ಆ್ಯಪ್ನಗರ

ಬಯಲುಸೀಮೆ ಜಿಲ್ಲೆಗಳಿಗೆ ಸಂಸ್ಕರಿಸಿದ ನೀರು: ಯೋಜನೆ ತಡೆ ತೆರವಿಗೆ ಸುಪ್ರೀಂ ನಕಾರ

ಬಯಲುಸೀಮೆಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಂಗಳೂರಿನಿಂದ ಸಂಸ್ಕರಿಸಿದ ಕೊಳಚೆ ನೀರು ಹರಿಸುವ ಯೋಜನೆಗೆ ನೀಡಲಾಗಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

Vijaya Karnataka 12 Mar 2019, 5:00 am
ಹೊಸದಿಲ್ಲಿ: ಬಯಲುಸೀಮೆಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಂಗಳೂರಿನಿಂದ ಸಂಸ್ಕರಿಸಿದ ಕೊಳಚೆ ನೀರು ಹರಿಸುವ ಯೋಜನೆಗೆ ನೀಡಲಾಗಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.
Vijaya Karnataka Web supreme court not ready to release stay order
ಬಯಲುಸೀಮೆ ಜಿಲ್ಲೆಗಳಿಗೆ ಸಂಸ್ಕರಿಸಿದ ನೀರು: ಯೋಜನೆ ತಡೆ ತೆರವಿಗೆ ಸುಪ್ರೀಂ ನಕಾರ


ಇದೇ ವೇಳೆ, ತಡೆ ತೆರವು ಕೋರಿ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಸರಕಾರ ಅಗತ್ಯ ಮಾಹಿತಿ ಉಲ್ಲೇಖಿಸಿಲ್ಲವೆಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

''ನೀವೇನು ನ್ಯಾಯಾಲಯದ ಜತೆ ಆಟವಾಡುತ್ತಿದ್ದೀರಾ? 2019ರ ಜನವರಿ 7ರಂದು ಕೋರ್ಟ್‌ ನೀಡಿರುವ ತಡೆಯನ್ನು ತೆರವುಗೊಳಿಸಬೇಕೆಂದು ಕೋರಿ ನೀವು ಸಲ್ಲಿಸಿರುವ ಅರ್ಜಿಯಲ್ಲಿ ಅಗತ್ಯ ವಿವರಗಳೇ ಇಲ್ಲ. ಇದೊಂದು ಅಸಮರ್ಪಕ ಅರ್ಜಿ'' ಎಂದು ನ್ಯಾ. ದೀಪಕ್‌ ಗುಪ್ತಾ ಮತ್ತು ರಾಜೀವ್‌ ಖನ್ನ ಅವರನ್ನೂ ಒಳಗೊಂಡ ನ್ಯಾಯಪೀಠ ಖಾರವಾಗಿ ಹೇಳಿತು.

ದಿನಾಂಕವನ್ನೂ ಸರಿಯಾಗಿ ನಮೂದಿಸಿಲ್ಲ: ಇದೇ ವೇಳೆ ಸರಕಾರದ ಅರ್ಜಿಯಲ್ಲಿ ಕೋರ್ಟ್‌ ತಡೆಯಾಜ್ಞೆ ನೀಡಿದ ದಿನಾಂಕವನ್ನೂ ತಪ್ಪಾಗಿ ಉಲ್ಲೇಖಿಸಿರುವ ಬಗ್ಗೆ ನ್ಯಾಯಪೀಠ ಕಿಡಿಕಾರಿತು.

ಈ ಮಧ್ಯೆ ತಡೆಯಾಜ್ಞೆ ತೆರವಿಗೆ ಸೂಕ್ತ ಅರ್ಜಿಗಳನ್ನು ಸಲ್ಲಿಸಲು ಬೆಂಗಳೂರು ಜಲಮಂಡಳಿ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ನ್ಯಾಯಾಲಯ ಅವಕಾಶ ಕಲ್ಪಿಸಿದೆ.

ಬೆಂಗಳೂರಿನಲ್ಲಿ ಪ್ರತಿದಿನ ಜಲಮಂಡಳಿ ಲಕ್ಷಾಂತರ ಲೀಟರ್‌ ನೀರನ್ನು ವಿವಿಧ ಹಂತಗಳಲ್ಲಿ ಶುದ್ಧೀಕರಿಸುತ್ತದೆ. ಅದರಲ್ಲಿ ಬಹುಪಾಲು ಬಳಕೆಯಾಗದೇ ಮತ್ತೆ ಕೆರೆ, ಕಾಲುವೆಗಳಿಗೆ ಹರಿದು ಹೋಗುತ್ತದೆ. ಹೀಗಾಗಿ ಈ ನೀರನ್ನು ಸದುಪಯೋಪಡಿಸಿಕೊಳ್ಳಲು ಸಣ್ಣ ನೀರಾವರಿ ಇಲಾಖೆ ನಿರ್ಧರಿಸಿತ್ತು. ಜಲಮಂಡಳಿ ಜತೆ ಸಮಾಲೋಚನೆ ನಡೆಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಗಳಿಗೆ ಬೆಂಗಳೂರಿನಿಂದ ಸಂಸ್ಕರಿಸಿದ ನೀರನ್ನು ಹರಿಸಲು ನಿರ್ಧರಿಸಲಾಗಿತ್ತು. ಆದರೆ, ಈ ನೀರು ಕಲುಷಿತವಾಗಿದ್ದು, ಇದನ್ನು ಹರಿಸುವ ಮೊದಲು ಸೂಕ್ತ ರೀತಿಯಲ್ಲಿ ಸಂಸ್ಕರಿಸಬೇಕು. ಅಲ್ಲಿಯವರೆಗೂ ಈ ನೀರು ಕೆರೆಗಳಿಗೆ ಹರಿಸಬಾರದು ಎಂದು ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿಹೈಕೋರ್ಟ್‌ ಮೆಟ್ಟಿಲೇರಿದ್ದರು. ನೀರು ಹರಿಸಲು ಹೈಕೋರ್ಟ್‌ ಆದೇಶಿಸಿತ್ತು. ನಂತರ ಹೋರಾಟಗಾರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. 2019ರ ಜ.7ರಂದು ಸುಪ್ರೀಂ ಕೋರ್ಟ್‌ ನೀರು ಹರಿಸದಂತೆ ತಡೆಯಾಜ್ಞೆ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ