ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಕಾಯಿದೆ-2017' ಜಾರಿಗೆ ಮುಂದಾಗಿರುವ ರಾಜ್ಯ ಸರಕಾರದ ಕ್ರಮ ವಿರೋಧಿಸಿ ಖಾಸಗಿ ಆಸ್ಪತ್ರೆ ವೈದ್ಯರಿಂದ 'ಬೆಳಗಾವಿ ಚಲೋ' ನಡೆಸಿದ್ದರಿಂದ ಸೋಮವಾರ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ಸೇವೆಯಲ್ಲಿ ಭಾಗಶಃ ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಸ್ವಲ್ಪ ಹೆಚ್ಚಿತ್ತು.
ತಿದ್ದುಪಡಿ ಕಾಯಿದೆಯಿಂದ ಖಾಸಗಿ ಆಸ್ಪತ್ರೆಗಳು, ವೈದ್ಯರು ಹಾಗೂ ರೋಗಿಗಳಿಗೆ ಸಮಸ್ಯೆ ಆಗಲಿದೆ. ಹೀಗಾಗಿ ತಿದ್ದಪಡಿ ಕಾಯಿದೆ ಜಾರಿ ನಿರ್ಧಾರದಿಂದ ಸರಕಾರ ಹಿಂದೆ ಸರಿಯಬೇಕು ಎಂದು ಆಗ್ರಹಿಸಿ ಸಾವಿರಾರು ವೈದ್ಯರು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುವರ್ಣ ಸೌಧದ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಉತ್ತರ ಕರ್ನಾಟಕ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಆ ಭಾಗದಲ್ಲಿನ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ದೊರೆಯಲಿಲ್ಲ. ಬೆಂಗಳೂರಿನ ಬಹುತೇಕ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಾದರೂ, ಕೆಲ ಆಸ್ಪತ್ರೆಗಳನ್ನು ಹೊರತುಪಡಿಸಿದರೆ ಬಹುತೇಕ ಆಸ್ಪತ್ರೆಗಳಲ್ಲಿ ಸೇವೆ ಎಂದಿನಂತೆಯೇ ದೊರೆತಿದೆ. ಇನ್ನೂ ಕೆಲ ಆಸ್ಪತ್ರೆಗಳಲ್ಲಿ ತುರ್ತು ಸೇವೆಯನ್ನಷ್ಟೇ ನೀಡಲಾಗಿದ್ದು, ಉಳಿದಂತೆ ನಾನಾ ಸಮಸ್ಯೆಗಳಿಂದ ಚಿಕಿತ್ಸೆ ಆಗಮಿಸಿದ್ದ ರೋಗಿಗಳು ವಾಪಸ್ ತೆರಳಿದ ಘಟನೆ ಕೆಲ ಆಸ್ಪತ್ರೆಗಳಲ್ಲಿ ನಡೆದಿದೆ.
ಸೇವೆಯಲ್ಲಿ ವ್ಯತ್ಯಯವಿಲ್ಲ
''ಪ್ರತಿಭಟನೆ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಕೆಲ ವೈದ್ಯರು ಬೆಳಗಾವಿಗೆ ತೆರಳಿದ್ದರು, ಆದರೆ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಹೊರ ರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ವಿಭಾಗ ಸೇರಿದಂತೆ ಆಸ್ಪತ್ರೆಗೆ ಆಗಮಿಸಿದ ಎಲ್ಲ ರೋಗಿಗಳಿಗೂ ಎಂದಿನಂತೆ ಸೇವೆ ನೀಡಲಾಗಿದೆ'' ಎಂದು ಮಣಿಪಾಲ್ ಆಸ್ಪತ್ರೆ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ತಿಳಿಸಿದ್ದಾರೆ.
''ಕಳೆದ ನವೆಂಬರ್ 3ರಂದು ನಡೆದಂತೆ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಿಲ್ಲ. ಆದರೆ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಂಗಡವಾಗಿ ದಿನಾಂಕ ಕಾಯ್ದಿರಿಸಿದ್ದ ರೋಗಿಗಳಿಗೆ ಬೇರೆ ದಿನ ಸೇವೆ ಪಡೆಯುವಂತೆ ಕೋರಿದ್ದೆವು. ಉಳಿದಂತೆ ಎಂದಿನಂತೆ ಚಿಕಿತ್ಸೆಗೆ ಆಗಮಿಸಿದ್ದ ಹೊರ ರೋಗಿಗಳಿಗೆ ಸೇವೆ ನೀಡಲಾಗಿದೆ'' ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ಭುಂಜಗಶೆಟ್ಟಿ ತಿಳಿಸಿದ್ದಾರೆ.
ಕಿಮ್ಸ್ನಲ್ಲಿ ರೋಗಿಗಳ ಪರದಾಟ: ನಗರದ ಕೆಂಪೇಗೌಡ ವೈದ್ಯ ವಿಜ್ಞಾನ ಸಂಸ್ಥೆ (ಕಿಮ್ಸ್), ಎಂ.ಎಸ್.ರಾಮಯ್ಯ ಸೇರಿದಂತೆ ಕೆಲ ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ (ಒಪಿಡಿ) ಸಂಪೂರ್ಣ ಬಂದ್ ಮಾಡಲಾಗಿತ್ತು. ಹೀಗಾಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ನಗರ ಸೇರಿದಂತೆ ದೂರದ ಊರುಗಳಿಂದ ಆಗಮಿಸಿದ್ದ ರೋಗಿಗಳು ಚಿಕಿತ್ಸೆ ದೊರೆಯದೆ ವಾಪಸ್ ಆಗಬೇಕಾಯಿತು. ಜ್ವರ ಸೇರಿದಂತೆ ಕೆಲ ಕಾಯಿಲೆಧಿಗಳ ಚಿಕಿತ್ಸೆಗೆ ಆಗಮಿಸಿದ್ದ ಮಂದಿ ಬೇರೆ ಆಸ್ಪತ್ರೆಗಳಿಗೆ ದಾರಿ ಹಿಡಿದು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕಿಮ್ಸ್ ಅಷ್ಟೇ ಅಲ್ಲದೆ ನಗರದ ಎಂ.ಎಸ್.ರಾಮಯ್ಯ ಸ್ಮಾರಕ ಆಸ್ಪತ್ರೆ, ಅಪೋಲೋ ಆಸ್ಪತ್ರೆ, ಫೋರ್ಟಿಸ್ ಆಸ್ಪತ್ರೆ ಸೇರಿದಂತೆ ನಗರದ ಕೆಲ ಆಸ್ಪತ್ರೆಗಳು ಹೊರ ರೋಗಿಗಳ ವಿಭಾಗವನ್ನು ಸಂಪೂರ್ಣ ಮುಚ್ಚಿದ್ದವು.
ಮೃತರ ಕುಟುಂಬಸ್ಥರಿಂದ ಪ್ರತಿಭಟನೆ: ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಭಾನುವಾರ ರಾತ್ರಿ ಆನೇಕಲ್ ಮೂಲದ ಹೇಮಲತಾ ಎಂಬುವರು ಸಾವನ್ನಪ್ಪಿದ್ದರು. ಹೀಗಾಗಿ ಕುಟುಂಬಸ್ಥರು ಆಸ್ಪತ್ರೆಯ ಎದುರು ಕೆಲ ಕಾಲ ಪ್ರತಿಭಟನೆ ನಡೆಸಿದರು. ಘಟನೆಗೆ ವೈದ್ಯರ ಕೊರತೆ ಕಾರಣವಲ್ಲ. ಕುಟುಂಬವರು ಬಾಕಿ ಹಣ ಪಾವತಿಸದ ಕಾರಣ ಮೃತರ ದೇಹ ನೀಡಲು ವಿಳಂಬವಾಯಿತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಆದರೆ, ಮೃತ ಹೇಮಲತಾ ಅವರ ಪತಿ ಮಂಜುನಾಥ್, ''ಕಳೆದ 25 ದಿನಗಳಿಂದ ಕಿಮ್ಸ್ನ ಐಸಿಯುನಲ್ಲಿ ನನ್ನ ಪತ್ನಿ ಹೇಮಲತಾ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದಿದ್ದ ವೈದ್ಯರು, ಭಾನುವಾರ ರಾತ್ರಿ 8.30ರ ಸುಮಾರಿಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ, ಸೋಮವಾರ ಬೆಳಗ್ಗೆ ಮೃತದೇಹ ನೀಡಲಾಗುವುದು ಎಂದು ಹೇಳಿದರು. ಆದರೆ, ಸಂಜೆಯಾದರೂ ವೈದ್ಯರ ಕೊರತೆ ಸೇರಿದಂತೆ ನಾನಾ ಕಾರಣ ಹೇಳುತ್ತಲೇ ಇದ್ದಾರೆ. ಈವರೆಗೂ 3 ಲಕ್ಷ ರೂ. ಹಣ ಪಾವತಿಸಿದ್ದರೂ, ಇನ್ನೂ ಬಿಲ್ ಪಾವತಿಸಬೇಕು ಎಂದು ಒತ್ತಾಧಿಯಿಧಿಸುಧಿತ್ತಿಧಿದ್ದಾಧಿರೆಧಿ'' ಎಂದು ಆರೋಪಿಸಿದರು. ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಯಿತು.
ಕೋಟ್ ..
ರಾಜ್ಯಾದ್ಯಂತ ಪ್ರತಿ ಆಸ್ಪತ್ರೆಯಿಂದ ಕೆಲ ಪ್ರತಿನಿಧಿಗಳಷ್ಟೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಸೇವೆಯನ್ನು ಸಂಪೂರ್ಣ ಸ್ಥಗಿತಗೊಳಿಸಿಲ್ಲ. ಮಾನವೀಯ ದೃಷ್ಟಿಯಿಂದ ಗಂಭೀರ ಸಮಸ್ಯೆ ಹಾಗೂ ತುರ್ತು ಚಿಕಿತ್ಸೆಗೆ ಸೇವೆ ನೀಡಲಾಗಿದೆ.
- ಡಾ. ಎಚ್.ಎನ್. ರವೀಂದ್ರ, ಅಧ್ಯಕ್ಷ, ಭಾರತೀಯ ವೈದ್ಯಕೀಯ ಸಂಘ