ಆ್ಯಪ್ನಗರ

ಸಂಕ್ರಾಂತಿ ಹಬ್ಬಕ್ಕೆ ಮೆಟ್ರೊ ರೈಲಿನ ಸವಾರಿ, ಯಲಚೇನಹಳ್ಳಿ-ರೇಷ್ಮೆ ಸಂಸ್ಥೆ ನಡುವೆ ಸಂಚಾರ

ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) 2016ರಲ್ಲಿ ಎನ್‌ಸಿಸಿ ಲಿಮಿಟೆಡ್‌ ಕಂಪೆನಿಗೆ ಮಾರ್ಗ ನಿರ್ಮಾಣದ ಗುತ್ತಿಗೆ ನೀಡಿತ್ತು. 2016ರ ಜನವರಿಯಲ್ಲಿ ಆರಂಭಗೊಂಡ ಕಾಮಗಾರಿಯು ಐದು ವರ್ಷಗಳ ಬಳಿಕ ಪೂರ್ಣಗೊಂಡಿದೆ.

Vijaya Karnataka Web 7 Jan 2021, 9:18 pm
ಬೆಂಗಳೂರು: 'ನಮ್ಮ ಮೆಟ್ರೊ' ಎರಡನೇ ಹಂತದ ಕನಕಪುರ ಮುಖ್ಯರಸ್ತೆಯ ಯಲಚೇನಹಳ್ಳಿ-ನೈಸ್‌ ರಸ್ತೆವರೆಗಿನ (ರೇಷ್ಮೆ ಸಂಸ್ಥೆ) ಮೊದಲ ವಿಸ್ತರಿತ ಮಾರ್ಗದಲ್ಲಿ ಸಂಕ್ರಾಂತಿ ಹಬ್ಬದ ದಿನದಿಂದ ಮೆಟ್ರೊ ರೈಲಿನ ಸವಾರಿ ಆರಂಭವಾಗಲಿದೆ. ಐದು ನಿಲ್ದಾಣಗಳ ನಡುವಿನ ಸಂಚಾರಕ್ಕೆ 19 ರೂ. ಪ್ರಯಾಣ ದರ ನಿಗದಿಪಡಿಸುವ ಸಾಧ್ಯತೆಗಳಿವೆ.
Vijaya Karnataka Web ಮೆಟ್ರೊ ರೈಲು
ಮೆಟ್ರೊ ರೈಲು


ರಾಜಧಾನಿಯ ಉತ್ತರ ದಿಕ್ಕಿನ ನಾಗಸಂದ್ರದಲ್ಲಿ ಆರಂಭವಾಗಿ ದಕ್ಷಿಣದ ಯಲಚೇನಹಳ್ಳಿಯಲ್ಲಿ ಕೊನೆಗೊಳ್ಳುವ ಒಂದನೇ ಹಂತದ 24.20 ಕಿ.ಮೀ. ಮಾರ್ಗದ ವಿಸ್ತರಿತ ಹಾದಿಯೇ 6.29 ಕಿ.ಮೀ. ಉದ್ದದ ಯಲಚೇನಹಳ್ಳಿ-ನೈಸ್‌ ರಸ್ತೆ (ರೀಚ್‌-4ಬಿ) ಮಾರ್ಗ. ಈ ಮಾರ್ಗವನ್ನು ಜ. 14ರಂದು ಸಂಜೆ 4.30ಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಉದ್ಘಾಟಿಸಲಿದ್ದಾರೆ. ಕೋಣನಕುಂಟೆ ಕ್ರಾಸ್‌ನಲ್ಲಿನ ಮೆಟ್ರೊ ನಿಲ್ದಾಣದ ಬಳಿ ಕಾರ್ಯಕ್ರಮ ನಡೆಯಲಿದೆ. ಜ. 15ರಿಂದ ವಾಣಿಜ್ಯ ಸಂಚಾರ ಶುರುವಾಗಲಿದೆ.

ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) 2016ರಲ್ಲಿ ಎನ್‌ಸಿಸಿ ಲಿಮಿಟೆಡ್‌ ಕಂಪೆನಿಗೆ ಮಾರ್ಗ ನಿರ್ಮಾಣದ ಗುತ್ತಿಗೆ ನೀಡಿತ್ತು. 2016ರ ಜನವರಿಯಲ್ಲಿ ಆರಂಭಗೊಂಡ ಕಾಮಗಾರಿಯು ಐದು ವರ್ಷಗಳ ಬಳಿಕ ಪೂರ್ಣಗೊಂಡಿದೆ. ಮೆಟ್ರೊ ರೈಲು ಸುರಕ್ಷತಾ ಆಯುಕ್ತರ ತಂಡವು ನ. 18, 19ರಂದು ಮಾರ್ಗದ ಪರಿಶೀಲನೆ ನಡೆಸಿತ್ತು. ಸಾರ್ವಜನಿಕ ಸೇವೆ ಆರಂಭಕ್ಕೆ ಮುನ್ನ 37 ಷರತ್ತುಗಳನ್ನು ಪೂರೈಸುವಂತೆ ಸೂಚಿಸಿ ನ. 25ರಂದು ಸುರಕ್ಷತಾ ಪ್ರಮಾಣಪತ್ರ ನೀಡಿತ್ತು. ಈ ಪ್ರಮಾಣ ಪತ್ರ ಲಭಿಸಿ ಒಂದೂವರೆ ತಿಂಗಳ ಬಳಿಕ ವಾಣಿಜ್ಯ ಸಂಚಾರಕ್ಕೆ ಮುಹೂರ್ತ ನಿಗದಿಪಡಿಸಲಾಗಿದೆ.

ಮೆಟ್ರೊ ರೈಲಿನಲ್ಲಿ ಸಂಚರಿಸಲು ಕಾತರರಾಗಿದ್ದ ಈ ಭಾಗದ ಜನರ ಹಲವು ವರ್ಷಗಳ ಕನಸು ನನಸಾಗುತ್ತಿದೆ. ಉತ್ತರ-ದಕ್ಷಿಣ ಕಾರಿಡಾರ್‌ನ ಒಟ್ಟು 30.49 ಕಿ.ಮೀ. ಉದ್ದದ ಮಾರ್ಗದಲ್ಲಿ ರೈಲು ಓಡಾಡಲಿದೆ. ಇದರಿಂದ ಬನಶಂಕರಿ 6ನೇ ಹಂತ, ಕೋಣನಕುಂಟೆ ಕ್ರಾಸ್‌, ದೊಡ್ಡಕಲ್ಲಸಂದ್ರ, ರಘುವನಹಳ್ಳಿ, ಗುಬ್ಬಲಾಳ, ವಾಜರಹಳ್ಳಿ, ತಲಘಟ್ಟಪುರ ಮತ್ತು ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳಿಗೆ ತುಂಬಾ ಅನುಕೂಲವಾಗಲಿದೆ. ಕೆಲವೇ ನಿಮಿಷಗಳಲ್ಲಿ ಹೊರವಲಯದಿಂದ ನಗರದ ಹೃದಯ ಭಾಗವನ್ನು ತಲುಪಬಹುದಾಗಿದೆ.

'ನಮ್ಮ ಮೆಟ್ರೊ' 2ನೇ ಹಂತದ ಯೋಜನೆಯು ಫೆ. 2014ರಲ್ಲಿ ಆಡಳಿತಾತ್ಮಕ ಮಂಜೂರಾತಿ ಪಡೆದುಕೊಂಡಿತು. ಒಟ್ಟು 26,405.14 ಕೋಟಿ ರೂ. ವೆಚ್ಚದಲ್ಲಿ 72 ಕಿ.ಮೀ. ಉದ್ದದ ಮೆಟ್ರೊ ರೈಲು ಮಾರ್ಗ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಯೋಜನೆ ವಿಳಂಬದಿಂದಾಗಿ ಯೋಜನಾ ವೆಚ್ಚವು 30,695.12 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

ಮೆಟ್ರೊ ನಿಗಮವು ಯೋಜಿಸಿದಂತೆ ಕಾಮಗಾರಿ ನಡೆಸಿದ್ದರೆ, ಇಷ್ಟೊತ್ತಿಗೆ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಕಾರಿಡಾರ್‌ನ ಎರಡು ದಿಕ್ಕುಗಳಲ್ಲಿನ ವಿಸ್ತರಿತ ಮಾರ್ಗದಲ್ಲಿ ರೈಲುಗಳ ಕಾರ್ಯಾಚರಣೆ ಆರಂಭವಾಗಬೇಕಿತ್ತು. ಯಲಚೇನಹಳ್ಳಿಯಿಂದ ನೈಸ್‌ ರಸ್ತೆವರೆಗಿನ ಎತ್ತರಿಸಿದ ಮಾರ್ಗದ ನಿರ್ಮಾಣ ಕಾಮಗಾರಿಯು 2018ರ ಡಿಸೆಂಬರ್‌ನೊಳಗೆ ಪೂರ್ಣಗೊಳ್ಳಬೇಕಿತ್ತು. ನ. 1ರ ಕನ್ನಡ ರಾಜ್ಯೋತ್ಸವ ದಿನದಂದೇ ಉದ್ಘಾಟನೆ ಮಾಡುವುದಾಗಿ ಬಿಎಂಆರ್‌ಸಿಎಲ್‌ ಹೇಳಿತ್ತು. ಆದರೆ, ಕೇಂದ್ರದ ರೈಲ್ವೆ ಸುರಕ್ಷತಾ ಆಯುಕ್ತರಿಂದ ಸುರಕ್ಷತಾ ಪ್ರಮಾಣಪತ್ರ ದೊರೆತಿರಲಿಲ್ಲ. ಇದೀಗ 6.29 ಕಿ.ಮೀ ಮಾರ್ಗವು ಸಾರ್ವಜನಿಕ ಸೇವೆಗೆ ಸಿದ್ಧವಾಗಿದೆ. ಇದರಿಂದ ನಗರದ ಮೆಟ್ರೊ ರೈಲು ಸಂಪರ್ಕ ಜಾಲವು 48.1 ಕಿ.ಮೀ ಗೆ ವಿಸ್ತರಿಸಲಿದೆ.

ಯಲಚೇನಹಳ್ಳಿ ರೇಷ್ಮೆ ಸಂಸ್ಥೆ (ನೈಸ್‌ ರಸ್ತೆ) ಮಾರ್ಗದ ನಿಲ್ದಾಣಗಳು: ಕೋಣನಕುಂಟೆ ಕ್ರಾಸ್‌, ಗುಬ್ಬಲಾಳ ಗೇಟ್‌ (ಕೃಷ್ಣಲೀಲಾ ಪಾರ್ಕ್), ವಾಜರಹಳ್ಳಿ, ತಲಘಟ್ಟಪುರ, ರೇಷ್ಮೆ ಸಂಸ್ಥೆ.

* ಯಲಚೇನಹಳ್ಳಿ-ನೈಸ್‌ ಮಾರ್ಗದ ಉದ್ದ 6.29 ಕಿ.ಮೀ.

* ಒಟ್ಟು ನಿಲ್ದಾಣಗಳು 5

* ಯೋಜನಾ ವೆಚ್ಚ 1765.88 ಕೋಟಿ ರೂ.

* ಜ. 14ರಂದು ಸಿಎಂ ಬಿಎಸ್‌ವೈ ಅವರಿಂದ ಉದ್ಘಾಟನೆ

* ಜ. 15ರಿಂದ ವಾಣಿಜ್ಯ ಸಂಚಾರ ಆರಂಭ

* 19 ರೂ. ಪ್ರಯಾಣ ದರ ನಿಗದಿ ಸಾಧ್ಯತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ