ಮುನಿರತ್ನ v/s ಕುಸುಮಾ ಬಲಾಬಲ ಹೇಗಿದೆ?
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ಇದ್ದರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಎಚ್. ಇದ್ದಾರೆ. ಈ ಪೈಕಿ ಮುನಿರತ್ನ ಅವರಿಗೆ ಕ್ಷೇತ್ರದಲ್ಲಿ ವೈಯಕ್ತಿಕ ಸಂಪರ್ಕ ಹಾಗೂ ಬೂತ್ ಮಟ್ಟದಲ್ಲಿ ಸದೃಡ ಕಾರ್ಯಕರ್ತರ ಪಡೆಯನ್ನು ಹೊಂದಿದ್ದಾರೆ. ಬಿಜೆಪಿ ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಬಲ ಪ್ರಯೋಗ ಮಾಡಿದರೂ ಗೆಲ್ಲಲು ಸಾಧ್ಯವಾಗಿಲ್ಲ. ಪಕ್ಷ ನಿಷ್ಠೆಗಿಂದ ವ್ಯಕ್ತಿ ನಿಷ್ಠೆ ಹೊಂದಿರುವ ಮತದಾರರು ಹಾಗೂ ಕಾರ್ಯಕರ್ತರು ಮುನಿರತ್ನಗೆ ಇರುವ ದೊಡ್ಡ ಆಸ್ತಿ. ಆದರೆ ಕುಸುಮಾ ಅವರಿಗೆ ರಾಜಕೀಯ ಕ್ಷೇತ್ರ ಹೊಸತು. ಅವರ ಕುಟುಂಬ ರಾಜಕೀಯ ಹಿನ್ನೆಲೆಯನ್ನು ಹೊಂದಿದರೂ ಕುಸುಮಾ ಶಿಕ್ಷಣ ಕ್ಷೇತ್ರದಿಂದ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟವರು. ಚುನಾವಣಾ ರಾಜಕೀಯ ಪಟ್ಟುಗಳು ಅವರಿಗೆ ಇನ್ನಷ್ಟೇ ಕರಗತವಾಗಬೇಕಿದೆ. ಅವರ ಜೊತೆಗೆ ಅವರ ತಂದೆ ಹನುಮಂತರಾಯಪ್ಪ ಹಾಗೂ ಡಿಕೆ ಶಿವಕುಮಾರ್, ಡಿಕೆ ಸುರೇಶ್ ತಂಡ ಇದ್ದರೂ ಚುನಾವಣಾ ಕಣದಲ್ಲಿ ಧೂಳೆಬ್ಬಿಸುವುದು ಸುಲಭದ ಮಾತಲ್ಲ.
ಕಾಂಗ್ರೆಸ್ಗೆ ಕಾರ್ಯಕರ್ತರ ಕೊರತೆಯೇ ಬಹುದೊಡ್ಡ ಹಿನ್ನಡೆ
ಕಾಂಗ್ರೆಸ್ನಲ್ಲಿದ್ದ ಮುನಿರತ್ನ ಪಕ್ಷ ತೊರೆದು ಬಿಜೆಪಿಗೆ ಸೇರಿದರು. ಅವರ ಜೊತೆಗೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ದೊಡ್ಡ ಪಡೆಯನ್ನೇ ಕಾಂಗ್ರೆಸ್ ಕಳೆದುಕೊಂಡು ಬಿಟ್ಟಿದೆ. ಕಾಂಗ್ರೆಸ್ನಲ್ಲಿದ್ದ ಐವರು ಪಾಲಿಕೆ ಸದಸ್ಯರು ಮುನಿರತ್ನ ಜೊತೆಗೆ ಇದ್ದಾರೆ. ಓರ್ವ ಜೆಡಿಎಸ್ ಸದಸ್ಯ ಹಾಗೂ ಬಿಜೆಪಿ ಸದಸ್ಯನ ಬೆಂಬಲವೂ ಅವರ ಜೊತೆಗಿದೆ. ಚುನಾವಣಾ ರಾಜಕೀಯಕ್ಕೆ ಕಾರ್ಯಕರ್ತರ ಶಕ್ತಿಯೇ ಪ್ರಮುಖವಾಗಿದೆ. ಆದರೆ ಕಾಂಗ್ರೆಸ್ ತನ್ನ ಶಕ್ತಿಯನ್ನು ಕಳೆದುಕೊಂಡಿದೆ. ಈ ಕಾರಣಕ್ಕಾಗಿಯೇ ಹೊರಗಿನಿಂದ ಕಾರ್ಯಕರ್ತರನ್ನು ತಂದು ಚುನಾವಣಾ ಪ್ರಚಾರ ನಡೆಸುತ್ತಿದೆ. ಆದರೆ ಚುನಾವಣೆಯ ಸಂದರ್ಭದಲ್ಲಿ ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವುದು ಸುಲಭದ ಮಾತಲ್ಲ. ಎಷ್ಟೇ ತಂತ್ರಗಾರಿಕೆ ನಡೆಸಿದರೂ ಸ್ಥಳೀಯವಾಗಿ ಮತದಾರರ ಮನೆ ಮನ ತಲುಪುವುದು ಹಾಗೂ ಅವರಲ್ಲಿ ನಿಯಂತ್ರಣ ಸಾಧಿಸುವುದು ಕಷ್ಟದ ಮಾತೇ ಸರಿ.
ಬಿಜೆಪಿಯ ಭಿನ್ನಮತ ಕಾಂಗ್ರೆಸ್ಗೆ ಲಾಭ
ಸದ್ಯ ಕಾಂಗ್ರೆಸ್ ಪಾಲಿಗೆ ಸಕರಾತ್ಮಕವಾಗಿರುವುದು ಬಿಜೆಪಿ ಪಕ್ಷದಲ್ಲಿರುವ ಆಂತರಿಕ ಭಿನ್ನಮತ. ಮುನಿರಾಜುಗೌಡ ಹಾಗೂ ಆರ್ಎಸ್ಎಸ್ ಸಂಘಟನಾ ಸಾಮರ್ಥ್ಯದ ಬೆಂಬಲ ಮುನಿರತ್ನಗೆ ಸಿಗುವುದು ಕಷ್ಟಸಾಧ್ಯ. ಅನಿವಾರ್ಯವಾಗಿ ಪಕ್ಷದ ಸೂಚನೆಯಂತೆ ಮುನಿರತ್ನ ಪರವಾಗಿ ಮುನಿರಾಜುಗೌಡ ಪ್ರಚಾರ ನಡೆಸುತ್ತಿದ್ದಾರೆ. ಇವರ ಭಿನ್ನಮತ ತೀವ್ರಗೊಂಡರೂ ಬಹಿರಂಗವಾಗಿ ಆರೋಪ ಪ್ರತ್ಯಾರೋಪ ನಡೆಸುವಷ್ಟರ ಮಟ್ಟಿಗೆ ಇನ್ನೂ ತಲುಪಿಲ್ಲ. ಇದರ ಲಾಭವನ್ನು ಪಡೆಯಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ. ಆದರೆ ಇದು ಎಷ್ಟರ ಮಟ್ಟಿದೆ ಲಾಭದಾಯದ ಎಂಬುವುದು ಅಷ್ಟೇ ಗಮನಾರ್ಹ. ಮುನಿರಾಜುಗೌಡ ವಿರೋಧ ಇದ್ದರೂ ಕ್ಷೇತ್ರದಲ್ಲಿ ಸಂಘದ ಹಿಡಿತ ಇಷ್ಟೊಂದು ಪ್ರಬಲವಾಗಿಲ್ಲ ಎನ್ನುತ್ತಾರೆ ಸ್ಥಳೀಯರು. ಈ ಕಾರಣದಿಂದ ಮುನಿರಾಜು ಬಂಡಾಯ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟು ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಆಂತರಿಕ ಸಮೀಕ್ಷೆ ಏನು ಹೇಳುತ್ತೆ?
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆಂತರಿಕ ಸಮೀಕ್ಷೆಯನ್ನು ನಡೆಸಿದೆ. ಆದರೆ ಈ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಗೆಲ್ಲುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗುತ್ತಿದೆ. ಸದ್ಯದ ವಾತಾವರಣ ಮುನಿರತ್ನ ಪರವಾಗಿದ್ದು ಕಾಂಗ್ರೆಸ್ ಮುಖಂಡರಲ್ಲಿ ನಡುಕ ಹುಟ್ಟಿಸಿದೆ. ಸಮೀಕ್ಷೆಯಲ್ಲಿ ಮತದಾರರ ಒಲವು ಮುನಿರತ್ನ ಪರವಾಗಿರುವುದು ತಿಳಿದುಬಂದಿರುವುದರಿಂದ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಗೂ ಅಘಾತವಾಗಿದೆ. ಆದರೆ ಅಂತಮ ಫಲಿತಾಂಶವೇ ಎಲ್ಲವನ್ನು ನಿರ್ಧರಿಸುತ್ತದೆ. ಸಮೀಕ್ಷೆ ಏನೇ ಹೇಳಿದರೂ ನವೆಂಬರ್ 10 ಮುನಿರತ್ನ, ಕುಸುಮಾ ಹಾಗೂ ವಿ. ಕೃಷ್ಣಮೂರ್ತಿ ಭವಿಷ್ಯ ನಿರ್ಧಾರವಾಗಲಿದೆ.