ದೊಡ್ಡಬಳ್ಳಾಪುರ: ನಗರದ ಹೊರವಲಯದ ಮಾದಗೊಂಡನಹಳ್ಳಿ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಪ್ರಸಾದ್ ಭಾನುವಾರ ರಾತ್ರಿ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ ವಿದ್ಯಾರ್ಥಿನಿಲಯದಲ್ಲಿ ಕಂಡುಬಂದ ಅವ್ಯವಸ್ಥೆಗಳನ್ನು ಕಂಡು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಕರೆಗೆ ಸ್ಪಂದಿಸದ ವಾರ್ಡನ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಲು ಸೂಚಿಸಿದ್ದಾರೆ.
ಜಿಪಂ ಅಧ್ಯಕ್ಷ ರ ದಿಢೀರ್ ಭೇಟಿಯ ವೇಳೆ ಹಾಸ್ಟೆಲ್ನಲ್ಲಿ ಯಾವ ಸಿಬ್ಬಂದಿಯೂ ಕಾಣದ ಕಾರಣ, ಸಾಕಷ್ಟು ಬಾರಿ ಹಾಸ್ಟೆಲ್ ವಾರ್ಡನ್ ಶಂಕರ್ನಾರಾಯಣ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಸರಿಸುಮಾರು 1ಗಂಟೆಯ ಕಾಲ ನಿರಂತರವಾಗಿ ಕರೆ ಮಾಡಿದರೂ ವಾರ್ಡನ್ ಕರೆಗೆ ಸ್ಪಂದಿಸಲಾಗಲಿಲ್ಲ. ಇದರಿಂದ ಸಿಡಿಮಿಡಿಗೊಂಡ ವಿ.ಪ್ರಸಾದ್ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ತಕ್ಷ ಣ ಇಲ್ಲಿನ ಸಮಸ್ಯೆಗಳ ಬಗ್ಗೆ ಸೂಕ್ತ ತನಿಖೆ ಕೈಗೊಂಡು, ಇಲ್ಲಿನ ವಾರ್ಡನ್ಗೆ ನೋಟಿಸ್ ಜಾರಿ ಮಾಡಲು ತಿಳಿಸಿದರು.
ಲೈಬ್ರರಿ ವ್ಯವಸ್ಥೆಯಿಲ್ಲ: ಪ್ರಸ್ತುತ ವಿದ್ಯಾರ್ಥಿನಿಲಯದಲ್ಲಿ ಎಂಜಿನಿಯರಿಂಗ್, ಕೃಷಿ, ಡಿಪ್ಲೋಮ, ಸ್ನಾತಕೋತ್ತರ ಸೇರಿದಂತೆ ನಾನಾ ಪದವಿ ಕೋರ್ಸ್ಗಳನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿದ್ದು, ಒಂದು ಕೊಠಡಿಗೆ 15 ವಿದ್ಯಾರ್ಥಿಗಳಂತೆ ತಂಗುತ್ತಿದ್ದಾರೆ. ಇವರಿಗೆ ಪರೀಕ್ಷೆಗಳಿಗೆ ತಯಾರಿ ನಡೆಸಲು ಅಗತ್ಯ ಮೂಲ ಸೌಲಭ್ಯಗಳಿಲ್ಲ. ಪರೀಕ್ಷೆಗಳ ಅವಧಿಯಲ್ಲಿ ವ್ಯಾಸಂಗ ಮಾಡಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಇಲ್ಲ. ಜತೆಗೆ, ಇಡೀ ವಿದ್ಯಾರ್ಥಿನಿಲಯದಲ್ಲಿ ಒಂದು ಲೈಬ್ರರಿ ವ್ಯವಸ್ಥೆಯಿಲ್ಲ. ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ತಿಳಿಸಿ, ತ್ವರಿತವಾಗಿ ಲೈಬ್ರರಿ ಕಾರ್ಯಾರಂಭ ಮಾಡುವಂತೆ ಸೂಚಿಸಲಾಗುತ್ತದೆ. ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ಆರಂಭಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ತಣ್ಣೀರು ಸ್ನಾನ: ವಿದ್ಯಾರ್ಥಿನಿಲಯದಲ್ಲಿ ಸುಮಾರು 74 ವಿದ್ಯಾರ್ಥಿಗಳು ವಸತಿ ಹೊಂದಿದ್ದು, ಇವರಿಗೆ ಸ್ನಾನಕ್ಕಾಗಿ ಯಾವುದೇ ಸೋಲಾರ್ ವ್ಯವಸ್ಥೆ ಇಲ್ಲದಂತಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಪ್ರತಿನಿತ್ಯ ತಣ್ಣೀರು ಸ್ನಾನ ಮಾಡಬೇಕಾಗಿದೆ. ಸರಕಾರದಿಂದ ಲಭಿಸುವ ವ್ಯವಸ್ಥೆಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಸ್ಥಳೀಯ ಅಧಿಕಾರಿಗಳು ವಿಫಲರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸೂಚಿಸಲಾಗುತ್ತದೆ ಎಂದು ಹೇಳಿದರು.
ಸಿಸಿಟಿವಿ ವ್ಯವಸ್ಥೆಯಿಲ್ಲ : ನಗರದ ಹೊರವಲಯದ ಮಾದಗೊಂಡನಹಳ್ಳಿ ರಸ್ತೆಯಲ್ಲಿರುವ ವಿದ್ಯಾರ್ಥಿನಿಲಯಕ್ಕೆ ಸೂಕ್ತ ಭದ್ರತೆಯಿಲ್ಲದಂತಾಗಿದೆ. ರಾತ್ರಿಯ ವೇಳೆ 8ರ ನಂತರ ಹಾಸ್ಟೆಲ್ ವಾರ್ಡನ್ ಸೇರಿದಂತೆ ಯಾವೊಬ್ಬ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಭದ್ರತೆಗಿಲ್ಲದೆ, ವಿದ್ಯಾರ್ಥಿಗಳು ಎಲ್ಲಿಗೆ ಬೇಕಾದರು ಹೋಗುವ ವ್ಯವಸ್ಥೆ ಸೃಷ್ಟಿಯಾಗಿದೆ. ರಾತ್ರಿಯ ವೇಳೆ ವಿದ್ಯಾರ್ಥಿಗಳಿಗೆ ಯಾವುದೇ ಅನಾಹುತವಾದರು ಯಾರು ಕೇಳುವವರಿಲ್ಲ ಎನ್ನುವಂತಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಪ್ರತಿನಿತ್ಯ ರಾತ್ರಿ 8ರ ಬಳಿಕ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿ, ಹಾಸ್ಟೆಲ್ ವಾರ್ಡನ್ ಶಂಕರ್ನಾರಾಯಣ್ ಹೊರಹೋಗುತ್ತಾರೆ. ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ಆಗುಹೋಗುಗಳನ್ನು ವಿಚಾರಿಸಲು ಯಾವ ಸಿಬ್ಬಂದಿಗಳು ಇಲ್ಲಿ ಲಭ್ಯವಿಲ್ಲ. ಹಾಸ್ಟೆಲ್ ನಗರದಿಂದ ಹೊರಗಿದ್ದು, ನಮ್ಮ ವಾಹನಗಳಿಗೆ ಯಾವ ಭದ್ರತೆಯು ಇಲ್ಲ ಎಂದು ಹಾಸ್ಟೆಲ್ ವಿದ್ಯಾರ್ಥಿಗಳು ಜಿಪಂ ಅಧ್ಯಕ್ಷ ರಿಗೆ ತಿಳಿಸಿದರು.