ಆ್ಯಪ್ನಗರ

ಗುರು ರಾಘವೇಂದ್ರ ಬ್ಯಾಂಕ್‌ನಿಂದ ಹಣ ಡ್ರಾ ಮಾಡದಂತೆ ಆರ್‌ಬಿಐ ನಿರ್ಬಂಧ, ಕಣ್ಣೀರಿಟ್ಟ ಠೇವಣಿದಾರರು

ಗುರು ರಾಘವೇಂದ್ರ ಕೋ-ಆಪರೇಟೀವ್‌ ಬ್ಯಾಂಕ್‌ ನಿಂದ ಹಣ ಡ್ರಾ ಮಾಡದಂತೆ ಆರ್‌ಬಿಐ ನಿರ್ಬಂಧ ಹೇರಿದ್ದು, ಠೇವಣಿದಾರರು ಬ್ಯಾಂಕ್ ಮುಂದೆ ಜಮಾಯಿಸಿ ಕಣ್ಣೀರು ಹಾಕಿದ್ದಾರೆ. ನಗರದಲ್ಲಿ ಇದರ ಆರು ಬ್ಯಾಂಕ್‌ ಶಾಖೆಗಳಿದ್ದು, ಸುಮಾರು 2400 ಕೋಟಿ ವಹಿವಾಟು ನಡೆಯುತ್ತದೆ.

Vijaya Karnataka Web 12 Jan 2020, 12:12 pm
ಬೆಂಗಳೂರು: ಗುರು ರಾಘವೇಂದ್ರ ಕೋ-ಆಪರೇಟೀವ್‌ ಬ್ಯಾಂಕ್‌ ಠೇವಣಿದಾರರು ಮತ್ತು ಷೇರುದಾರರ ಕುಟುಂಬಗಳಿಗೆ ಶನಿವಾರ ಬೆಳಗ್ಗೆ ಆಘಾತ ಕಾದಿತ್ತು. ಈ ಬ್ಯಾಂಕಿನ ಖಾತೆದಾರರು ತಮ್ಮ ಹಣವನ್ನು ಖಾತೆಯಿಂದ ತೆಗೆಯುವ ವಿಚಾರದಲ್ಲಿ ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ ನಿರ್ಬಂಧ ಹೇರಿದೆ ಎನ್ನುವ ಸಂಗತಿ ಬರಸಿಡಿಲಿನಂತೆ ಅಪ್ಪಳಿಸಿ ಬ್ಯಾಂಕ್‌ ಮುಂದೆ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
Vijaya Karnataka Web rbi has imposed restrictions on withdrawals for bengaluru city based co operative bank sri guru raghavendra sahakara bank
ಗುರು ರಾಘವೇಂದ್ರ ಬ್ಯಾಂಕ್‌ನಿಂದ ಹಣ ಡ್ರಾ ಮಾಡದಂತೆ ಆರ್‌ಬಿಐ ನಿರ್ಬಂಧ, ಕಣ್ಣೀರಿಟ್ಟ ಠೇವಣಿದಾರರು


ಆರ್‌ಬಿಐ ಹೇರಿರುವ ನಿರ್ಬಂಧದ ಮೆಸ್ಸೇಜ್‌ ತಮ್ಮ ಮೊಬೈಲ್‌ಗಳಿಗೆ ಬರುತ್ತಿದ್ದಂತೆ ಠೇವಣಿದಾರರು ಮತ್ತು ಕುಟುಂಬದವರು ಬಸವನಗುಡಿಯ ನೆಟ್‌ಕಲ್ಲಪ್ಪ ವೃತ್ತದಲ್ಲಿರುವ ಬ್ಯಾಂಕ್‌ನ ಕೇಂದ್ರ ಕಚೇರಿ ಮುಂದೆ ಜಮಾಯಿಸಿ ಆತಂಕ ವ್ಯಕ್ತಪಡಿಸಿದರು. ಬ್ಯಾಂಕ್‌ ಗೋಡೆ ಮೇಲೆ ಆರ್‌ಬಿಐ ನೀಡಿರುವ ನೋಟಿಸ್‌ ಅಂಟಿಸಿದ್ದು ನೋಡಿ ಇನ್ನಷ್ಟು ಗಾಬರಿ ಬಿದ್ದು ಕಣ್ಣೀರು ಹಾಕುತ್ತಿದ್ದರು. ಬಹಳಷ್ಟು ಮಂದಿ ತಮ್ಮ ಮೇಲೆ ನಿಯಂತ್ರಣ ಕಳೆದುಕೊಂಡು ಬ್ಯಾಂಕ್‌ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ವಿರುದ್ಧ ಕಿರುಚುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್‌ ಮುಂದೆ ನೆರೆದಿದ್ದ 500 ಕ್ಕೂ ಅಧಿಕ ಮಂದಿಯಲ್ಲಿ ಹೆಚ್ಚಿನವರು 60 ವರ್ಷ ದಾಟಿದ ಹಿರಿಯ ನಾಗರಿಕರೇ ಇದ್ದರು. ಇವರ ಜತೆ ಬಂದಿದ್ದ ಮಕ್ಕಳು ಮತ್ತು ಮೊಮ್ಮಕ್ಕಳು ಸಮಾಧಾನ ಮಾಡಲು ಯತ್ನಿಸುತ್ತಿದ್ದರೂ 'ಮುಂದೇನು ?' ಎನ್ನುವ ಆತಂಕ ಮತ್ತು ಉತ್ತರವಿಲ್ಲದ ಪ್ರಶ್ನೆ ಅವರನ್ನು ಕಾಡುತ್ತಿತ್ತು.

ಆರು ಶಾಖೆಗಳು, ಸಾವಿರಾರು ಠೇವಣಿದಾರರು
ಸುಮಾರು 2400 ಕೋಟಿ ವಹಿವಾಟಿನ ಜತೆಗೆ ಆರು ಶಾಖೆಗಳನ್ನು ಹೊಂದಿರುವ ಬ್ಯಾಂಕ್‌ನಲ್ಲಿ ಸಾವಿರಾರು ಮಂದಿ ಠೇವಣಿದಾರರು ಇದ್ದಾರೆ. ಇತ್ತೀಚಿಗೆ ಪರಿಚಯಿಸಿದ ಹೊಸ ಹೊಸ ಸ್ಕೀಂಗಳ ಕಾರಣದಿಂದ ಸಾವಿರಾರು ಮಂದಿ ಕಳೆದ ಕೆಲವು ತಿಂಗಳುಗಳಲ್ಲೇ ಬ್ಯಾಂಕ್‌ನ ಸದಸ್ಯರಾಗಿದ್ದಾರೆ. ಸದ್ಯದಲ್ಲೇ ಬ್ಯಾಂಕ್‌ ಕರ್ನಾಟಕದಲ್ಲೇ ನಂಬರ್‌ ಒನ್‌ ಸ್ಥಾನ ಪಡೆಯುತ್ತದೆ ಅನ್ನುವ ಆಡಳಿತ ಮಂಡಳಿ ಸದಸ್ಯರ ಮಾತುಗಳನ್ನು ಕೇಳಿ ಖುಷಿ ಪಟ್ಟಿದ್ದವರೆಲ್ಲಾ ಬ್ಯಾಂಕ್‌ ಎದುರು ದಾರಿ ಕಾಣದವರಂತೆ ನಿಂತು ಗೋಳಾಡುತ್ತಿದ್ದರು. ಗ್ರಾಹಕರು ಅಧ್ಯಕ್ಷರ ಕಚೇರಿಗೆ ನುಗ್ಗುವ ಪ್ರಯತ್ನ ಮಾಡುತ್ತಿದ್ದರಾದರೂ ಆಡಳಿತ ಮಂಡಳಿಯವರಲ್ಲದ ಕೆಲವರು ಎಲ್ಲರನ್ನೂ ತಡೆದು ನಿಲ್ಲಿಸಿ ಸಮಾಧಾನ ಮಾಡಲು ಹರ ಸಾಹಸಪಡುತ್ತಿದ್ದರು.

ಬ್ಯಾಂಕಿನ ಅಧ್ಯಕ್ಷರು ಬ್ಯಾಂಕಿನಲ್ಲೇ ಕುಳಿತಿದ್ದರೆ, ಠೇವಣಿದಾರರು ಮತ್ತು ಷೇರುದಾರರು ಮಾತ್ರ ಬೀದಿಯಲ್ಲೇ ನಿಂತು ಮಾಧ್ಯಮಗಳ ಎದುರು ಗೋಳು ತೋಡಿಕೊಳ್ಳುತ್ತಿದ್ದರು. ಎಲ್ಲರೂ ಮಾಧ್ಯಮಗಳ ಜತೆ ತಮ್ಮ ಸಂಕಟ ಹಂಚಿಕೊಳ್ಳಲು ಶುರು ಮಾಡಿದ ಬಳಿಕ ಅಧ್ಯಕ್ಷರು ಕೆಳಗಿಳಿದು ಬಂದು 50 ಮಂದಿ ಠೇವಣಿದಾರರನ್ನು ಮಾತ್ರ ಪ್ರತ್ಯೇಕವಾಗಿ ಕರೆದು ಸಭೆ ನಡೆಸಲು ಮುಂದಾದರು. ಇದಕ್ಕೂ ಠೇವಣಿದಾರರ ಆಕ್ರೋಶ ವ್ಯಕ್ತವಾಗಿ,''ಕೇವಲ 50 ಮಂದಿಗೆ ಏನು ಹೇಳ್ತೀರಿ, ಎಲ್ಲಾ ಠೇವಣಿದಾರರಿಗೂ ಉತ್ತರ ಕೊಡಿ. ಈ ಬ್ಯಾಂಕ್‌ಗೆ ಈ ಸ್ಥಿತಿ ಬಂದಿದ್ದು ಏಕೆ ? ನಮ್ಮ ಹಣದ ಗತಿ ಏನು ? ಯಾವಾಗ ವಾಪಾಸ್‌ ಪಡೆಯಬಹುದು?'' ಎನ್ನುವ ಪ್ರಶ್ನೆಗಳನ್ನು ಕೇಳುತ್ತಾ ಆತಂಕ ವ್ಯಕ್ತಪಡಿಸಿದರು. ಶನಿವಾರ ಸಂಜೆಯವರೆಗೂ ಇದೇ ಸ್ಥಿತಿ ಇತ್ತು.


ಮಗ ತಾನು ಉಳಿತಾಯ ಮಾಡಿದ ಹಣವನ್ನೆಲ್ಲಾನನಗೆ ತಂದು ಕೊಟ್ಟ. ನಾನು ನನ್ನ ನಿವೃತ್ತಿ ಬದುಕಿಗಾಗಿ ಅದನ್ನೆಲ್ಲಾ ತಂದು ಇಲ್ಲಿ ಠೇವಣಿ ಇಟ್ಟೆ. ಈಗ ಆ ಹಣದ ಕತೆ ಏನಾಗುತ್ತೋ ಗೊತ್ತಿಲ್ಲ. ಯಾರೂ ಸರಿಯಾಗಿ ಉತ್ತರ ಕೊಡ್ತಾ ಇಲ್ಲ. ಈ ಬಡ್ಡಿ ಹಣದಲ್ಲೇ ನಾನು ಊಟ ಮಾಡ್ಬೇಕು. ಬ್ಯಾಂಕ್‌ ಮತ್ತು ಆರ್‌ಬಿಐನವರು ಏನಾದರೂ ಮಾಡಿಕೊಳ್ಳಿ. ಮೊದಲು ಹಿರಿಯ ನಾಗರೀಕರ ಠೇವಣಿ ಹಣ ವಾಪಸ್‌ ಕೊಟ್ಟು ಬಿಡಲಿ.
-ಗುರುರಾಜರಾವ್‌ , ತ್ಯಾಗರಾಜನಗರ



ನಾನು 17 ಲಕ್ಷ ಠೇವಣಿ ಇಟ್ಟಿದೀನಿ. 6 ತಿಂಗಳವರೆಗೂ ನಾವು ಏನೂ ಹೇಳೋಕೆ ಆಗಲ್ಲ ಎಂದು ಈಗ ಬ್ಯಾಂಕ್‌ನವರು ಹೇಳುತ್ತಿದ್ದಾರೆ. ಎಲ್ಲಾ ಹೇಳ್ತಾ ಇದ್ರು 2020 ರಲ್ಲಿ ಬ್ಯಾಂಕ್‌ಗಳು ಉಳಿಯೋದಿಲ್ಲ ಬೇಗ ಠೇವಣಿ ವಾಪಸ್‌ ತಗೋಬೇಕು ಅಂತ. ನಾನೂ ಆ ಬಗ್ಗೆ ಯೋಚನೆ ಮಾಡ್ತಾನೇ ಇದ್ದೆ. ಅಷ್ಟರಲ್ಲಿ ಹೀಗಾಗಿದೆ.
-ನಾರಾಯಣ, ಬಸವೇಶ್ವರನಗರ


ನನ್ನ ನಿವೃತ್ತಿ ಜೀವನದ ಕೊನೇ ಹಣ ಇದು. 98 ಸಾವಿರ ರೂಪಾಯಿ ಈ ಬ್ಯಾಂಕಲ್ಲಿ ಇದೆ. ಇದಕ್ಕೆ ಬರುವ ಬಡ್ಡಿಯಲ್ಲಿ ನಾನು ಬದುಕಿದ್ದೇನೆ. ಈ ಹಣ ಹೋದ್ರೆ ನನಗೆ ತುಂಬ ಕಷ್ಟ ಆಗತ್ತೆ. ಬ್ಯಾಂಕ್‌ನವರು ಬೇಗ ಒಂದು ತೀರ್ಮಾನ ಮಾಡಿ ನಮ್ಮ ಹಣ ವಾಪಸ್‌ ಪಡೆಯಲು ಅವಕಾಶ ಮಾಡಿಕೊಡಬೇಕು.
-ಹೆಚ್‌.ಎಸ್‌.ಸುರೇಂದ್ರ, ಶ್ರೀನಗರ


ನನಗೆ ಹೃದಯ ಸಮಸ್ಯೆ ಇದೆ. ಮಗಳ ಮದುವೆ ಮತ್ತು ತಿಂಗಳ ಜೀವನಕ್ಕಾಗಿ ಉಳಿತಾಯದ ಎಲ್ಲ ಹಣವನ್ನು ತಂದು ಇಲ್ಲಿ ಠೇವಣಿ ಇಟ್ಟಿದ್ದೀನಿ. ನಮ್ಮ ಹಣ ನಾವು ವಾಪಸ್‌ ತೆಗೆಯಲು ಅವಕಾಶ ಇಲ್ಲ ಎಂದರೆ ನಮ್ಮಂಥವರು ಏನು ಮಾಡಬೇಕು? ನಮ್ಮದು ಕಪ್ಪು ಹಣ ಅಲ್ಲಾ ಸ್ವಾಮಿ. ಜೀವನ ಪರ್ಯಂತ ದುಡಿದು ನಿವೃತ್ತಿ ಬದುಕಿಗಾಗಿ ಇಲ್ಲಿ ಠೇವಣಿ ಮಾಡಿದ್ದೀನಿ.
-ಬದರೀನಾಥ್‌

ನನ್ನ ದಿನದ ಊಟ ಬ್ಯಾಂಕ್‌ನಲ್ಲಿ ಇಟ್ಟಿರುವ ಠೇವಣಿ ಹಣದಿಂದಲೇ ನಡೆಯಬೇಕು. ಸೋಮವಾರದವರೆಗೂ ಸಮಾಧಾನದಿಂದ ಕಾಯ್ತೀನಿ. ಅಂದು ಬ್ಯಾಂಕ್‌ ತೆರೆಯಬೇಕು. ನಮ್ಮ ಹಣ ನಮಗೆ ವಾಪಸ್‌ ಕೊಡಬೇಕು. ಇಲ್ಲದಿದ್ದರೆ ಹೋರಾಟ ಮಾಡ್ತೀನಿ. ಬ್ಯಾಂಕ್‌ ಮುಂದೆ ಉಪವಾಸ ಕೂರ್ತೀನಿ.
-ಪದ್ಮಜಾರಾವ್‌, ಠೇವಣಿದಾರರು



ಆರ್‌ಬಿಐ ನೀಡಿರುವ ಪ್ರಕಟಣೆ ಬಗ್ಗೆ ಹಲವು ಸ್ಪಷ್ಟೀಕರಣ ಪಡೆಯುವ ಅಗತ್ಯವಿದೆ. ಸೋಮವಾರ ಬ್ಯಾಂಕಿನ ಉನ್ನತ ಅಧಿಕಾರಿಗಳು ಆರ್‌ಬಿಐ ಜತೆ ಸಂಪರ್ಕ ಸಾಧಿಸಿ ಸ್ಪಷ್ಟನೆ ಪಡೆಯಲಿದ್ದಾರೆ. ಬಳಿಕ ಬ್ಯಾಂಕಿನ ಠೇವಣಿದಾರರಿಗೆ ತಿಳಿಸಲಾಗುವುದು. ಈ ಬಗ್ಗೆ ಠೇವಣಿದಾರರಾಗಲೀ, ಸದಸ್ಯರಾಗಲೀ ಯಾವುದೇ ಆತಂಕಪಡುವ ಅಗತ್ಯವಿಲ್ಲ.
-ಮುಖ್ಯ ಸಲಹೆಗಾರರು, ಗುರುರಾಘವೇಂದ್ರ ಸಹಕಾರ ಬ್ಯಾಂಕ್‌


ಕೃಷ್ಣ ಸಂಧಾನ:
ಠೇವಣಿದಾರರು ಬ್ಯಾಂಕ್‌ ಮುಂದೆ ಜಮಾಯಿಸಿ ಎದೆಬಡಿದುಕೊಂಡು ಸಂಕಟ ತೋಡಿಕೊಳ್ಳುತ್ತಿದ್ದರು. ಇವರನ್ನೆಲ್ಲಾ ಬ್ಯಾಂಕ್‌ ಪರವಾಗಿ ಸಮಾಧಾನ ಮಾಡಲು ಸಮುದಾಯದ ಮುಖಂಡ ಕೃಷ್ಣ ಅವರು ಶ್ರಮಿಸುತ್ತಿದ್ದರು. '' ದೇಶದ ಆರ್ಥಿಕ ಸ್ಥಿತಿ ನಿಮಗೇ ಚೆನ್ನಾಗಿ ಗೊತ್ತು. 2016 ಕ್ಕಿಂತ ಮುಂಚಿನ ಸ್ಥಿತಿ ಈಗಿಲ್ಲ. ಎಲ್ಲರೂ ಠೇವಣಿ ಕೇಳಿದರೆ ಕಷ್ಟ ಆಗುತ್ತದೆ. ಯಾರ ಹಣಕ್ಕೂ ಮೋಸ ಆಗುವುದಿಲ್ಲ. 40 ವರ್ಷ ಚೆನ್ನಾಗಿ ಬದುಕಿದವರಿಗೂ ಹೃದಯಾಘಾತ ಆಗುತ್ತದೆ. ಹೃದಯಾಘಾತ ಆದವರನ್ನು ಆಸ್ಪತ್ರೆಗೆ ಸೇರಿಸಿದರೆ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳಲು ಸಮಯ ಬೇಕು. ಬ್ಯಾಂಕ್‌ ಸ್ಥಿತಿ ಕೂಡ ಹಾಗೇ ಇದೆ. ಸ್ವಲ್ಪ ದಿನ ಸಮಯ ಕೊಡಿ ಎಲ್ಲವೂ ಸರಿಹೋಗುತ್ತದೆ'' ಎಂದು ಸಮಾಧಾನ ಮಾಡುತ್ತಿದ್ದರು. ಈ ವೇಳೆ ಠೇವಣಿದಾರರು ''ಬ್ಯಾಂಕಿನ ಅಧ್ಯಕ್ಷರು ಬಂದು ಮಾತಾಡಲಿ. ನಮಗೆ ಭರವಸೆ ನೀಡಲಿ'' ಎಂದು ಕೂಗಿದರು.


ಬ್ಯಾಂಕಿನಿಂದ ಬಂದ ಸಂದೇಶ
ಬ್ಯಾಂಕ್‌ನಿಂದ ಸಾಲ ಪಡೆದವರ ಖಾತೆಯಲ್ಲಿ ಆರ್‌ಬಿಐ ಕೆಲವೊಂದು ಲೋಪಗಳನ್ನು ಗುರುತಿಸಿದೆ. ಈ ಕಾರಣದಿಂದ ಪ್ರತೀ ಖಾತೆಯಿಂದ ಕೇವಲ 35 ಸಾವಿರ ರೂ ಮಾತ್ರ ಡ್ರಾ ಮಾಡಲು ಆರ್‌ಬಿಐ ಅವಕಾಶ ನೀಡಿದೆ. ಠೇವಣಿದಾರರು ಮತ್ತು ಶೇರುದಾರರು ಆತಂಕಗೊಳ್ಳುವ ಅಗತ್ಯವಿಲ್ಲ. ಠೇವಣಿದಾರರ ಹಣ ಸುರಕ್ಷಿತವಾಗಿದೆ. ಸದ್ಯದಲ್ಲೇ ಠೇವಣಿದಾರರ ಮತ್ತು ಷೇರುದಾರರ ಸಭೆ ಕರೆಯಲಾಗುವುದು . (ಖಾತೆದಾರರಿಗೆ ಬಂದ ಬ್ಯಾಂಕ್‌ ಸಂದೇಶ)
-ಅಧ್ಯಕ್ಷರು ಮತ್ತು ಆಡಳಿತ ಮಂಡಳಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ