕಟ್ಟಿ ಪುರುಷ ಪ್ರಯಾಣಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು.

ಮೆಟ್ರೊದಲ್ಲಿ ಯಾವಾಗಲೂ ದಟ್ಟಣೆ ಇರುತ್ತದೆ. ಹೊಸ ರೈಲಿನಿಂದ ದಟ್ಟಣೆ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಈಗ ಆರಾಮವಾಗಿ ಪ್ರಯಾಣಿಸಬಹುದು.
-ಅರುಣ್‌, ವಿದ್ಯಾರ್ಥಿ

ಮೊದಲ ಬೋಗಿಯನ್ನು ಮಹಿಳೆಯರಿಗೆ ಮಾತ್ರವಲ್ಲದೆ, ವಿಕಲಚೇತನ, ವೃದ್ಧರಿಗೂ ಮೀಸಲಿಟ್ಟರೆ ಹೆಚ್ಚು ಅನುಕೂಲ ಆಗಲಿದೆ.
-ಸುಪ್ರೀತ, ವಿದ್ಯಾರ್ಥಿನಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ