ಆ್ಯಪ್ನಗರ

75 ದಿನದಲ್ಲಿ 10 ಸಾವಿರ ದನದ ಕೊಟ್ಟಿಗೆ ನಿರ್ಮಾಣ!

ಎರಡೂವರೆ ತಿಂಗಳ ಹಿಂದೆ ಆರಂಭವಾದ ದನದ ಕೊಟ್ಟಿಗೆ ನಿರ್ಮಾಣ ಅಭಿಯಾನ ಅಭೂತಪೂರ್ವ ಯಶಸ್ಸು ಕಂಡಿದೆ. ಜಿಲ್ಲಾ ಪಂಚಾಯತ್‌ನ ಈ ಸಾಧನೆಯನ್ನು ಗುರುತಿಸಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಇತರೆ ಜಿಪಂನಲ್ಲೂ ಇದೇ ರೀತಿ ಅಭಿಯಾನ ಹಮ್ಮಿಕೊಳ್ಳುವಂತೆ ನಮ್ಮ ಜಿಪಂನ ಉದಾಹರಣೆ ನೀಡುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದು ಸಿಇಒ ಲತಾ ತಿಳಿಸಿದರು.

Vijaya Karnataka 12 Jan 2019, 5:00 am
ನರೇಗಾದಡಿ ದನದ ಕೊಟ್ಟಿಗೆ ನಿರ್ಮಾಣದಲ್ಲಿ ಜಿಪಂ ಸಾಧನೆ
Vijaya Karnataka Web construction of 10000 cattle cribs in 75 days
75 ದಿನದಲ್ಲಿ 10 ಸಾವಿರ ದನದ ಕೊಟ್ಟಿಗೆ ನಿರ್ಮಾಣ!


ಬೆಂಗಳೂರು ಗ್ರಾಮಾಂತರ: ಎರಡೂವರೆ ತಿಂಗಳ ಹಿಂದೆ ಆರಂಭವಾದ ದನದ ಕೊಟ್ಟಿಗೆ ನಿರ್ಮಾಣ ಅಭಿಯಾನ ಅಭೂತಪೂರ್ವ ಯಶಸ್ಸು ಕಂಡಿದೆ. ಜಿಲ್ಲಾ ಪಂಚಾಯತ್‌ನ ಈ ಸಾಧನೆಯನ್ನು ಗುರುತಿಸಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಇತರೆ ಜಿಪಂನಲ್ಲೂ ಇದೇ ರೀತಿ ಅಭಿಯಾನ ಹಮ್ಮಿಕೊಳ್ಳುವಂತೆ ನಮ್ಮ ಜಿಪಂನ ಉದಾಹರಣೆ ನೀಡುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದು ಸಿಇಒ ಲತಾ ತಿಳಿಸಿದರು.

ಜಿಪಂನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ 2018-19ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಾಣಕ್ಕೆ ಶ್ರಮಿಸಿದ ಸಾಧಕರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ಅಕ್ಟೋಬರ್‌ನಲ್ಲಿ ಈ ಅಭಿಯಾನ ಆರಂಭಿಸಲಾಯಿತು. ಪಶುಸಂಗೋಪನೆ ಮತ್ತು ಪಂಚಾಯತ್‌ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸರ್ವೆ ನಡೆಸಿ 10,450 ದನದ ಕೊಟ್ಟಿಗೆ ನಿರ್ಮಿಸುವ ಗುರಿ ನಿಗದಿಪಡಿಸಿಕೊಳ್ಳಲಾಗಿತ್ತು. ಆದರೆ ಕೇವಲ 75 ದಿನದಲ್ಲೇ 10,022 ದನದ ಕೊಟ್ಟಿಗೆ ನಿರ್ಮಿಸಿರುವುದು ನಿಜಕ್ಕೂ ಅದ್ಭುತ ಸಾಧನೆ ಎಂದು ಬಣ್ಣಿಸಿದರು.

ಜನಪ್ರತಿನಿಧಿಗಳ ಸಹಕಾರ ಕಾರಣನರೇಗಾ ಯೋಜನೆಯೆಂದರೆ ಜನ ಮೂಗು ಮುರಿಯುತ್ತಾರೆ. ಸಕಾಲಕ್ಕೆ ಹಣ ಬಿಡುಗಡೆಯಾಗುವುದಿಲ್ಲ ಎಂಬ ಕಾರಣಕ್ಕೆ ಈ ಯೋಜನೆಗೆ ರೈತರು ಉತ್ಸುಕತೆ ತೋರುವುದಿಲ್ಲ. ಆದರೆ ದನದ ಕೊಟ್ಟಿಗೆ ನಿರ್ಮಾಣದ ವಿಚಾರದಲ್ಲಿ ಇದು ಸುಳ್ಳಾಗಿದೆ. ಶೇ99ರಷ್ಟು ಕೂಲಿ ಹಣ ಈಗಾಗಲೇ ಜನರ ಖಾತೆಗೆ ಜಮೆಯಾಗಿದ್ದು ಸಾಮಾಗ್ರಿ ಖರೀದಿ ಹಣ ಹಂತಹಂತವಾಗಿ ಬಿಡುಗಡೆಯಾಗಲಿದೆ ಎಂದರು. ಈ ಅಭಿಯಾನಕ್ಕೆ ಶಾಸಕರು, ಜಿಪಂ, ತಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಸಹಭಾಗಿತ್ವವೂ ಇದೆ. ಈ ಅಭಿಯಾನದ ಯಶಸ್ಸಿಗೆ ಎಲ್ಲಾ ಪಿಡಿಒಗಳು ಸಾಕಷ್ಟು ಶ್ರಮಿಸಿದ್ದಾರೆ ಎಂದು ಪ್ರಶಂಶಿಸಿದರು.

ನಮ್ಮ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಈ ಅಭಿಯಾನಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತರೆ ಜಿಲ್ಲೆಗಳೂ ಇದೇ ರೀತಿ ಕಾರ್ಯಕ್ರಮ ಅನುಷ್ಟಾನಕ್ಕೆ ತರುವಂತೆ ಸೂಚಿಸಿರುವುದರಿಂದ ನಾನಾ ಜಿಲ್ಲೆಗಳ ಸಿಇಒಗಳು ಈ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಬಹುಶಃ ಇಂತಹ ಅಭಿಯಾನ ರಾಜ್ಯದಲ್ಲೇ ಇದೇ ಮೊದಲಿರಬಹುದು ಎಂದು ಕೂಡ ಹೇಳಿದರು.

ಪ್ರಶಂಸನಾ ಪತ್ರ, ಫಲಕ ವಿತರಣೆ

ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಾಣಕ್ಕೆ ಶ್ರಮಿಸಿದ ಸಾಧಕರಿಗೆ ಪ್ರಶಂಸನಾ ಪತ್ರದ ಜತೆಗೆ ಫಲಕ ವಿತರಣೆ ಮಾಡಲಾಯಿತು. ಅತಿ ಹೆಚ್ಚು ದನದ ಕೊಟ್ಟಿಗೆ ನೆಲಮಂಗಲ ತಾಲೂಕಿನಲ್ಲಿ ನಿರ್ಮಿಸಲಾಗಿದೆ ಎಂದು ಸಭೆಯಲ್ಲಿ ಹೇಳಲಾಯಿತು. ನಿಗದಿತ ಅವಧಿಯೊಳಗೆ ದನದ ಕೊಟ್ಟಿಗೆ ನಿರ್ಮಿಸಲು ಫಲಾನುಭವಿಗಳನ್ನು ಪ್ರೇರೆಪಿಸಿದ ಅಧಿಕಾರಿಗಳಿಗೆ ಇದೇ ವೇಳೆ ಅಭಿನಂದಿಸಲಾಯಿತು. ಈ ಅಭಿಯಾನ ಇಲ್ಲಿಗೇ ಮುಕ್ತಾಯವಾಗುವುದಿಲ್ಲ. ಇದು ನಿರಂತರವಾಗಿ ಸಾಗಲಿದ್ದು ಇನ್ನಷ್ಟು ಹುರುಪಿನಿಂದ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಸಿಇಒ ಲತಾ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ