ಆ್ಯಪ್ನಗರ

ವಾಹನ ತಡೆ ತಪಾಸಣೆಗೆ ಬಿದ್ದಿಲ್ಲ ಬ್ರೇಕ್‌: ಆಧುನಿಕ ವ್ಯವಸ್ಥೆ ಬಂದರೂ ಹಳೇ ಪದ್ಧತಿಗೆ ಅಂಟಿಕೊಂಡ ಪೊಲೀಸರು!

ವಾಹನಗಳನ್ನು ಅಲ್ಲಲ್ಲಿ ಅಡ್ಡಗಟ್ಟಿ ಕೇಸ್‌ ದಾಖಲಿಸುವ ಹಳೆ ಪದ್ಧತಿ ಕೈ ಬಿಟ್ಟು, ಆಧುನಿಕ ವ್ಯವಸ್ಥೆಗಳನ್ನು ಅನುಸರಿಸಿ ದಂಡ ವಿಧಿಸಲು ಹಿರಿಯ ಪೊಲೀಸ್‌ ಅಧಿಕಾರಿಗಳು ಸೂಚನೆ ನೀಡಿದ್ದರೂ ಸಂಚಾರ ಪೊಲೀಸರು ಪಾಲಿಸಲು ಹಿಂದೇಟು ಹಾಕುತ್ತಿದ್ದಾರೆ.

Vijaya Karnataka Web 18 Jan 2021, 7:41 am
ಬೆಂಗಳೂರು: ರಸ್ತೆ ಮಧ್ಯೆ ವಾಹನ ಅಡ್ಡಗಟ್ಟುವುದು ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತಿದೆ ಎಂಬುದು ಮೊದಲಿನಿಂದಲೂ ಇರುವ ದೂರು. ಇದರಿಂದ ಸಂಚಾರ ದಟ್ಟಣೆ ಸೇರಿ ನಾನಾ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜ.7ರಂದು ಹಿರಿಯ ಅಧಿಕಾರಿಗಳ ಸಭೆಯಲ್ಲಿ ವಾಹನ ತಡೆದು ದಂಡ ವಿಧಿಸದಂತೆ ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ನಾನಾ ಠಾಣೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಮುಂದಿನ ಆದೇಶ, ಸೂಚನೆ ನೀಡುವವರೆಗೆ ವಾಹನ ಅಡ್ಡಗಟ್ಟಿ ದಂಡ ವಿಧಿಸುವುದನ್ನು ತಾತ್ಕಾಲಿಕವಾಗಿ ಕೈ ಬಿಡಿ ಎಂದು ಸೂಚಿಸಲಾಗಿತ್ತು. ಕೆಲ ಠಾಣೆಗಳಲ್ಲಿ ಮಾತ್ರ ಈ ಸೂಚನೆ ಪಾಲಿಸಲಾಗುತ್ತಿದೆ. ಬಹುತೇಕ ಠಾಣೆ ವ್ಯಾಪ್ತಿಯಲ್ಲಿ ಮತ್ತೆ ಹಳೆ ಪದ್ಧತಿಯಂತೆ ವಾಹನ ತಡೆಗಟ್ಟಿ ತಪಾಸಣೆ ನಡೆಸಲಾಗುತ್ತಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ಹಿರಿಯ ಅಧಿಕಾರಿಗಳ ಸೂಚನೆ ಇದ್ದರೂ ಮತ್ತೆ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ. ವಾಹನ ದಟ್ಟಣೆ ಅವಧಿಯಲ್ಲೂ ಪೊಲೀಸರು ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸುವುದರಿಂದ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ.

ಸವಾರರ ಸುರಕ್ಷತೆ ಅಪಾಯ
ಪೊಲೀಸರು ಸಿಗ್ನಲ್‌, ರಸ್ತೆ, ತಿರುವಿನಲ್ಲಿ ಬಚ್ಚಿಟ್ಟುಕೊಂಡು ಏಕಾಏಕಿ ವಾಹನಗಳನ್ನು ತಡೆದು ಅಡ್ಡಗಟ್ಟಿ ನಿಲ್ಲಿಸುವುದು ಹಲವು ಅಪಘಾತಕ್ಕೂ ಕಾರಣವಾಗಿದೆ. ಉಲ್ಲಂಘನೆ ಆಗಿದ್ದೇ ಆದಲ್ಲಿ ಮೊಬೈಲ್‌ಫೋನ್‌ ಮೂಲಕ ದಾಖಲಿಸುವುದರಿಂದ ಸವಾರರ ಸುರಕ್ಷತೆಗೆ ಆತಂಕ ಇರುವುದಿಲ್ಲ, ಸಂಚಾರ ಸಮಸ್ಯೆಯೂ ಆಗದು. ಅನುಮಾನ ಬಂದಲ್ಲಿ ಸವಾರರನ್ನು ಅಡ್ಡಗಟ್ಟಲಿ, ಡ್ರಂಕ್‌ ಆ್ಯಂಡ್‌ ಡ್ರೈವ್‌ ತಪಾಸಣೆ ಎಂದಿನಂತೆಯೇ ಮುಂದುವರಿಯಲಿ ಆದರೆ ದಂಡ ವಿಧಿಸುವ ಉದ್ದೇಶಕ್ಕೆ ಮೂರ್ನಾಲ್ಕು ಪೊಲೀಸರು ನಿಂತುಕೊಂಡು ವಾಹನ ಅಡ್ಡಗಟ್ಟುವುದು ಬೇಡ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕಬ್ಬನ್ ‌ಪಾರ್ಕ್ ಗೆ ಸಿಗಲಿದೆ ಹೊಸ ಲುಕ್‌: ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ!

ಟ್ರಾಫಿಕ್‌ ನಿಯಂತ್ರಿಸಲಿ

ಮೂರ್ನಾಲ್ಕು ಸಂಚಾರ ಪೊಲೀಸರು ಒಂದೆಡೆ ನಿಂತುಕೊಂಡು ವಾಹನ ಸವಾರರನ್ನು ಅಡ್ಡಗಟ್ಟುವ ದೃಶ್ಯ ಈಗಲೂ ಕಂಡು ಬರುತ್ತಿದೆ. ಇದೇ ವೇಳೆ ದಟ್ಟಣೆ ವೇಳೆ ಟ್ರಾಫಿಕ್‌ ನಿಯಂತ್ರಿಸಲು ಪೊಲೀಸ್‌ ಸಿಬ್ಬಂದಿಯೇ ಇರುವುದಿಲ್ಲ. ವಾಹನ ತಡೆಗಟ್ಟಿ ಸಮಯ ವ್ಯರ್ಥ ಮಾಡುವ ಬದಲು ಪೊಲೀಸರು ಸಂಚಾರ ನಿಯಂತ್ರಣಕ್ಕೆ ಆದ್ಯತೆ ನೀಡಲಿ ಎಂದು ಸಾರ್ವಜನಿಕರು ಜಾಲತಾಣಗಳಲ್ಲಿ ಸಲಹೆ ನೀಡಿದ್ದಾರೆ.

ಡಿಜಿಟಲ್‌ ಮಾಧ್ಯಮಕ್ಕೆ ಹೊಂದಿಕೊಳ್ಳಲಿ
ಅಧಿಕಾರಿಗಳು, ಕಾನ್ಸ್‌ಟೆಬಲ್‌ಗಳಿಗೆ ಡಿಜಿಟಲ್‌ ಎಫ್‌ಟಿವಿಆರ್‌ (ಮೊಬೈಲ್‌) ಕೊಡಲಾಗಿದ್ದು, ಇದರಿಂದ ಸುಲಭವಾಗಿ ಉಲ್ಲಂಘನೆ ಪ್ರಕರಣಗಳ ಬಗ್ಗೆ ನಿಗಾ ಇಡಬಹುದಾಗಿದೆ. ಒಂದೇ ಕ್ಲಿಕ್‌ನಲ್ಲಿ ಉಲ್ಲಂಘನೆ ಪ್ರಕರಣ ದಾಖಲಾಗುತ್ತದೆ. ಜತೆಗೆ ಇಲಾಖೆಯ ಸರ್ವರ್‌ನಲ್ಲೂ ದಾಖಲಾಗಿ ಇರುತ್ತದೆ. ಇದರಿಂದ ದಂಡದಿಂದ ತಪ್ಪಿಸಿಕೊಳ್ಳುವುದು ಸುಲಭವೇನಲ್ಲ. ತಡವಾಗಿಯಾದರೂ ಪೊಲೀಸ್‌ ಇಲಾಖೆಗೆ ದಂಡದ ಮೊತ್ತ ಸಂದಾಯವಾಗಲಿದೆ.
ಮೆಟ್ರೋ ಮಾತ್ರ ಸಾಲದು ಕನೆಕ್ಟಿವಿಟಿಯೂ ಬೇಕು, ಫೀಡರ್‌ ಬಸ್‌ಗೆ ಹೆಚ್ಚಿದ ಡಿಮ್ಯಾಂಡ್

ನಗರದ ನಾನಾ ಕಡೆ ಇರುವ ಸಿಸಿ ಕ್ಯಾಮೆರಾ, ಸೆನ್ಸರ್‌ಗಳಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇವುಗಳನ್ನು ಸಮರ್ಪಕವಾಗಿ ಕಾರ್ಯ ನಿರ್ವಸಹಿಸುವಂತೆ ಮಾಡಿದಲ್ಲಿ ಉಲ್ಲಂಘನೆ ಪ್ರಕರಣಗಳನ್ನು ಇನ್ನಷ್ಟು ಪತ್ತೆ ಹಚ್ಚಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ