ಆ್ಯಪ್ನಗರ

ರೈತ ಮಿತ್ರ: ಕುಮಾರಸ್ವಾಮಿಯೋ? ಯಡಿಯೂರಪ್ಪರೋ? ಅಥವಾ ಎರೆ ಹುಳುವೋ?

ರೈತನ ಮಿತ್ರನಾರು? ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯೋ ಅಥವಾ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರೋ ಅಥವಾ ಎರೆಹುಳುವೋ?

Vijaya Karnataka 27 Mar 2019, 10:52 am
ಬೆಂಗಳೂರು: ರೈತನ ಮಿತ್ರನಾರು? ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯೋ ಅಥವಾ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರೋ ಅಥವಾ ಎರೆಹುಳುವೋ?
Vijaya Karnataka Web Question Paper


ಬೆಂಗಳೂರಿನ ರಾಜರಾಜೇಶ್ವರಿ ನಗರದ ಮೌಂಟ್‌ ಕಾರ್ಮೆಲ್‌ ಇಂಗ್ಲಿಷ್‌ ಹೈಸ್ಕೂಲ್‌ನ 2019ನೇ ಸಾಲಿನ 8ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ತೃತೀಯ ಭಾಷೆ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಕೇಳಿರುವ ಪ್ರಶ್ನೆ ಇದು. ಇದರಿಂದ, ವಿದ್ಯಾರ್ಥಿಗಳು ಉತ್ತರಿಸಲು ತಬ್ಬಿಬ್ಬಾದರು.

ಪರೀಕ್ಷೆಯಲ್ಲಿ ಇಂತಹ ಅಸಂಬದ್ಧವಾದ ಪ್ರಶ್ನೆ ಕೇಳಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿದೆ. ರೈತನ ಮಿತ್ರನಾಗಿ ಸಿಎಂ ಹಾಗೂ ಮಾಜಿ ಸಿಎಂ ಅವರನ್ನು ಉತ್ತರದ ಆಯ್ಕೆಗೆ ಅವಕಾಶ ಕಲ್ಪಿಸಿರುವುದು, ಪ್ರಭಾವಿಗಳ ಓಲೈಕೆಗೋ ಅಥವಾ ಮಕ್ಕಳ ಜ್ಞಾನವನ್ನು ಪರೀಕ್ಷಿಸಲೋ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಆಯಾ ಶಾಲೆಗಳಲ್ಲೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲು ಅವಕಾಶ ಕಲ್ಪಿಸಿರುವುದು ಇಂತಹ ಗೊಂದಲಗಳಿಗೆ ಕಾರಣವಾಗುತ್ತಿದೆ. ಎರೆಹುಳು ರೈತನ ಮಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರು ರಾಜಕಾರಣಿಗಳಾಗಿದ್ದು, ರೈತನ ಮಿತ್ರನಿಗೆ ಹೋಲಿಸಿ ಉತ್ತರ ಬರೆಯಲು ಕೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಇಂಥದ್ದೇ ಮತ್ತೊಂದು ಪ್ರಶ್ನೆ:

ಮಾಸ್ತಿಯವರು ಪ್ರೀತಿಸಿದ ಮತ್ತೊಂದು ಹೆಣ್ಣು ಯಾರು? ಎಂಬ ಪ್ರಶ್ನೆಗೆ ಹೆಂಡತಿ, ತಂಗಿ ಹಾಗೂ ಅಮ್ಮ ಎಂಬ ಆಯ್ಕೆ ಉತ್ತರಗಳನ್ನು ನೀಡಲಾಗಿದೆ. ಇಲ್ಲಿ ಮಾಸ್ತಿಯವರು ಪ್ರೀತಿಸಿದ ಮತ್ತೊಂದು ಹೆಣ್ಣು ಯಾರು ಎಂಬ ಪ್ರಶ್ನೆಯೇ ಎರಡು ಅರ್ಥ ಬರುವ ರೀತಿಯಲ್ಲಿದ್ದು, ನಾಡಿನ ಖ್ಯಾತ ಕಥೆಗಾರನಿಗೆ ಅಪಮಾನ ಮಾಡುವ ರೀತಿಯಲ್ಲಿದೆ. ಹೆಣ್ಣು ಬದಲು ಮಹಿಳೆ ಎಂದು ಗೌರವಯುತವಾದ ಪದ ಬಳಕೆ ಮಾಡಬಹುದಿತ್ತು. ಇಂತಹ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ಶಿಕ್ಷಕರ ಬೇಜವಾಬ್ದಾರಿತನದ ಬಗ್ಗೆ ಶಿಕ್ಷಣ ವಲಯದಲ್ಲಿ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ