ಆ್ಯಪ್ನಗರ

ಪೊಲೀಸರ ಮೇಲೆ ಡ್ರ್ಯಾಗರ್‌ನಿಂದ ದಾಳಿ: ಕೊಲೆ ಆರೋಪಿಗೆ ಖಾಕಿ ಫೈರಿಂಗ್

ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆತ, ಇತ್ತೀಚೆಗಿನ ಕೊಲೆ ಕೇಸ್ ಒಂದರಲ್ಲಿ ಪೊಲೀಸರಿಗೆ ಬೇಕಾಗಿದ್ದ. ಹಿಡಿಯಲು ಹೋದಾಗ ಪೊಲೀಸರೇ ಮೇಲೇ ದಾಳಿ ಮಾಡಿದ. ಆತನ ಮೇಲೆ ಗುಂಡು ಹಾರಿಸಿದ ಪೊಲೀಸರು ಬುದ್ದಿ ಕಲಿಸಿದ್ಧಾರೆ.

Vijaya Karnataka Web 13 Oct 2019, 11:43 am
ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಪೊಲೀಸರ ಮೇಲೇ ದಾಳಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಕೊಲೆ ಆರೋಪಿಗೆ ಗುಂಡು ಹಾರಿಸಿದ ಘಟನೆ, ದೊಡ್ಡಬಳ್ಳಾಪುರದಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಗಜೇಂದ್ರರಿಂದ ಗುಂಡಿನ ದಾಳಿ ನಡೆದಿದೆ. ಆರೋಪಿಯನ್ನು ಕಾಡನೂರು ಪಾಳ್ಯದ ಶಿವಶಂಕರ್ ಎಂದು ಗುರ್ತಿಸಲಾಗಿದ್ದು, ಆತನ ಕಾಲಿಗೆ ಗುಂಡೇಟು ತಗುಲಿದೆ.
Vijaya Karnataka Web doddaballapur murder accused


ದೊಡ್ಡಬಳ್ಳಾಪುರ ತಾಲೂಕಿನ ಆಲಹಳ್ಳಿ ಗ್ರಾಮದ ಸಮೀಪ ಚಂದ್ರು ಎಂಬಾತನನ್ನು ಕೊಲೆ ಮಾಡಿದ ಆರೋಪ ಶಿವಶಂಕರ್ ಮೇಲಿದೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಆರೋಪಿ ಶಿವಶಂಕರ್ ವಿರುದ್ಧ ಬೆಂಗಳೂರಿನ ಹಲವೆಡೆ ಕೂಡಾ ಹಲವು ಪ್ರಕರಣಗಳು ದಾಖಲಾಗಿವೆ. ಈತ ಬೆತ್ತನಗೆರೆ ಮಂಜನ ಸಹಚರ ಎಂದೂ ಹೇಳಲಾಗುತ್ತಿದೆ. ಹೀಗಾಗಿ, ಶಿವಶಂಕರ್‌ನನ್ನು ದೊಡ್ಡಬಳ್ಳಾಪುರದಲ್ಲಿ ರೌಡಿ ಶೀಟರ್ ಎಂದೂ ಗುರ್ತಿಸಲಾಗಿತ್ತು.

ಇದೀಗ ಕೊಲೆ ಪ್ರಕರಣ ದಾಖಲಾಗಿದ್ದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಹೊರವಲಯದ ನೆಲಮಂಗಲ ರಸ್ತೆಯ ಆಲಹಳ್ಳಿ ಸಮೀಪ ಆರೋಪಿ ಶಿವಶಂಕರ್‌ನನ್ನು ಪೊಲೀಸರು ಹುಡುಕುತ್ತಿದ್ದರು. ಶನಿವಾರ ರಾತ್ರಿ 10.30ರ ಸುಮಾರಿಗೆ ಆರೋಪಿ ಶಿವಶಂಕರ್ ಹಾಗೂ ಪೊಲೀಸರು ಪೊಲೀಸರು ಮುಖಾಮುಖಿಯಾಗಿದ್ದಾರೆ. ಈ ವೇಳೆ, ಹೆಡ್ ಕಾನ್ಸ್‌ಟೇಬಲ್ ರಾಧಕೃಷ್ಣ ಅವರ ಎಡ ತೋಳಿಗೆ ಡ್ರಾಗರ್(ಚಾಕು)ನಿಂದ ಆರೋಪಿ ದಾಳಿ ನಡೆಸಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೂಡಲೇ ಜಾಗೃತರಾದ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಗಜೇಂದ್ರ, ಗಾಳಿಯಲ್ಲಿ ಗುಂಡು ಹಾರಿಸಿ ಸರಂಡರ್ ಆಗುವಂತೆ ವಾರ್ನಿಂಗ್ ನೀಡಿದ್ದಾರೆ‌. ಆದರೆ ಶಿವಶಂಕರ್ ಮಾತುಕೇಳದ ಹಿನ್ನೆಲೆಯಲ್ಲಿ ಆರೋಪಿಯ ಮೊಣಕಾಲಿನ ಕೆಳಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಘಟನೆಯಲ್ಲಿ ಹಲ್ಲೆಗೊಳಗಾದ ಹೆಡ್ ಕಾನ್ಸ್‌ಟೇಬಲ್ ರಾಧಕೃಷ್ಣ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡೇಟು ತಿಂದ ಆರೋಪಿಗೆ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಮಾನಸಿಕ ಖಿನ್ನತೆ: ಶ್ರೀರಂಗಪಟ್ಟಣ DYSP ಯೋಗಾನಂದ ಆತ್ಮಹತ್ಯೆ ಯತ್ನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ