ಆ್ಯಪ್ನಗರ

ಮೇಲಕ್ಕೇರದ ಮೇಲುರಸ್ತೆ ಕಾಮಗಾರಿ

Vijaya Karnataka 16 Jan 2019, 5:00 am
ಆರ್‌.ತುಳಸಿಕುಮಾರ್‌ ಬೆಂಗಳೂರು
Vijaya Karnataka Web rail


ಜಕ್ಕೂರು ರೈಲ್ವೆ ಮೇಲುರಸ್ತೆ ನಿರ್ಮಾಣದ ಕಾಮಗಾರಿ ನಾಲ್ಕು ವರ್ಷದಿಂದ ಸ್ಥಗಿತಗೊಂಡಿದ್ದು, ಈ ಭಾಗದ ಜನರು ದಿನವೂ ಸಮಸ್ಯೆಗಳ ಸರಮಾಲೆಯನ್ನೇ ಎದುರಿಸುತ್ತಿದ್ದಾರೆ.

ಯಲಹಂಕ-ಜಕ್ಕೂರು ಮಾರ್ಗವಾಗಿ ಶಿವಾಜಿನಗರ ತಲುಪುವ ಈ ರಸ್ತೆ ಸಂಪರ್ಕ ಮಾರ್ಗವಾಗಿಯೂ ಬಳಕೆಯಲ್ಲಿತ್ತು. ಜಕ್ಕೂರು ಗ್ರಾಮದ ಗಡಿಯಲ್ಲಿದ್ದ ರೈಲ್ವೆ ಗೇಟ್‌ನಿಂದ ಸಂಚಾರಕ್ಕೆ ತೊಂದರೆ ಆಗುವುದನ್ನು ತಪ್ಪಿಸಲು ರೈಲ್ವೆ ಮೇಲು ರಸ್ತೆ ನಿರ್ಮಿಸುವ ಯೋಜನೆ ರೂಪಿಸಲಾಯಿತು. 2014ರಲ್ಲಿ ಬಿಬಿಎಂಪಿ ಹಾಗೂ ರೈಲ್ವೆ ಇಲಾಖೆಯ ಜಂಟಿ ಸಹಯೋಗದಲ್ಲಿ ಕೈಗೆತ್ತಿಕೊಂಡಿದ್ದ ಯೋಜನೆಯು ಆರಂಭದಲ್ಲಿ ನಿರೀಕ್ಷೆಯಂತೆ ನಡೆಯಿತು. 750 ಮೀ. ಉದ್ದದ ಆರ್‌ಒಬಿಗೆ ಪಿಲ್ಲರ್‌ ಅಳವಡಿಸಿ ರಾರ‍ಯಂಪ್‌ ನಿರ್ಮಿಸುವ ವೇಳೆ ಜಕ್ಕೂರು ಗ್ರಾಮದತ್ತ ಸಾಗುವ ರಸ್ತೆ ಬದಿಯಿರುವ ಕಟ್ಟಡಗಳ ತೆರವಿಗೆ ಪರಿಹಾರ ನಿಗದಿ ತಗಾದೆಯ ರೂಪ ಪಡೆಯಿತು. ಇಲ್ಲಿನ ಜಾಗವನ್ನು ಸ್ವಾಧೀನಕ್ಕೆ ಪಡೆಯಲು ಯತ್ನಿಸಿದರೂ, ಅಧಿಕಾರಿಗಳ ಸಫಲರಾಗಲಿಲ್ಲ.

ಇನ್ನೊಂದೆಡೆ ರೈಲು ಸಂಚಾರದ ಮಧ್ಯೆ ಅಲ್ಪಸ್ವಲ್ಪ ಕಾಮಗಾರಿ ನಡೆದರೂ, ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ಮಾಡಲಿಲ್ಲ ಎಂಬ ಆಕ್ಷೇಪ ಸ್ಥಳೀಯರಿಂದ ವ್ಯಕ್ತವಾಯಿತು. ಇದಕ್ಕೆ ಸ್ಪಂದಿಸಿ ಸ್ಥಳೀಯ ಜನಪ್ರತಿನಿಧಿಗಳು ಹಲವು ಭಾರಿ ಭೇಟಿ ನೀಡಿ ಬಾಕಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದರೂ ಪ್ರಯೋಜನ ಆಗಿಲ್ಲ.

ರಸ್ತೆ ಬಂದ್‌ನಿಂದ ಸಂಚಾರಕ್ಕೆ ಸಂಚಕಾರ: ಯಲಹಂಕ-ಜಕ್ಕೂರು ರಸ್ತೆ ಈ ಭಾಗದ ಹಲವು ಗ್ರಾಮಗಳಿಗೆ ಸಂಪರ್ಕ ಮಾರ್ಗವೂ ಆಗಿದೆ. ಸರಿಸುಮಾರು ಹತ್ತಕ್ಕೂ ಹೆಚ್ಚು ಹಳ್ಳಿಗಳಿಗೆ ಈ ರಸ್ತೆ ಪ್ರಮುಖ ಕೊಂಡಿಯಾಗಿದೆ. ವಾಹನ ದಟ್ಟಣೆಗೆ ರೈಲ್ವೆ ಮೇಲು ರಸ್ತೆ ನಿರ್ಮಿಸುವ ವೇಳೆ ಪರ್ಯಾಯ ಮಾರ್ಗ ನಿರ್ಮಿಸದೆ ರೈಲ್ವೆ ಗೇಟ್‌ ಬಂದ್‌ ಮಾಡಲಾಯಿತು. ಆಗಿನಿಂದಲೂ ರಸ್ತೆ ಸಂಚಾರ ಜತೆಗೆ ಜನ ಕೂಡ ಓಡಾಡದಂತಾಗಿದೆ.

ಬಿಎಂಟಿಸಿ ಬಸ್‌ ಸಂಚಾರವೂ ಸ್ಥಗಿತಗೊಂಡ ಕಾರಣ ಜನರು ಬಳಸು ದಾರಿಯಲ್ಲಿ ಸಾಗುವಂತಾಗಿದೆ. ಯಲಹಂಕ-ಶಿವಾಜಿನಗರಕ್ಕೆ ನೇರ ಸಂಪರ್ಕ ಕಲ್ಪಿಸುತ್ತಿದ್ದ ಬಸ್‌ ಈಗ ಕೋಗಿಲು ಮಾರ್ಗವಾಗಿ ತೆರಳುತ್ತಿದೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಹಿತ ಎಲ್ಲರೂ ಸ್ವಂತ ವಾಹನದಲ್ಲಿ ತೆರಳುವುದು ಅನಿವಾರ್ಯವಾಗಿದೆ.

ಜಕ್ಕೂರಿನಿಂದ ತಾಲೂಕು ಕೇಂದ್ರ ಯಲಹಂಕ 3 ಕಿ.ಮೀ. ಅಂತರ ಇದ್ದರೂ, ಏಳೆಂಟು ಕಿ.ಮೀ. ಸುತ್ತಬಳಸಿ ಹೋಗಬೇಕಿದೆ. ಸಂತೆ, ಆಸ್ಪತ್ರೆಗೂ ಬೇರೆ ಹಾದಿ ಹಿಡಿಯಬೇಕಿದೆ. ''ಮಳೆಗಾಲದಲ್ಲಿ ಜಕ್ಕೂರು ಕೆರೆ ಕಡೆಯಿಂದ ಮಣ್ಣಿನ ರಸ್ತೆಯಲ್ಲಿ ಸಾಗದಷ್ಟು ಹದೆಗೆಟ್ಟಿದೆ. ಜನರು ತೀವ್ರ ಸಮಸ್ಯೆಗೆ ಒಳಗಾಗಿದ್ದರೂ, ಪಾಲಿಕೆ ಹಾಗೂ ರೈಲ್ವೆ ಅಧಿಕಾರಿಗಳು ಸಮನ್ವಯ ಸಾಧಿಸಿ ಪರಿಹಾರ ಹುಡುಕಬೇಕಿತ್ತು. ಆದರೆ, ಅವರು ನಿರ್ಲಕ್ಷ್ಯ ವಹಿಸಿದ್ದಾರೆ,'' ಎಂದು ಜಕ್ಕೂರಿನ ವಿಜಯ್‌ಕುಮಾರ್‌ ಆಕ್ಷೇಪಿಸಿದರು.

ವಿಳಂಬದಿಂದ ವೆಚ್ಚ ಏರಿಕೆ?: 2012ರಲ್ಲಿ ಯೋಜನೆ ಘೋಷಿಸಿದಾಗ ಒಟ್ಟು ವೆಚ್ಚ 24.75 ಕೋಟಿ ರೂ. ಆಗಿತ್ತು. ಈ ಪೈಕಿ ಬಿಬಿಎಂಪಿ 18.38 ಕೋಟಿ ರೂ. ಹಾಗೂ ರೈಲ್ವೆ ಇಲಾಖೆ 6.37 ಕೋಟಿ ರೂ. ವೆಚ್ಚ ಭರಿಸಲು ಒಪ್ಪಿತ್ತು. ಈಗ ನಾಲ್ಕೈದು ವರ್ಷದ ವಿಳಂಬದಿಂದಾಗಿ ಹೊಸ ದರದಂತೆ ಕಾಮಗಾರಿ ನಡೆಯಬೇಕಿದೆ. ಜತೆಗೆ ಭೂಸ್ವಾಧೀನ ವೆಚ್ಚವೂ ಏರಿಕೆಯಾಗಲಿದೆ.

ಫಲ ನೀಡದ ಸಚಿವರ ಭೇಟಿ: ಕಾಮಗಾರಿ ಸ್ಥಗಿತದ ಮಾಹಿತಿಯನ್ನು ಸ್ಥಳೀಯ ಸಂಸದ ಹಾಗೂ ಶಾಸಕರ ಗಮನಕ್ಕೆ ತಂದ ಬಳಿಕ ಇಬ್ಬರೂ ಸ್ಥಳ ಪರಿಶೀಲನೆ ಮಾಡಿ ವಾಪಸಾಗಿದ್ದಾರೆ. ಪಾಲಿಕೆ ಹಾಗೂ ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರೂ, ಕಾಮಗಾರಿ ಮಾತ್ರ ಪುನಾರಂಭವಾಗಿಲ್ಲ. ಹೀಗಾಗಿ ಸಂಸದರೂ ಆದ ಕೇಂದ್ರ ಸಚಿವ ಸದಾನಂದಗೌಡ, ಶಾಸಕರೂ ಆದ ಸಚಿವ ಕೃಷ್ಣಬೈರೇಗೌಡ ಪ್ರಯತ್ನ ಫಲ ನೀಡಿಲ್ಲ.

ರೈಲ್ವೆ ಮೇಲು ರಸ್ತೆ ಕಾಮಗಾರಿ ಸ್ಥಗಿತದಿಂದ ಜನರಿಗೆ ತೊಂದರೆ ಆಗಿರುವುದು ನಿಜ. ಇದೀಗ ಪಾಲಿಕೆಯು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿರುವುದರಿಂದ ಕಾಮಗಾರಿ ಶೀಘ್ರ ಆರಂಭವಾಗುವ ಸಾಧ್ಯತೆ ಇದೆ.
- ಮುನೀಂದ್ರಕುಮಾರ್‌, ಬಿಬಿಎಂಪಿ ಸದಸ್ಯ(ಜಕ್ಕೂರು ವಾರ್ಡ್‌)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ