ಆ್ಯಪ್ನಗರ

ಏರಿಕೆ ಹಾದಿಯಲ್ಲಿ ಸಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ: ಮಾಹಿತಿ ಮುಚ್ಚಿಡುತ್ತಿರುವ ಸೋಂಕಿತರು

ರಾಜ್ಯ ರಾಜ್ಯಧಾನಿಗೆ ಹೊಂದಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕಲಾರಂಭಿಸಿದೆ. ಬೆಂಗಳೂರು ನಗರದಲ್ಲಿ ನಿತ್ಯ ನೂರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿರುವುದರಿಂದ ವ್ಯಾಪಾರ, ಉದ್ಯೋಗ, ಶಿಕ್ಷಣ ಸೇರಿದಂತೆ ನಾನಾ ವಿಧದಲ್ಲಿ ಬೆಂಗಳೂರಿಗೆ ಓಡಾಟ ನಡೆಸುವ ಮಂದಿಯಲ್ಲಿ ಆತಂಕ ಮನೆ ಮಾಡಿದೆ.

Vijaya Karnataka Web 24 Jun 2020, 7:39 am
ಎನ್‌.ಪ್ರಸನ್ನಕುಮಾರ್‌ ಬೆಂಗಳೂರು ಗ್ರಾಮಾಂತರ
Vijaya Karnataka Web ಕೊರೊನಾ ವೈರಸ್

ಬೆಂಗಳೂರು ಗ್ರಾಮಾಂತರ: ಅನ್ಯ ಜಿಲ್ಲೆಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಿದ್ದರೂ, ವಲಸಿಗರು ಹಾಗೂ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸಿದ ಸೋಂಕಿತರನ್ನು ಜಿಲ್ಲೆಯಲ್ಲಿ ಕ್ವಾರಂಟೈನ್‌ ಮಾಡುತ್ತಿರುವುದರ ಫಲವಾಗಿ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಹೆಚ್ಚಳಗೊಳ್ಳುತ್ತಿದೆ.

ಕೊರೊನಾ ಕುರಿತಂತೆ ಜಿಲ್ಲಾಆರೋಗ್ಯ ಇಲಾಖೆ ವತಿಯಿಂದ ಸಾಕಷ್ಟು ಪ್ರಚಾರ ಕಾರ್ಯಕೈಗೊಂಡರು, ಕ್ವಾರಂಟೈನ್‌ ನಲ್ಲಿದ್ದವರು ಹೊರಗಡೆ ಓಡಾಡುವುದು, ವಲಸೆ ಕಾರ್ಮಿಕರು ಹಾಗೂ ಕ್ವಾರಂಟೈನ್‌ ಕೇಂದ್ರಗಳಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗುತ್ತಿದೆ. ಅದರಲ್ಲೂ ಸೋಂಕು ಕಾಣಿಸಿಕೊಂಡವರ ಸಂಪರ್ಕ ಪತ್ತೆ ಹಚ್ಚುವುದು ಸವಾಲಿನ ಕೆಲಸವಾದ್ದರಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.

ಜಿಲ್ಲೆಯಲ್ಲಿ 62 ಪ್ರಕರಣಗಳು ಕಾಣಿಸಿಕೊಂಡಿದ್ದರೂ ಇದರಲ್ಲಿ ಜಿಲ್ಲೆಯ ನಿವಾಸಿಗಳ ಸಂಖ್ಯೆ ಮಾತ್ರ 32. ಇದರಲ್ಲಿ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಪತ್ತೆಹಚ್ಚುವುದೇ ಸವಾಲಿನ ಕೆಲಸವಾಗಿದೆ. ಬಹುತೇಕ ಮಂದಿ ಸಂಬಂಧಿಕರು, ಪರಿಚಯಸ್ಥರ ಮನೆಗಳಿಗೆ ಓಡಾಟ ನಡೆಸಿದ್ದರು ಅವರ ಬಗ್ಗೆ ಮಾಹಿತಿ ನೀಡದೆ ಅಧಿಕಾರಿಗಳ ದಾರಿ ತಪ್ಪಿಸುತ್ತಿರುವುದೇ ಸೋಂಕು ಹೆಚ್ಚು ಮಂದಿಗೆ ಹರಡಲು ಕಾರಣವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಸೋಂಕಿತರ ಸಂಪರ್ಕ, ಅವರ ವಿಳಾಸ ಸೇರಿದಂತೆ ಸಂಪೂರ್ಣ ಮಾಹಿತಿ ಅಧಿಕಾರಿಗಳಿಗೆ ತಿಳಿದರೆ ಕೂಡಲೇ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡುವುದರ ಜೊತೆಗೆ ಅವರು ವಾಸಿಸುವ ರಸ್ತೆಯನ್ನು ಸೀಲ್‌ಡೌನ್‌ ಮಾಡಿ ಸಾಮೂಹಿಕ ತಪಾಸಣೆ ನಡೆಸಬಹುದು. ಹೀಗೆ ಮಾಡುವುದರಿಂದ ಅನ್ಯ ಪ್ರದೇಶಕ್ಕೆ ಸೋಂಕು ಹರಡುವುದನ್ನು ತಪ್ಪಿಸಬಹುದು. ಆದರೆ ಇದಕ್ಕೆ ಸೋಂಕಿತರು ಸಹಕರಿಸದಿರುವುದೇ ಸವಾಲಿನ ಕೆಲಸವಾಗಿದೆ.

ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಜಿಲ್ಲೆಯ ಬಹುತೇಕ ಮಂದಿ ಬೆಂಗಳೂರು ನಗರಕ್ಕೆ ಓಡಾಟ ನಡೆಸುತ್ತಿರುವುದು. ಜಿಲ್ಲೆಯಲ್ಲಿ ವಾಸವಾಗಿದ್ದರೂ ಅನಾರೋಗ್ಯ ನೆಪದಲ್ಲಿ ಬೆಂಗಳೂರಿಗೆ ತೆರಳಿ ಅಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ಸೋಂಕು ಕಂಡುಬಂದರೂ ಅವರ ಸಂಪರ್ಕಿತರ ಮಾಹಿತಿಯನ್ನು ಜಿಲ್ಲೆಗೆ ತಲುಪಿಸುವಲ್ಲಿ ನಗರದ ಅಧಿಕಾರಿಗಳು ವಿಫಲವಾಗುತ್ತಿದ್ದಾರೆ. ಹೀಗಾಗಿ ಸೋಂಕಿತರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಅವರ ಸಂಪರ್ಕದಲ್ಲಿದ್ದವರು ಜಿಲ್ಲೆಯಾದ್ಯಂತ ಓಡಾಡಿಕೊಂಡು ಇತರರಿಗೆ ಸೋಂಕು ಹಬ್ಬಿಸುತ್ತಿದ್ದಾರೆ.

ಹೊಸಕೋಟೆ, ನೆಲಮಂಗಲದಲ್ಲಿ ಹೆಚ್ಚು
ಕಳೆದ ಏಳು ದಿನದಲ್ಲಿ ಜಿಲ್ಲೆಯಲ್ಲಿ 14 ಪ್ರಕರಣಗಳು ದೃಢಪಡುವುದರ ಜತೆಗೆ ಇಬ್ಬರು ಸಾವನ್ನಪ್ಪಿಸುವುದು ಆತಂಕ ಮೂಡಿಸಿದೆ. ನೆಲಮಂಗಲ ಮತ್ತು ಹೊಸಕೋಟೆ ತಾಲೂಕಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದಲ್ಲದೆ ವಾರದ ಹಿಂದೆ ಈ ಎರಡೂ ತಾಲೂಕಿನ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಮೊಬೈಲ್‌ ಆ್ಯಪ್‌ ಮೂಲಕ ನಿಗಾ
ಹೋಮ್‌ ಕ್ವಾರಂಟೈನ್‌‍ನಲ್ಲಿರಿಸಿರುವ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಓಡಾತ್ತಿರುವುದು ಕಂಡುಬಂದಿದೆ. ಸೋಂಕು ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ, ಹೋಮ್‌ ಕ್ವಾರಂಟೈನ್‌ ನಿಯಮ ಉಲ್ಲಂಘನೆ ಮಾಡಿದವರ ವಿರುದ್ದ ವಿಪತ್ತು ನಿರ್ವಾಹಣಾ ಪ್ರಕರಣ ದಾಖಲಿಸಿ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್‌.ಕೆ.ನಾಯಕ್‌ ತಿಳಿಸಿದ್ದಾರೆ.

ಹೋಮ್‌ ಕ್ವಾರಂಟೈನ್‌ ಅವಧಿ ಮುಗಿಯುವವರೆಗೂ ಸರಕಾರಿ ಆದೇಶ ಪಾಲನೆ ಮಾಡಬೇಕು. ಹೋಮ್‌ ಕ್ವಾರಂಟೈನ್‌‍ನಲ್ಲಿರುವವರ ಮೇಲೆ ನಿಗಾ ವಹಿಸಲು ಮೊಬೈಲ್‌ ಆ್ಯಪ್‌ ಮೂಲಕ ಮಾಹಿತಿ ದಾಖಲಿಸಲಾಗುತ್ತಿದೆ. ಕ್ವಾರಂಟೈನ್‌‍ನಲ್ಲಿರಿಸಲಾದ ವ್ಯಕ್ತಿಗಳು ತಪ್ಪಿಸಿಕೊಂಡಲ್ಲಿ ಹಾಗೂ ಮೊಬೈಲ್‌ ಸ್ವಿಚ್‌‍ಆಫ್‌ ಮಾಡಿಕೊಂಡಲ್ಲಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಹೋಮ್‌ ಕ್ವಾರಂಟೈನ್‌‍ನಲ್ಲಿರುವ ವ್ಯಕ್ತಿಗಳು ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುವುದು ಕಂಡುಬಂದಲ್ಲಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್‌ಕಚೇರಿ ಹಾಗೂ ಸಮೀಪದ ಪೊಲೀಸ್‌ ಠಾಣೆಗಳಲ್ಲಿ ನಾಗರಿಕರು ಮಾಹಿತಿ ನೀಡುವ ಮೂಲಕ ಸೋಂಕು ತಡೆಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ