ಆ್ಯಪ್ನಗರ

ಬೆಂಗಳೂರು ವಿವಿ ಭೂಮಿ ಮೇಲೆ ಎಲ್ಲರ ಕಣ್ಣು..! ಜಾಗಕ್ಕಾಗಿ ವಿವಿಧ ಸಂಸ್ಥೆಗಳಿಂದ ಮನವಿ

ಭೂಮಿ ನೀಡುವಂತೆ ಎನ್‌ಎಲ್‌ಎಸ್‌ಯುಐ ಮತ್ತು ಕೆಪಿಟಿಸಿಎಲ್‌ ನೀಡಿರುವ ಮನವಿಯನ್ನು ಬೆಂಗಳೂರು ವಿಶ್ವ ವಿದ್ಯಾಲಯ ತಿರಸ್ಕರಿಸಿದೆ. ಇತ್ತೀಚೆಗೆ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಈ ವಿಚಾರವನ್ನು ಮಂಡಿಸಲಾಗಿತ್ತು. ಇದಕ್ಕೆ ಸಿಂಡಿಕೇಟ್‌ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಬೆಂಗಳೂರು ವಿಶ್ವ ವಿದ್ಯಾಲಯವೇ ನಾಲ್ಕು ವರ್ಷದ ಆನರ್ಸ್ ಕೋರ್ಸ್‌ ಆರಂಭಿಸಿರುವುದರಿಂದ ಕಟ್ಟಡ, ಪ್ರಯೋಗಾಲಯ, ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೇರಿದಂತೆ ಇತರೆ ಮೂಲ ಸೌಕರ್ಯ ಕಲ್ಪಿಸುವುದಕ್ಕಾಗಿ ಮತ್ತಷ್ಟು ಸ್ಥಳದ ಅವಶ್ಯಕತೆ ಇರಲಿದ್ದು, ಮನವಿ ಪುರಸ್ಕರಿಸಿ ಜಾಗ ನೀಡಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದೆ.

Edited byದಿಲೀಪ್ ಡಿ. ಆರ್. | Vijaya Karnataka 19 Jul 2022, 3:15 pm

ಹೈಲೈಟ್ಸ್‌:

  • ಸ್ಥಳ ನೀಡಲು ಸಾಧ್ಯವಿಲ್ಲ ಎಂದ ಬೆಂಗಳೂರು ವಿವಿ
  • 10 ರಿಂದ 15 ಎಕರೆ ಜಮೀನಿಗೆ ಎನ್‌ಎಲ್‌ಎಸ್‌ಯುಐ ಮನವಿ
  • ವಿವಿ ವ್ಯಾಪ್ತಿಯಲ್ಲಿದೆ 1,210 ಎಕರೆ ಪ್ರದೇಶ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bengaluru university
ದೇವರಾಜ್‌ ಕನಕಪುರ
ಬೆಂಗಳೂರು:
ಬೆಂಗಳೂರು ವಿಶ್ವ ವಿದ್ಯಾಲಯದ ಜ್ಞಾನ ಭಾರತಿಯ ಜಾಗದ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಈಗಾಗಲೇ ನಾನಾ ಕಟ್ಟಡಗಳಿಗೆಂದು ಸ್ಥಳ ನೀಡಿದ್ದರೂ, ಮತ್ತಷ್ಟು ಸ್ಥಳಕ್ಕಾಗಿ ಮನವಿಗಳು ಬರುತ್ತಲೇ ಇವೆ. ಇದರಿಂದ ಅರಣ್ಯ ಸಂಪತ್ತಿನಿಂದ ಕೂಡಿರುವ ಬೆಂಗಳೂರು ವಿವಿ ಕಾಂಕ್ರೀಟ್‌ ಕಾಡಾಗಿ ಪರಿವರ್ತನೆಯಾಗುವ ಕಾಲ ದೂರ ಇಲ್ಲದಂತಾಗಿದೆ. ಏಕೆಂದರೆ, ಇತ್ತೀಚೆಗೆ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ (ಎನ್‌ಎಲ್‌ಎಸ್‌ಯುಐ) ಮತ್ತು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್‌) ಸ್ಥಳ ಕೇಳಿ ವಿವಿಗೆ ಮನವಿ ನೀಡಿದೆ.
ಎನ್‌ಎಲ್‌ಎಸ್‌ಯುಐ 10 ರಿಂದ 15 ಎಕರೆ ಜಮೀನು ನೀಡುವಂತೆ ಹಾಗೂ ಕೆಪಿಟಿಸಿಎಲ್‌ ವಿದ್ಯುತ್‌ ಉಪ ಕೇಂದ್ರ ಸ್ಥಾಪನೆಗೆ 50/50 ಮೀಟರ್‌ ಜಾಗವನ್ನು ನೀಡುವಂತೆ ಕೋರಿದೆ. ಎನ್‌ಎಲ್‌ಎಸ್‌ಯುಐ ಹಾಲಿ 23 ಎಕರೆ ಸ್ಥಳ ಪಡೆದಿದ್ದರೂ, ಕಟ್ಟಡಗಳ ವಿಸ್ತರಣೆಗಾಗಿ ಮತ್ತೆ ಬೇಡಿಕೆ ಸಲ್ಲಿಸಿದೆ.

ಹೊಸ ವಿದ್ಯಾರ್ಥಿಗಳಿಗೆ ಹಳೇ ಪಠ್ಯಕ್ರಮದ ಪ್ರಶ್ನೆಪತ್ರಿಕೆ : ಬೆಂಗಳೂರು ವಿವಿ ಪರೀಕ್ಷೆ ರದ್ದು
ಜ್ಞಾನಭಾರತಿ, ಸೆಂಟ್ರಲ್‌ ಕಾಲೇಜು ಮತ್ತು ಕೋಲಾರದ ಪಿ. ಜಿ. ಕೇಂದ್ರ ಸೇರಿದಂತೆ ವಿವಿ ವ್ಯಾಪ್ತಿಗೆ 1,210 ಎಕರೆ ಪ್ರದೇಶ ಸೇರಿದೆ. ಈ ಪೈಕಿ 236 ಎಕರೆ ಪ್ರದೇಶ ಬೆಂಗಳೂರು ವಿವಿ ಮತ್ತು ಸರಕಾರದ ನಡುವಿನ ವಾಜ್ಯದಲ್ಲಿ ಸಿಲುಕಿದೆ. ಉಳಿದಂತೆ 29 ಎಕರೆ ಪ್ರದೇಶವನ್ನು ಖಾಸಗಿ ಸಂಸ್ಥೆಗಳು, ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ. ಒಟ್ಟಾರೆ ವಿವಿ ವ್ಯಾಪ್ತಿಯಲ್ಲಿ 945 ಎಕರೆ ಪ್ರದೇಶ ಬಳಕೆಯಲ್ಲಿದೆ.

ಸಾಧ್ಯವಿಲ್ಲವೆಂದ ವಿವಿ: ಎನ್‌ಎಲ್‌ಎಸ್‌ಯುಐ ಮತ್ತು ಕೆಪಿಟಿಸಿಎಲ್‌ ನೀಡಿರುವ ಮನವಿಯನ್ನು ಬೆಂವಿವಿ ತಿರಸ್ಕರಿಸಿದೆ. ಇತ್ತೀಚೆಗೆ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಈ ವಿಚಾರವನ್ನು ಮಂಡಿಸಲಾಗಿತ್ತು. ಇದಕ್ಕೆ ಸಿಂಡಿಕೇಟ್‌ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಬೆಂಗಳೂರು ವಿವಿಯೇ ನಾಲ್ಕು ವರ್ಷದ ಆನರ್ಸ್ ಕೋರ್ಸ್‌ ಆರಂಭಿಸಿರುವುದರಿಂದ ಕಟ್ಟಡ, ಪ್ರಯೋಗಾಲಯ, ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೇರಿದಂತೆ ಇತರೆ ಮೂಲಸೌಕರ್ಯ ಕಲ್ಪಿಸುವುದಕ್ಕಾಗಿ ಮತ್ತಷ್ಟು ಸ್ಥಳದ ಅವಶ್ಯಕತೆ ಇರಲಿದ್ದು, ಮನವಿ ಪುರಸ್ಕರಿಸಿ ಜಾಗ ನೀಡಲು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದೆ.


ಕೋರ್ಟ್‌ ಆದೇಶ: ಬೆಂವಿವಿ ಜ್ಞಾನ ಭಾರತಿ ಆವರಣದಲ್ಲಿ 397 ಎಕರೆ 09 ಗುಂಟೆ ಜಮೀನನ್ನು ಅರಣ್ಯ ಪ್ರದೇಶ ಎಂದು ಸರಕಾರ ಘೋಷಿಸಿದೆ. ಇದರಿಂದ ಹಾಲಿ ಇರುವ ಜಾಗದಲ್ಲಿ ವಿವಿಯ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದೇ ಕಷ್ಟವಾಗಿದೆ. ಇತರೆ ಸಂಸ್ಥೆಗಳಿಗೆ ಜಮೀನು ನೀಡಿರುವುದನ್ನು ಪ್ರಶ್ನಿಸಿ ಹಾಗೂ ಈ ಜಾಗ ಬಯೋ ಪಾರ್ಕ್‌ಗೆ ಸೇರಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ನ್ಯಾಯಾಲಯದಲ್ಲಿ ದಾಖಲಾಗಿದೆ.

Narendra Modi ರಾಜ್ಯ ಪ್ರವಾಸ: ಎರಡೆರಡು ಬಾರಿ ಡಾಂಬರು ಭಾಗ್ಯ ಕಂಡ ಬೆಂಗಳೂರು ವಿವಿ ರಸ್ತೆಗಳು!
ಹೆಚ್ಚುವರಿ ಭೂಮಿ: ಹಾಲಿ ವಿಶ್ವ ವಿದ್ಯಾಲಯದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಇಲಾಖೆಗಳಿಗಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಭೋಗ್ಯದ ಕರಾರಿನ ಒಪ್ಪಂದದ ಮೇಲೆ 17 ಸಂಸ್ಥೆಗಳಿಗೆ 272.54 ಎಕರೆ ಪ್ರದೇಶವನ್ನು ನೀಡಿದೆ. ಅಲ್ಲದೆ, ಕಳೆದ ಕೆಲ ವರ್ಷಗಳಲ್ಲಿ ನ್ಯಾಕ್‌, ರಾಷ್ಟ್ರೀಯ ಕಾನೂನು ಶಾಲೆ, ಮೌಲಾನಾ ಅಜಾದ್‌ ನ್ಯಾಷನಲ್‌ ಯೂನಿವರ್ಸಿಟಿ ಸೇರಿದಂತೆ ವಿವಿಧ ಸಂಸ್ಥೆಗಳು ಹೆಚ್ಚುವರಿ ಭೂಮಿಯನ್ನು ಪಡೆದುಕೊಂಡಿವೆ.

ವಿವಿ ಪಡೆಯುವ ಬಾಡಿಗೆ ಎಷ್ಟು?: ಜ್ಞಾನಭಾರತಿಯಲ್ಲಿ ವಿದ್ಯಾಸಂಸ್ಥೆ, ಕ್ರೀಡೆ, ಪೊಲೀಸ್‌ ಇಲಾಖೆ ಸೇರಿದಂತೆ 20ಕ್ಕೂ ಹೆಚ್ಚಿನ ಸಂಸ್ಥೆಗಳಿಗೆ 200ಕ್ಕೂ ಹೆಚ್ಚಿನ ಎಕರೆ ಜಮೀನನ್ನು ಭೋಗ್ಯದ ಕರಾರಿನ ಮೇಲೆ ನೀಡಿದೆ. ಇದರಿಂದ ಪಡೆಯುತ್ತಿರುವ ಬಾಡಿಗೆ ಹಣ ಮಾತ್ರ ಅತ್ಯಂತ ಕಡಿಮೆಯಾಗಿದೆ. ಪ್ರತಿ ಎಕರೆಗೆ 1 ರೂ.ಗಳಿಂದ ಆರಂಭವಾಗಿ 1 ಸಾವಿರ ರೂ.ಗಳವರೆಗೆ ಬಾಡಿಗೆ ಪಡೆಯುತ್ತಿದೆ. ಇದು ಅತ್ಯಂತ ಕಡಿಮೆ ಬಾಡಿಗೆಯಾಗಿದ್ದು, ವಿವಿಯು ಇದನ್ನು ಹೆಚ್ಚಳ ಮಾಡುವ ಬಗ್ಗೆ ಗಮನ ಹರಿಸುತ್ತಿಲ್ಲ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ