ಆ್ಯಪ್ನಗರ

ಮಾವು ಬೆಳೆಗೆ ಕೀಟಬಾಧೆ: ಮೋಹಕ ಬಲೆಗಳಿಗೆ ಮೊರೆ ಹೋದ ಬೆಳೆಗಾರ!

ಮಾವಿನ ಹಣ್ಣುಗಳ ರಕ್ಷಣೆಗೆ ಮಾವು ಬೆಳೆಗಾರರು ಮೋಹಕ ಬಲೆಗಳಿಗೆ ಮೊರೆ ಹೋಗಿದ್ದಾರೆ. ರೈತರ ಅನುಕೂಲಕ್ಕಾಗಿ ಮಾವು ಅಭಿವೃದ್ಧಿ ಮಂಡಳಿ ಕೀಟಗಳ ನಿವಾರಣೆಗೆ ಮೋಹಕ ಬಲೆ ತಯಾರಿಸಿ, ರೈತರಿಗೆ ಸಬ್ಸಿಡಿ ದರದಲ್ಲಿ ನೀಡುತ್ತಿದೆ. ರೈತರು ಈ ಬಲೆಗಳನ್ನು ಮನೆಯಲ್ಲಿ ಕೂಡಾ ತಯಾರಿಸಿಕೊಳ್ಳಬಹುದಾಗಿದೆ.

Vijaya Karnataka Web 21 Jan 2021, 10:52 am
ಜಡಿಗೇನಹಳ್ಳಿ: ಹವಾಮಾನ ವೈಪರೀತ್ಯದಿಂದ ಪ್ರಸಕ್ತ ಸಾಲಿನಲ್ಲಿ ಮಾವಿನ ಫಸಲು ಶೇ.50ರಷ್ಟು ಕಡಿಮೆಯಾಗಲಿದ್ದು, ಉಳಿದ ಮಾವನ್ನು ಕೀಟಗಳಿಂದ ರಕ್ಷಿಸಿಕೊಂಡರೆ ರೈತರಿಗೆ ಈ ಬಾರಿ ಬಂಪರ್‌ ಬೆಲೆ ದೊರೆಯಲಿದೆ. ಮಾವಿನಲ್ಲಿ ಕಂಡುಬರುವ ಫ್ರೂಟ್‌ ಫ್ಲೈ(ಹಣ್ಣಿನ ನೊಣ) ಬಾಧೆಯಿಂದ ಪ್ರತಿ ವರ್ಷ ಸರಾಸರಿ ಶೇ.25ರಷ್ಟು ಇಳುವರಿ ನಷ್ಟವಾಗುತ್ತಿದೆ. ಜತೆಗೆ ಗುಣಮಟ್ಟ ಕಳೆದುಕೊಂಡು ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗುತ್ತಿದೆ. ಹೀಗಾಗಿ ಕೀಟ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ರೈತರಿಗೆ ಮೋಹಕ ಬಲೆ ಹೆಚ್ಚು ಸಹಕಾರಿಯಾಗಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಮಾವಿನ ಮರಗಳಲ್ಲಿ ಹೂವು ಕಚ್ಚುವುದು ತಡವಾಗಿರುವುದರಿಂದ ಇಳುವರಿಯೂ ಈ ಬಾರಿ ಕಡಿಮೆಯಾಗಲಿದೆ. ಇನ್ನು ಕೀಟ ಸಮಸ್ಯೆ ನಿವಾರಣೆಗೆ ಸಮಗ್ರ ಹತೋಟಿ ಕ್ರಮಗಳನ್ನು ಕೈಗೊಳ್ಳದಿದ್ದರೆ, ಇರುವ ಫಸಲನ್ನು ಕಳೆದುಕೊಳ್ಳುವ ಆತಂಕವಿದೆ. ಆ ಹಿನ್ನೆಲೆಯಲ್ಲಿ ರೈತರ ಅನುಕೂಲಕ್ಕಾಗಿ ಮಾವು ಅಭಿವೃದ್ಧಿ ಮಂಡಳಿ ಕೀಟಗಳ ನಿವಾರಣೆಗೆ ಮೋಹಕ ಬಲೆ ತಯಾರಿಸಲಾಗುತ್ತಿದೆ. ರೈತರಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ. ರೈತರು ಈ ಬಲೆಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದಾಗಿದೆ.
ನಳನಳಿಸುತ್ತಿದೆ ಹೂವು‌, ರೈತರಿಗೆ ಬಂಪರ್ ಲಾಭ ಕೊಟ್ಟ ಮಾವುವಿದೇಶಗಳಿಗೆ ರಫ್ತು ಮಾಡುವ ಮಾವಿನ ಕಾಯಿ ಮತ್ತು ಹಣ್ಣುಗಳು ಫ್ರೂಟ್‌ ಫ್ಲೈ ಕೀಟಗಳಿಂದ ಮುಕ್ತವಾಗಿದೆಯೇ ಎಂಬುದನ್ನು ಪರಿಶೀಲಿಸದ ಬಳಿಕವೇ ರಫ್ತು ಮಾಡಲಾಗುತ್ತದೆ. ಒಂದೊಮ್ಮೆ ಈ ಕೀಟದ ಮರಿಗಳಿರುವುದು ಕಂಡುಬಂದರೆ, ಅಂತಹ ಹಣ್ಣುಗಳನ್ನು ರಫ್ತಿಗೆ ಪರಿಗಣಿಸಲಾಗದು. ರಫ್ತಾಗುವ ಬಂಗನಪಲ್ಲಿ ಮಾವು ಬೆಳೆಗಾರರು ಕೀಟಗಳ ಬಗ್ಗೆ ಎಚ್ಚರ ವಹಿಸಬೇಕು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು.

ಬಲಿತ ಕಾಯಿಗಳ ಮೇಲೆ ಹೆಣ್ಣು ನೊಣಗಳು ತಮ್ಮ ಚೂಪಾದ ಅಂಡ ಪ್ರಸವಾಂಗದಿಂದ ಚುಚ್ಚಿ ಇಡುತ್ತದೆ. ಮೊಟ್ಟೆಯಿಂದ ಹೊರಬರುವ ಮರಿ ಹುಳುಗಳು ತಿರುಳು ತಿನ್ನುತ್ತಾ ಬೆಳೆಯುತ್ತವೆ. ಇದರಿಂದ ಹಣ್ಣಿನ ತಿರುಳು ಕೊರೆಯುತ್ತಾ ಹೋಗಿ ಕೀಟ ಬಾಧೆಯಿರುವ ಹಣ್ಣು, ಕಾಯಿ ಮೇಲೆ ರಂಧ್ರಗಳು ಕಂಡು ಬಂದು ನಿರೀಕ್ಷೆಗಿಂತ ಮೊದಲೇ ಹಣ್ಣಾಗಿ ಅಥವಾ ಕೊಳೆತು ಉದುರುತ್ತದೆ. ಹೀಗಾಗಿ ಮೋಹಕ ಬಲೆಗಳ ಬಳಕೆಗೆ ರೈತರು ಮುಂದಾಗಬೇಕು. ಆಗ ತಮ್ಮ ಫಸಲನ್ನು ಉಳಿಸಿಕೊಳ್ಳಲು ಸಾಧ್ಯ.
ದ್ರಾಕ್ಷಿ, ಮಾವು ಬೆಳೆಗಳ ನಿರ್ವಹಣಾ ಕ್ರಮ ಹೇಗೆ? ತಿಳಿಯಲೇಬೇಕಾದ ಮಾಹಿತಿ ಇದು
ಮೋಹಕ ಬಲೆಯ ಅನುಕೂಲವೇನು?
ಒಂದು ಎಕರೆ ಪ್ರದೇಶದಲ್ಲಿ ಕನಿಷ್ಠ 10 ಮೀಥೈಲ್‌ ಯೂಜಿನಾಲ್‌ ಮೋಹಕ ಬಲೆಗಳನ್ನು ಅಲ್ಲಲ್ಲಿ ಮರಗಳಿಗೆ ಅಲ್ಲಾಡದಂತೆ ಕಟ್ಟಬೇಕು. ಮರದ ತುಂಡಿನ ಮೇಲೆ 5-6 ಹನಿ ಮ್ಯಾಲಥಿಯಾನ್‌ ಅಥವಾ ಡೈಕ್ಲೋರೋವಾಸ್‌ನಿಂದ ನೆನೆಸಿ ಕಟ್ಟಿದರೆ ಶೇ.90ರಷ್ಟು ಹಣ್ಣಿನ ಹುಳುಗಳು ಮೋಹಕ ಬಲೆಯೊಳಗೆ ಸಿಲುಕಿ ಸಾಯುತ್ತದೆ.

ಗ್ರಾಮಿಣ ಭಾಗದಲ್ಲಿ ಬಹುಕಾಲದ ಬೆಳೆ ಎಂಬಂತೆ ಖಾಲಿ ಇರುವ ಪ್ರದೇಶದಲ್ಲಿ ಮಾವಿನ ಮರಗಳನ್ನು ನೆಟ್ಟು ವರ್ಷಕ್ಕೊಮ್ಮೆ ಅವುಗಳಿಂದ ಬರುವ ಫಸಲನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಮಾವಿನ ಮರಗಳನ್ನು ಹೇಗೆ ಪೋಷಣೆ ಮಾಡಬೇಕು ತೋಟಗಾರಿಕೆ ಇಲಾಖೆ ಹಾಗೂ ಮಾವು ಅಭಿವೃದ್ಧಿ ನಿಗಮ, ಮಂಡಳಿಯಿಂದ ದೊರೆಯುವ ಮಾಹಿತಿಯನ್ನು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಪಡೆಯುತ್ತಿದ್ದಾರೆ. ಮಾವಿನ ಮರ ಹೆಚ್ಚಾಗಿದ್ದರೂ ಮಾವಿನ ಫಸಲು ಮಾತ್ರ ಕಡಿಮೆ ಇಳುವರಿ ಸಿಗುತ್ತಿದೆ. ರೈತರು ವರ್ಷಕ್ಕೊಮ್ಮೆ ಬೆಳೆಯುವ ಈ ಬೆಳೆಯ ಬಗ್ಗೆ ಕಾಳಜಿ ವಹಿಸಿದರೆ ಕುಬೇರರಾಗುತ್ತಾರೆ ಎಂಬುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಬೆಳೆಗಾರರ ಕೈಹಿಡಿಯದ ಮಾವು: ಬೆಲೆ ಕುಸಿತದಿಂದ ಕಂಗೆಟ್ಟ ಹಾಸನದ ರೈತರು
ಉತ್ತಮ ಫಸಲು ಸಿಕ್ಕರೆ ಹೆಚ್ಚಿನ ಲಾಭ ದೊರೆಯುತ್ತದೆ. ಈ ಬಾರಿ ಉತ್ತಮ ಹೂವು ಬಿಟ್ಟಿದ್ದು ಉತ್ತಮ ಫಸಲು ದೊರೆಯುವ ನಿರೀಕ್ಷೆಯಲ್ಲಿದ್ದೇವೆ. ಅದರಲ್ಲೂ ಈ ಭಾಗದ ಬಾದಾಮಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳೀಯವಾಗಿ ಒಂದು ಸಭೆ ನಡೆಸಿ ರೈತರಿಗೆ ಅನುಕೂಲವಾಗುವ ಮೋಹಕ ಬಲೆಯನ್ನು ಅವರೇ ವಿತರಿಸಿದರೆ ಅನುಕೂಲವಾಗಲಿದೆ. ಇಲ್ಲವಾದಲ್ಲಿ ರೈತರು ಹಿಂದೇಟು ಹಾಕುತ್ತಾರೆ. ಅಧಿಕಾರಿಗಳು ಸುಮ್ಮನೆ ಮಾಹಿತಿ ತಿಳಿಸದೆ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ.
ಪ್ರಕಾಶ್‌, ರೈತ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ