ಆ್ಯಪ್ನಗರ

ನಗರದ ನಾಲ್ಕನೇ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಾಲ್ಕನೇ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಕಾರ್ಯಾರಂಭ ಮಾಡಿದ್ದು, ಜಾಲಹಳ್ಳಿ (ಬಿಇಎಲ್‌) ಅಂಚೆ ಕಚೇರಿಯಲ್ಲಿ ನೂತನ ಕೇಂದ್ರವನ್ನು ಕೇಂದ್ರ ಸಾಂಖ್ಯಿಕ ಸಚಿವ ಡಿ.ವಿ. ಸದಾನಂದ ಗೌಡ ಮಂಗಳವಾರ ಉದ್ಘಾಟಿಸಿದರು.

Vijaya Karnataka 6 Mar 2019, 5:00 am
ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಾಲ್ಕನೇ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಕಾರ್ಯಾರಂಭ ಮಾಡಿದ್ದು, ಜಾಲಹಳ್ಳಿ (ಬಿಇಎಲ್‌) ಅಂಚೆ ಕಚೇರಿಯಲ್ಲಿ ನೂತನ ಕೇಂದ್ರವನ್ನು ಕೇಂದ್ರ ಸಾಂಖ್ಯಿಕ ಸಚಿವ ಡಿ.ವಿ. ಸದಾನಂದ ಗೌಡ ಮಂಗಳವಾರ ಉದ್ಘಾಟಿಸಿದರು. ಈ ಮೂಲಕ ನಗರದ ಉತ್ತರ ಭಾಗದ ಜೊತೆಗೆ ಪೂರ್ವ ಭಾಗದ ನಿವಾಸಿಗಳಿಗೆ ಪಾಸ್‌ಪೋರ್ಟ್‌ ಸೇವಾಕೇಂದ್ರ ಬೇಕು ಎಂಬ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.
Vijaya Karnataka Web passport seva kendra inagurated
ನಗರದ ನಾಲ್ಕನೇ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭ


ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಚಿವ ಸದಾನಂದ ಗೌಡ, ''ಜಗತ್ತಿನಲ್ಲೇ ಅತಿ ವೇಗದ ಬೆಳವಣಿಗೆ ಸಾಧಿಸುತ್ತಿರುವ ಭಾರತದ ಹಾಲಿ ಜಿಡಿಪಿ ಶೇ. 7.2ರಷ್ಟಿದೆ. ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಶಿಸ್ತುಬದ್ಧವಾಗಿದ್ದು, ಆರೋಗ್ಯಕರವಾಗಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಹೀಗಾಗಿ, ವಿದೇಶಕ್ಕೆ ಹೋಗುವವರಿಗೆ ಪಾಸ್‌ಪೋರ್ಟ್‌, ಭಾರತಕ್ಕೆ ಬರುವವರಿಗೆ ವೀಸಾ ಸರಳವಾಗಿ ಸಿಗಬೇಕು ಎನ್ನುವ ಉದ್ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ವಿದೇಶಗಳಿಗೆ ತೆರಳುವವರಿಗೆ ಯಾವುದೇ ತೊಂದರೆ ಇಲ್ಲದೇ ಸರಳವಾಗಿ ಪಾಸ್‌ಪೋರ್ಟ್‌ ಸಿಗಬೇಕು ಎಂಬ ಕಾರಣಕ್ಕೆ ಅಂಚೆ ಇಲಾಖೆಯೊಂದಿಗೆ ಸಂಯೋಜನೆ ಮೂಲಕ ದೇಶದ ಎಲ್ಲ ಭಾಗಗಳಲ್ಲಿ ಅಂಚೆ ಕಚೇರಿಗಳಲ್ಲೇ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಅಂಚೆ ಇಲಾಖೆಯು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಅಂಚೆ ಕಚೇರಿಗಳನ್ನು ಬ್ಯಾಂಕಿಂಗ್‌ ಸೇವೆ, ಪಾಸ್‌ಪೋರ್ಟ್‌ ಸೇವೆ ಸೇರಿದಂತೆ ಹಲವು ಸೇವೆಗಳನ್ನು ಒದಗಿಸುವ ಕೇಂದ್ರವಾಗಿ ಕೇಂದ್ರ ಸರಕಾರ ಅಭಿವೃದ್ಧಿಪಡಿಸುತ್ತಿದೆ. ಅದಕ್ಕೆ ಅಗತ್ಯವಾದ ಇಂಟರ್ನೆಟ್‌ ಸೇರಿದಂತೆ ಮೂಲಸೌಕರ್ಯ ಒದಗಿಸುತ್ತಿದ್ದೇವೆ,'' ಎಂದು ಹೇಳಿದರು.

ಪ್ರಾದೇಶಿಕ ಪಾಸ್‌ಪೋರ್ಟ್‌ ಅಧಿಕಾರಿ ಭರತ್‌ ಕುಮಾರ್‌ ಮಾತನಾಡಿ, ''ಲಾಲ್‌ಬಾಗ್‌ ಮತ್ತು ಮಾರತ್‌ಹಳ್ಳಿಯಲ್ಲಿ ದೊಡ್ಡ ಸೇವಾ ಕೇಂದ್ರಗಳಿವೆ. ಉತ್ತರ ಭಾಗಕ್ಕೆ ಸೇವಾಕೇಂದ್ರದ ಅಗತ್ಯವಿತ್ತು. ನೂತನ ಕೇಂದ್ರದಿಂದ ಬಿಇಎಲ್‌ನವರಿಗೆ ಹೆಚ್ಚಿನ ಅನುಕೂಲ ಆಗಲಿದೆ. ರಾಜ್ಯದಲ್ಲಿ ಒಟ್ಟು 27 ಸೇವಾ ಕೇಂದ್ರಗಳಿವೆ. ಈ ಪೈಕಿ ಖಾಸಗಿ ಸಹಯೋಗದಲ್ಲಿ 5 ಕೇಂದ್ರಗಳು ಕೆಲಸ ಮಾಡುತ್ತಿವೆ. ಸಾಮಾನ್ಯ ಸೇವಾ ಕೇಂದ್ರಗಳ ರೀತಿಯಲ್ಲೇ ಅಂಚೆ ಕಚೇರಿಯಲ್ಲಿ ಸೇವೆ ಸಿಗಲಿದೆ. ಪೊಲೀಸ್‌ ಪರಿಶೀಲನೆ ಅಗತ್ಯವಿಲ್ಲದಿದ್ದರೆ 4-5 ದಿನಗಳಲ್ಲಿ ಹಾಗೂ ಪೊಲೀಸ್‌ ಪರಿಶೀಲನೆ ಆಗುವಂತಿದ್ದರೆ ಗರಿಷ್ಠ 20 ದಿನಗಳಲ್ಲಿ ಪಾಸ್‌ಪೋರ್ಟ್‌ ಮನೆಗೆ ತಲುಪುತ್ತದೆ,'' ಎಂದರು.

ಇದೇ ವೇಳೆ ಮೂವರು ಮಕ್ಕಳ ಪಾಲಕರಿಗೆ ಸುಕನ್ಯಾ ಸಮೃದ್ಧಿ ಯೋಜನೆ ಫಲಾನುಭವಿ ಪತ್ರವನ್ನು ಸಚಿವರು ವಿತರಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮುನಿರಾಜು, ಬಿಇಎಲ್‌ ಅಧಿಕಾರಿಗಳು, ಅಂಚೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ