ಆ್ಯಪ್ನಗರ

ಏಪ್ರಿಲ್‌ನ ಸೆಕೆ ಕಳೆದ ಬಾರಿಗಿಂತ ಕಡಿಮೆಯೇ!

ಮೇ ತಿಂಗಳು ಹತ್ತಿರವಾಗುತ್ತಿದ್ದಂತೆ ನಗರದಲ್ಲಿ ಸುಡುವ ಬಿಸಿಲು ಆರಂಭವಾಗಿದ್ದು, ತಾಪಮಾನ ಹಾಗೂ ತೇವಾಂಶ ಹೆಚ್ಚಳವಾಗುತ್ತಿದೆ. ಏಪ್ರಿಲ್‌ ಅಂತ್ಯದಲ್ಲಿ ಸೆಕೆ ಹೆಚ್ಚಿದ್ದರೂ, ಕಳೆದ ಆರು ವರ್ಷಗಳ ತಾಪಮಾನಕ್ಕೆ ಹೋಲಿಸಿದರೆ ಇದು ಕಡಿಮೆಯೇ ಎಂಬುದು ಸೋಜಿಗ.

Vijaya Karnataka 30 Apr 2018, 5:00 am
ಬೆಂಗಳೂರು: ಮೇ ತಿಂಗಳು ಹತ್ತಿರವಾಗುತ್ತಿದ್ದಂತೆ ನಗರದಲ್ಲಿ ಸುಡುವ ಬಿಸಿಲು ಆರಂಭವಾಗಿದ್ದು, ತಾಪಮಾನ ಹಾಗೂ ತೇವಾಂಶ ಹೆಚ್ಚಳವಾಗುತ್ತಿದೆ. ಏಪ್ರಿಲ್‌ ಅಂತ್ಯದಲ್ಲಿ ಸೆಕೆ ಹೆಚ್ಚಿದ್ದರೂ, ಕಳೆದ ಆರು ವರ್ಷಗಳ ತಾಪಮಾನಕ್ಕೆ ಹೋಲಿಸಿದರೆ ಇದು ಕಡಿಮೆಯೇ ಎಂಬುದು ಸೋಜಿಗ.
Vijaya Karnataka Web present year summer heat less compare to lase year
ಏಪ್ರಿಲ್‌ನ ಸೆಕೆ ಕಳೆದ ಬಾರಿಗಿಂತ ಕಡಿಮೆಯೇ!


ಈ ವರ್ಷದ ಏಪ್ರಿಲ್‌ನಲ್ಲಿ ಆರಂಭದಿಂದಲೇ ಟ್ರಫ್‌ ಪರಿಣಾಮದಿಂದ ಮಳೆ ಸುರಿಯಿತು. ಇದು ಏಪ್ರಿಲ್‌ ಕೊನೇ ವಾರದವರೆಗೂ ಮುಂದುವರಿಯಿತು. ಹೀಗಾಗಿ, ನಗರದ ಕೇಂದ್ರಭಾಗದಲ್ಲಿ ಗರಿಷ್ಠ ತಾಪಮಾನವು 34 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಲಿಲ್ಲ. ತಾಪಮಾನ ಇಷ್ಟರಲ್ಲೇ ಇದ್ದರೂ ಸೆಕೆ ಮಾತ್ರ ಅಗಾಧವಾಗಿದೆ. ಪ್ರತಿ ದಿನ ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ಗಂಟೆವರೆಗಿನ ಬಿಸಿಲು ಜನರನ್ನು ಹೈರಾಣರನ್ನಾಗಿ ಮಾಡುತ್ತಿದೆ. ಬಿಸಿಲಿನ ಝಳದಿಂದ ತತ್ತರಿಸುತ್ತಿರುವವರು ಎಳನೀರು, ಕಲ್ಲಂಗಡಿ ಸೇರಿದಂತೆ ಹಣ್ಣು ಹಾಗೂ ಹಣ್ಣಿನ ಪಾನೀಯಗಳ ಮೊರೆ ಹೋಗಿದ್ದಾರೆ. ಹಗಲಿನಲ್ಲಿ ಕಾಡಿಸುತ್ತಿರುವ ಸೆಕೆ ರಾತ್ರಿಯಾದರೂ ಬೆನ್ನು ಬಿಡುತ್ತಿಲ್ಲ.

2017ರ ಏ.13, 25 ಹಾಗೂ 26 ರಂದು ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ ಆಗಿತ್ತು. ಉಳಿದ ದಿನಗಳಲ್ಲೂ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿತ್ತು. 2016 ರ ಏ.25 ರಂದು 39.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಇದು ಸಾರ್ವಕಾಲಿಕ ದಾಖಲೆಯೂ ಆಗಿದೆ. ಈ ವರ್ಷದ ಏಪ್ರಿಲ್‌ನ ಉಳಿದ ದಿನಗಳಲ್ಲಿ ತಾಪಮಾನ 36, 37 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿತ್ತು. ಇದಕ್ಕೂ ಮುನ್ನ 2015 ರ ಏಪ್ರಿಲ್‌ನಲ್ಲಿ 36.5 ಡಿಗ್ರಿ ಸೆಲ್ಸಿಯಸ್‌, 2014 ರಲ್ಲಿ 36.7 ಡಿಗ್ರಿ ಸೆಲ್ಸಿಯಸ್‌, 2013 ರಲ್ಲಿ 36.8 ಡಿಗ್ರಿ ಸೆಲ್ಸಿಯಸ್‌, 2012 ರಲ್ಲಿ 37.5 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿತ್ತು. ಈ ತಾಪಮಾನಗಳಿಗೆ ಹೋಲಿಸಿದರೆ ಈ ವರ್ಷದ ಏಪ್ರಿಲ್‌ನಲ್ಲಿ ಕಡಿಮೆ ತಾಪಮಾನ ದಾಖಲಾಗಿದೆ. 2011ರಲ್ಲಿ 34.6 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿತ್ತು. ಈ ವರ್ಷದ ತಾಪಮಾನವೂ ಇದೇ ಮಿತಿಯಲ್ಲಿದೆ.

ತೇವಾಂಶ ಹೆಚ್ಚಳ

ತಾಪಮಾನ ಹೆಚ್ಚಿದಂತೆ ಗಾಳಿಯಲ್ಲಿನ ತೇವಾಂಶದ ಪ್ರಮಾಣವೂ ಹೆಚ್ಚುತ್ತದೆ. ಇದನ್ನು ಹವಾಮಾನ ಇಲಾಖೆಯು ಶೇಕಾಡಾವಾರು ಲೆಕ್ಕ ಹಾಕುತ್ತದೆ. ಸೆಕೆಯ ಕಿರಿಕಿರಿ ಉಂಟಾಗುವಲ್ಲಿ ತಾಪಮಾನಕ್ಕಿಂತ ತೇವಾಂಶದ ಪ್ರಭಾವ ಅಧಿಕವಾಗಿರುತ್ತದೆ. ಈ ಬಾರಿ ತಾಪಮಾನ 34 ಡಿಗ್ರಿ ಸೆಲ್ಸಿಯಸ್‌ ಇದ್ದರೂ ಗಾಳಿಯಲ್ಲಿ ತೇವಾಂಶದ ಪ್ರಮಾಣ ಹೆಚ್ಚಿರುವುದರಿಂದ ಸೆಕೆ ಹೆಚ್ಚಿದೆ.

ಹವಾಮಾನ ಇಲಾಖೆಯ ಭಾನುವಾರದ ಮಾಹಿತಿಯಂತೆ, ನಗರದ ಕೇಂದ್ರ ಭಾಗದಲ್ಲಿ 34.9 ಡಿಗ್ರಿ ಸೆಲ್ಸಿಯಸ್‌, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 35 ಡಿಗ್ರಿ ಸೆಲ್ಸಿಯಸ್‌, ಎಚ್‌ಎಎಲ್‌ನಲ್ಲಿ 34.1 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಕೇಂದ್ರ ಭಾಗದಲ್ಲಿ ತೇವಾಂಶವು ಶೇ.33 ರಷ್ಟಿದೆ.

ಬಾಕ್ಸ

ಮತ್ತೆ ಮಳೆ ಸಾಧ್ಯತೆ

ಮೇ 4 ಅಥವಾ 5 ರಂದು ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಕಂಡು ಬರುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯೂ ಇದೆ. ಮೋಡ ಕಂಡು ಬಂದರೆ ಮೇ ಆರಂಭದಲ್ಲಿ ತಾಪಮಾನ ಕಡಿಮೆಯಾಗಬಹುದು ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್‌.ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ