ಆ್ಯಪ್ನಗರ

ತಲೆಮರೆಸಿಕೊಂಡಿದ್ದ ನರ್ಸ್‌ ದಿಲ್ಲಿಯಲ್ಲಿ ಸೆರೆ

ಪರಿಚಿತ ವ್ಯಕ್ತಿ ಬೆನ್ನಿ ಜೋಸೆಫ್‌ ನೀಡಿದ್ದ ದಾಖಲೆಗಳು ನಕಲಿ ಹಾಗೂ ತನ್ನ ವಿರುದ್ಧ ಕೇಸ್‌ ದಾಖಲಾಗಿದೆ ಎಂದು ಕೂಡಾ ತಿಳಿದಿರಲಿಲ್ಲ ಎಂದು ಶೀಲಾ ವಿಚಾರಣೆ ವೇಳೆ ಹೇಳಿದ್ದಾರೆ.

Vijaya Karnataka Web 10 Nov 2018, 8:19 am
ಬೆಂಗಳೂರು : ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಮತ್ತು ಫೋರ್ಜರಿ ಪ್ರಕರಣದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಕೇರಳ ಮೂಲದ ನರ್ಸ್‌ವೊಬ್ಬರು ದಿಲ್ಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ.
Vijaya Karnataka Web nurse arrest


ಕೇರಳದ ಎರ್ನಾಕುಲಂನ ಶೀಲಾ ಮನೋಜ್‌ ಅಲಿಯಾಸ್‌ ಶೀಲಾ ಜೋಸೆಫ್‌ (40) ಬಂಧಿತ ಆರೋಪಿ. ಈಕೆಯನ್ನು ನಗರಕ್ಕೆ ಕರೆತಂದಿರುವ ವಿಧಾನಸೌಧ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶೀಲಾ ಜೋಸೆಫ್‌, ನ.6ರಂದು ದಿಲ್ಲಿಯಿಂದ ಇಸ್ರೇಲ್‌ನ ಟೆಲ್‌ ಅವಿವ್‌ಗೆ ತೆರಳಲು ಯತ್ನಿಸಿದಾಗ ವಲಸೆ ಅಧಿಕಾರಿಗಳು ತಡೆದು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಂಚನೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯ ಕುರಿತು ದೇಶದ ಎಲ್ಲ ವಿಮಾನ ನಿಲ್ದಾಣಗಳಿಗೆ ನಗರ ಪೊಲೀಸರು ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಇಟಲಿಯಲ್ಲಿ ಕೆಲಸ ಮಾಡಲು ಯೋಚಿಸಿದ್ದ ಶೀಲಾ ಬಳಿ ಆ ದೇಶದಲ್ಲಿ ಕೆಲಸ ಮಾಡಲು ಅಗತ್ಯವಾದ ನರ್ಸಿಂಗ್‌ ಕೋರ್ಸ್‌ನ ದಾಖಲೆಗಳು ಇರಲಿಲ್ಲ. ಹೀಗಾಗಿ, ಆಕೆ ನರ್ಸಿಂಗ್‌ ವಿಷಯದಲ್ಲಿ ಕರ್ನಾಟಕ ರಾಜ್ಯದ ಡಿಪ್ಲೊಮಾ ಇನ್‌ ನರ್ಸಿಂಗ್‌ ಅಂಕ ಪಟ್ಟಿ, ನರ್ಸಿಂಗ್‌ ಕೌನ್ಸಿಲ್‌ನಿಂದ ನೋಂದಣಿ ಪ್ರಮಾಣಪತ್ರ, ವೈದ್ಯ ಶಿಕ್ಷಣ ನಿರ್ದೇಶನಾಲಯದಿಂದ ಪ್ರಮಾಣಪತ್ರ ಹಾಗೂ ಮತ್ತೊಂದು ದಾಖಲೆಯನ್ನು ತನ್ನ ದೂರದ ಸಂಬಂಧಿ ಬೆನ್ನಿ ಜೋಸೆಫ್‌ ಎಂಬುವವರಿಂದ ಪಡೆದುಕೊಂಡಿದ್ದರು. ಅದಕ್ಕಾಗಿ 1.5 ಲಕ್ಷ ರೂ.ಯನ್ನು 2004ರಲ್ಲಿ ಪಾವತಿಸಿದ್ದರು. ವಿದೇಶಕ್ಕೆ ತೆರಳಲು 2009ರ ಮೇ ತಿಂಗಳಲ್ಲಿ ದಾಖಲೆಗಳ ಪರಿಶೀಲನೆಗಾಗಿ ಟ್ರಾವೆಲ್‌ ಏಜೆಂಟ್‌ ಮೂಲಕ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಚೇರಿಗೆ ಸಲ್ಲಿಸಿದ್ದರು.

ಕರ್ನಾಟಕ ರಾಜ್ಯ ನರ್ಸಿಂಗ್‌ ಪರಿಷತ್‌ನ ರಿಜಿಸ್ಟ್ರಾರ್‌ ಅವರು ಶೀಲಾ ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ ನಕಲಿ ಆಗಿವೆ ಎಂದು ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶೀಲಾ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಕಾರ್ಯದರ್ಶಿ ಕಚೇರಿಯಿಂದ ನಿರ್ದೇಶನ ನೀಡಲಾಗಿತ್ತು.

2009ರ ಜೂನ್‌ ತಿಂಗಳಲ್ಲಿ ಶೀಲಾ ವಿರುದ್ಧ ವಂಚನೆ, ಫೋರ್ಜರಿ ಕೇಸ್‌ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದರು. ಆದರೆ, ಆಕೆಯನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಪತ್ತೆಯಾಗದ ಪ್ರಕರಣವೆಂದು 2011ರ ಆಗಸ್ಟ್‌ ತಿಂಗಳಲ್ಲಿ ನ್ಯಾಯಾಲಯಕ್ಕೆ ಮುಕ್ತಾಯ ವರದಿ ಸಲ್ಲಿಸಿದ್ದರು. ಆದರೆ, ಆಕೆಯ ಪಾಸ್‌ಪೋರ್ಟ್‌ ವಿವರಗಳನ್ನು ದೇಶದ ಎಲ್ಲ ವಿಮಾನ ನಿಲ್ದಾಣಗಳಿಗೆ ನೀಡಿದ್ದು, ದೇಶ ಬಿಟ್ಟು ಹೋಗಲು ಯತ್ನಿಸಿದರೆ ಮಾಹಿತಿ ನೀಡುವಂತೆ ಕೋರಿದ್ದರು. ನ.6ರಂದು ಇಸ್ರೇಲ್‌ನ ಟೆಲ್‌ ಅವಿಲ್‌ಗೆ ಹೋಗಲು ಯತ್ನಿಸಿದಾಗ ವಲಸೆ ಅಧಿಕಾರಿಗಳು ಪಾಸ್‌ಪೋರ್ಟ್‌ ದಾಖಲೆ ಆಧರಿಸಿ ಶೀಲಾರನ್ನು ವಶಕ್ಕೆ ಪಡೆದು ಪೊಲೀಸರಿಗೆ ಮಾಹಿತಿ ನೀಡಿದ್ದರು.

ದಾಖಲೆಗಳು ನಕಲಿ ಎಂದು ಗೊತ್ತಿರಲಿಲ್ಲ

ಪರಿಚಿತ ವ್ಯಕ್ತಿ ಬೆನ್ನಿ ಜೋಸೆಫ್‌ ನೀಡಿದ್ದ ದಾಖಲೆಗಳು ನಕಲಿ ಹಾಗೂ ತನ್ನ ವಿರುದ್ಧ ಕೇಸ್‌ ದಾಖಲಾಗಿದೆ ಎಂದು ಕೂಡಾ ತಿಳಿದಿರಲಿಲ್ಲ ಎಂದು ಶೀಲಾ ವಿಚಾರಣೆ ವೇಳೆ ಹೇಳಿದ್ದಾರೆ.

ದಾಖಲೆಗಳನ್ನು ಕೊಡಿಸಿದ್ದ ಜೊಸೆಫ್‌ ಇಂಗ್ಲೆಂಡ್‌ಗೆ ತೆರಳಿದ್ದ. ಅಲ್ಲಿ ರಸ್ತೆ ಅಪಘಾತದಲ್ಲಿ ಪತ್ನಿ ಮತ್ತು ಮಗುವನ್ನು ಕಳೆದುಕೊಂಡಿದ್ದಾನೆ. ಆದರೆ, ಈಗ ಆತ ಎಲ್ಲಿದ್ದಾನೆ ಎನ್ನುವುದು ಗೊತ್ತಿಲ್ಲ. ಕೇರಳದಲ್ಲಿರುವ ಆತನ ಮನೆಯನ್ನು ತೋರಿಸುವುದಾಗಿ ವಿಚಾರಣೆ ವೇಳೆ ಹೇಳಿದ್ದಾರೆ.

ನ್ಯಾಯಾಲಯದ ಅನುಮತಿ ಪಡೆದುಕೊಂಡು ಕೇಸ್‌ನ ತನಿಖೆ ಪುನರಾರಂಭಿಸುವ ಪ್ರಕ್ರಿಯೆ ನಡೆದಿದೆ. ದಾಖಲೆಗಳನ್ನು ಒದಗಿಸಿದ್ದ ಜೋಸೆಫ್‌ನ ಪತ್ತೆ ಮತ್ತು ನಕಲಿ ದಾಖಲೆಗಳನ್ನು ಎಲ್ಲಿಂದ ಪಡೆಯಲಾಗಿತ್ತು ಎನ್ನುವ ಬಗ್ಗೆ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ