ಆ್ಯಪ್ನಗರ

ವಿಶೇಷ ಮಕ್ಕಳಿಗಾಗಿ 'ಎಸ್‌ಎಸ್‌ಕೆ' ಶಿಬಿರ: ಬೆಂಗಳೂರಿನ ಇಂದಿರಾನಗರದಲ್ಲಿ ಡಿ.14ಕ್ಕೆ ಆರಂಭ

ಬುದ್ದಿಮಾಂದ್ಯ ಮಕ್ಕಳು, ಅಂಗವಿಕಲ ಮಕ್ಕಳ ಕಲಿಕೆಗೆ ನೆರವಾಗಲೆಂದೇ ಸ್ಥಾಪನೆಯಾಗಿದ್ದು ಬೆಂಗಳೂರಿನ 'ಸ್ಪಾಸ್ಟಿಕ್ಸ್‌ ಸೊಸೈಟಿ ಆಫ್‌ ಕರ್ನಾಟಕ' (ಎಸ್‌ಎಸ್‌ಕೆ). ಈ ಸಂಸ್ಥೆ ಡಿ.14ಕ್ಕೆ ಬೆಂಗಳೂರಿನ ಇಂದಿರಾ ನಗರದಲ್ಲಿ 'ಚಳಿಗಾಲದ ಶಿಬಿರ' ಏರ್ಪಡಿಸಿದ್ದು, ಸರ್ವರಿಗೂ ಸ್ವಾಗತ ಕೋರಿದೆ.

Vijaya Karnataka Web 12 Dec 2019, 10:51 pm
ಬೆಂಗಳೂರು: ಸಾಮಾನ್ಯ ಮಾಕ್ಕಳಿಗಾದರೆ, ಬೀದಿಗೊಂದರಂತೆ ಕೋಚಿಂಗ್ ಕ್ಲಾಸ್‌ಗಳು, ಶಿಬಿರಗಳು ಕಾಣುತ್ತವೆ. ಆದರೇ, ಬುದ್ದಿಮಾಂದ್ಯ ಮಕ್ಕಳು, ಅಂಗವಿಕಲ ಮಕ್ಕಳಾದರೆ ಕೋಚಿಂಗ್‌ ಕ್ಲಾಸ್‌ಗಳಿರಲಿ, ಶಾಲೆಗಳಲ್ಲಿ ಪ್ರವೇಶ ಸಿಗುವುದು ಕಷ್ಟಸಾಧ್ಯ. ಆದರೆ, ಇಂಥ ಮಕ್ಕಳ ಕಲಿಕೆಗೆ ನೆರವಾಗಲೆಂದೇ ಸ್ಥಾಪನೆಯಾಗಿದ್ದು ಬೆಂಗಳೂರಿನ 'ಸ್ಪಾಸ್ಟಿಕ್ಸ್‌ ಸೊಸೈಟಿ ಆಫ್‌ ಕರ್ನಾಟಕ' (ಎಸ್‌ಎಸ್‌ಕೆ).
Vijaya Karnataka Web winter carnival


1982ರಲ್ಲಿ ಸ್ಥಾಪನೆಯಾದ ಈ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಬುದ್ದಿಮಾಂದ್ಯ ಹಾಗೂ ಅಂಗವಿಕಲ (ಸೆರೆಬ್ರಲ್‌ ಪಾಲ್ಸಿ, ಆಟಿಸಂ, ಕಲಿಕೆಯಲ್ಲಿ ಹಿಂದುಳಿದಿರುವುದು, ಬುದ್ದಿಮಟ್ಟದಲ್ಲಿ ಕೆಳಗಿರುವುದು, ಮಾತುನಾಡು ಸಮಸ್ಯೆ ಹಾಗೂ ಭಾಷಾ ಸಮಸ್ಯೆ ಇರುವ ) ಮಕ್ಕಳಿಗಾಗಿಯೇ ಪುನರ್ವತಿ ಸೇವೆ ಒದಗಿಸುತ್ತ ಬಂದಿದೆ. ಎಸ್ಎಸ್‌ಕೆ ಪ್ರಧಾನ ಕೇಂದ್ರ ಬೆಂಗಳೂರಿನ ಇಂದಿರಾ ನಗರದಲ್ಲಿದೆ. ಕರ್ನಾಟಕ 6 ಕಡೆ ಇದರ ಶಾಖೆಗಳಿವೆ. ಬೆಂಗಳೂರಿನ ಎರಡು ಸರಕಾರಿ ಆಸ್ಪತ್ರೆಗಳಲ್ಲೂ ಎಸ್‌ಎಸ್‌ಕೆ ಘಟಕಗಳಿವೆ.

ಇದೇ ಡಿಸೆಂಬರ್‌ 14ಕ್ಕೆ ಇಂದಿರಾ ನಗರದಲ್ಲಿರುವ ಪ್ರಧಾನ ಕೇಂದ್ರದಲ್ಲಿ ಎಸ್ಎಸ್ಕೆ ತನ್ನ ದ್ವೈವಾರ್ಷಿಕ 'ಚಳಿಗಾಲದ ಶಿಬಿರ' ಏರ್ಪಡಿಸಿದೆ. ಇದೊಂದು ಜಾಗೃತಿ ಕಾರ್ಯಕ್ರಮವಾಗಿದ್ದು, ಬೆಳಗ್ಗೆ 10ರಿಂದ 6 ಗಂಟೆವರೆಗೆ ನಡೆಯಲಿದೆ. ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗೆ ನೆರವಾಗಲು ನಿಧಿಸಂಗ್ರಹಿಸಲಾಗುತ್ತದೆ. ಇದು ಆಂದೋಲನ ಮಾದರಿಯ ಕಾರ್ಯಕ್ರಮವಾಗಿದ್ದು, ಇಲ್ಲಿ ಸಂಗ್ರಹವಾದ ಹಣದಿಂದ ಬುದ್ದಿಮಾಂದ್ಯ ಮಕ್ಕಳಿಗೆ ನೀಡುವ ಸೇವೆಗಳನ್ನು ವಿಸ್ತರಿಸುತ್ತ ಬರಲಾಗಿದೆ.

ಈಗಾಗಲೇ ಎಸ್‌ಎಸ್‌ಕೆ ಸಂಸ್ಥೆಯಲ್ಲಿರುವ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಈ ಕಾರ್ಯಕ್ರಮದಲ್ಲಿ ತಮ್ಮ ಕೌಶಲಗಳನ್ನು ಪ್ರದರ್ಶಿಸಲಿದ್ದಾರೆ. ಅಲ್ಲದೆ, ಇಂತಹ ವಿಶೇಷ ಮಕ್ಕಳ ಕಲಿಕೆಗೆ ನೆರವಾಗಲೆಂದೇ ಎಸ್‌ಎಸ್‌ಕೆ ಸಿದ್ಧಪಡಿಸಿರುವ ಕಲಿಕಾ ಸಾಮಗ್ರಿಗಳನ್ನೂ ಈ ಕಾರ್ಯಕ್ರಮದಲ್ಲಿ ಕಾಣಬಹುದಾಗಿದೆ. ಇದರೊಟ್ಟಿಗೆ ಸಂಗೀತ ಕಾರ್ಯಕ್ರಮ, ಮ್ಯಾಜಿಕ್‌ ಶೋ, ಆಕರ್ಷಕ ಗೇಮ್‌ಗಳು ಇರಲಿವೆ. ಶುಚಿರುಚಿಯಾದ ಊಟವೂ ಇರಲಿದೆ.

ಸಂಸ್ಥೆಯು ಹಮ್ಮಿಕೊಳ್ಳುತ್ತಿರುವ 6ನೇ ದ್ವೈವಾರ್ಷಿಕ ಚಳಿಗಾಲದ ಶಿಬಿರ ಇದಾಗಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಸುಮಾರು 3-4 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಶಾಲಾ ಕಾಲೇಜುಗಳ ಜತೆಗೆ ಕಾರ್ಪೋರೇಟ್ ಸಂಸ್ಥೆಗಳು, ವಿದ್ಯಾರ್ಥಿಗಳು, ಸಿಬ್ಬಂದಿ, ಪಾಲಕರು ಹಾಗೂ ಬೆಂಗಳೂರಿನ ನಿವಾಸಿಗಳು ಕಾರ್ಯಕ್ರಮದಲ್ಲಿ ಪಾಲ್ಕೊಳ್ಳುವಂತೆ ಎಸ್‌ಎಸ್‌ಕೆ ಸರ್ವರಿಗೂ ಆಮಂತ್ರಣ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ