ಆ್ಯಪ್ನಗರ

ಗೊಟ್ಟಿಗೆರೆ-ನಾಗವಾರ ಸುರಂಗ ಕಾಮಗಾರಿಗೆ ಸಿದ್ಧತೆ ಪೂರ್ಣ

21 ಕಿ.ಮೀ. ಉದ್ದದ ಮಾರ್ಗದ ಯೋಜನೆಯಲ್ಲಿ ಡೇರಿ ಸರ್ಕಲ್‌-ನಾಗವಾರ ಮಾರ್ಗದಲ್ಲಿ (14 ಕಿ.ಮೀ.) ಸುರಂಗ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. ಮೊದಲಿಗೆ ವೆಲ್ಲಾರ ಜಂಕ್ಷನ್‌-ಶಿವಾಜಿನಗರ (2.7 ಕಿ.ಮೀ.) ಹಾಗೂ ಶಿವಾಜಿನಗರ-ಪಾಟರಿ ಟೌನ್‌ (2.8 ಕಿ.ಮೀ.) ಸುರಂಗ ಕಾಮಗಾರಿ ನಡೆಯಲಿದೆ. ವೆಲ್ಲಾರ ಜಂಕ್ಷನ್‌ನಲ್ಲಿ ಈಗಾಗಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಕಾಮಗಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

Vijaya Karnataka 17 Jun 2019, 5:00 am
ಬೆಂಗಳೂರು: ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ಸುರಂಗ ಕಾಮಗಾರಿ ಆರಂಭಕ್ಕೆ ಸಿದ್ಧತೆ ಪೂರ್ಣಗೊಂಡಿದೆ. 13 ಕಿ.ಮೀ. ಉದ್ದದ ಸುರಂಗ ಕೊರೆಯಲು ಸುಮಾರು 10 ಲಕ್ಷ ಕ್ಯೂಬಿಕ್‌ ಮೀಟರ್‌ನಷ್ಟು ಮಣ್ಣು ತೆಗೆಯಲಾಗುತ್ತದೆ. ಇದನ್ನು ವಿಲೇವಾರಿ ಮಾಡಲು ನಗರದ ಹೊರವಲಯದಲ್ಲಿ ಆರು ಕ್ವಾರಿಗಳನ್ನು ಗುರುತಿಸಲಾಗಿದೆ.
Vijaya Karnataka Web BNG-1606-2-2-BMRCL 2


21 ಕಿ.ಮೀ. ಉದ್ದದ ಮಾರ್ಗದ ಯೋಜನೆಯಲ್ಲಿ ಡೇರಿ ಸರ್ಕಲ್‌-ನಾಗವಾರ ಮಾರ್ಗದಲ್ಲಿ (14 ಕಿ.ಮೀ.) ಸುರಂಗ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ. ಮೊದಲಿಗೆ ವೆಲ್ಲಾರ ಜಂಕ್ಷನ್‌-ಶಿವಾಜಿನಗರ (2.7 ಕಿ.ಮೀ.) ಹಾಗೂ ಶಿವಾಜಿನಗರ-ಪಾಟರಿ ಟೌನ್‌ (2.8 ಕಿ.ಮೀ.) ಸುರಂಗ ಕಾಮಗಾರಿ ನಡೆಯಲಿದೆ. ವೆಲ್ಲಾರ ಜಂಕ್ಷನ್‌ನಲ್ಲಿ ಈಗಾಗಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಕಾಮಗಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಿಸ್ತೃತ ಯೋಜನಾ ವರದಿಯಲ್ಲಿರುವಂತೆ 13 ಕಿ.ಮೀ. ಸುರಂಗ ಕೊರೆಯಲು 10.81 ಲಕ್ಷ ಕ್ಯೂಬಿಕ್‌ ಮೀಟರ್‌ನಷ್ಟು (15.56 ಲಕ್ಷ ಮೆಟ್ರಿಕ್‌ ಟನ್‌) ಮಣ್ಣು ತೆಗೆಯಬೇಕಾಗುತ್ತದೆ. ಇದರ ಜತೆಗೆ ಕಲ್ಲುಗಳೂ ಇರಲಿವೆ. ಸುರಂಗ ಕಾಮಗಾರಿ ವೇಳೆ ಕಸ, ಕಲುಷಿತ ವಸ್ತುಗಳು ನೆಲದಾಳಕ್ಕೆ ಸೇರುವುದರಿಂದ ಅಂತರ್ಜಲ ಕಲುಷಿತಗೊಳ್ಳುವ ಸಾಧ್ಯತೆ ಇದೆ. ಆದರೆ ಅಂತರ್ಜಲಕ್ಕೆ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಈ ಅಪಾರ ಪ್ರಮಾಣದ ಮಣ್ಣನ್ನು ವಿಲೇವಾರಿ ಮಾಡುವುದು ಹೇಗೆ ಎಂಬ ಪ್ರಶ್ನೆ ಅಧಿಕಾರಿಗಳನ್ನು ಕಾಡುತ್ತಿತ್ತು. ಈ ಕುರಿತು ಬಿಬಿಎಂಪಿ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಸಹಯೋಗದಲ್ಲಿ ಚರ್ಚೆ ನಡೆಸಿದಾಗ ಹೊರವಲಯದ ಆರು ಕ್ವಾರಿಗಳಲ್ಲಿ ಮಣ್ಣು ಸುರಿಯಬಹುದು ಎಂದು ತಿಳಿದು ಬಂದಿದೆ. ಈ ಕ್ವಾರಿಗಳಲ್ಲಿ ಮಣ್ಣು ತುಂಬಲು ಕಂದಾಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳಿಂದ ಅನುಮತಿ ಪಡೆಯಲಾಗುತ್ತಿದೆ.

7 ಲಕ್ಷ ಲೀಟರ್‌ ನೀರು
ಸುರಂಗ ಕಾಮಗಾರಿಗೆ ಅಪಾರ ಪ್ರಮಾಣದ ನೀರು ಕೂಡ ಬಳಕೆಯಾಗಲಿದೆ. ಸುರಂಗ ಕೊರೆಯುವ ಯಂತ್ರ ಭೂಮಿಯಲ್ಲಿ ತಿರುಗುತ್ತಾ ಕೊರೆಯುವಾಗ ನಿರಂತರವಾಗಿ ನೀರು ಸಿಂಪಡಿಸಲಾಗುತ್ತದೆ. ಇದರ ಜತೆಗೆ ಕಾಂಕ್ರೀಟ್‌ ಹಾಕಲು ನೀರು ಅಗತ್ಯವಿದೆ. ನಂತರ ಅದನ್ನು ಒಣಗಿಸಲು ಕೂಡ ಹೆಚ್ಚು ನೀರು ಬೇಕಾಗುತ್ತದೆ. ಇವೆಲ್ಲ ಕೆಲಸಗಳಿಗೆ ಸೇರಿ ದಿನಕ್ಕೆ ಸುಮಾರು 7 ಲಕ್ಷ ಲೀಟರ್‌ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಜಲಮಂಡಳಿಯ ಎಸ್‌ಟಿಪಿಗಳಲ್ಲಿ ಸಂಸ್ಕರಣೆಯಾದ ನೀರನ್ನು ಈ ಕೆಲಸಗಳಿಗೆ ಬಳಸಲಾಗುತ್ತದೆ.

ಸುರಂಗ ಮಾರ್ಗವು ಡೇರಿ ಸರ್ಕಲ್‌, ಮೈಕೋ ಲೇಔಟ್‌, ಲ್ಯಾಂಗ್‌ಫೋರ್ಡ್‌, ವೆಲ್ಲಾರ, ಎಂ.ಜಿ.ರಸ್ತೆ, ಶಿವಾಜಿನಗರ, ಕಂಟೋನ್ಮೆಂಟ್‌, ಪಾಟರಿ ಟೌನ್‌, ವೆಂಕಟೇಶಪುರ, ಅರೇಬಿಕ್‌ ಕಾಲೇಜು ಹಾಗೂ ನಾಗವಾರ ನಿಲ್ದಾಣಗಳನ್ನು ಒಳಗೊಂಡಿದೆ. ಈ ಮಾರ್ಗದಲ್ಲಿ ಸುಮಾರು 18 ಮೀಟರ್‌ ಆಳದಲ್ಲಿ ಸುರಂಗ ಕೊರೆಯುವ ಕೆಲಸ ನಡೆಯಲಿದೆ. ಈ ವೇಳೆ ಮಾರ್ಗದಲ್ಲಿರುವ ಬೋರ್‌ವೆಲ್‌ಗಳನ್ನು ಬಳಸದಂತೆ ಸೂಚನೆಯನ್ನೂ ನೀಡುವ ಸಾಧ್ಯತೆ ಇದೆ. ಜತೆಗೆ ಹೊಸದಾಗಿ ಈ ಹಾದಿಯಲ್ಲಿ ಬೋರ್‌ವೆಲ್‌ ಕೊರೆಯಲು ಅನುಮತಿ ದೊರೆಯುವುದಿಲ್ಲ.

ಗೊಟ್ಟಿಗೆರೆ-ನಾಗವಾರ

ಒಟ್ಟು ಉದ್ದ - 21 ಕಿ.ಮೀ.

ಸುರಂಗ - 13 ಕಿ.ಮೀ.

ವೆಚ್ಚ- 11,014 ಕೋಟಿ ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ