ಬೆಂಗಳೂರು: 'ನಮ್ಮ ಮೆಟ್ರೊ' ಹಸಿರು ಮಾರ್ಗದ ಹೊಸ ನಿಲ್ದಾಣಗಳು ನಾಲ್ಕು ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿವೆ. ಆದರೆ ಈ ಭಾಗದಲ್ಲಿ ಪ್ರಯಾಣಿಸುವವರಿಗೆ ಕುಡಿಯಲು ಒಂದು ಹನಿ ನೀರು ಸಿಗುವುದಿಲ್ಲ.
ಪ್ರತಿ ದಿನ ಲಕ್ಷಾಂತರ ಜನ ಸಂಚರಿಸುವ ಹೊಸ ಮಾರ್ಗದ ಹತ್ತು ನಿಲ್ದಾಣಗಳಲ್ಲೂ ಕುಡಿಯುವ ನೀರಿಗಾಗಿ ಫಿಲ್ಟರ್ ಯಂತ್ರ ತಂದಿರಿಸಲಾಗಿದೆ. ಆದರೆ ಯಂತ್ರಗಳಿಗೆ ವಿದ್ಯುತ್ ಸಂಪರ್ಕ, ಕೊಳವೆ ಸಂಪರ್ಕ ಕಲ್ಪಿಸಿಲ್ಲ. ನಿಲ್ದಾಣಗಳಲ್ಲಿ ಯಂತ್ರಗಳು ಗೋಡೆಯ ಮೂಲೆಗಿದ್ದು, ಧೂಳು ಹಿಡಿಯುತ್ತಿವೆ. ಚಿಕ್ಕಪೇಟೆ ಹಾಗೂ ಕೆ.ಆರ್.ಮಾರುಕಟ್ಟೆ ಮೆಟ್ರೊ ನಿಲ್ದಾಣಗಳಲ್ಲಿ ಫಿಲ್ಟರ್ ನೀರಿನ ಯಂತ್ರವನ್ನು ಗೋಡೆಯ ಬದಿಗಿಡಲಾಗಿದೆ. ಇವುಗಳಿಗೆ ಇನ್ನೂ ನೀರಿನ ಪೈಪ್ ಜೋಡಿಸುವ ಕೆಲಸ ನಡೆಯುತ್ತಿದೆ. ಯಲಚೇನಹಳ್ಳಿ ಟರ್ಮಿನಲ್ ನಿಲ್ದಾಣದಲ್ಲಿ ಎರಡು ಯಂತ್ರಗಳನ್ನು ತಂದಿದ್ದರೂ, ವಿದ್ಯುತ್ ಸಂಪರ್ಕವಿಲ್ಲದೆ ಬದಿಗಿರಿಸಲಾಗಿದೆ. ಬೇರೆ ನಿಲ್ದಾಣಗಳಲ್ಲೂ ಇದೇ ಪರಿಸ್ಥಿತಿ ಇದೆ.
ಮುಚ್ಚಿದ ದ್ವಾರ
ಹೊಸ ಮಾರ್ಗದ ಪ್ರತಿ ನಿಲ್ದಾಣಗಳಲ್ಲಿ ಮೂರು ದ್ವಾರವಿದೆ. ಕೆಲ ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ಸ್ಕ್ಯಾನಿಂಗ್ ಯಂತ್ರಗಳನ್ನು ಅಳವಡಿಸಲಾಗಿಲ್ಲ. ಯಂತ್ರಗಳನ್ನೂ ಖರೀದಿಸಿ ತಂದು ಮುಂಭಾಗ ಇಡಲಾಗಿದೆ. ಇದು ಕಾರ್ಯಾರಂಭಿಸದೇ ಇರುವುದರಿಂದ ಸಿಬ್ಬಂದಿಯೇ ಸ್ಕ್ಯಾನಿಂಗ್ ಮಾಡಿ, ಬ್ಯಾಗ್ಗಳನ್ನು ತಪಾಸಣೆ ಮಾಡಿ ಒಳಗೆ ಕಳುಹಿಸುತ್ತಿದ್ದಾರೆ. ಲಾಲ್ಬಾಗ್, ಬನಶಂಕರಿ ನಿಲ್ದಾಣಗಳಲ್ಲಿ ಈ ಪರಿಸ್ಥಿತಿಯಿದೆ. ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ಮೈದಾನದ ಬದಿಗಿರುವ ದ್ವಾರದಲ್ಲಿ ಸ್ಕ್ಯಾನಿಂಗ್ ಯಂತ್ರ ಇದ್ದರೂ ಅಳವಡಿಕೆ ಮಾಡಿಲ್ಲ. ಹೀಗಾಗಿ ಈ ದ್ವಾರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಯಲಚೇನಹಳ್ಳಿ ನಿಲ್ದಾಣದಲ್ಲಿ ಎರಡು ದ್ವಾರಗಳನ್ನು ಮುಚ್ಚಲಾಗಿದೆ.
ನೋ ಸ್ವೈಪಿಂಗ್
ಹೊಸ ನಿಲ್ದಾಣಗಳಲ್ಲಿ ಸ್ವೈಪಿಂಗ್ ಯಂತ್ರವಿಲ್ಲದಿರುವುದರಿಂದ ಸ್ಮಾರ್ಟ್ ಕಾರ್ಡ್ ಇದ್ದವರೂ ಟೋಕನ್ ಬಳಸುವಂತಾಗಿದೆ. ಸ್ಮಾರ್ಟ್ ಕಾರ್ಡ್ ಇದ್ದವರಲ್ಲಿ ಬಹುತೇಕರು ಡೆಬಿಟ್ ಕಾರ್ಡ್ ಬಳಸಿ ರಿಚಾರ್ಜ್ ಮಾಡಿಸಿಕೊಳ್ಳುತ್ತಿದ್ದಾರೆ. ಡೆಬಿಟ್ ಕಾರ್ಡ್ ಸ್ವೈಪ್ ಮಾಡಲು ಹೊಸ ನಿಲ್ದಾಣಗಳಲ್ಲಿ ಯಂತ್ರವಿಲ್ಲ.
ಚಿಕ್ಕಪೇಟೆ, ನ್ಯಾಷನಲ್ ಕಾಲೇಜು, ಕೆ.ಆರ್.ಮಾರುಕಟ್ಟೆ, ಸೌತ್ ಎಂಡ್ ಸರ್ಕಲ್, ಬನಶಂಕರಿ ನಿಲ್ದಾಣಗಳಲ್ಲಿ ಶೌಚಾಲಯ ಇದ್ದರೂ ನೀರು ಲಭ್ಯವಿಲ್ಲ. ಇವುಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ರೈಲಿನ ಬಾಗಿಲು ಮುಚ್ಚಲಿಲ್ಲ
ಯಲಚೇನಹಳ್ಳಿ ಕಡೆಯಿಂದ ಜಯನಗರ ನಿಲ್ದಾಣಕ್ಕೆ ಮಧ್ಯಾಹ್ನ 2.50 ಗಂಟೆಗೆ ಬಂದ ರೈಲಿನಲ್ಲಿ ಸುಮಾರು 10 ಸೆಕೆಂಡುಗಳ ಕಾಲ ಬಾಗಿಲು ಮುಚ್ಚಿಕೊಳ್ಳಲಿಲ್ಲ. ಬಾಗಿಲು ಮುಚ್ಚಿಕೊಳ್ಳುವವರೆಗೂ ರೈಲು ಹೊರಡಲು ಸಾಧ್ಯವಾಗಲಿಲ್ಲ.
ನಿಲ್ದಾಣಕ್ಕೆ ಬಂದ ಕೂಡಲೇ ಬೆರಳೆಣಿಯಷ್ಟಿಟ್ಟಿದ್ದ ಪ್ರಯಾಣಿಕರು ರೈಲಿನ ಒಳಗೆ ಪ್ರವೇಶಿಸಿದರು. ರೈಲಿನ ಬಾಗಿಲು ಸಹಜ ಶಬ್ದವನ್ನು ಮಾಡಿ ಮುಚ್ಚಿಕೊಳ್ಳಲು ಆರಂಭಿಸಿತು. ಇನ್ನೇನು ಮುಚ್ಚಿಕೊಳ್ಳಬೇಕು ಎನ್ನುವಂತಿದ್ದ ಬಾಗಿಲು ದಿಢೀರನೆ ತೆರೆದು ಶಬ್ದ ಮಾಡಿತು. ಬಳಿಕ 10 ಸೆಕೆಂಡುಗಳ ಕಾಲ ಬಾಗಿಲು ತೆರೆದುಕೊಂಡೇ ಇತ್ತು. ಕೊನೆಗೆ ಸಮಸ್ಯೆ ಸರಿಯಾಗಿ ಬಾಗಿಲು ಮುಚ್ಚಿಕೊಂಡು ರೈಲು ಮುಂದಕ್ಕೆ ಸಾಗಿತು.