ಆ್ಯಪ್ನಗರ

ಅರ್ಮೇನಿಯಾಕ್ಕೆ ನರ್ಸಿಂಗ್‌ ವಿದ್ಯಾರ್ಥಿನಿಯರು: ತನಿಖೆ ಚುರುಕು

32 ಮಂದಿ ನರ್ಸಿಂಗ್‌ ವಿದ್ಯಾರ್ಥಿಗಳನ್ನು ಜರ್ಮನ್‌ ಭಾಷೆ ಕಲಿಕೆಗಾಗಿ ಅರ್ಮೇನಿಯಾಕ್ಕೆ ಕಳುಹಿಸಲು ಮುಂದಾಗಿದ್ದ ಏಜೆಂಟ್‌ ಟೋನಿ ಟಾಮ್‌ನ ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ.

Vijaya Karnataka 29 Nov 2018, 5:00 am
ಬೆಂಗಳೂರು : 32 ಮಂದಿ ನರ್ಸಿಂಗ್‌ ವಿದ್ಯಾರ್ಥಿಗಳನ್ನು ಜರ್ಮನ್‌ ಭಾಷೆ ಕಲಿಕೆಗಾಗಿ ಅರ್ಮೇನಿಯಾಕ್ಕೆ ಕಳುಹಿಸಲು ಮುಂದಾಗಿದ್ದ ಏಜೆಂಟ್‌ ಟೋನಿ ಟಾಮ್‌ನ ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ. ಈತ ನೀಡಿದ ಹೇಳಿಕೆ ಆಧರಿಸಿ ಈಶಾನ್ಯ ಡಿಸಿಪಿ ವಿಭಾಗದ ಅಧಿಕಾರಿಗಳು ಅರ್ಮೇನಿಯಾ ವಿಶ್ವ ವಿದ್ಯಾಲಯಕ್ಕೆ ಪತ್ರ ಬರೆದು ಹೆಚ್ಚಿನ ಮಾಹಿತಿ ಕೋರಿದ್ದಾರೆ. ಮಂಗಳೂರು ಮತ್ತು ಕೇರಳದಲ್ಲಿ ನರ್ಸಿಂಗ್‌ ಕಲಿಯುತ್ತಿರುವ 32 ವಿದ್ಯಾರ್ಥಿನಿಯರು ಅರ್ಮೇನಿಯಾಕ್ಕೆ ತೆರಳಲು ಮಂಗಳವಾರ ಬೆಳಗ್ಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಮಾನವ ಕಳ್ಳ ಸಾಗಣೆ ಅನುಮಾನದ ಮೇಲೆ ವಲಸೆ ವಿಭಾಗದ ಅಧಿಕಾರಿಗಳು ಎಲ್ಲರನ್ನೂ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ ವಿಮಾನ ನಿಲ್ದಾಣ ಪೊಲೀಸ್‌ ಠಾಣೆ ವಶಕ್ಕೆ ಒಪ್ಪಿಸಿದ್ದರು. ಎಲ್ಲಾ ವಿದ್ಯಾರ್ಥಿನಿಯರ ವೀಸಾ ಮತ್ತು ಪಾಸ್‌ಪೋರ್ಟ್‌ ಸಮರ್ಪಕ ಮತ್ತು ಅಸಲಿಯಾಗಿದ್ದರಿಂದ ಪೊಲೀಸರು ಎಲ್ಲರನ್ನೂ ಬಿಟ್ಟು ಕಳುಹಿಸಿ ಏಜೆಂಟ್‌ ಟೋನಿ ಟಾಮ್‌ನನ್ನು ಮಾತ್ರ ಬಂಧಿಸಿ ವಿಚಾರಣೆ ತೀವ್ರಗೊಳಿಸಿದ್ದಾರೆ.
Vijaya Karnataka Web nursing students to armenia enquiry continued
ಅರ್ಮೇನಿಯಾಕ್ಕೆ ನರ್ಸಿಂಗ್‌ ವಿದ್ಯಾರ್ಥಿನಿಯರು: ತನಿಖೆ ಚುರುಕು


''ತಾನು ಹಲವಾರು ವರ್ಷಗಳಿಂದ ಅರ್ಮೇನಿಯಾ ವಿಶ್ವ ವಿದ್ಯಾಲಯದ ಜತೆ ನಿರಂತರ ಸಂಪರ್ಕದಲ್ಲಿರುವುದನ್ನು ಟೋನಿ ಟಾಮ್‌ ಒಪ್ಪಿಕೊಂಡಿದ್ದಾನೆ. ಮಾತ್ರವಲ್ಲದೆ ಈ ಹಿಂದೆ ನಾನು ನಾನಾ ರೀತಿಯ ವೃತ್ತಿಪರ ಕಲಿಕೆಗಾಗಿ ಮತ್ತು ವೈದ್ಯಕೀಯ ಕಲಿಕೆಗಾಗಿ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಅರ್ಮೇನಿಯಾಕ್ಕೆ ಕಳಿಸಿದ್ದೇನೆ. ಅವರೆಲ್ಲರೂ ಕಲಿಕೆ ಪೂರೈಸಿ ಈಗ ನಾನಾ ದೇಶಗಳಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಹಲವರು ಇನ್ನೂ ಅರ್ಮೇನಿಯಾದಲ್ಲೇ ಕೆಲಸ ಮಾಡಿಕೊಂಡಿದ್ದಾರೆ. ಜರ್ಮನ್‌ ಭಾಷೆ ಕಲಿಕೆಗಾಗಿ ನರ್ಸಿಂಗ್‌ ವಿದ್ಯಾರ್ಥಿನಿಯರನ್ನು ಅರ್ಮೆನಿಯಾಕ್ಕೆ ಕಳಿಸಲು ಮುಂದಾಗಿದ್ದು ಇದೇ ಮೊದಲ ಬಾರಿ. ಜರ್ಮನ್‌ ಭಾಷೆ ಕಲಿತರೆ ಉದ್ಯೋಗಾವಕಾಶಗಳು ಹೆಚ್ಚಾಗಿರುವುದರಿಂದ 2 ತಿಂಗಳ ಭಾಷಾ ಕಲಿಕೆಯ ಕೋರ್ಸ್‌ಗಾಗಿ ಇವರೆಲ್ಲರನ್ನೂ ನಾನು ಕಳುಹಿಸಿಕೊಡುತ್ತಿದ್ದೇನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ'' ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಟೋನಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಆದರೆ ಈಗಲೇ ಈತನ ಹೇಳಿಕೆಯನ್ನು ಪೂರ್ಣವಾಗಿ ನಂಬಲು ಸಾಧ್ಯವಿಲ್ಲ. ಅರ್ಮೇನಿಯಾದಲ್ಲಿರುವ ''ಯೂನಿವರ್ಸಿಟಿ ಆಫ್‌ ಟ್ರೆಡಿಷನಲ್‌ ಮೆಡಿಸಿನ್‌ ಆಫ್‌ ಅರ್ಮೇನಿಯಾ'' ಗೆ ವಿದೇಶಾಂಗ ಇಲಾಖೆ ಮೂಲಕ ಪತ್ರ ಬರೆದು ಆ ವಿವಿಯಲ್ಲಿ ಜರ್ಮನ್‌ ಭಾಷೆ ಕಲಿಕೆಯ ಕೋರ್ಸ್‌ ಯಾವುದಾದರೂ ಇದೆಯೇ , ಕರ್ನಾಟಕದಿಂದ ವಿದ್ಯಾರ್ಥಿಗಳಿಗೆ ಆಹ್ವಾನ ನೀಡಲಾಗಿತ್ತೇ ಎನ್ನುವ ಬಗ್ಗೆ ಮಾಹಿತಿ ಕೇಳಿದ್ದೇವೆ. ಅಲ್ಲಿಂದ ಮಾಹಿತಿ ಸಿಕ್ಕ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಏಜೆಂಟ್‌ ಟೋನಿ ಟಾಮ್‌ ವಿರುದ್ಧ ವಂಚನೆ ಮತ್ತು ಮಾನವ ಕಳ್ಳ ಸಾಗಣೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ