ಆ್ಯಪ್ನಗರ

ಕೊಡಿಗೇಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಅಂಗಡಿ ಮಳಿಗೆಗಳ ಹರಾಜು: ಬೀದಿಗೆ ಬೀಳುವ ಆತಂಕದಲ್ಲಿ ಬಾಡಿಗೆದಾರರು

ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಗ್ರಾಪಂ ವ್ಯಾಪ್ತಿಯ ಪಾಲನಜೋಗಿಹಳ್ಳಿ ಅಂಗಡಿ ಮಳಿಗೆಗಳನ್ನು ಪಂಚಾಯಿತಿ ಆಡಳಿತಾಧಿಕಾರಿ ಸಮ್ಮುಖದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರಾಜು ಮಾಡಲು ಹೊರಟಿದ್ದಾರೆ ಎಂದು ಬಾಡಿಗೆದಾರರು ಖಂಡಿಸಿದ್ದಾರೆ.

Vijaya Karnataka Web 30 Sep 2020, 7:22 am
ರಾಜೇಶ್‌.ಎಸ್‌.ಜಿ. ದೊಡ್ಡಬಳ್ಳಾಪುರ
Vijaya Karnataka Web auction

ದೊಡ್ಡಬಳ್ಳಾಪುರ: ಕೊಡಿಗೇಹಳ್ಳಿ ಗ್ರಾಪಂ ವ್ಯಾಪ್ತಿಯ ಪಾಲನಜೋಗಿಹಳ್ಳಿ ಅಂಗಡಿ ಮಳಿಗೆಗಳನ್ನು ಅಧಿಕಾರಿಗಳು ಹರಾಜು ಮಾಡುತ್ತಿರುವುದನ್ನು ಬಾಡಿಗೆದಾರರು ವಿರೋಧಿಸಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಜನ ಸಾಮಾನ್ಯರ ಬದುಕು ದುಸ್ಥರವಾಗಿದ್ದು, ಈ ಸಂದರ್ಭದಲ್ಲಿಅಂಗಡಿಗಳನ್ನು ಹರಾಜು ಮಾಡಲು ಹೊರಟರೆ ವ್ಯಾಪಾರವೂ ಇಲ್ಲ, ಕೈಯಲ್ಲಿ ಹಣವೂ ಇಲ್ಲ. ಸಾಲ ಕಟ್ಟಲು ಆಗುತ್ತಿಲ್ಲ. ಪಿಡಿಒ ಅವರದ್ದು ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ದೂರಿದ್ದಾರೆ.

9 ವರ್ಷಗಳ ಹಿಂದೆ ಪಂಚಾಯಿತಿ 14 ಅಂಗಡಿಗಳನ್ನು ನಿರ್ಮಾಣ ಮಾಡಿ ಬಾಡಿಗೆಗೆ ನೀಡಿತ್ತು. ಪ್ರಾರಂಭದ 3-4 ವರ್ಷ ಹೇಳಿಕೊಳ್ಳುವ ವ್ಯಾಪಾರವೂ ಆಗುತ್ತಿರಲಿಲ್ಲ. ನಂತರ ವ್ಯಾಪಾರ ಉತ್ತಮ ಸ್ಥಿಗೆ ಬಂದಿತ್ತಾದರೂ. 2020ರಲ್ಲಿನ ಲಾಕ್‌ಡೌನ್‌ನಿಂದಾಗಿ ಸುಮಾರು ನಾಲ್ಕು ತಿಂಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದವು. ಇದರಿಂದ ಬದುಕು ಕಟ್ಟಿಕೊಂಡಿದ್ದ ವ್ಯಾಪಾರಸ್ಥರು ಮನೆ ಬಾಡಿಗೆ ವಿದ್ಯುತ್‌ ಬಿಲ್‌ ಪಾವತಿ ಮಾಡಲು ಪರದಾಡುವ ಪರಿಸ್ಥಿತಿಗೆ ಬಂದಿದ್ದರು. ಇನ್ನು ಮನೆ ನಿರ್ವಹಣೆಯೂ ಕಷ್ಟವಾಗಿದೆ.

ನೋಟಿಸ್‌ ಜಾರಿ ಅಕ್ರಮ
ಅ. 5ರಂದು ಹರಾಜು ಮಾಡುವುದಾಗಿ ಈಗಾಗಲೇ ಕರ ಪತ್ರ ಹೊರಡಿಸಿರುವ ಪಿಡಿಒ ಕ್ರಮಕ್ಕೆ ಬಾಡಿಗೆದಾರರು ಅಂಗಡಿಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈಗಾಗಲೇ ಅಂಗಡಿ ಮುಂದೆ ನೋಟಿಸ್‌ ಪ್ರದರ್ಶನ ಮಾಡಿದ್ದಾರೆ. ಬಾಡಿಗೆದಾರರು ಹಣ ಪಾವತಿ ಮಾಡಲು ಸಮಯ ಕೇಳಿದ್ದಾರೆ. ಹಣ ಕಟ್ಟುವುದಿಲ್ಲ ಎಂದು ಹೇಳಿಲ್ಲ. ಹೀಗಿದ್ದರೂ ನೋಟಿಸ್‌ ಜಾರಿ ಮಾಡಿರುವುದು ಕಾನೂನು ಉಲ್ಲಂಘನೆ ಎಂದು ದೂರಿದ್ದಾರೆ.

ಮನವಿಗಳಿಗೆ ಮನ್ನಣೆ ಇಲ್ಲ
ಕೋವಿಡ್‌-19 ಸಂಕಷ್ಟದಲ್ಲಿ ಬೀದಿಗೆ ಬಂದು ನಿಂತಿದ್ದೇವೆ. ಈ ಕುರಿತು ಜಿಪಂ ಮುಖ್ಯ ಕಾರ‍್ಯ ನಿರ್ವಹಣಾಧಿಕಾರಿ, ತಾಪಂ ಇಒಗೆ ಬಾಡಿಗೆ ಹಣ ಪಾವತಿ ಮಾಡಲು ಸಮಯ ನೀಡುವಂತೆ ಮನವಿ ಪತ್ರ ನೀಡಿದ್ದೇವೆ. ಇದರೊಂದಿಗೆ ಪಿಡಿಒಗೂ ಮನವಿ ಪತ್ರ ನೀಡಿದ್ದೇವೆ. ಈ ಕುರಿತು ಜನಗಳ ಹಿತ ಕಾಯಬೇಕಿದ್ದ ಯಾವೊಬ್ಬ ಅಧಿಕಾರಿಯೂ ಕನಿಷ್ಠ ಸಭೆ ಕರೆದು ನಮ್ಮ ಕಷ್ಟಗಳನ್ನು ಆಲಿಸದೆ ನಮ್ಮ ಬದುಕನ್ನು ಬೀದಿಗೆ ತಳ್ಳಿದ್ದಾರೆ ಎಂದು ಬಾಡಿಗೆದಾರರು ಆರೋಪಿಸಿದ್ದಾರೆ.

ಕೋವಿಡ್‌-19 ಸಂಕಷ್ಟದ ಸಂದರ್ಭದಲ್ಲಿ ಗ್ರಾಪಂಗಳ ವ್ಯಾಪ್ತಿಯ ಅಂಗಡಿ ಮಳಿಗೆಗಳ ಹರಾಜು ಮಾಡುವುದಾಗಲಿ, ಉಳಿಕೆ ಬಾಡಿಗೆಗೆ ಒತ್ತಡ ತರುವುವಂತಿಲ್ಲ. ಈ ಕುರಿತು ಸರ್ಕಾರವೇ ರಿಲೀಪ್‌ ನೀಡುವಂತೆ ಹೇಳಿದೆ. ಹೀಗಾಗಿ ಈ ಕುರಿತು ತುರ್ತು ಸಭೆ ಕರೆದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಮಾತನಾಡುತ್ತೇನೆ.
ಟಿ.ವೆಂಕಟರಮಣಯ್ಯ, ಶಾಸಕ ದೊಡ್ಡಬಳ್ಳಾಪುರ

ಕೆಟಿಪಿಪಿ-1999 ಆ್ಯಕ್ಟ್ ಸ್ಪಷ್ಟವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಲ್ಲಂಘನೆ ಮಾಡಿದ್ದಾರೆ. ಕೋವಿಡ್‌-19 ಸಂಕಷ್ಟದ ಸಂದರ್ಭದಲ್ಲಿ ಯಾವುದೆ ಕುರಿತಂತೆ ತೆರವು ಕಾರ್ಯಾಚರಣೆ ಮಾಡುವಂತಿಲ್ಲ ಎಂದು ಉಚ್ಚನ್ಯಾಯಾಲಯದ ಆದೇಶವಿದ್ದು, ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಹರಾಜು ಪ್ರಕ್ರಿಯೆಗೆ ಮುಂದಾದರೆ ಉಗ್ರ ಹೋರಾಟಕ್ಕೂ ಮುಂದಾಗುತ್ತೇವೆ.
ವಿ.ಹನುಮಂತರಾಯಪ್ಪ | ಕ್ರಾಂತಿ ದೀಪ ಸಂಘಟನೆ ತಾಲೂಕು ಅಧ್ಯಕ್ಷ ಹಾಗೂ ಆರ್‌ಟಿಐ ಕಾರ‍್ಯಕರ್ತ

ಲಾಕ್‌ಡೌನ್‌ ಸಂದರ್ಭದಲ್ಲಿ ಐದಾರು ತಿಂಗಳಿಂದ ಅಂಗಡಿ ಬಾಗಿಲು ಹಾಕಿದ್ದು, ನಂತರ ಅಂಗಡಿ ತೆರೆದರೂ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಇದರಿಂದ ತೀರ ಆರ್ಥಿಕ ಸಂಕಷ್ಟದಲ್ಲಿ ಇದ್ದೇವೆ. ಈ ಸಂದರ್ಭದಲ್ಲಿ ಅಂಗಡಿ ಹರಾಜು ಹಾಕಿದರೆ ವಿಷ ಕುಡಿದು ಸಾಯುವುದೊಂದೇ ನಮಗೆ ದಾರಿ.
ಉಮಾ ರಮೇಶ್‌, ಬಾಡಿಗೆದಾರರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ