ಆ್ಯಪ್ನಗರ

ತರಕಾರಿ ದರ ಇಳಿಕೆ, ಸೊಪ್ಪುಗಳ ದರ ಏರಿಕೆ

ಎರಡು ವಾರಗಳ ಹಿಂದಷ್ಟೇ ನೂರು ರೂ. ದಾಟಿದ್ದ ಕೆ.ಜಿ. ಬೀನ್ಸ್‌ ದರ ಇದೀಗ 52 ರೂ.ಗೆ ಇಳಿದಿದೆ. ಟೊಮೇಟೊ ದರ ಕೂಡ ಕೊಂಚ ಕಡಿಮೆಯಾಗಿದೆ.

Vijaya Karnataka 7 Jun 2018, 10:45 am
ಬೆಂಗಳೂರು: ಎರಡು ವಾರಗಳ ಹಿಂದಷ್ಟೇ ನೂರು ರೂ. ದಾಟಿದ್ದ ಕೆ.ಜಿ. ಬೀನ್ಸ್‌ ದರ ಇದೀಗ 52 ರೂ.ಗೆ ಇಳಿದಿದೆ. ಟೊಮೇಟೊ ದರ ಕೂಡ ಕೊಂಚ ಕಡಿಮೆಯಾಗಿದೆ. ಆದರೆ ಇತರೆ ತರಕಾರಿಗಳ ದರ ಏರಿಕೆಯಾಗಿದೆ. ಸೊಪ್ಪುಗಳು ಮಾತ್ರ ಗಗನಕ್ಕೇರಿದ್ದು, ಗ್ರಾಹಕರ ಕೈಗೆಟುಕದಂತಾಗಿದೆ.
Vijaya Karnataka Web Veg


ತರಕಾರಿ ಬೆಳೆಗಳಿಗೆ ಮಳೆ ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ನಷ್ಟ. ಆದರೆ ಇದೀಗ ಮಳೆ ಹದವಾಗಿ ಬೀಳುತ್ತಿರುವುದರಿಂದ ಕೆಲವು ಬೆಳೆಗಳಿಗೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಉತ್ಪಾದನೆಯಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದೆ. ಜತೆಗೆ ಇದೀಗ ಅಧಿಕ ಮಾಸ ಇರುವುದರಿಂದ ಶುಭ ಕಾರ್ಯಗಳು ನಡೆಯುತ್ತಿಲ್ಲ. ಹೀಗಾಗಿ ಬೀನ್ಸ್‌, ಟೊಮೇಟೊ, ಮೂಲಂಗಿ, ಬದನೆಕಾಯಿ ಸೇರಿದಂತೆ ಕೆಲವು ತರಕಾರಿಗಳಿಗೆ ಬೇಡಿಕೆ ಕಡಿಮೆಯಾಗಿದ್ದು, ಬೆಲೆಗಳು ಕೊಂಚ ಇಳಿಕೆಯಾಗಿವೆ.

ಹಾಗಲಕಾಯಿ, ಕ್ಯಾರಟ್‌, ಕ್ಯಾಪ್ಸಿಕಂ, ಬಜ್ಜಿ ಮೆಣಸಿನಕಾಯಿ, ಸೊಪ್ಪು ಮತ್ತಿತರ ಕೆಲ ತರಕಾರಿಗಳ ದರದಲ್ಲಿ ಮತ್ತೆ ಏರಿಕೆಯಾದರೆ, ಇತರೆ ಕೆಲವು ತರಕಾರಿಗಳ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಬಿಳಿ ಬದನೆಕಾಯಿ ಕೆ.ಜಿ.ಗೆ 28 ರೂ. ಇದ್ದರೆ ಗುಂಡು ಬದನೆ 20 ರೂ. ಇದೆ. ಕ್ಯಾಪ್ಸಿಕಂ 46 ರೂ. ಇದ್ದರೆ ಎಲೆಕೋಸು 15 ರೂ. ಇದೆ. ಬಜ್ಜಿ ಮೆಣಸಿನಕಾಯಿ 56 ರೂ. ಹಸಿ ಮೆಣಸಿನಕಾಯಿ 38 ರೂ. ಇದೆ.

ಬೇಸಿಗೆಯಲ್ಲಿ ಅಂತರ್ಜಲ ಕುಸಿದು ಬೋರ್‌ವೆಲ್‌ಗಳು ಬತ್ತುತ್ತವೆ. ಹೀಗಾಗಿ ನೀರಿನ ಕೊರತೆಯಿಂದಾಗಿ ತರಕಾರಿ ಬೆಳೆಗಳ ಇಳುವರಿ ಕುಂಠಿತಗೊಳ್ಳುತ್ತಿತ್ತು. ಜತೆಗೆ ಬೇಸಿಗೆಯಲ್ಲಿ ಮದುವೆ, ಗೃಹ ಪ್ರವೇಶ ಮತ್ತಿತರ ಶುಭ ಸಮಾರಂಭಗಳು ನಡೆಯುವುದರಿಂದ ಬೇಡಿಕೆ ಹೆಚ್ಚಿರುತ್ತದೆ. ಜತೆಗೆ ಪೂರೈಕೆ ಪ್ರಮಾಣ ಕಡಿಮೆಯಾಗಿ ಬೆಲೆಗಳು ಏರಿಕೆಯಾಗುತ್ತಿದ್ದವು. ಈ ಬಾರಿ ಅಂತಹ ಸಮಸ್ಯೆಯಿಲ್ಲ. ಮಳೆಯಿಂದಾಗಿ ನೀರಿನ ಕೊರತೆಯಿಲ್ಲ. ಜತೆಗೆ ಕಳೆದ ನವೆಂಬರ್‌ನಲ್ಲಿ ಭಾರೀ ಮಳೆ ಬಿದ್ದಿದ್ದರಿಂದ ಬೋರ್‌ವೆಲ್‌, ಬಾವಿಗಳಲ್ಲಿ ನೀರಿಗೇನೂ ಸಮಸ್ಯೆಯಿಲ್ಲ. ಹೀಗಾಗಿ ಕೆಲವು ಬೆಳೆಗಳಿಗೆ ಇದು ಸಹಕಾರಿಯಾಗಿದೆ. ಇದೀಗ ಮಳೆಗಾಲ ಆರಂಭವಾಗಿರುವುದರಿಂದ ತರಕಾರಿ ದರದಲ್ಲಿ ಮತ್ತಷ್ಟು ಇಳಿಕೆಯಾಗಲಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ