ಆ್ಯಪ್ನಗರ

Aam Aadmi Party Karnataka: ಬಿನ್ನಿ ಪಾಠಶಾಲೆ ನಿವೇಶನ ಕಬಳಿಕೆ ಖಂಡಿಸಿ ಆಮ್‌ ಆದ್ಮಿ ಪಕ್ಷದಿಂದ ಪ್ರತಿಭಟನೆ

ಬಿನ್ನಿಪೇಟೆಯಲ್ಲಿರುವ ಬಿನ್ನಿ ಪಾಠಶಾಲೆಯ ಜಾಗವನ್ನು ಕಬಳಿಸಲು ಶಾಲೆಯ ನಿರ್ವಹಣೆಗಾಗಿ ಬಂದ ಇಟಿಎ ಸಂಸ್ಥೆ ಹಾಗೂ ಬಿನ್ನಿಪೇಟೆ ನಾಗರಿಕ ಹಿತರಕ್ಷಣಾ ಸಂಸ್ಥೆ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರು ಅರಸರು 1902 ರಲ್ಲಿ ಬಿನ್ನಿ ಮಿಲ್‌ ಕಾರ್ಖಾನೆಯ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆಂದು ಈ ನಿವೇಶನವನ್ನು ನೀಡಿದ್ದರು. ಇಂದಿನವರೆಗೂ ವಿದ್ಯಾದಾನ ಮಾಡುತ್ತಿದೆ ಈ ಬಿನ್ನಿ ಪಾಠಶಾಲೆ, ಈಗ ಶಾಲೆಯ ಜಾಗವನ್ನು ಅಕ್ರಮವಾಗಿ ಕಬಳಿಕೆ ಮಾಡಲಾಗ್ತಿದೆ ಎಂದು ಆಪ್ ಮುಖಂಡರು ಆರೋಪಿಸಿದರು.

Authored byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 6 Oct 2022, 3:25 pm
ಬೆಂಗಳೂರು: ನಗರದ ಬಿನ್ನಿಪೇಟೆಯಲ್ಲಿರುವ ಬಿನ್ನಿ ಪಾಠಶಾಲೆಯ ನಿವೇಶನ ಕಬಳಿಸುವ ಸಂಚನ್ನು ವಿರೋಧಿಸಿ ಆಮ್‌ ಆದ್ಮಿ ಪಾರ್ಟಿಯ ಅನೇಕ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
Vijaya Karnataka Web aap protest


ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಆಮ್‌ ಆದ್ಮಿ ಪಾರ್ಟಿಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಮುಖಂಡ ರಾಜಶೇಖರ್ ದೊಡ್ಡಣ್ಣ, “ಮೈಸೂರು ಅರಸರು 1902 ರಲ್ಲಿ ಬಿನ್ನಿ ಮಿಲ್‌ ಕಾರ್ಖಾನೆಯ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆಂದು ಈ ನಿವೇಶನವನ್ನು ನೀಡಿದ್ದರು. ಬಿನ್ನಿ ಮಿಲ್ ನಿಂದಲೇ ಈ ಶಾಲೆ ನಿರ್ಮಾಣ ಆಗಿತ್ತು. ಸುಮಾರು 120 ವರ್ಷಗಳಿಂದ ಸರ್ಕಾರಿ ಶಾಲೆಗೆ ಬಳಕೆಯಾಗುತ್ತಿರುವ ಈ ಐತಿಹಾಸಿಕ ನಿವೇಶನದ ಅತಿಕ್ರಮಕ್ಕೆ ಪಿತೂರಿ ನಡೆಯುತ್ತಿದೆ. ಇಲ್ಲಿ ಲಕ್ಷಾಂತರ ಜನ ಓದಿದ್ದಾರೆ. ಇಂದಿನವರೆಗೂ ವಿದ್ಯಾದಾನ ಮಾಡುತ್ತಿದೆ ಈ ಬಿನ್ನಿ ಪಾಠಶಾಲೆ, ಈಗ ಶಾಲೆಯ ಜಾಗವನ್ನು ಅಕ್ರಮವಾಗಿ ಕಬಳಿಕೆ ಮಾಡಲಾಗ್ತಿದೆ ಎಂದು ಆರೋಪಿಸಿದರು.

Parking: ಮನೆ ಎದುರು ಕಾರ್ ಪಾರ್ಕಿಂಗ್‌ ಮಾಡೋದಕ್ಕೂ 5 ಸಾವಿರ ರೂಪಾಯಿ? ಪಾರ್ಕಿಂಗ್ ನೀತಿಗೆ ಎಎಪಿ ವಿರೋಧ
“ಶಾಲೆಯ ನಿರ್ವಹಣೆಗಾಗಿ ಬಂದ ಇಟಿಎ ಸಂಸ್ಥೆ ಹಾಗೂ ಬಿನ್ನಿಪೇಟೆ ನಾಗರಿಕ ಹಿತರಕ್ಷಣಾ ಸಂಸ್ಥೆಯು ಪುನರ್‌ ನಿರ್ಮಾಣದ ನೆಪದಲ್ಲಿ ಶಾಲೆಯ ಕಟ್ಟಡವನ್ನು ಮುಂಭಾಗದಲ್ಲಿ ನಿರ್ಮಿಸಿ, ನಿವೇಶನದ ಹಿಂಭಾಗವನ್ನು ಅತಿಕ್ರಮಣ ಮಾಡುತ್ತಿದೆ. ಬೆಂಗಳೂರಿನ ಹೃದಯಭಾಗದಲ್ಲಿರುವ ಈ ನಿವೇಶನವು ಸುಮಾರು 12,000 ಚದರ ಅಡಿಯಿದ್ದು, ಕೋಟ್ಯಂತರ ರೂಪಾಯಿ ಬೆಲೆಯಿದೆ. ಹೀಗೆ ಅತಿಕ್ರಮಣ ಮಾಡಿಕೊಂಡ ನಿವೇಶನವನ್ನು ಹಲವು ಸೈಟುಗಳಾಗಿ ಮಾಡಿ ಮಾರಾಟ ಮಾಡುವ ದುರುದ್ಧೇಶದಿಂದ ಅವೆರಡು ಸಂಸ್ಥೆಗಳ ಜೊತೆಗೆ ಬಿನ್ನಿಪೇಟೆಯ ಸ್ಥಳೀಯ ರಾಜಕೀಯ ಪುಡಾರಿಗಳು ಕೈಜೋಡಿಸಿದ್ದಾರೆ” ಎಂದು ರಾಜಶೇಖರ್‌ ದೊಡ್ಡಣ್ಣ ಹೇಳಿದರು.

ಶಾಲೆ ಶಿಥಿಲಾವಸ್ಥೆಯಲ್ಲಿದೆ. ನವೀಕರಣಗೊಳಿಸುತ್ತೇವೆ ಅಂತ ಹೇಳಿ ಒಡೆಯಲು ಮುಂದಾಗಿದ್ದಾರೆ. ಆದರೆ ಇಲ್ಲಿನ ನಾಗರಿಕರು ಹಾಗೂ ಆಪ್ ಪಕ್ಷದ ಒತ್ತಾಯ ಏನಂದ್ರೆ ಸರ್ಕಾರ ಇದರ ಮಧ್ಯಪ್ರವೇಶ ಮಾಡಬೇಕು. ಈ ಶಾಲೆಯನ್ನು ಉಳಿಸಬೇಕು. ಸರ್ಕಾರವೇ ನವೀಕರಣ ಮಾಡಲಿ. ಬಡಮಕ್ಕಳಿಗೆ ಶಿಕ್ಷಣ ಸಿಗುವಂತಾಗಲಿ. ಕನ್ನಡ ಶಾಲೆ ಉಳಿಯಲಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಏಕಾಏಕಿ ಜೆಸಿಬಿ ತಂದು ಶಾಲೆಯ ಕಟ್ಟಡವನ್ನು ಧ್ವಂಸ ಮಾಡುತ್ತಿರುವ ವೇಳೆ ಆಮ್‌ ಆದ್ಮಿ ಪಾರ್ಟಿ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕೋಶ ವ್ಯಕ್ತಪಡಿಸಿದರು. ಅನೇಕ ಸ್ಥಳೀಯ ನಾಗರಿಕರು ಪ್ರತಿಭಟನೆಗೆ ಬೆಂಬಲ ನೀಡಿದರು.

ಚಿಕ್ಕಪೇಟೆ ಶಾಲಾ ಕಟ್ಟಡ ಉಳಿವಿಗೂ ಹೋರಾಟ:
ಸರ್ಕಾರಿ ಶಾಲೆಗಳ ಉಳಿವಿಗೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿರುವ ಆಮ್ ಆದ್ಮಿ ಪಕ್ಷ ಶಿವಾಜಿ ನಗರದ ಶಾಲೆ ಸೇರಿದಂತೆ ಚಿಕ್ಕಪೇಟೆಯ ಸರ್ಕಾರಿ ಶಾಲೆ ಕಟ್ಟಡವನ್ನು ಮಾರಾಟ ಮಾಡುವ ವಿರುದ್ಧವೂ ಪ್ರತಿಭಟನೆ ನಡೆಸಿತ್ತು. “ಆಡಳಿತ ಪಕ್ಷವು 40 % ಕಮೀಷನ್ ಭ್ರಷ್ಟಾಚಾರದ ಮುಂದುವರಿದ ಭಾಗವಾಗಿ 10 ಸಾವಿರ ಚದರ ಅಡಿ ಇರುವಂತಹ, ನೂರಾರು ಕೋಟಿ ಬೆಲೆಬಾಳುವ ಸರ್ಕಾರಿ ಶಾಲೆಯನ್ನು ಮಾರುವ ದುಸ್ಸಾಹಸಕ್ಕೆ ಕೈಹಾಕಿದ್ದರೂ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ ವಿರೋಧಿಸುತ್ತಿಲ್ಲ. ಸರ್ಕಾರಿ ಆಸ್ತಿಯನ್ನು ರಕ್ಷಿಸುವುದು ಶಾಸಕರ ಕರ್ತವ್ಯವಾಗಿದ್ದು, ಸ್ಥಳೀಯ ಕಾಂಗ್ರೆಸ್‌ ಶಾಸಕ ದಿನೇಶ್‌ ಗುಂಡೂರಾವ್‌ ಸುಮ್ಮನಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಾಲೆಯ ಮಾರಾಟದಲ್ಲಿ ಅವರ ಪಾತ್ರವೇನು ಎಂಬುದು ಜನರಿಗೆ ತಿಳಿಯಬೇಕು” ಎಂದು ಕೆ.ಮಥಾಯಿ ಎಂದು ಟೀಕಿಸಿದ್ದರು.
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ