ಎನ್.ಪ್ರಸನ್ನಕುಮಾರ್ ಬೆಂಗಳೂರು ಗ್ರಾಮಾಂತರ: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಪ್ರಬಲ ಮಾಧ್ಯಮವಾಗಿ ಹೊರಹೊಮ್ಮುತ್ತಿದೆ. ಅದರಲ್ಲೂ ಟ್ವಿಟರ್ನಲ್ಲಿ ಏನಾದರೂ ಕುಟುಕಿದರೆ ಅದು ಕ್ಷಣಾರ್ಧದಲ್ಲಿ ಲಕ್ಷಾಂತರ ಮಂದಿಗೆ ತಲುಪುತ್ತಿದೆ. ಸೆಲೆಬ್ರಿಟಿಗಳು ಮಾತ್ರವಲ್ಲದೆ ರಾಜಕೀಯ ಪಕ್ಷಗಳು ಮತ್ತು ಮುಖಂಡರು ಕೂಡ ಟ್ವಿಟರ್ನಲ್ಲಿ ಸಕ್ರಿಯವಾಗಿದ್ದರೆ ಜಿಲ್ಲೆಯ ರಾಜಕಾರಣಿಗಳು ಮಾತ್ರ ಇದರಲ್ಲಿ ಹಿಂದೆ ಬಿದ್ದಿದ್ದಾರೆ.
ಜಿಲ್ಲೆಯ ಹಾಲಿ, ಮಾಜಿ ಶಾಸಕರು ಮಾತ್ರವಲ್ಲದೆ ಟಿಕೆಟ್ ಆಕಾಂಕ್ಷಿಗಳಾಗಿ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿರುವ ರಾಜಕಾರಣಿಗಳು ಫೇಸ್ಬುಕ್ ಮತ್ತು ವಾಟ್ಸ್ ಆ್ಯಪ್ನಲ್ಲಿ ಸಕ್ರಿಯವಾಗಿ ತೊಡಗಿಕೊಂಡಷ್ಟು ಟ್ವಿಟರ್ನಲ್ಲಿ ಕ್ರಿಯಾಶೀಲರಾಗಿಲ್ಲ. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರು ಟ್ವಿಟರ್ನಲ್ಲಿ ಮುಂದಿದ್ದರೆ ಜಿಲ್ಲೆಯ ಶಾಸಕರು ಹಾಗೂ ಅವರದ್ದೇ ಪಕ್ಷದ ಮುಖಂಡರು ಮಾತ್ರ ಟ್ವಿಟರ್ನಲ್ಲಿ ಮಾತ್ರ ನಿಷ್ಕ್ರಿಯರಾಗಿದ್ದಾರೆ.
ನೆಲಮಂಗಲ ಶಾಸಕ ಡಾ.ಶ್ರೀನಿವಾಸ್ಮೂರ್ತಿ, ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ, ಹೊಸಕೋಟೆ ಶಾಸಕ ಪಿಳ್ಳಮುನಿಶಾಮಪ್ಪ ಅವರು ಟ್ವಿಟರ್ನಲ್ಲಿ ಖಾತೆ ತೆರೆಯುವವ ಗೋಜಿಗೇ ಹೋಗಿಲ್ಲ. ಶುದ್ಧ ನೀರಿನ ಘಟಕ ಉದ್ಘಾಟನೆ, ರಸ್ತೆ ಕಾಮಗಾರಿ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಫೇಸ್ಬುಕ್ ಮತ್ತು ವಾಟ್ಸ್ ಆ್ಯಪ್ ಗ್ರೂಪ್ಗಳಲ್ಲಿ ಪ್ರಚಾರ ಮಾಡುವ ನಾಯಕರು ಟ್ವಿಟರ್ನಲ್ಲಿ ಮಾತ್ರ ಹಿಂದೆ ಬಿದ್ದಿದ್ದಾರೆ. ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಅವರು ಟ್ವಿಟರ್ ಖಾತೆ ತೆರೆದಿದ್ದಾರಾದರೂ ಆಗೊಂದು ಈಗೊಂದು ಟ್ವೀಟ್ ಮಾಡುವುದು ಬಿಟ್ಟರೆ ಹೆಚ್ಚಾಗಿ ಅವರು ಫೇಸ್ಬುಕ್ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಮೂರು ಪಕ್ಷಗಳ ಪ್ರಮುಖ ಟಿಕೆಟ್ ಆಕಾಂಕ್ಷಿಗಳಾದ ಮುನೇಗೌಡ, ಜೆ.ನರಸಿಂಹಸ್ವಾಮಿ, ಮುನಿನರಸಿಂಹಯ್ಯ, ನಿಸರ್ಗ ನಾರಾಯಣಸ್ವಾಮಿ, ಆಂಜನಮೂರ್ತಿ, ಎಂ.ವಿ.ನಾಗರಾಜು ಸೇರಿದಂತೆ ಪ್ರಮುಖ ಮುಖಂಡರು ಟ್ವಿಟರ್ನಲ್ಲಿ ಕಾಣಸಿಗುತ್ತಿಲ್ಲ.
ಪ್ರಧಾನಿ, ಮುಖ್ಯಮಂತ್ರಿಯಿಂದ ಹಿಡಿದು ಎಲ್ಲಾ ಸಚಿವರು ಟ್ವಿಟರ್ ಖಾತೆಯಲ್ಲಿ ಸಕ್ರಿಯರಾಗಿದ್ದಾರೆ. ಇದಲ್ಲದೆ ಎಲ್ಲಾ ಇಲಾಖೆಗಳು ಟ್ವಿಟರ್ನಲ್ಲಿ ಕಾಲಕಾಲಕ್ಕೆ ಮಾಹಿತಿ ನೀಡುತ್ತಿವೆ. ಎಲ್ಲಾ ರಾಜಕೀಯ ಪಕ್ಷಗಳೂ ಕೂಡ ಟ್ವಿಟರ್ನಲ್ಲಿ ಪ್ರತಿಯೊಂದು ಮಾಹಿತಿಗಳನ್ನು ರವಾನೆ ಮಾಡುತ್ತಿದ್ದರೂ ಜಿಲ್ಲೆಯಲ್ಲಿ ಮಾತ್ರ ಗುಬ್ಬಚ್ಚಿ ಸದ್ದು ಮಾತ್ರ ಕೇಳುತ್ತಲ್ಲೇ ಇಲ್ಲ.
ಜಿಲ್ಲೆಯ ಬಹುತೇಕ ಭಾಗ ಗ್ರಾಮೀಣ ಪ್ರದೇಶದಿಂದ ಕೂಡಿರುವ ಕಾರಣ ಅಲ್ಲಿನ ಜನ ಫೇಸ್ಬುಕ್ನಲ್ಲಿ ಸಕ್ರಿಯವಾಗಿದ್ದಷ್ಟು ಟ್ವಿಟರ್ನಲ್ಲಿ ತೊಡಗಿಕೊಂಡಿಲ್ಲ. ಹೀಗಾಗಿ ಟ್ವಿಟರ್ ಬಗ್ಗೆ ಜಿಲ್ಲಾ ನಾಯಕರು ಅಷ್ಟಾಗಿ ಗಮನಹರಿಸಿಲ್ಲ ಎಂಬ ಸಮಜಾಯಿಷಿ ಮಾತುಗಳನ್ನು ಮುಖಂಡರು ನೀಡುತ್ತಿದ್ದಾರೆ.