ಆ್ಯಪ್ನಗರ

ಬೆಂಗಳೂರಿನ ಮತ್ತೊಂದು ಮೆಟ್ರೊ ಕಂಬದಲ್ಲಿ ದೋಷ: ದುರಸ್ತಿ ಕಾರ್ಯ

ಬೆಂಗಳೂರು ಮೆಟ್ರೋದ ಬೈಯಪ್ಪನಹಳ್ಳಿ - ಎಂ.ಜಿ. ರಸ್ತೆ ಮಾರ್ಗದಲ್ಲಿ ಇತ್ತೀಚೆಗೆ ದೋಷಗಳು ಹೆಚ್ಚಾಗುತ್ತಿದೆ. ಈಗ ಎಂ.ಜಿ.ರಸ್ತೆಯ ಮೆಟ್ರೊ ಕಂಬದ ಬೇರಿಂಗ್ ಹಾಳಾಗಿದ್ದು, ರಾತ್ರೋರಾತ್ರಿ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಇಂದಿರಾ ನಗರ, ಟ್ರಿನಿಟಿ ನಿಲ್ದಾಣಗಳ ಬಳಿಕ ಈಗ ಎಂ.ಜಿ.ರಸ್ತೆಯಲ್ಲೂ ಇದೇ ರೀತಿ ತೊಂದರೆ ಕಾಣಿಸಿಕೊಂಡಿದೆ.

Vijaya Karnataka 16 Sep 2019, 8:41 am
ಬೆಂಗಳೂರು: ಎಂ.ಜಿ.ರಸ್ತೆಯ ಮೆಟ್ರೊ ಮಾರ್ಗದ ಕಂಬದ ಬೇರಿಂಗ್‌ನಲ್ಲಿ ದೋಷ ಕಂಡು ಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದುರಸ್ತಿ ಕೈಗೊಳ್ಳಲಾಗಿದೆ. ಆದರೆ, ಇದಕ್ಕಾಗಿ ರೈಲು ಸಂಚಾರ ಸ್ಥಗಿತಗೊಳಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Vijaya Karnataka Web metro work mg road


ಇತ್ತೀಚೆಗೆ ಪರಿಶೀಲನೆ ಕೈಗೊಂಡಾಗ ಎಂ.ಜಿ.ರಸ್ತೆಯ ಮೆಯೋ ಹಾಲ್‌ ಬಳಿಯ 174 ಸಂಖ್ಯೆಯ ಕಂಬದಲ್ಲಿ ದೋಷ ಕಂಡು ಬಂದಿತ್ತು. ಇಂದಿರಾನಗರ ನಿಲ್ದಾಣ, ಟ್ರಿನಿಟಿ ನಿಲ್ದಾಣಗಳಲ್ಲಿನ ಕಂಬದಂತೆಯೇ ಈ ಕಂಬದಲ್ಲೂ ಬೇರಿಂಗ್‌ ಹಾಳಾಗಿದೆ. ಇದನ್ನು ಬದಲಿಸಲು ಕಂಬಕ್ಕೆ ಕಬ್ಬಿಣದ ಆಧಾರ ಒದಗಿಸಲಾಗಿದೆ. ಕಳೆದೆರಡು ದಿನಗಳಿಂದ ರಾತ್ರಿಯ ಸಮಯದಲ್ಲಿ ಕಾಮಗಾರಿ ನಡೆಸಲಾಗಿದೆ.

ಬೈಯ್ಯಪ್ಪನಹಳ್ಳಿ-ಎಂ.ಜಿ.ರಸ್ತೆ ಮಾರ್ಗದಲ್ಲಿ 2011ರಲ್ಲಿ ರೈಲು ಕಾರ್ಯಾಚರಣೆ ಆರಂಭವಾಗಿತ್ತು. ಹಳೆ ಮಾರ್ಗವಾಗಿರುವುದರಿಂದ ಇದರಲ್ಲಿ ಪದೇ ಪದೆ ದೋಷ ಕಂಡು ಬರುತ್ತಿದೆ. ಕಳೆದ ವರ್ಷ ಟ್ರಿನಿಟಿ ನಿಲ್ದಾಣದ ಕಂಬದ ವಯಾಡಕ್‌ನ ಬೇರಿಂಗ್‌ ಹಾಳಾದಾಗ ದೊಡ್ಡ ಮಟ್ಟದ ಕಾಮಗಾರಿ ನಡೆಸಬೇಕಾಯಿತು. ಇದರಿಂದ ರೈಲು ಕಾರ್ಯಾಚರಣೆಯನ್ನೂ ಸ್ಥಗಿತಗೊಳಿಸಬೇಕಾಯಿತು. ಇತ್ತೀಚೆಗೆ ಇಂದಿರಾನಗರ ನಿಲ್ದಾಣದ ಕಂಬದಲ್ಲಿಸಮಸ್ಯೆ ಕಾಣಿಸಿಕೊಂಡಾಗಲೂ ಇದೇ ರೀತಿಯ ಸಮಸ್ಯೆಯಾಗಿತ್ತು. ಈಗ ಮತ್ತೆ ಸಮಸ್ಯೆ ಕಂಡು ಬಂದಿದೆ. ಈ ಬಾರಿಯೂ ಬೇರಿಂಗ್‌ ಹಾಳಾಗಿದೆ. ಇದು ಹಳೆ ಮಾರ್ಗವಾಗಿರುವುದರಿಂದ ಈ ರೀತಿಯ ಸಮಸ್ಯೆ ಸಹಜ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಿಎಂಗೆ ದೂರು

ಈ ನಡುವೆ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ದೂರು ನೀಡಲು ಬಿಎಂಆರ್‌ಸಿಎಲ್‌ ನೌಕರರ ಸಂಘ ತೀರ್ಮಾನಿಸಿದೆ.

''ಬೈಯ್ಯಪ್ಪನಹಳ್ಳಿ-ಎಂ.ಜಿ.ರಸ್ತೆ ಮಾರ್ಗದ ಅನೇಕ ಕಂಬಗಳಲ್ಲಿ ಈ ರೀತಿಯ ಸಮಸ್ಯೆ ಇದೆ. ಈಗ ಅಧಿಕಾರಿಗಳು ಎಲ್ಲ ಕಂಬಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಬಿಎಂಆರ್‌ಸಿಎಲ್‌ ತನ್ನ ಖರ್ಚಿನಲ್ಲಿ ದುರಸ್ತಿ ಕಾರ್ಯ ನಡೆಸುತ್ತಿದೆ. ಇದರಿಂದಾಗಿ ಸಾರ್ವಜನಿಕರ ಹಣ ಪೋಲಾಗುತ್ತಿದೆ. ಹಿರಿಯ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ, ಮುಖ್ಯಮಂತ್ರಿ ಕಚೇರಿ ಹಾಗೂ ಪ್ರಧಾನಮಂತ್ರಿ ಕಚೇರಿಗೆ ಈ ಕುರಿತು ದೂರು ನೀಡಲಾಗುವುದು,'' ಎಂದು ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ