ಆ್ಯಪ್ನಗರ

ಇಂದಿನ ಶಿಕ್ಷಣ ವ್ಯವಸ್ಥೆಗೆ ತಂತ್ರಜ್ಞಾನ ವರದಾನ: ಡಾ. ಕಿರಣ್ ಮಜೂಂದಾರ್ ಶಾ

ಸುಲಭವಾಗಿ ಮಾಹಿತಿ ಪಡೆಯಲು ವಿದ್ಯಾರ್ಥಿಗಳಿಗೆ ತಂತ್ರಜ್ಞಾನವೇ ವರದಾನ ಎಂದು ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ ಡಾ. ಕಿರಣ್ ಮಜೂಂದಾರ್ ಶಾ ಅಭಿಪ್ರಾಯ ಪಟ್ಟರು.

Vijaya Karnataka Web 12 Sep 2019, 5:37 pm
ಬೆಂಗಳೂರು: ಶಿಕ್ಷಣ ಸಂಸ್ಥೆಗಳು ಇಂದು ವಿದ್ಯಾರ್ಥಿಗಳಲ್ಲಿ ಜ್ಞಾನವನ್ನು ಹೆಚ್ಚಿಸಲು ಹೆಚ್ಚು ಶ್ರಮಿಸುತ್ತಿವೆ. ಅಲ್ಲದೇ ಇಂದಿನ ಶಿಕ್ಷಣ ವ್ಯವಸ್ಥೆಯ ಮೇಲೆ ತಂತ್ರಜ್ಞಾನವು ಬಹಳ ಪ್ರಭಾವ ಬೀರಿದ್ದು, ವಿದ್ಯಾರ್ಥಿಗಳು ಸುಲಭವಾಗಿ ಮಾಹಿತಿ ಪಡೆಯಲು ತಂತ್ರಜ್ಞಾನ ವರದಾನವಾಗಿದೆ ಎಂದು ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ ಡಾ. ಕಿರಣ್ ಮಜೂಂದಾರ್ ಶಾ ಅಭಿಪ್ರಾಯ ಪಟ್ಟರು.
Vijaya Karnataka Web tech


ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗ ನೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸೆಂಟ್ರಲ್ ಕಾಲೇಜು ಸಸ್ಯಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿಗಳ ಚಾರಿಟೇಬಲ್ ಟ್ರಸ್ಟ್ ಏರ್ಪಡಿಸಿದ್ದ ಸಸ್ಯಶಾಸ್ತ್ರ ವಿಭಾಗದ ಶತಮಾನೋತ್ಸವ ಮತ್ತು ನೂತನ ಜೀವ ವಿಜ್ಞಾನ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬದಲಾಗುತ್ತಿರುವ ಹವಾಮಾನದ ಬಗ್ಗೆ ಅಧ್ಯಯನ ಮಾಡಲು ಜೀವ ವಿಜ್ಞಾನ ಸಹಕಾರಿಯಾಗಿದೆ. ಅಲ್ಲದೇ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಯ ಬಗ್ಗೆ ಅಧ್ಯಯನ ನಡೆಸಿ ಸೂಕ್ತ ಚಿಕಿತ್ಸೆಯನ್ನು ಕಂಡು ಹಿಡಿಯುವಲ್ಲಿ ಜೀವ ವಿಜ್ಞಾನ ಪ್ರಮುಖ ಪಾತ್ರವಹಿಸಿದೆ. ಬೆಂಗಳೂರು ಒಂದು ವಿಜ್ಞಾನ ನಗರವಾಗಿ ಪಡೆಯಲು ನಾವು ಪುಣ್ಯ ಮಾಡಿದ್ದೇವೆ. ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನ ಗ್ಯಾಲರಿಯನ್ನು ತೆರೆಯಲು ಮುಂದಾಗಿದೆ. ಇದರಿಂದಾಗಿ ಸಾಮಾನ್ಯ ಜನರೂ ಸಹ ವಿಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ದೇಶದಲ್ಲೇ ಪ್ರಪ್ರಥಮ ಬಾರಿಗೆ `ವಿಜ್ಞಾನ ಹಬ್ಬ’ ಮುಂದಿನ ವರ್ಷದಿಂದ ಆರಂಭವಾಗಲಿದೆ. ಆದ್ದರಿಂದ ನಮ್ಮ ಬೆಂಗಳೂರನ್ನು ಸಂರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಶತಮಾನೋತ್ಸವದ ಸಹ-ಆತಿಥ್ಯ ವಹಿಸಿದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊಫೆಸರ್ ಜಾಫೆಟ್ ಮಾತನಾಡಿ “ಬಿಸಿಯು ಸುಸ್ಥಿರ, ಗುಣಮಟ್ಟದ ಬೋಧನೆ ಮತ್ತು ಸಂಶೋಧನಾ ವಾತಾವರಣವನ್ನು ಪುನಃಸ್ಥಾಪಿಸುವ ದೃಷ್ಟಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ, ವಿಜ್ಞಾನದ ಹಲವು ಮಜಲುಗಳನ್ನು ಅಧ್ಯಯನ ಮಾಡಲು ಮತ್ತು ಸಂಶೋಧಿಸಲು ಈ ವರ್ಷದಿಂದ ಸಸ್ಯವಿಜ್ಞಾನ ವಿಭಾಗವನ್ನು ‘ಡಿಪಾರ್ಟ್ಮೆಂಟ್ ಆಫ್ ಲೈಫ್ಸೈನ್ಸ್’ ಎಂದು ಆರಂಭಿಸಲಾಗುವುದು. ಇದರಲ್ಲಿ ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನ ಎರಡನ್ನೂ ಪ್ರತ್ಯೇಕವಾಗಿ ಬೋಧಿಸಲಾಗುವುದು. ಸಂಶೋಧನೆಗೆ ಸಸ್ಯವಿಜ್ಞಾನ ಉತ್ತಮ ವಿಷಯ. ಹೀಗಾಗಿ ಎಲ್ಲ ಸೌಕರ್ಯಗಳನ್ನೂ ಒದಗಿಸಲಾಗುವುದು. ಈ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರರಾಗಿ 30 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಪ್ರವೇಶ ಈಗಾಗಲೇ ಆರಂಭವಾಗಿದ್ದು, ಶತಮಾನೋತ್ಸವದ ಸಂದರ್ಭದಲ್ಲಿ ಜೀವ ವಿಜ್ಜಾನ ವಿಭಾಗ ಮತ್ತು ಕೋರ್ಸ್ಗಳನ್ನು ಉದ್ಘಾಟಿಸಿದ್ದು, ಬೆಂಗಳೂರಿಗೆ ಬಯೋಟೆಕ್ ಮತ್ತು ಸ್ಟಾರ್ಟ್ಅಪ್ ಗಳ ಕೊಡುಗೆಯನ್ನು ಮತ್ತಷ್ಟು ಸೇರಿಸಲು ನಾವು ಬಯಸುತ್ತೇನೆ, ಬಿಸಿಯು ಭವಿಷ್ಯದಲ್ಲಿ ನಾವೀನ್ಯತೆ ಮತ್ತು ಸಂಶೋಧನಾ ಕೇಂದ್ರಗಳತ್ತ ಗಮನ ಹರಿಸಲಿದೆ.” ಎಂದರು.

ಸದ್ಯ ಸಸ್ಯವಿಜ್ಞಾನ ವಿಭಾಗದಲ್ಲಿ ಒಂದು ಮೀಸಲಾದ ವಸ್ತುಸಂಗ್ರಹಾಲಯವನ್ನು ಮಾಡಿ ಆದು ಪ್ಯಾನ್-ಇಂಡಿಯನ್ ಗಿಡಮೂಲಿಕೆ ಮತ್ತು ಸ್ಲೈಡ್ ಸಂಗ್ರಹಕ್ಕೆ ಮುಂದಾಗಲಿದೆ ಎಂದು ಸೆಂಟ್ರಲ್ ಕಾಲೇಜು ಸಸ್ಯಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಪ್ರೊಫೆಸರ್ ಸಿ. ಕಾಮೇಶ್ವರ ರಾವ್ ಅವರು ಆಭಿಪ್ರಾಯ ವ್ಯಕ್ತಪಡಿಸಿದರು.

ಆಚರಣೆಯ ಭಾಗವಾಗಿ, ಟ್ರಸ್ಟ್ ಈಗಾಗಲೇ ಉಪನ್ಯಾಸ ಸರಣಿಯನ್ನು ಸ್ಥಾಪಿಸಿದೆ. 19 ಉಪನ್ಯಾಸಗಳನ್ನು ಪೂರ್ಣಗೊಳಿಸಿದೆ. ಉಪನ್ಯಾಸ ಸರಣಿಯನ್ನು ಮುಂದುವರಿಸಲು ಟ್ರಸ್ಟ್‌ನಿಂದ ದತ್ತಿಯನ್ನು ಒಟ್ಟುಗೂಡಿಸಲಾಗುತ್ತಿದೆ ಎಂದರು.

ಕಳೆದ ಮೂರು ವರ್ಷಗಳಿಂದ, ಈ ವಿಭಾಗದ ಹಳೆಯ ವಿದ್ಯಾರ್ಥಿಗಳು ಮತ್ತು ಇಲ್ಲಿ ಕಲಿಸಿದ ಪ್ರಾಧ್ಯಾಪಕರು, ಶತಮಾನೋತ್ಸವವನ್ನು ಭವ್ಯವಾಗಿ ಆಚರಿಸಲು ಉತ್ಸುಕರಾಗಿದ್ದರು. ಇದರಿಂದಾಗಿ ಎಲ್ಲಾರು ಒಟ್ಟಾಗಿ ಸೆಂಟ್ರಲ್ ಕಾಲೇಜು ಸಸ್ಯವಿಜ್ಞಾನ ವಿಭಾಗದ ಹಳೆಯ ವಿದ್ಯಾರ್ಥಿಗಳ ಚಾರಿಟಬಲ್ ಟ್ರಸ್ಟ್ ರಚಿಸಿದ್ದಾರೆ. ಈ ಟ್ರಸ್ಟ್ ಉತ್ತಮ ಯಶಸ್ಸನ್ನು ಸಾಧಿಸಿದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಶ್ರೇಷ್ಠ ಹೆಸರುಗಳನ್ನು ಒಳಗೊಂಡಿದೆ.

ಕೋಲ್ಕತಾ ಮೂಲದ ಬೊಟಾನಿಕಲ್ ಸರ್ವೆ ಆಫ್ ಇಂಡಿಯಾದ ಮುಖ್ಯಸ್ಥರಾಗಿದ್ದ ಮತ್ತು ದೇಶದ ಎಲ್ಲಾ ಮೂರು ವಿಜ್ಞಾನ ಅಕಾಡೆಮಿಗಳ ಸಹವರ್ತಿಯಾಗಿ ಆಯ್ಕೆಯಾದ ಏಕೈಕ ಹಳೆಯ ವಿದ್ಯಾರ್ಥಿ ಡಾ.ಎಂ.ಸಂಜಪ್ಪ ನವರು ಮಾತನಾಡಿ "ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಜೀವ ವಿಜ್ಞಾನವನ್ನು ಪ್ರಾರಂಭಿಸುತ್ತಿರುವುದು ತುಂಬಾ ಸಂತಸದ ವಿಚಾರ. ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವು ಹೊಸ ವಿಭಾಗವನ್ನು ಅದರ ಮೂಲ ಸ್ಥಳದಲ್ಲಿ ಸ್ಥಾಪಿಸುತ್ತಿರುವುದು ಹಳೆಯ ವಿದ್ಯಾರ್ಥಿಗಳಾಗಿ ನಮಗೆ ತುಂಬಾ ಖುಷಿ ನೀಡಿದೆ” ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ