ಬೆಂಗಳೂರು: ಕರ್ತವ್ಯದ ದಿನದಂದು ಗೈರು ಹಾಜರಾಗಿ ಬೇಜವಾಬ್ದಾರಿ ತೋರಿದ ದಾಸಪ್ಪ ಆಸ್ಪತ್ರೆಯ ವೈದ್ಯರು ಹಾಗೂ ನರ್ಸ್ಗಳ ವೇತನ ಕಡಿತಗೊಳಿಸುವಂತೆ ಮೇಯರ್ ಜಿ.ಪದ್ಮಾವತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಟೌನ್ಹಾಲ್ ಬಳಿಯ ದಾಸಪ್ಪ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಮೇಯರ್ ಪದ್ಮಾವತಿ, ಹಾಜರಿ ಪುಸ್ತಕ ನಿರ್ವಹಣೆ, ವೈದ್ಯರ ಸೇವೆ, ಸ್ವಚ್ಛತೆಯ ಪರಿಶೀಲನೆ ನಡೆಸಿದರು. ಹಾಜರಿ ಪುಸ್ತಕವನ್ನು ನೋಡಿದಾಗ ಕೆಲವು ವೈದ್ಯರು ಹಾಗೂ ನರ್ಸ್ಗಳು ಕರ್ತವ್ಯಕ್ಕೆ ಹಾಜರಾಗದಿರುವುದು ಕಂಡುಬಂತು. ಗೈರು ಹಾಜರಾದವರ ಒಂದು ದಿನದ ವೇತನವನ್ನು ಕಡಿತಗೊಳಿಸಬೇಕು ಹಾಗೂ ಆಸ್ಪತ್ರೆಯನ್ನು ನಿರ್ವಹಣೆ ಮಾಡದೆ ಬೇಜವಾಬ್ದಾರಿ ತೋರಿದ ಇಬ್ಬರು ಆರೋಗ್ಯಾಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಬೇಕು ಎಂದು ಅವರು ಸೂಚಿಸಿದರು.
ಆಸ್ಪತ್ರೆಯಲ್ಲಿ 24 ಗಂಟೆಗಳ ಕಾಲ ಸೇವೆ ನೀಡಬೇಕಿದೆ. ಆದರೆ ವೈದ್ಯರು ಹಾಗೂ ನರ್ಸ್ಗಳು ಸಂಜೆವರೆಗೆ ಮಾತ್ರ ಕೆಲಸ ಮಾಡುತ್ತಿರುವುದು ಹಾಗೂ ರಾತ್ರಿ ಪಾಳಿ ಮಾಡದೆ ಕರ್ತವ್ಯ ಲೋಪ ತೋರಿರುವುದು ಗಮನಕ್ಕೆ ಬಂತು. ಗರ್ಭಿಣಿಯರಿಗೆ ಮಡಿಲು ಕಿಟ್ ಹಾಗೂ ಜೆಎಸ್ಎಸ್ ಯೋಜನೆಗಳ ಬಗ್ಗೆ ಆಸ್ಪತ್ರೆಯಲ್ಲಿ ಪ್ರಚಾರ ನೀಡದಿರುವುದನ್ನು ಗಮನಿಸಿದ ಮೇಯರ್, ಸಾರ್ವಜನಿಕರಿಗೆ ಕಾಣುವಂತೆ ಬ್ಯಾನರ್ ಕಟ್ಟಲು ಹಾಗೂ ಕರಪತ್ರಗಳನ್ನು ಮುದ್ರಿಸಿ ಗರ್ಭಿಣಿಯರಿಗೆ ನೀಡಲು ಸೂಚನೆ ನೀಡಿದರು.
ಸ್ವಚ್ಛತೆ ಕಡೆಗಣನೆ: ಆಸ್ಪತ್ರೆ ಆವರಣದಲ್ಲಿ ಹಾಗೂ ಕಚೇರಿಗಳಲ್ಲಿ ಕಸವಿರುವುದು ಹಾಗೂ ಶೌಚಾಲಯಗಳ ಅಸಮರ್ಪಕ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪದ್ಮಾವತಿ ಅವರು, ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ಗರ್ಭಿಣಿಯರ ಆರೋಗ್ಯ ಹಾಳಾಗುತ್ತದೆ. ಆವರಣದಲ್ಲಿ ಹಾಗೂ ಶೌಚಾಲಯದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಮೇಯರ್ ತಾಕೀತು ಮಾಡಿದರು.