ಆ್ಯಪ್ನಗರ

ಟ್ಯಾಂಕರ್‌ ಮಾಲೀಕರ ಪ್ರತಿಭಟನೆ: ನಾಳೆ ಪೆಟ್ರೋಲ್‌ ಸಮಸ್ಯೆ?

ಟ್ಯಾಂಕರ್‌ ಮಾಲೀಕರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿದ್ದಾರೆ.

Vijaya Karnataka Web 27 Jan 2018, 3:14 pm
ಬೆಂಗಳೂರು: ಟ್ಯಾಂಕರ್‌ ಮಾಲೀಕರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿದ್ದಾರೆ. ಮುಷ್ಕರ ಕೊನೆಯಾಗದಿದ್ದರೆ ಬೆಂಗಳೂರಿಗೆ ಡಿಸೇಲ್‌, ಪೆಟ್ರೋಲ್‌ ಪೂರೈಕೆ ವ್ಯತ್ಯಯಗೊಂಡು ನಾಳೆಯ ಹೊತ್ತಿಗೆ ತೈಲ ಬಿಕ್ಕಟ್ಟು ಉಂಟಾಗಲಿದೆ. ಹೊಸಕೋಟೆ ಬಳಿಯ ದೇವನಗುಂದಿಯಲ್ಲಿ ಆರಂಭಗೊಂಡಿದ್ದು, ಟ್ಯಾಂಕರ್‌ಗಳು ಸಾಲುಗಟ್ಟಿ ನಿಂತಿವೆ.
Vijaya Karnataka Web petrol and diesel tankers strike
ಟ್ಯಾಂಕರ್‌ ಮಾಲೀಕರ ಪ್ರತಿಭಟನೆ: ನಾಳೆ ಪೆಟ್ರೋಲ್‌ ಸಮಸ್ಯೆ?


ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಕಂಪನಿಗಳ ಡಿಪೊ ಇರುವ ದೇವನಗುಂದಿಯಲ್ಲಿ ರಸ್ತೆ ಅವ್ಯವಸ್ಥೆ ಖಂಡಿಸಿ ತೈಲ ಸಾಗಣೆ ಲಾರಿಗಳ ಮಾಲೀಕರು ಮುಷ್ಕರ ನಡೆಸಲು ಮುಂದಾಗಿದ್ದಾರೆ.

ಈ ಡಿಪೋಗಳಿಂದ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲ ಪೂರೈಕೆಯಾಗುತ್ತಿದೆ. ಪ್ರತಿ ದಿನ ಮೂರು ಸಾವಿರ ಲೋಡ್‌ ಸರಬರಾಜಾಗುತ್ತಿದ್ದು, ಆಗುತ್ತದೆ. ಆದರೆ ಈ ಡಿಪೋಗೆ ಸಂಪರ್ಕ ಕಲ್ಪಿಸುವ ಹೊಸಕೋಟೆ ಮತ್ತು ಹೋಪ್‌ ಫಾರಂ ರಸ್ತೆ ಸಂಪೂರ್ಣ ಹದಗೆಟ್ಟಿದೆ. 17 ಕಿ.ಮೀ ಉದ್ದದ ರಸ್ತೆಯಲ್ಲಿ ಸಂಚರಿಸಲು ಒಂದು ತಾಸು ತೆಗೆದುಕೊಳ್ಳುತ್ತಿದೆ. ಕಚ್ಚಾ ರಸ್ತೆಯಂತೆ ಆಗಿದ್ದು, ಡಾಂಬರು ಕಂಡು ಎಷ್ಟೋ ವರ್ಷಗಳಾಗಿದೆ. ಈ ರಸ್ತೆಗೆ ಡಾಂಬರು ಹಾಕಿ ಅಭಿವೃದ್ಧಿಪಡಿಸುವಂತೆ ಐದಾರು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಮತ್ತೊಮ್ಮೆ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ತೈಲ ಪೂರೈಕೆ ಟ್ಯಾಂಕರ್‌ಗಳ ಮಾಲೀಕರು ಹೇಳಿದ್ದಾರೆ.

ನಿರ್ವಹಣೆ ವೆಚ್ಚ ಹೆಚ್ಚಳ

ಹದಗೆಟ್ಟ ರಸ್ತೆಯಲ್ಲಿ ಟ್ಯಾಂಕರ್‌ಗಳು ಸಂಚರಿಸುತ್ತಿರುವುದರಿಂದ ಪದೇಪದೆ ರಿಪೇರಿಗೆ ಬರುತ್ತಿವೆ. ವಾಹನಗಳ ನಿರ್ವಹಣೆ ವೆಚ್ಚ ಹೆಚ್ಚುತ್ತಿದೆ. ಈ ರಸ್ತೆಯನ್ನು ಮೂರು ತೈಲ ಕಂಪನಿಗಳು ಸೇರಿ ಸಿಎಸ್‌ಆರ್‌ ಫಂಡ್‌ನಲ್ಲಿ ಅಭಿವೃದ್ಧಿಪಡಿಸಬಹುದು. ಆದರೆ ಕಂಪನಿಗಳು ಹಿಂದೇಟು ಹಾಕುತ್ತಿವೆ. ಮೂಲಸೌಕರ್ಯ ಇಲ್ಲದ ರಸ್ತೆಯಲ್ಲಿ ಪೂರೈಕೆ ಮಾಡುವುದು ಅಸಾಧ್ಯ ಎಂದು ಮಾಲೀಕರು ಹೇಳಿದ್ದಾರೆ.

ದೇವನಗುಂದಿ ಗ್ರಾಮದ ಬಳಿಯಿರುವ ಘಟಕಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯು ಕಳೆದ 6 ತಿಂಗಳಿಂದ ಸಂಪೂರ್ಣ ಹದಗೆಟ್ಟಿದೆ. ಕಳೆದ ವರ್ಷ ಬಿದ್ದ ಮಾನ್ಸೂನ್‌ ಮಳೆಯಿಂದಾಗಿ ರಸ್ತೆ ದೊಡ್ಡ ಹೊಂಡ, ಗುಂಡಿಗಳು ನಿರ್ಮಾಣವಾಗಿವೆ. ಇದರಿಂದಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುವ ವಾಹನಗಳು ಅಪಘಾತಕ್ಕೆ ಸಿಲುಕುವುದು ಸಾಮಾನ್ಯವಾಗಿದೆ. ಜತೆಗೆ ವಾಹನಗಳು ಸಹ ಜಖಂಗೊಳ್ಳುತ್ತಿವೆ.

ರಸ್ತೆ ರಿಪೇರಿ ಮಾಡಿಸುವಂತೆ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟ ಸಂಸ್ಥೆಗಳು ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹಾಗಾಗಿ ಅನ್ಯ ಮಾರ್ಗವಿಲ್ಲದೆ ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಯನ್ನು ಬಂದ್‌ ಮಾಡಿ, ಎಲ್ಲಾ ಚಾಲಕರು ಹಾಗೂ ಇತರೆ ಸಿಬ್ಬಂದಿಗಳು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ