ಬೆಂಗಳೂರು: ಒಂದು ಬೊಗಸೆ ಕಡಲೆಕಾಯಿಗಾಗಿ ಮುಖ್ಯಪೇದೆಯೊಬ್ಬರು ಸಸ್ಪೆಂಡ್ ಆಗಿರುವ ಘಟನೆ ನಗರದಲ್ಲಿ ನಡೆದಿದೆ.
ಇದು ನಡೆದಿದ್ದು, ಬಸವನಗುಡಿಯಲ್ಲಿ ನಡೆಯುತ್ತಿರುವ ಕಡಲೆಕಾಯಿ ಪರಿಷೆ ವೇಳೆ. ಜಾತ್ರೆಯ ಭದ್ರತೆಗಾಗಿ ನಗರ ಸಶಸ್ತ್ರ ಮೀಸಲು (ಸಿಎಆರ್) ಪಡೆಯ ಮಖ್ಯ ಪೇದೆ ಎಸ್.ಪಿ ಮಂಡಕ್ಕಿ ಅವರನ್ನು ನೇಮಿಸಲಾಗಿತ್ತು. ಅಲ್ಲಿ ಕರ್ತವ್ಯ ಪಾಲಿಸುವ ಬದಲು ಪ್ಲಾಸ್ಟಿಕ್ ಚೀಲ ಹಿಡಿದುಕೊಂಡು ವ್ಯಾಪಾರ ನಡೆಸುತ್ತಿದ್ದ ಬಳಿ ಒತ್ತಾಯ ಪೂರ್ವಕವಾಗಿ ಕಡಲೆ ಕಾಯಿ ಹಾಕಿಸಿಕೊಂಡಿದ್ದಾರೆ. ಈ ದೃಶ್ಯವನ್ನು ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದ್ದರು. ಇದು ವೈರಲ್ ಆದ ಕಾರಣ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ದೊಡ್ಡ ಜಾತ್ರೆಯಲ್ಲಿ ಸಣ್ಣತನ: ಸಾವಿರಾರು ಜನ ಸೇರುವ ಬೆಂಗಳೂರಿನ ದೊಡ್ಡ ಜಾತ್ರೆಯಾಗಿರುವ ಕಡಲೆಕಾಯಿ ಪರಿಷೆಯ ಭದ್ರತೆಗೆ 250ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ ಪೊಲೀಸರ ಜತೆಗೆ ಹೆಚ್ಚುವರಿಯಾಗಿ ಸಶಸ್ತ್ರ ಮೀಸಲು ಪಡೆ ಪೊಲೀಸರನ್ನು ಕೂಡಾ ನಿಯೋಜಿಸಲಾಗಿತ್ತು. ಈ ತಂಡದಲ್ಲಿ ಸಿಎಆರ್ ಉತ್ತರ ವಿಭಾಗದ ಪೇದೆ ಮಂಡಕ್ಕಿಯರು ಕರ್ತವ್ಯದಲ್ಲಿದ್ದರು. ಸೋಮವಾರ ರಾತ್ರಿ ವೇಳೆ ಅವರು, ಪ್ಲಾಸ್ಟಿಕ್ ಕವರ್ ಒಂದನ್ನು ಕೈಯಲ್ಲಿ ಹಿಡಿದುಕೊಂಡು ಎಲ್ಲ ವ್ಯಾಪಾರಿಗಳ ಬಳಿಗೆ ಹೋಗಿ ಸ್ವಲ್ಪ ಸ್ವಲ್ಪವೇ ಕಡಲೆಕಾಯಿ ಹಾಕಿಸಿಕೊಳ್ಳುತ್ತಿದ್ದರು. ಮಂಡಕ್ಕಿಯವರು ಕಡಲೆಕಾಯಿ ವಸೂಲಿಗಿಳಿದ ಕೃತ್ಯವನ್ನು ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ಮೊಬೈಲ್ ಫೋನ್ನಲ್ಲಿ ವಿಡಿಯೋ ಮಾಡಿಕೊಂಡಿದ್ದರು. ಅವರು ಅದನ್ನು ತಮ್ಮ ಪರಿಚಿತರೊಬ್ಬರಿಗೆ ಕಳುಹಿಸಿದ್ದರು. ಅದು ಒಬ್ಬರಿಂದ ಒಬ್ಬರಿಗೆ ಹಂಚಿಕೆಯಾಗಿ ಆ ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಪೊಲೀಸ್ ಅಧಿಕಾರಿಯೊಬ್ಬರು ಕೃತ್ಯವನ್ನು ಸಾರ್ವಜನಿಕರು ಫೇಸ್ಬುಕ್ ಹಾಗೂ ವಾಟ್ಸ್ಆ್ಯಪ್ನಲ್ಲಿ ಖಂಡಿಸಿದ್ದರು. ಈ ವಿಡಿಯೋ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕೂಡಲೇ ಕರ್ತವ್ಯಲೋಪ ಆರೋಪದಲ್ಲಿ ಎಸ್.ಪಿ ಮಂಡಕ್ಕಿ ಅವರನ್ನು ಅಮಾನತುಗೊಳಿಸಿ ಸಿಎಆರ್ ಉತ್ತರ ವಿಭಾಗದ ಡಿಸಿಪಿ ಬಿ.ಜಿ ತಿಮ್ಮಣ್ಣವರ್ ಆದೇಶ ಹೊರಡಿಸಿದ್ದಾರೆ.