ಮುಂದಿನ ವರ್ಷಕ್ಕೆ ಜಿಲ್ಲಾಡಳಿತ ದೇವನಹಳ್ಳಿಗೆ ಶಿಫ್ಟ್!
ದಿಕ್ಕಿಗೊಂದು ಇಲಾಖೆಗಳನ್ನು ಒಳಗೊಂಡಿರುವ ಜಿಲ್ಲೆಯ ವಿವಿಧ ಕಚೇರಿಗಳಿಗೆ ದಿನಂಪ್ರತಿ ಅಲೆದಾಟ ನಡೆಸುತ್ತಿರುವ ನಾಲ್ಕೂ ತಾಲೂಕಿನ ಜನರ ಬವಣೆ ಈ ವರ್ಷಾಂತ್ಯಕ್ಕೆ ಕೊನೆಗೊಳ್ಳುವ ಸಾಧ್ಯತೆ ಇದೆ.
ಬೆಂಗಳೂರು ಗ್ರಾಮಾಂತರ: ದಿಕ್ಕಿಗೊಂದು ಇಲಾಖೆಗಳನ್ನು ಒಳಗೊಂಡಿರುವ ಜಿಲ್ಲೆಯ ವಿವಿಧ ಕಚೇರಿಗಳಿಗೆ ದಿನಂಪ್ರತಿ ಅಲೆದಾಟ ನಡೆಸುತ್ತಿರುವ ನಾಲ್ಕೂ ತಾಲೂಕಿನ ಜನರ ಬವಣೆ ಈ ವರ್ಷಾಂತ್ಯಕ್ಕೆ ಕೊನೆಗೊಳ್ಳುವ ಸಾಧ್ಯತೆ ಇದೆ.
ದೇವನಹಳ್ಳಿ ತಾಲೂಕಿನಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ವಿಶ್ವನಾಥಪುರ ಪೊಲೀಸ್ ಠಾಣೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ತಲೆ ಎತ್ತುತ್ತಿರುವ ಜಿಲ್ಲಾಧಿಕಾರಿಯ ನೂತನ ಕಚೇರಿಯ ಕಟ್ಟಡ ನಿರ್ಮಾಣ ಕಾರ್ಯ ಡಿಸೆಂಬರ್ ವೇಳೆಗೆ ಮುಕ್ತಾಯವಾಗುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
2018ರ ಜನವರಿ ವೇಳೆಗೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸಮಯ ನಿಗದಿಪಡಿಸಿ ನೂತನ ಕಟ್ಟಡ ನಿರ್ಮಾಣ ಕಾರ್ಯ 2015ರ ಜುಲೈನಲ್ಲಿ ಆರಂಭಗೊಂಡಿತ್ತು. ಸುಮಾರು 43 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕಟ್ಟಡ ನಿರ್ಮಾಣ ಕಾಮಗಾರಿ ಹೊಣೆಯನ್ನು ಕರ್ನಾಟಕ ಹೌಸಿಂಗ್ ಬೋರ್ಡ್(ಕೆಎಚ್ಬಿ)ಗೆ ವಹಿಸಲಾಗಿತ್ತು. ಸದ್ಯ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಎರಡನೇ ಅಂತಸ್ತಿನವರೆಗೆ ಪೂರ್ಣ ಗೊಂಡಿದೆ. ಮೂರನೇ ಮಹಡಿ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಡಿಸೆಂಬರ್ ವೇಳೆಗೆ ಕಟ್ಟಡ ನಿರ್ಮಾಣ ಕಾರ್ಯ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.
ಕಚೇರಿಗಳ ಒಳಾಂಗಣ ವಿನ್ಯಾಸ, ಕ್ಯಾಬಿನ್ಗಳ ನಿರ್ಮಾಣ, ಪಿಠೋಪಕರಣಗಳ ಅಳವಡಿಸುವಿಕೆ ಸೇರಿದಂತೆ ವಿವಿಧ ಮೂಲ ಸೌಕರ್ಯ ಕಲ್ಪಿಸಿಕೊಡಲು ಸುಮಾರು ಮೂರು ತಿಂಗಳು ಹಿಡಿಯಲಿದೆ. ಬಹುತೇಕ ಮಾರ್ಚ್ ಅಂತ್ಯಕ್ಕೆ ಈ ಕೆಲಸಗಳೆಲ್ಲಾ ಪೂರ್ಣಗೊಂಡು ಏಪ್ರಿಲ್ ವೇಳೆಗೆ ಎಲ್ಲಾ ಇಲಾಖೆಗಳು ವಿಶ್ವನಾಥಪುರ ವ್ಯಾಪ್ತಿಯ ಚಪ್ಪರಹಳ್ಳಿಯಲ್ಲಿ ಕಾರ್ಯ ನಿರ್ವಹಿಸಲಿವೆ.
ಎಲ್ಲೆಲ್ಲಿ ಏನೇನು?: ಸುಮಾರು 1.75 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡ ಮೂರು ಬ್ಲಾಕ್ಗಳನ್ನು ಒಳಗೊಂಡಂತೆ ಮೂರು ಅಂತಸ್ತಿನಿಂದ ಕೂಡಿರಲಿದೆ. ಎ ಬ್ಲಾಕ್ನಲ್ಲಿ ಜಿಲ್ಲಾಧಿಕಾರಿ ಕಚೇರಿ, ಕೋರ್ಟ್ ಹಾಲ್, ವೀಡಿಯೋ ಸಂವಾದ ನಡೆಸುವ ಸಭಾಂಗಣ ಸೇರಿದಂತೆ ಅಧಿಕಾರಿಗಳ ಸಭಾಂಗಣ ಒಳಗೊಂಡಿರಲಿದೆ. ಬಿ ಬ್ಲಾಕ್ನಲ್ಲಿ ರಿಜಿಸ್ಟರ್ ಕಚೇರಿ, ಕಂದಾಯ, ಅಬಕಾರಿ ಇಲಾಖೆ, ಸ್ಥಳೀಯ ಅಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಬರಲಿವೆ. ಸಿ ಬ್ಲಾಕ್ ಸಂಪೂರ್ಣ ಜಿಲ್ಲಾ ಪಂಚಾಯಿತಿಗೆ ಸೇರಿದ ಕಚೇರಿಗಳನ್ನು ಒಳಗೊಂಡಿರಲಿದೆ. ಜಿಲ್ಲಾ ಪಂಚಾಯತ್ ಸಂಭಾಗಣ, ಸಿಇಒ ಕಚೇರಿ, ಅಧ್ಯಕ್ಷ, ಉಪಾಧ್ಯಕ್ಷರ ಕಚೇರಿ ಮತ್ತು ಜಿಲ್ಲಾ ಪಂಚಾಯಿತಿ ಆಡಳಿತ ವರ್ಗದ ಕಚೇರಿಗಳಿಂದ ಕೂಡಿರಲಿದೆ. ಇದರ ಜತೆಗೆ 500 ಜನರು ಕೂರುವಂತಹ ಆಡಿಟೋರಿಯಂ, 150 ಜನರ ಕುಳಿತುಕೊಳ್ಳುವ ಸ್ಥಳಾವಕಾಶವಿರುವ ಸಭಾ ಭವನ ಒಳಗೊಂಡಿರಲಿದೆ.
30 ವರ್ಷದ ಬಳಿಕ ಜಿಲ್ಲಾಕೇಂದ್ರ: ಬೆಂಗಳೂರು ನಗರ ಜಿಲ್ಲೆಯಿಂದ ಪ್ರತ್ಯೇಕಗೊಂಡು ಸುಮಾರು 30 ವರ್ಷ ಕಳೆದಿದ್ದರೂ ಜಿಲ್ಲಾ ಕೇಂದ್ರ ನಗರದಲ್ಲೇ ಇತ್ತು. ವಿಪರ್ಯಾಸ ಎಂದರೆ ಜಿಲ್ಲಾಧಿಕಾರಿ ಕಚೇರಿ ಒಂದು ದಿಕ್ಕಿನಲ್ಲಿದ್ದರೆ ಜಿಪಂ ಕಚೇರಿ ಮತ್ತೊಂದು ಮೂಲೆಯಲ್ಲಿದೆ. ಇನ್ನು ನಾನಾ ಇಲಾಖೆಗಳು ದಿಕ್ಕಾಪಾಲಾಗಿ ಹರಿದು ಹಂಚಿಹೋಗಿವೆ. ಹೀಗಾಗಿ ಜಿಲ್ಲೆಗೆಂದು ಜಿಲ್ಲಾ ಕೇಂದ್ರ ಅವಶ್ಯಕತೆ ಇದೆ ಎಂದು ಮನಗಂಡ ಸರಕಾರ ದೇವನಹಳ್ಳಿಯಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಲು ಮುಂದಾಯಿತು. ಇದರ ಫಲವಾಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಮತ್ತು ಇತರೆ ಇಲಾಖೆಗಳು ಒಂದೇ ಸ್ಥಳದಲ್ಲಿ ತಲೆ ಎತ್ತುತ್ತಿವೆ.
ಅಧಿಕಾರಿ, ಸಿಬ್ಬಂದಿಗಳಿಗೆ ಪೀಕಲಾಟ
ಜಿಲ್ಲಾಡಳಿತ ದೇವನಹಳ್ಳಿ ಸಮೀಪಕ್ಕೆ ವರ್ಗಾವಾಗುವುದರಿಂದ ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತದೆ ಎಂದು ಜನರು ಸಂತಸಪಡುತ್ತಿದ್ದರೆ, ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪೀಕಲಾಟ ಶುರುವಾಗಿದೆ. ಜಿಲ್ಲಾ ಕೇಂದ್ರದ ಬಹುತೇಕ ಎಲ್ಲಾ ಇಲಾಖೆಗಳು ಬೆಂಗಳೂರಿನಲ್ಲೇ ಇರುವುದರಿಂದ ಇಲ್ಲಿ ಕೆಲಸ ಮಾಡುವ ಬಹುತೇಕ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಂಗಳೂರು ನಗರದಲ್ಲೇ ನೆಲೆ ಕಂಡುಕೊಂಡಿದ್ದಾರೆ. ಆದರೆ ಮುಂದಿನ ವರ್ಷ ಜಿಲ್ಲಾ ಕೇಂದ್ರ ಶಿಫ್ಟ್ ಆಗುವುದರಿಂದ ದಿನಂಪ್ರತಿ ಬೆಂಗಳೂರಿನಿಂದ ದೇವನಹಳ್ಳಿಗೆ ಓಡಾಟ ನಡೆಸಬೇಕಲ್ಲ ಎಂಬ ಚಿಂತೆ ಬಹುತೇಕ ಸಿಬ್ಬಂದಿಗಳನ್ನು ಕಾಡತೊಡಗಿದೆ.
ಜನವರಿ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಹೇಳಲಾಗಿದೆ. ಕಾಮಗಾರಿ ನಿರ್ಮಾಣ ಕಾರ್ಯ ಅವಿರತವಾಗಿ ಸಾಗಿದ್ದು, ಡಿಸೆಂಬರ್ ವೇಳೆಗೆಲ್ಲಾ ಕಾಮಗಾರಿ ಮುಕ್ತಾಯಗೊಳ್ಳಲಿದೆ.
-ದುರ್ಗಪ್ಪ, ಕಾರ್ಯನಿರ್ವಾಹಕ ಇಂಜಿನಿಯರ್, ಕೆಎಚ್ಬಿ
ಜನವರಿ ವೇಳೆಗೆ ನೂತನ ಜಿಲ್ಲಾಧಿಕಾರಿ ಕಚೇರಿ ಕಾಮಗಾರಿ ಮುಕ್ತಾಯವಾಗಲಿದೆ. ಇಲಾಖೆಗಳ ವರ್ಗಾವಣೆಗೆ ಒಂದೆರಡು ತಿಂಗಳು ಹಿಡಿಯಲಿದೆ. ಮುಂದಿನ ಏಪ್ರಿಲ್ ವೇಳೆಗೆ ನೂತನ ಕಚೇರಿಯಿಂದಲೇ ಕೆಲಸ ಕಾರ್ಯಗಳು ನಡೆಯಲಿವೆ.
-ಎಸ್.ಪಾಲಯ್ಯ, ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ
1.75 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಬೃಹತ್ ಕಟ್ಟಡ
500 ಆಸನಗಳನ್ನು ಒಳಗೊಂಡ ಆಡಿಟೋರಿಯಂ
150 ಮಂದಿ ಕೂರುವಂತಹ ಸಭಾ ಭವನ
3 ಬ್ಲಾಕ್ಗಳಾಗಿ ವಿಂಗಡಣೆ
43 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
30 ಇಲಾಖೆಗಳು ಬೆಂಗಳೂರಿನಿಂದ ಶಿಫ್ಟ್