ಆ್ಯಪ್ನಗರ

ನಿಫಾ ನಿಯಂತ್ರಣಕ್ಕೆ ಅಗತ್ಯ ಕ್ರಮ: ಜಿಲ್ಲಾಧಿಕಾರಿ

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ನಿಫಾ ಸೋಂಕು ಹರಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ವೈರಸ್‌ ಕುರಿತು ಜನರಲ್ಲಿ ಅರಿವು ಮೂಡಿಸುವಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ತಿಳಿಸಿದರು.

Vijaya Karnataka 25 May 2018, 5:00 am
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ನಿಫಾ ಸೋಂಕು ಹರಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ವೈರಸ್‌ ಕುರಿತು ಜನರಲ್ಲಿ ಅರಿವು ಮೂಡಿಸುವಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ತಿಳಿಸಿದರು.
Vijaya Karnataka Web required for nifa control deputy commissioner
ನಿಫಾ ನಿಯಂತ್ರಣಕ್ಕೆ ಅಗತ್ಯ ಕ್ರಮ: ಜಿಲ್ಲಾಧಿಕಾರಿ


ನಗರದ ಕಂದಾಯ ಭವನದಲ್ಲಿ ಗುರುವಾರ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ, ಪ್ರಜ್ಞಾಹೀನತೆಯು ನಿಫಾ ವೈರಸ್‌ನ ಲಕ್ಷಣಗಳಾಗಿವೆ. ಸಾರ್ವಜನಿಕರು ಇಂಥ ಲಕ್ಷಣ ಕಂಡುಬಂದಾಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಈ ರೀತಿಯ ಪ್ರಕರಣಗಳು ಪತ್ತೆಯಾದ ಕೂಡಲೇ ವರದಿ ನೀಡುವಂತೆ ಆಸ್ಪತ್ರೆಗಳಿಗೆ ಆದೇಶಿಸಲಾಗಿದೆ,'' ಎಂದು ಹೇಳಿದರು.

''ಕೋಳಿ, ಹಂದಿ ಸಾಕಾಣಿಕೆ ಕೇಂದ್ರಗಳ ನಿಗಾ ವಹಿಸುವಂತೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಗೆಯೇ, ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯು ಯಾವುದೇ ರೀತಿಯ ಗಾಯ ಅಥವಾ ಸೋಂಕಿಗೆ ಒಳಗಾಗಿದ್ದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಬಾವಲಿಗಳು ಹೆಚ್ಚಿರುವ ಪ್ರದೇಶಗಳಲ್ಲಿ ತೆರೆದ ಬಾವಿಯ ನೀರನ್ನು ಶುದ್ಧೀಕರಿಸಿ ಕುಡಿಯಬೇಕು. ಬಾವಿಗಳನ್ನು ಬಲೆಗಳಿಂದ ಮುಚ್ಚಿ, ಬಾವಲಿಗಳು ಒಳ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು,'' ಎಂದು ತಿಳಿಸಿದರು.

ಗಸಗಸೆ ಹಣ್ಣು ಸೇವಿಸಬೇಡಿ

''ಶಾಲೆಗಳ ಆವರಣದಲ್ಲಿ ಚೆರ್ರಿ (ಗಸಗಸೆ ಹಣ್ಣು ಎಂದೂ ಕರೆಯಲಾಗುತ್ತದೆ ) ಹಣ್ಣಿನ ಮರಗಳಿರುತ್ತವೆ. ಇಂಥ ಮರಗಳಲ್ಲಿ ಬಾವಲಿಗಳು ವಾಸಿಸುತ್ತವೆ. ಹೀಗಾಗಿ, ಮಕ್ಕಳು ಚೆರ್ರಿ ಹಣ್ಣುಗಳನ್ನು ತಿನ್ನುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ. ಯಾವುದೇ ಪ್ರಾಣಿ, ಪಕ್ಷಿಗಳು ಕಚ್ಚಿದ ಹಾಗೂ ಮಳೆ-ಗಾಳಿಯಿಂದ ಬಿದ್ದ ಹಣ್ಣುಗಳನ್ನು ಸೇವಿಸಬಾರದು. ಕೇರಳ ಪ್ರವಾಸಕ್ಕೆ ತೆರಳುವವರು, ಅಲ್ಲಿಂದ ನಗರಕ್ಕೆ ಆಗಮಿಸುವವರ ಮೇಲೆ ನಿಗಾ ಇಡುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ,'' ಎಂದರು.

''ರಾಜ್ಯದಿಂದ ಕೇರಳಕ್ಕೆ ನಿತ್ಯ 1800 ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯಾಚರಣೆಗೊಳ್ಳುತ್ತಿದ್ದು, ಆ ವಾಹನಗಳಲ್ಲಿ ಕಾರ್ಯ ನಿರ್ವಹಿಸುವ ಚಾಲಕ-ನಿರ್ವಾಹಕರು ಅನಾರೋಗ್ಯದ ನಿಮಿತ್ತ ರಜೆ ಕೋರಿದರೆ ತಕ್ಷಣ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೇ ನಿಫಾ ವೈರಸ್‌ ಹರಡುವಿಕೆ ತಡೆಗೆ ಜನರಲ್ಲಿ ಅರಿವು ಮೂಡಿಸಲು ಭಿತ್ತಿಪತ್ರಗಳನ್ನು ಅಂಟಿಸುವಂತೆ ತಿಳಿಸಲಾಗಿದೆ,'' ಎಂದು ವಿವರಿಸಿದರು.

ನಿಫಾ ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ಕೊಠಡಿ

ಜಿಲ್ಲಾ ಆರೋಗ್ಯಾಧಿಕಾರಿ ಎನ್‌.ರಮೇಶ್‌ಬಾಬು ಮಾತನಾಡಿ ''100 ಹಾಸಿಗೆ ಸಾಮರ್ಥ್ಯ‌ವುಳ್ಳ ಆಸ್ಪತ್ರೆಗಳಲ್ಲಿ ನಿಫಾ ಸೋಂಕಿತರ ಚಿಕಿತ್ಸೆಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವವರು ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ನಿರ್ದೇಶನ ನೀಡಲಾಗಿದೆ. ಸೋಂಕಿನ ಲಕ್ಷಣಗಳು ಕಂಡುಬಂದಾಕ್ಷಣ ಚಿಕಿತ್ಸೆ ಪಡೆದರೆ ಬೇರೆಯವರಿಗೆ ಹರಡುವುದನ್ನು ತಪ್ಪಿಸಬಹುದು,'' ಎಂದು ಹೇಳಿದರು.

ಜಿಲ್ಲಾ ಮಲೇರಿಯಾ ಆರೋಗ್ಯಾಧಿಕಾರಿ ಡಾ. ಸುನಂದಾ ಮಾತನಾಡಿ, ''ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನಿಂತ ನೀರಿನಲ್ಲಿ ಲಾರ್ವಾಗಳ ಸಂತಾನೋತ್ಪತ್ತಿ ಜಾಸ್ತಿಯಾಗಲಿದೆ. ಶುಚಿತ್ವಕ್ಕೆ ಹೆಚ್ಚಿನ ಒತ್ತು ಕೊಡಬೇಕು. ನೀರನ್ನು ಶೋಧಿಸಿ ಸೇವಿಸಬೇಕು. ಮೆಟ್ರೊದಂತಹ ರೈಲುಗಳಲ್ಲಿ ಬಾಗಿಲುಗಳನ್ನು ತೆರೆಯದಿರುವುದರಿಂದ ಎಚ್‌1ಎನ್‌1 ಸೋಂಕು ಹರಡುವ ಸಾಧ್ಯತೆಗಳಿರುತ್ತವೆ,'' ಎಂದು ತಿಳಿಸಿದರು.

ಮೇ 28 ರಿಂದ ಜೂ. 9ರವರೆಗೆ ಸಶಕ್ತ ಅತಿಸಾರ ನಿಯಂತ್ರಣ ಪಾಕ್ಷಿಕ

ಅತಿಸಾರ ಬೇಧಿಯಿಂದಾಗುವ ಮಕ್ಕಳ ಮರಣ ಪ್ರಮಾಣವನ್ನು ತಗ್ಗಿಸುವ ಸಲುವಾಗಿ ಮೇ 28 ರಿಂದ ಜೂ. 9ರವರೆಗೆ ಸಶಕ್ತ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಎನ್‌.ರಮೇಶ್‌ಬಾಬು ತಿಳಿಸಿದರು.

''ಅತಿಸಾರ ಬೇಧಿಯಿಂದ ಬಳಲುತ್ತಿರುವ ಐದು ವರ್ಷದೊಳಗಿನ ಮಕ್ಕಳಿಗೆ ಓಆರ್‌ಎಸ್‌ ಮತ್ತು ಝಿಂಕ್‌ ಮಾತ್ರೆಗಳನ್ನು ನೀಡಲಾಗುವುದು. 6 ತಿಂಗಳಿನಿಂದ 2 ವರ್ಷದವರೆಗಿನ ಮಕ್ಕಳಲ್ಲಿ ಈ ತೊಂದರೆ ಕಾಣಿಸಿಕೊಂಡಿದ್ದರೆ ಎದೆ ಹಾಲಿನ ಜತೆಗೆ ಪೂರಕ ಆಹಾರ ನೀಡಬೇಕು. ಝಿಂಕ್‌ ಮಾತ್ರೆಗಳನ್ನು 14 ದಿನಗಳವರೆಗೆ ನೀಡಬೇಕು,'' ಎಂದು ಹೇಳಿದರು.

ಹೆಚ್ಚಿನ ಮಾಹಿತಿಗೆ ಸಂಪರ್ಕ ದೂರವಾಣಿ: 9449843243/9449843037 ಮತ್ತು ಸಹಾಯವಾಣಿ 104

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ