13,800 ಮಂದಿ ಪೈಕಿ ಏಳು ಸಾವಿರ ಮಹಿಳೆಯರಿಂದಷ್ಟೇ ಬಿಸಿಯೂಟ ಸೇವನೆ | ಯೋಜನೆ ಬಗ್ಗೆ ಅರಿವು ಮೂಡಿಸಲು ಜಿಪಂ ಅಧ್ಯಕ್ಷರ ಸಲಹೆ
ಬೆಂಗಳೂರು ಗ್ರಾಮಾಂತರ: ಗಾಂಧಿ ಜಯಂತಿಯಂದು ರಾಜ್ಯಾದ್ಯಂತ ಆರಂಭಗೊಂಡಿರುವ ಮಾತೃಪೂರ್ಣ ಯೋಜನೆ ನಿರೀಕ್ಷಿಸಿದಂತೆ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಜಿಲ್ಲಾಡಳಿತ ಎಡವಿದೆ.
ಬೆಂಗಳೂರು ಗ್ರಾಮಾಂತರ: ಗಾಂಧಿ ಜಯಂತಿಯಂದು ರಾಜ್ಯಾದ್ಯಂತ ಆರಂಭಗೊಂಡಿರುವ ಮಾತೃಪೂರ್ಣ ಯೋಜನೆ ನಿರೀಕ್ಷಿಸಿದಂತೆ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಜಿಲ್ಲಾಡಳಿತ ಎಡವಿದೆ.
ಮಾತೃಪೂರ್ಣ ಯೋಜನೆಯಡಿ ಜಿಲ್ಲೆಯಾದ್ಯಂತ ಒಟ್ಟು 13,800 ಫಲಾನುಭವಿಗಳಿದ್ದರು ಅಂಗನವಾಡಿ ಬಂದು ಬಿಸಿಯೂಟ ಸೇವಿಸುತ್ತಿರುವವರ ಸಂಖ್ಯೆ ಕೇವಲ ಏಳು ಸಾವಿರ ಮಂದಿ ಮಾತ್ರ. ಹೌದು ಇಂತಹದೊಂದು ಅಂಕಿ ಸಂಖ್ಯೆಯನ್ನು ಸ್ವತಃ ಅಧಿಕಾರಿಗಳೇ ನೀಡಿದ್ದಾರೆ.
ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತೃಪೂರ್ಣ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದಾಗ ಈ ಮಾಹಿತಿ ಹೊರಬಂದಿರುವುದು ಜಿಪಂ ಅಧ್ಯಕ್ಷರ ಆಶ್ಚರ್ಯಕ್ಕೆ ಕಾರಣವಾಗಿದೆ.
ಬಳಿಕ ಈ ಕುರಿತು ಮಾತನಾಡಿದ ಜಿಪಂ ಅಧ್ಯಕ್ಷ ವಿ.ಪ್ರಸಾದ್, ಮಾತೃಪೂರ್ಣ ಯೋಜನೆ ಬಗ್ಗೆ ಸಾಕಷ್ಟು ಪ್ರಚಾರ ಕೈಗೊಳ್ಳುವುದರ ಜತೆಗೆ ಅರಿವು ಮೂಡಿಸಬೇಕು. ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿ ಯೋಜನೆಗಳ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಕೇವಲ ಮಾತೃಪೂರ್ಣ ಯೋಜನೆ ಮಾತ್ರವಲ್ಲದೆ ಅಪೌಷ್ಟಿಕತೆ, ತಾಯಿ ಮರಣ, ಶಿಶು ಮರಣ ತಗ್ಗಿಸಲು ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೆ ತಂದಿರುವ ಹಲವಾರು ಮಾನವ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಆಸ್ಪತ್ರೆ ಕಟ್ಟಡದಲ್ಲಿ ನೀರು: ಇತ್ತೀಚೆಗೆ ಉದ್ಘಾಟನೆಯಾದ ದೊಡ್ಡಬಳ್ಳಾಪುರ ತಾಲೂಕು ಆಸ್ಪತ್ರೆಯಲ್ಲಿ ಆರೋಗ್ಯ ಸೌಲಭ್ಯ ಕಲ್ಪಿಸುತ್ತಿಲ್ಲ ಹಾಗೂ ಹೊಸ ಆಸ್ಪತ್ರೆ ಕಟ್ಟಡದಲ್ಲಿ ಮಳೆ ನೀರು ನಿಂತಿದೆ ಎಂದು ದೊಡ್ಡಬಳ್ಳಾಪುರ ಜಿಲ್ಲಾ ಪಂಚಾಯಿತಿ ಸದಸ್ಯರು ತಿಳಿಸಿದಾಗ, ಉತ್ತರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಅವರು ಶೀಘ್ರವಾಗಿ ಆರೋಗ್ಯ ಸೌಲಭ್ಯ ನೀಡಲಾಗುವುದು ಹಾಗೂ ಆಸ್ಪತ್ರೆಯಲ್ಲಿ ನೀರು ನಿಲ್ಲದಂತೆ ಆಸ್ಪತ್ರೆಯ ಎದುರು ಚರಂಡಿ ನಿರ್ಮಿಸಲು ಎಂಜಿನಿಯರ್ ಅವರಿಗೆ ತಿಳಿಸಲಾಗಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಉತ್ತರಿಸಿದರು.
ನಿಯಂತ್ರಣಕ್ಕೆ ಬಾರದ ಕ್ಯಾಟ್ ಫಿಶ್ ದಂಧೆ: ಜಿಲ್ಲೆಯಲ್ಲಿ ಅಕ್ರಮವಾಗಿ ಸಾಕಣೆ ಮಾಡಲಾಗುತ್ತಿರುವ ಕ್ಯಾಟ್ಫಿಶ್ ದಂಧೆಯನ್ನು ನಿಯಂತ್ರಿಸಲು ವಿಫಲರಾದ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರ ಬಗ್ಗೆ ಬೇಸರ ವ್ಯಕ್ತಪಡಿಸಿದ ಅಧ್ಯಕ್ಷ ರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಹಕಾರ ಪಡೆದು ಕೂಡಲೇ ಕ್ಯಾಟ್ಫಿಶ್ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರಲ್ಲದೆ, ಉತ್ತಮ ಮಳೆಯಿಂದಾಗಿ ಈಗಾಗಲೇ ಜಿಲ್ಲೆಯಲ್ಲಿ ತುಂಬಿರುವ ಕೆರೆಗಳ ಮಾಹಿತಿ ಪಡೆದು, ಸಾಂಪ್ರದಾಯಕ ಮೀನುಮರಿ ತಳಿಗಳನ್ನು ಕೆರೆಗಳಿಗೆ ಬಿಡಬೇಕೆಂದು ತಿಳಿಸಿದರು.
ಶಿಥಿಲಾವಸ್ಥೆಯಲ್ಲಿ ಅಂಗನವಾಡಿ ಕೇಂದ್ರ: ಜಿಲ್ಲೆಯಲ್ಲಿರುವ ಬಹುತೇಕ ಅಂಗನವಾಡಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಬೇರೆ ಕಟ್ಟಡಕ್ಕೆ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಬೇಕೆಂದು ಸದಸ್ಯೆಯೊಬ್ಬರು ಪ್ರಸ್ತಾಪಿಸಿದಾಗ, ಶೀಘ್ರವಾಗಿ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಅಧ್ಯಕ್ಷ ರು ಸೂಚಿಸಿದರು.
ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಅನೇಕ ಓವರ್ಹೆಡ್ ಟ್ಯಾಂಕ್ಗಳು ಕಾರ್ಯನಿರ್ವಹಿಸುತ್ತಿಲ್ಲ. ಪಂಪು ಮೋಟಾರು ಸಮಸ್ಯೆ, ಪೈಪ್ಲೈನ್ ಸಮಸ್ಯೆ, ವಿದ್ಯುತ್ ಸಮಸ್ಯೆ ಹೀಗೆ ಯಾವುದಾದರೂ ಸಮಸ್ಯೆ ಹೇಳಿ ಜನರಿಗೆ ನೀರಿನ ಸೌಲಭ್ಯ ಕಲ್ಪಿಸದೆ ಅಧಿಕಾರಿಗಳು ವಂಚಿಸುತ್ತಿದ್ದಾರೆಂದು ಸದಸ್ಯರುಗಳು ಒಕ್ಕೊರಲಿನಿಂದ ಪ್ರಶ್ನಿಸಿದರು.
ಈ ವೇಳೆ ಅಧ್ಯಕ್ಷ ರು ಮಾತನಾಡಿ, ಎಲ್ಲಾ ಓವರ್ಹೆಡ್ ಟ್ಯಾಂಕ್ಗಳ ಬಳಕೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆ ಎಂಜಿನಿಯರ್ಗಳಿಗೆ ಸೂಚಿಸಿದರು. ಕೆಲಸ ನಿರ್ವಹಿಸದಿದ್ದಲ್ಲಿ ಸಂಬಂಧಿಸಿದ ಇಂಜಿನಿಯರ್ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಪಿ.ಎನ್.ಅನಂತಕುಮಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ರುಗಳು, ಸದಸ್ಯರು, ಉಪಕಾರ್ಯದರ್ಶಿ ಕಾಂತರಾಜ್, ಮುಖ್ಯ ಯೋಜಾನಾಧಿಕಾರಿ ವಿನುತಾರಾಣಿ, ಮುಖ್ಯ ಲೆಕ್ಕಾಧಿಕಾರಿ, ತಾಲ್ಲೂಕು ಕಾರ್ಯಾನಿರ್ವಹಣಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ವಾಡಿಕೆಗಿಂತ ಶೇ.41ರಷ್ಟು ಹೆಚ್ಚು ಮಳೆ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ ವಾರ್ಷಿಕ ವಾಡಿಕೆಗಿಂತ ಶೇ.41 ರಷ್ಟು ಹೆಚ್ಚು ಮಳೆಯಾಗಿದ್ದು, ಶೇ.94 ರಷ್ಟು ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಉಪನಿರ್ದೇಶಕರು ಸಭೆಯಲ್ಲಿ ಮಾಹಿತಿ ನೀಡಿದಾಗ, ಹೆಚ್ಚು ಮಳೆಯಿಂದಾಗಿ ಬೆಳೆ ಹಾನಿಯಾದ ರೈತರ ಸುರಕ್ಷ ತೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಧ್ಯಕ್ಷ ರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎ ದಯಾನಂದ್ ಅವರು ಮಳೆಯಿಂದ ಬೆಳೆ ಹಾನಿಯಾದ ರೈತರ ಬಗ್ಗೆ ಕೂಡಲೇ ಬೆಳೆ ವಿಮೆ ಕಂಪನಿಗಳಿಗೆ ಮಾಹಿತಿ ನೀಡುವಂತೆ ಉಪನಿರ್ದೇಶಕರಿಗೆ ಸೂಚಿಸಿದರು.