ಆ್ಯಪ್ನಗರ

ಷೋಡಶ ಸೋಮವಾರ ವ್ರತಕ್ಕೆ ಚಾಲನೆ

ಅನಾರೋಗ್ಯಪೀಡಿತರು, ಮಕ್ಕಳಾಗದ ಮಹಿಳೆಯರು ಹಾಗೂ ಸಂಕಷ್ಟಕ್ಕೆ ಸಿಲುಕಿರುವ ವ್ಯಕ್ತಿಗಳು ಹೀಗೆ ನಾನಾ ಭಕ್ತರು ಇಷ್ಟಾರ್ಥಸಿದ್ಧಿಗಾಗಿ ಶ್ರಾವಣ ಮಾಸದಲ್ಲಿ 'ಷೋಡಶ ಸೋಮವಾರ ವ್ರತ' ಕೈಗೊಳ್ಳುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ.

Vijaya Karnataka 6 Aug 2019, 5:00 am
ವಿಕ ಸುದ್ದಿಲೋಕ ಬೆಂಗಳೂರು
Vijaya Karnataka Web 0508-2-2-KSG_02


ನಗರದ ಗವಿಪುರಂನ ಗವಿ ಗಂಗಾಧರೇಶ್ವರ ದೇವಾಲಯ ಆವರಣದಲ್ಲಿ ಶ್ರಾವಣ ಮಾಸದ ಅಂಗವಾಗಿ ಭಕ್ತಾಧಿಗಳು 'ಮೃಣ್ಮಯ ಲಿಂಗ'ಗಳನ್ನಿಟ್ಟು 'ಷೋಡಶ ಸೋಮವಾರದ ವ್ರತ' ಆರಂಭಿಸಿದರು.

ಅನಾರೋಗ್ಯಪೀಡಿತರು, ಮಕ್ಕಳಾಗದ ಮಹಿಳೆಯರು ಹಾಗೂ ಸಂಕಷ್ಟಕ್ಕೆ ಸಿಲುಕಿರುವ ವ್ಯಕ್ತಿಗಳು ಹೀಗೆ ನಾನಾ ಭಕ್ತರು ಇಷ್ಟಾರ್ಥಸಿದ್ಧಿಗಾಗಿ ಶ್ರಾವಣ ಮಾಸದಲ್ಲಿ 'ಷೋಡಶ ಸೋಮವಾರ ವ್ರತ' ಕೈಗೊಳ್ಳುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಮಣ್ಣಿನಿಂದ ಶಿವ ಲಿಂಗವನ್ನು ತಯಾರಿಸಿ, ಶ್ರಾವಣ ಸೋಮವಾರ ಸೇರಿದಂತೆ 16 ಸೋಮವಾರಗಳ ಕಾಲ ಶಿವಲಿಂಗಕ್ಕೆ ವಿಶೇಷ ಪೂಜೆಯನ್ನು ಮಾಡಿ, ನಂತರ 17ನೇ ಸೋಮವಾರದಂದು ನೀರಿನಲ್ಲಿ ವಿಸರ್ಜನೆ ಮಾಡುತ್ತಾರೆ. ಇಷ್ಟಾರ್ಥಗಳು ಸಿದ್ಧಿಸಿದರೆ ದೇವರಿಗೆ ವಿಶೇಷ ಹರಕೆ ಹೊರುವ ಸಂಕಲ್ಪ ಮಾಡುತ್ತಾರೆ.

ದೇವಾಲಯದ ವಿಶೇಷ:

ಗವಿ ಗಂಗಾಧರೇಶ್ವರ ದೇವಾಲಯವನ್ನು 16ನೇ ಶತಮಾನದಲ್ಲಿ ಬೆಂಗಳೂರು ನಿರ್ಮಾರ್ತೃ ಕೆಂಪೇಗೌಡ ಅವರು ಕಟ್ಟಿಸಿದರು ಎಂಬ ಪ್ರತೀತಿ ಇದೆ. ಏಕಶಿಲಾ ಬೆಟ್ಟದ ಮೇಲಿರುವ ದೇವಾಲಯದ ಗುಹೆಯಲ್ಲಿ ಗಂಗಾಧರೇಶ್ವರ ಸ್ವಾಮಿ ನೆಲೆಸಿದ್ದಾನೆ. ಈ ದೇವಾಲಯದಲ್ಲಿ ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಇಳಿ ಸಂಜೆ ಹೊತ್ತಿನಲ್ಲಿ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸುವ ಅದ್ಭುತ ಚಮತ್ಕಾರ ಪ್ರಸಿದ್ಧಿ ಪಡೆದಿದೆ. ದೇವಾಲಯದಲ್ಲಿರುವ ಎರಡು ತಲೆ, ಏಳು ಕೈಗಳು ಹಾಗೂ ಮೂರು ಕಾಲುಗಳ ಅಗ್ನಿ ಮೂರ್ತಿಯನ್ನು ಪೂಜಿಸಿದರೆ ಕಣ್ಣಿನ ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯೂ ಇದೆ.

ಕಾರ್ತಿಕ ಮಾಸ ಶಿವನಿಗೆ ಪ್ರಶಸ್ತ ಮಾಸವಾಗಿದ್ದು, ವಿಶೇಷ ಪೂಜೆ ಅಲಂಕಾರಗಳು ಜರುಗುತ್ತವೆ. ಶ್ರಾವಣ ಮಾಸದಲ್ಲಿ ಸಾಮಾನ್ಯ ರೀತಿಯಲ್ಲೇ ಪೂಜೆ, ಅರ್ಚನೆಗಳನ್ನು ನಡೆಸಲಾಗುತ್ತದೆ. ಹಲವು ಭಕ್ತರು ಷೋಡಶ ಸೋಮವಾರ ವ್ರತ ಆಚರಣೆ ಆರಂಭಿಸಿದ್ದಾರೆ.

- ಸೋಮಸುಂದರ ದೀಕ್ಷಿತ್‌, ಪ್ರಧಾನ ಅರ್ಚಕರು, ಗವಿ ಗಂಗಾಧರೇಶ್ವರ ದೇವಾಲಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ