ಆ್ಯಪ್ನಗರ

ಪಕ್ಷದ ಹೆಸರು ತಪ್ಪು ನಮೂದು, ಅಭ್ಯರ್ಥಿಯಿಂದ ಆಯೋಗಕ್ಕೆ ದೂರು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವ್ಯಾಪ್ತಿಯ ಮತಗಟ್ಟೆಗಳಲ್ಲಿ ಹಾಕಲಾಗಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಚುನಾವಣಾಧಿಕಾರಿಗಳು ತಮ್ಮ ಪಕ್ಷದ ಹೆಸರನ್ನು ತಪ್ಪಾಗಿ ನಮೂದಿಸಿದ್ದು, ಈ ಅಚಾತುರ್ಯದ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ ಹೋಗುವುದಾಗಿ ಕರ್ನಾಟಕ ಜನತಾ ಪಕ್ಷ ದ ಅಭ್ಯರ್ಥಿ ನಾಗೇಂದ್ರರಾವ್‌ ಶಿಂಧೆ ತಿಳಿಸಿದ್ದಾರೆ.

Vijaya Karnataka 20 Apr 2019, 5:00 am
ಚಿಕ್ಕಬಳ್ಳಾಪುರ ಕ್ಷೇತ್ರದ ಚುನಾವಣಾಧಿಕಾರಿ ವಿರುದ್ಧ ನ್ಯಾಯಾಲಯದ ಮೊರೆ: ಕೆಜೆಪಿ ಅಭ್ಯರ್ಥಿ ಶಿಂಧೆ
Vijaya Karnataka Web kjp candidate lodge compliant agianst election offiecer for publish false party name
ಪಕ್ಷದ ಹೆಸರು ತಪ್ಪು ನಮೂದು, ಅಭ್ಯರ್ಥಿಯಿಂದ ಆಯೋಗಕ್ಕೆ ದೂರು

ತಾವರೆಕೆರೆ:
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವ್ಯಾಪ್ತಿಯ ಮತಗಟ್ಟೆಗಳಲ್ಲಿ ಹಾಕಲಾಗಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಚುನಾವಣಾಧಿಕಾರಿಗಳು ತಮ್ಮ ಪಕ್ಷದ ಹೆಸರನ್ನು ತಪ್ಪಾಗಿ ನಮೂದಿಸಿದ್ದು, ಈ ಅಚಾತುರ್ಯದ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ ಹೋಗುವುದಾಗಿ ಕರ್ನಾಟಕ ಜನತಾ ಪಕ್ಷ ದ ಅಭ್ಯರ್ಥಿ ನಾಗೇಂದ್ರರಾವ್‌ ಶಿಂಧೆ ತಿಳಿಸಿದ್ದಾರೆ.

ತಾವರೆಕೆರೆಯಲ್ಲಿ ಮತಗಟ್ಟೆ ಭೇಟಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾಧಿಕಾರಿಗಳ ಬೇಜಬ್ದಾರಿಯಿಂದ ನಮ್ಮ ಪಕ್ಷ ದ ಹೆಸರು ತಪ್ಪಾಗಿ ಮುದ್ರಿತವಾಗಿ ಕ್ಷೇತ್ರದ ಎಲ್ಲಾ ಮತಗಟ್ಟೆಗಳ ಬಳಿ ಹಾಗೆಯೇ ಪ್ರಕಟಗೊಂಡಿದೆ. ಕನ್ನಡದಲ್ಲಿ ಕರ್ನಾಟಕ ಜನತಾ ಪಕ್ಷ ಎಂದು ನಮೂದಿಸಿ, ಇಂಗ್ಲೀಷನ್‌ಲ್ಲಿ ಸಮಾಜವಾದಿ ಜನತಾ ಪಕ್ಷ ಎಂದು ನಮೂದಿಸಲಾಗಿದೆ. ಅನೇಕ ವಿದ್ಯಾವಂತ ಮತದಾರರು ಈ ಬಗ್ಗೆ ಮತಗಟ್ಟೆಗೆ ಹೋದಾಗ ನನಗೆ ಕರೆ ಮಾಡಿ ಗಮನಕ್ಕೆ ತಂದರು. ಖುದ್ದು ಭೇಟಿ ನೀಡಿದಾಗ ತಪ್ಪಾಗಿರುವುದು ಬಹಿರಂಗವಾಗಿದೆ. ಈ ಬಗ್ಗೆ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಅವರನ್ನು ಕೇಳಿದರೆ, ಕನ್ನಡದಲ್ಲಿ ಸರಿಯಿದೆಯೆಲ್ಲ ಎಂದು ಹೇಳುತ್ತಿದ್ದಾರೆ. ತಪ್ಪು ಗಂಭೀರವಾಗಿದ್ದು, ಇಡೀ ಚುನಾವಣೆ ಪ್ರಕ್ರಿಯೆಗೆ ತಡೆ ತರಲು ಕಾನೂನು ಹೋರಾಟ ಮಾಡಲು ಚಿಂತಿಸುತ್ತಿದ್ದೇನೆ ಎಂದರು.

ಆಯೋಗಕ್ಕೆ ದೂರು: ಮತಗಟ್ಟೆಯಲ್ಲಿ ಅಳವಡಿಸುವ ಚುನಾವಣೆಗೆ ಸ್ಪಧಿರ್ಧಿಸಿರುವ ಉಮೇದುವಾರರ ಪಟ್ಟಿಯಲ್ಲಿ (ನಮೂನೆ 7) ಕರ್ನಾಟಕ ಜನತಾ ಪಕ್ಷ ದ (ಕೆಜೆಪಿ) ಹೆಸರನ್ನು ಇಂಗ್ಲಿಷ್ನಲ್ಲಿ ತಪ್ಪಾಗಿ ಮುದ್ರಿಸಿದ್ದರಿಂದ ನನಗೆ ಅನ್ಯಾಯವಾಗಿದೆ ಎಂದು ಕೆಜೆಪಿ ಅಭ್ಯರ್ಥಿ ನಾಗೇಂದ್ರ ರಾವ್‌ ಶಿಂಧೆ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಮೇಲ್‌ ಮೂಲಕ ದೂರು ನೀಡಿದ್ದಾರೆ. ಈ ಬಗ್ಗೆ ಅವರು ದೇವನಹಳ್ಳಿಯ ಸಹಾಯಕ ಚುನಾವಣಾಧಿಧಿಕಾರಿ ಅವರಿಗೆ ಸಹ ದೂರು ನೀಡಿದ್ದಾರೆ.

ಮರುಮತದಾನ ಸಾಧ್ಯತೆಯಿಲ್ಲ: ಡಿಸಿ

ಉಮೇದುವಾರರ ಪಟ್ಟಿ ಮತದಾರರ ವೀಕ್ಷ ಣೆಗಾಗಿ ಮಾತ್ರ ಅಂಟಿಸಲಾಗಿರುತ್ತದೆ. ಅದರಲ್ಲಿ ಕನ್ನಡದಲ್ಲಿ ಕರ್ನಾಟಕ ಜನತಾ ಪಕ್ಷ ' ಎಂದು ಸರಿಯಾಗಿದೆ. ವಿದ್ಯುನ್ಮಾನ ಮತಯಂತ್ರದಲ್ಲಿ ಅಳವಡಿಸಿರುವ ಉಮೇದುವಾರರ ಪಟ್ಟಿಯಲ್ಲಿ ಯಾವುದೇ ದೋಷ ಇಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್‌ ತಿಳಿಸಿದ್ದಾರೆ.

ಮತಗಟ್ಟೆ ಕೇಂದ್ರದ ಹೊರಗಡೆ ನೋಟೀಸ್‌ ಬೋರ್ಡ್‌ನಲ್ಲಿ ಅಂಟಿಸುವ ಫಾರಂನಲ್ಲಿ ಕೆಲವೊಂದು ಕಡೆ ಪಕ್ಷದ ಹೆಸರು ಸ್ವಲ್ಪ ತಪ್ಪಾಗಿತ್ತು. ಈ ಬಗ್ಗೆ ತಿದ್ದುಪಡಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಶೇ.99ರಷ್ಟು ಸರಿಪಡಿಸಲಾಗಿದೆ. ಬ್ಯಾಲೆಟ್‌ ಪೇಪರ್‌ನಲ್ಲಿ ಅಭ್ಯರ್ಥಿಯ ಹೆಸರು, ಪೋಟೋ, ಪಕ್ಷದ ಹೆಸರು, ಕ್ರಮ ಸಂಖ್ಯೆ ಎಲ್ಲವೂ ನಿಖರವಾಗಿತ್ತು. ಮರು ಮತದಾನ ಆಗುವ ಯಾವುದೇ ಸಾಧ್ಯತೆಯೂ ಇಲ್ಲ. ಮತದಾರರು ನೋಟೀಸ್‌ ಬೋರ್ಡ್‌ನಲ್ಲಿ ಹಾಕಿರುವುದು ನೋಡಿ ಮತ ಹಾಕುವುದಿಲ್ಲ. ಮತಗಟ್ಟೆಯೊಳಗೆ ಇರುವ ಬ್ಯಾಲೆಟ್‌ ಪೇಪರ್‌ ನೋಡಿ ಮತ ಹಾಕುತ್ತಾರೆ. ಇದರಿಂದ ಅಭ್ಯರ್ಥಿಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ